ಎನ್.ಆರ್.ಪುರ: ವೈದ್ಯರು ಗುಣಪಡಿಸಲಾಗದ ಅನೇಕ ಕಾಯಿಲೆಗಳು ಯೋಗಾಸನದಿಂದ ಗುಣವಾಗಿವೆ ಎಂದು ತಾಲೂಕು ಒಕ್ಕಲಿಗರ ಸಂಘದ ಕಾರ್ಯದರ್ಶಿ ಎಸ್.ಎಸ್.ಶಾಂತಕುಮಾರ್ ತಿಳಿಸಿದರು.
ತಾಲೂಕು ಕಸಾಪ ಮಹಿಳಾ ಘಟಕ, ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಹಾಗೂ ಡಿಸಿಎಂಸಿ ವಿದ್ಯಾಸಂಸ್ಥೆ ಆಶ್ರಯದಲ್ಲಿ ಪಟ್ಟಣದ ಡಿಸಿಎಂಸಿ ಪ್ರೌಢ ಶಾಲೆ ಆವರಣದಲ್ಲಿ ಅಂತಾರಾಷ್ಟೀಯ ಯೋಗ ದಿನ ಅಂಗವಾಗಿ ಏರ್ಪಡಿಸಿದ್ದ ಯೋಗೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿದಿನ ಯೋಗ, ಪ್ರಾಣಾಯಾಮ, ಧ್ಯಾನವನ್ನು ನಿಯಮಿತವಾಗಿ ಮಾಡುತ್ತಾ ಬಂದರೆ ಕೋಪವನ್ನು ನಿಗ್ರಹಿಸುವ ಶಕ್ತಿ ಬರಲಿದೆ. ಮನಸ್ಸಿನಲ್ಲಿ ಶಾಂತತೆ ಕಾಪಾಡಿಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಗ್ರಹಣಶಕ್ತಿ ಹೆಚ್ಚಾಗಲಿದೆ ಎಂದರು.
ತಾಲೂಕು ಕಸಾಪ ಅಧ್ಯಕ್ಷ ಪೂರ್ಣೇಶ್ ಮಾತನಾಡಿ, ಮನಷ್ಯನ ಮನಸ್ಸು ಸದಾ ಚಂಚಲವಾಗಿರುತ್ತದೆ. ಯೋಗದಿಂದ ಮನಸ್ಸು ಹತೋಟಿಗೆ ಬರುತ್ತದೆ. ರೋಗ ಬಂದ ಮೇಲೆ ವೈದ್ಯರ ಬಳಿ ಹೋಗುವುದಕ್ಕಿಂತ ರೋಗ ಬಾರದಂತೆ ಯೋಗಾಸನ ಮಾಡಿದರೆ ಒಳ್ಳೆಯದು. ವಿದ್ಯಾರ್ಥಿಗಳು ಬಾಲ್ಯದಿಂದಲೇ ಯೋಗಾಸನ ಮಾಡಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯಾ ನಂಜುಂಡಸ್ವಾಮಿ ಮಾತನಾಡಿ, 5 ಸಾವಿರ ವರ್ಷಗಳ ಇತಿಹಾಸವಿರುವ ಯೋಗವನ್ನು ಪತಂಜಲಿ ಮಹರ್ಷಿಗಳು ಜಗತ್ತಿಗೆ ಪರಿಚಯಿಸಿದರು. ಪ್ರತಿವರ್ಷ ಜೂ.21ನ್ನು ಅಂತಾರಾಷ್ಟ್ರೀಯ ಯೋಗ ದಿನವಾಗಿ ವಿಶ್ವದಾದ್ಯಂತ ಆಚರಿಸಲಾಗುತ್ತಿದೆ ಎಂದರು.
ಸಾಹಿತ್ಯಕ್ಕೂ, ಯೋಗಕ್ಕೂ ಅವಿನಾಭಾವ ಸಂಬಂಧವಿದೆ. ಉತ್ತಮ ಸಾಹಿತ್ಯ ರಚನೆಗೆ ಉಲ್ಲಾಸಮಯ ಮನಸ್ಸು, ಅವಶ್ಯಕ. ಆದ್ದರಿಂದ ಕಸಾಪ ಸಾಹಿತ್ಯದ ಜತೆಗೆ ಯೋಗಕ್ಕೂ ಮಹತ್ವ ನೀಡಿದೆ. ಸದಾ ಗೊಂದಲದ ಗೂಡಾಗಿರುವ ಮನಸ್ಸನ್ನು ಹತೋಟಿಯಲ್ಲಿಡಲು, ಒತ್ತಡದ ನಿವಾರಣೆಗೆ ಯೋಗ ಅವಶ್ಯಕ ಎಂದು ಹೇಳಿದರು.
ಚಿಕ್ಕಮಗಳೂರಿನ ಪತಂಜಲಿ ಯೋಗ ಶಿಕ್ಷಕ ದಿವಾಕರ್ ಭಟ್ ಅವರು ವಿದ್ಯಾರ್ಥಿಗಳಿಗೆ ಸರಳವಾಗಿ ಪ್ರಾಣಾಯಾಮ, ತಾಡಾಸನ, ವೀರಭದ್ರಾಸನ ಮುಂತಾದವುಗಳನ್ನು ಕಲಿಸಿಕೊಟ್ಟರು. 80 ಮಕ್ಕಳು ಪಾಲ್ಗೊಂಡಿದ್ದರು.
ತಾಲೂಕು ಒಕ್ಕಲಿಗರ ಸಂಘದ ಖಜಾಂಚಿ ಕಟಗಳಲೆ ಲೋಕೇಶ್, ಡಿಸಿಎಂಸಿ ಬಾಲಕಿಯರ ವಿದ್ಯಾರ್ಥಿನಿಲಯದ ಅಧ್ಯಕ್ಷೆ ಚೈತ್ರಾ ರಮೇಶ್, ತಾಲೂಕು ಕಸಾಪ ಮಹಿಳಾ ಘಟಕದ ಪದಾಧಿಕಾರಿಗಳಾದ ವಾಸಂತಿ, ಜಯಂತಿ, ಪ್ರಾಪ್ತಿ, ಇಂಪನಾ, ನವಮಿ ಇದ್ದರು.
ಮನೋಬಲ ವೃದ್ಧಿ
ಯೋಗ ಎಂಬುದು ಸಂಸ್ಕೃತ ಪದ. ಯಜ್ ಎಂಬ ಶಬ್ದದಿಂದ ಬಂದಿದೆ. ಅಂದರೆ ಜೋಡಣೆ ಎಂದರ್ಥವಾಗುತ್ತದೆ. ಮನಸ್ಸು ಹಾಗೂ ದೇಹವನ್ನು ಜೋಡಿಸುವುದೇ ಯೋಗವಾಗಿದೆ. ರಾಜ ಯೋಗದಿಂದ ನಮ್ಮ ಸಂಪರ್ಕ ನೇರವಾಗಿ ಪರಮಾತ್ಮನೊಂದಿಗೆ ಜೋಡಣೆಯಾಗುತ್ತದೆ. ನಮಗೆ ಅರಿವಿಲ್ಲದಂತೆ ನಮ್ಮಲ್ಲಿ ಶಾಂತಿ, ಪ್ರೀತಿ, ಆನಂದ, ಶಕ್ತಿ, ಸತ್ಯತೆ ಮುಂತಾದ ದೈವಿ ಗುಣಗಳು ಬೆಳೆಯುತ್ತದೆ. ಕೆಟ್ಟ ಆಲೋಚನೆಗಳು ದೂರವಾಗಿ ಏಕಾಗ್ರತೆಯಿಂದ ಮನೋಬಲ ವೃದ್ಧಿಯಾಗುತ್ತದೆ ಎಂದು ಬ್ರಹ್ಮ ಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಕೆ.ಪ್ರಮೀಳಕ್ಕಾ ತಿಳಿಸಿದರು.