More

    ಪ್ರಸಿದ್ಧ ಕಲಾವಿದರಿಗೆ ನೀಡುವ ಪ್ರೋತ್ಸಾಹ ಯುವ ಕಲಾವಿದರಿಗೂ ದೊರಕಲಿ: ಸಚಿವ ಎಚ್. ಕೆ. ಪಾಟೀಲ

    ಗದಗ: ನಾಡಿನ ಪ್ರಸಿದ್ಧ ಕಲಾವಿದರಿಗೆ ಸಾರ್ವಜನಿಕ ಸಮಾರಂಭಗಳಲ್ಲಿ ನೀಡುವ ಶಿಳ್ಳೆ, ಚಪ್ಪಾಳೆ, ಪ್ರೋತ್ಸಾಹವು ಸ್ಥಳೀಯ ಯುವ ಕಲಾವಿದರಿಗೂ ನೀಡುವ ಮೂಲಕ ಪ್ರೋತ್ಸಾಹಿಸುವ ಕಾರ್ಯವಾಗಲಿ ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಹೇಳಿದರು.

    ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಯುವ ಸಂಘಗಳ ಒಕ್ಕೂಟ, ಆದರ್ಶ ಶಿಕ್ಷಣ ಸಮಿತಿಯ ಡಿ.ಎಸ್.ಕುರ್ತಕೋಟಿ ಮೆಮೋರಿಯಲ್ ಪದವಿ ಪೂರ್ವ ವಾಣಿಜ್ಯ ಮಹಾವಿದ್ಯಾಲಯ ಸಹಯೋಗದಲ್ಲಿ ಶನಿವಾರದಂದು ನಗರದ ಆದರ್ಶ ಶಿಕ್ಷಣ ಸಮಿತಿಯ ಸುವರ್ಣ ಮಹೋತ್ಸವ ಭವನದಲ್ಲಿ ಜರುಗಿದ ಗದಗ ಜಿಲ್ಲಾ ಮಟ್ಟದ ಪ್ರಸಕ್ತ ಸಾಲಿನ ಯುವಜನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.  

    ಗದಗ ಜಿಲ್ಲೆಯ ವ್ಯಾಪ್ತಿಯ ಪ್ರತಿ 15 ಕಿ.ಮೀ ಅಂತರದಲ್ಲಿ ಸಾಹಿತ್ಯ, ಸಂಗೀತ , ಸಂಸ್ಕøತಿ, ಸಂಪ್ರದಾಯ, ಕ್ರೀಡೆ ಸೇರಿದಂತೆ ವಿವಿಧ ರಂಗಗಳಲ್ಲಿ ಸಾಧನೆಗೈದ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಮಹನೀಯರನ್ನು ಕಾಣಬಹುದಾಗಿದೆ. ಈ ಸಾಧನೆ ಗದಗ ಜಿಲ್ಲೆಯ ಹೆಮ್ಮೆಯ ವಿಷಯ ಎಂದರು. ಸಂಗೀತ ಕ್ಷೇತ್ರದಲ್ಲಿ ಭಾರತ ರತ್ನ ಪ್ರಶಸ್ತಿಗೆ ಭಾಜನರಾದ ಜಿಲ್ಲೆಯವರಾದ ಪಂಡಿತ ಭೀಮಸೇನ ಜೋಶಿಯವರು ಒಬ್ಬರೇ ಈವರೆಗೂ ಸಂಗೀತ ಕ್ಷೇತ್ರಕ್ಕೆ ಭಾರತ ರತ್ನ ಪಡೆದವರಾಗಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

    ಯುವಜನೋತ್ಸವ ಕಾರ್ಯಕ್ರಮ ಉದ್ಘಾಟನೆ ಮಾಡುವುದಕ್ಕೆ ತುಂಬಾ ಸಂತೋಷವೆನಿಸುತ್ತದೆ. ಮೊನ್ನೆ ನವೆಂಬರ್ 1 ರಿಂದ 3 ರವರೆಗೆ ನಗರದಲ್ಲಿ ನಡೆದ ಕರ್ನಾಟಕ ಸಂಭ್ರಮ ಕಾರ್ಯಕ್ರಮದಲ್ಲಿ ಯುವಜನತೆಯ ಪಾಲ್ಗೊಳ್ಳುವಿಕೆ ಮುಖ್ಯವಾಗಿತ್ತು. ಅಲ್ಲದೇ ಮೂರು ದಿನಗಳ ಕಾಲ ಸಾಯಂಕಾಲ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ನಾಡಿನ ಪ್ರಸಿದ್ಧ ಕಲಾವಿದರು ಕಲಾಪ್ರಕಾರಗಳಿಂದ ಅದ್ಭುತ ಕಾರ್ಯಕ್ರಮ ಮೂಡಿಬಂದಿತು. ಕಾರ್ಯಕ್ರಮ ಯಶಸ್ವಿಗೆ ಯುವಜನರ ಪಾಲ್ಗೊಳ್ಳುವಿಕೆ ಪ್ರಮುಖವಾಗಿತ್ತು ಎಂದರು.  

    ಗದಗ ಜಿಲ್ಲೆ ಕಲೆ, ಸಂಸ್ಕøತಿ, ಪರಂಪರೆ, ಸಾಹಿತ್ಯ, ಇತಿಹಾಸ ಹಾಗೂ ಕ್ರೀಡಾ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಸಾಧನೆಯಂತೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮೀ, ಗೃಹ ಜ್ಯೋತಿ ಹಾಗೂ ಶಕ್ತಿ ಯೋಜನೆ ಅನುಷ್ಟಾನದಲ್ಲಿ ಜಿಲ್ಲಾಡಳಿತದ ಕಾರ್ಯ ರಾಜ್ಯಮಟ್ಟದಲ್ಲಿಯೇ ಉತ್ತಮವಾಗಿರುವುದು ಸಂತಸ ತಂದಿದೆ ಎಂದರು.  

    ಇದಲ್ಲದೇ ದಸರಾ ಕ್ರೀಡಾಕೂಟದಲ್ಲಿ ಜಿಲ್ಲೆಯ ಯುವ ಪ್ರತಿಭೆಗಳು ಉತ್ತಮ ಸಾಧನೆಗೈಯುವ ಮೂಲಕ ಪದಕಗಳನ್ನು ಮುಡಿಗೇರಿಸಿಕೊಂಡಿವೆ ಹಾಗೂ ಎಸ್.ಎಮ್. ಕೃಷ್ಣ ನಗರದ ಯುವಕ ನಂದಕುಮಾರ್ ಅವರು ಚೆಸ್ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದ ಸಾಧನೆಗೈದಿದ್ದಾರೆ.ಹಾಕಿಯಲ್ಲಿ ಹರೀಶ ಮುಟಗಾರ, ಏಷಿಯನ್ ಸೈಕ್ಲಿಂಗ್ ಜ್ಯೂನಿಯರ್ಸನಲ್ಲಿ ಪವಿತ್ರಾ ಕುರ್ತಕೋಟಿ, ಕುಸ್ತಿಯಲ್ಲಿ ಪ್ರೇಮಾ ಹುಚ್ಚಣ್ಣವರ ರಾಷ್ಟ್ರ ಮಟ್ಟದಲ್ಲಿ ಗದಗ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಇದೇ ತರಹ ಯುವಜನೋತ್ಸವ ಕಾರ್ಯಕ್ರಮದ ಮೂಲಕ ಯುವ ಕಲಾವಿದರು ಈ ವೇದಿಕೆಯಲ್ಲೂ ಸದ್ಭಳಕೆ ಮಾಡಿಕೊಳ್ಳುವ ಮೂಲಕ ರಾಜ್ಯ, ರಾಷ್ಟ್ರ, ಅಂತರಾಷ್ಟ್ರ ಮಟ್ಟದಲ್ಲಿ ಸಾಧನೆಗೈಯುವ ಮೂಲಕ ಗದಗ ಜಿಲ್ಲೆಗೆ ಹೆಸರು ತರಬೇಕೆಂದು ಸಚಿವರು ಅಶಯ ವ್ಯಕ್ತಪಡಿಸಿದರು.  

    ವಿಧಾನ ಪರಿಷತ್ ಸದಸ್ಯಎಸ್.ವಿ.ಸಂಕನೂರ ಅವರು ಮಾತನಾಡಿ ಜಗತ್ತಿನಲ್ಲಿ ಹೆಚ್ಚು ಯುವಜನರನ್ನು ಹೊಂದಿದ ರಾಷ್ಟ್ರ ಭಾರತ. ಯುವಜನರು ಮನಸ್ಸು ಮಾಡಿದರೆ ಅಸಾಧ್ಯವೆಂಬುದು ಯಾವುದಿಲ್ಲ. ಸ್ವಾಮಿ ವಿವೇಕಾನಂದರು ಹೇಳಿದಂತೆ ಯುವಕರಲ್ಲಿ ಅದಮ್ಯ ಶಕ್ತಿ ಇದೆ. ಬದಲಾವಣೆಯಾಗಬೇಕಾದರೆ ಅದು ಯುವಕರಿಂದ ಸಾಧ್ಯ ಎಂದಿದ್ದಾರೆ.ಯುವಜನತೆಗೆ ಸಾಧನೆಗೈಯಲು ಅಗತ್ಯ ಪ್ರೋತ್ಸಾಹ, ಸಹಕಾರ ನೀಡಬೇಕು ಎಂದರು.  ಶಿಕ್ಷಣವೆಂದರೆ ಕೇವಲ ಪಠ್ಯಕ್ಕೆ ಸೀಮಿತವಾಗದೇ ಪಠ್ಯೇತರ ಚಟುವಟಿಕೆಗಳಿಗೂ ವಿಕಸನ ಹೊಂದಬೇಕು. ದೇಶದ ಸಂಪತ್ತು ಯಾವುದೆಂದರೆ ಖನಿಜ ಸಂಪತ್ತು, ಅರಣ್ಯ ಸಂಪತ್ತು, ನೈಸರ್ಗಿಕ ಸಂಪತ್ತು ಎಂದು ಹೇಳುತ್ತೇವೆ ಅದರೊಟ್ಟಿಗೆ ಯುವಜನರೂ ಸಹ ದೇಶದ ಸಂಪತ್ತೆಂದು ನೋಡುವ ಮನೋಭಾವ ನಮ್ಮದಾಗಬೇಕಿದೆ. ಇತ್ತೀಚೆಗೆ ಪಾಶ್ಚಿಮಾತ್ಯ ಸಾಹಿತ್ಯದ ಪ್ರಭಾವ ಮಿತಿಮೀರುತ್ತಿದೆ. ದೇಶಿಯ ಸಾಹಿತ್ಯ, ಸಂಸ್ಕøತಿ ಬೆಳೆಸುವ ಹಾಗೂ ಉಳಿಸುವ ಮನೋಭಾವನೆ ಮೈಗೂಡಿಸಿಕೊಳ್ಳಬೇಕಿದೆ ಎಂದರು.  

    ವೇದಿಕೆಯಲ್ಲಿ ಜಿಲ್ಲಾ ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ ರವಿಕಾಂತ ಅಂಗಡಿ, ಆದರ್ಶ ಶಿಕ್ಷಣ ಸಮಿತಿ ಕಾರ್ಯದರ್ಶಿ ಗೋಡಖಿಂಡಿ, ಡಿ.ಎಸ್.ಕುರ್ತಕೋಟಿ ಮೆಮೋರಿಯಲ್ ಪದವಿಪೂರ್ವ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ರವೀಂದ್ರ ಕುಲಕರ್ಣಿ, ಜಿ.ಪಂ. ಮಾಜಿ ಅಧ್ಯಕ್ಷ ಸಿದ್ಧು ಪಾಟೀಲ ಉಪಸ್ಥಿತರಿದ್ದರು. ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶರಣು ಗೋಗೇರಿ ಅವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.  ಬಾಹುಬಲಿ ಜೈನರ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts