ಯಲಬುರ್ಗಾ: ನರೇಗಾ ಯೋಜನೆಯು ರಾಜ್ಯದಲ್ಲಿ ಯಶಸ್ವಿಯಾಗಲು ಕಾಯಕ ಬಂಧುಗಳ ಪರಿಶ್ರಮವಿದೆ ಎಂದು ಚಿಕ್ಕಮ್ಯಾಗೇರಿ ಗ್ರಾಪಂ ಅದ್ಯಕ್ಷ ಶರಣಕುಮಾರ ಅಮರಗಟ್ಟಿ ಹೇಳಿದರು.


ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಪಂ ವ್ಯಾಪ್ತಿಯ ಮಲಕಸಮುದ್ರ ಗ್ರಾಮದಲ್ಲಿ ಜಿಪಂ, ತಾಪಂ, ಗ್ರಾಪಂ, ಗ್ರಾಮ ಸ್ವರಾಜ್ ಅಭಿಯಾನ-ಕರ್ನಾಟಕ ಹಾಗೂ ಪ್ರಾರಂಭ ಸಂಸ್ಥೆ ಜಂಟಿಯಾಗಿ ಹಮ್ಮಿಕೊಂಡಿದ್ದ ಕಾಯಕ ಬಂಧುಗಳ 4ನೇ ತಂಡದ ಕ್ಷೇತ್ರ ಭೇಟಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಬುಧವಾರ ಮಾತನಾಡಿದರು. ನರೇಗಾದಲ್ಲಿ ಕೈಗೊಂಡ ವೈಯಕ್ತಿಕ ಕಾಮಗಾರಿಗಳಾದ ಬದು ನಿರ್ಮಾಣ, ನಾಲಾ ಸುಧಾರಣೆ, ಕೆರೆ ಹೂಳೆತ್ತುವುದು ಹಾಗೂ ಸರಿಯಾದ ಸಮಯಕ್ಕೆ ಕೂಲಿಕಾರರಿಗೆ ಕೂಲಿ ಪಾವತಿಯಾಗುವಂತೆ ಮಾಡುವಲ್ಲಿ ಕಾಯಕ ಬಂಧುಗಳ ಪಾತ್ರ ಪ್ರಮುಖವಾಗಿದೆ ಎಂದರು.