ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಂಜಮ್ಮ ಜೋಗತಿ ಅಭಿಮತ
ಯಲಬುರ್ಗಾ: ಯಾವುದೇ ಒಂದು ಗ್ರಾಮ ಬೆಳಕಿಗೆ ಬರಬೇಕಾದರೆ ಕಲಾವಿದರಿಂದ ಮಾತ್ರ ಸಾಧ್ಯ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಹಾಗೂ ಜನಪದ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷೆ ಡಾ.ಮಾತಾ ಬಿ. ಮಂಜಮ್ಮ ಜೋಗತಿ ಹೇಳಿದರು.
ತಾಲೂಕಿನ ಮ್ಯಾದನೇರಿಯಲ್ಲಿ ವಾಲ್ಮೀಕಿ ಸಾಂಸ್ಕೃತಿಕ ಮತ್ತು ಜನಪದ ಕಲಾ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ದಶಮಾನೋತ್ಸವ ಸಂಗೀತ ಸಂಭ್ರಮೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಲ್ಲಿ ಯಾರನ್ನು ಯಾರೂ ಬೆಳೆಸುವುದಿಲ್ಲ. ನಾವು ಮಾಡುವ ಕಾಯಕದಿಂದ ನಮ್ಮನ್ನು ಗುರುತಿಸಿಕೊಳ್ಳುವ ಕೆಲಸ ಆಗಬೇಕು. ಮಾಡುವ ಕೆಲಸದಲ್ಲಿ ದೇವರಿದ್ದಾನೆ ಎಂಬುದನ್ನು ಮನಗಾಣಬೇಕು. ಜನಪದ ಕಲೆ ಉಳಿವು, ಸಂಸ್ಕೃತಿ ಬಗ್ಗೆ ನಡೆಯುವ ಕಾರ್ಯಕ್ರಮಗಳಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳುವ ಮೂಲಕ ಕಲೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಛಲದಿಂದ ಮಾತ್ರ ಗುರಿ ಸಾಧನೆ ಎಂಬುದನ್ನು ಅರಿಯಬೇಕು. ಜೀವನ ಶಾಶ್ವತವಲ್ಲ. ಮಕ್ಕಳು ಪಾಲಕರ ಮನ ನೋಯಿಸದೆ ಜೀವಿಸಬೇಕು. ಸರಿಯಾಗಿ ನೋಡಿಕೊಳ್ಳಬೇಕು. ಸನ್ಮಾರ್ಗದತ್ತ ಕರೆದೊಯ್ಯುವ ಕೆಲಸ ಮಾಡುವ ಗುರುಗಳಿಗೆ ಗೌರವ ಕೊಡಬೇಕು ಎಂದರು.
ಕುದರಿಮೋತಿ ಮೈಸೂರು ಸಂಸ್ಥಾನ ಮಠದ ಶ್ರೀ ವಿಜಯ ಮಹಾಂತ ಸ್ವಾಮೀಜಿ ಮಾತನಾಡಿ, ಸಕಲ ಜೀವರಾಶಿಗಳ ನೋವು, ಸಂಕಷ್ಟ ಮರೆಸುವ ಶಕ್ತಿ ಸಂಗೀತಕ್ಕಿದೆ. ಸತತ ಅಭ್ಯಾಸ, ಶ್ರದ್ಧೆಯಿಂದ ಒಲಿಯುವ ಅದೃಷ್ಟದ ವಿದ್ಯೆಯಾಗಿದೆ. ಮ್ಯಾದನೇರಿ ಗ್ರಾಮ ಕಲೆಯ ತವರೂರಾಗಿದೆ. ಡಿ.ಎಸ್.ಪೂಜಾರ್ ಅವರು ಅನೇಕ ಸಂಗೀತ ಕಾರ್ಯಕ್ರಮ ಆಯೋಜಿಸುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಇದೆ ವೇಳೆ ಶ್ರೀ ವಿಜಯಮಹಾಂತ ಸ್ವಾಮೀಜಿ, ಯರದಮ್ಮನಹಳ್ಳಿ ಮಾತಾ ಭಾಗ್ಯಮ್ಮ ಜೋಗತಿ, ಪ್ರಮುಖರಾದ ಆದಯ್ಯಸ್ವಾಮಿ ಹಿರೇಮಠ, ಬಸಲಿಂಗಯ್ಯ ಹಿರೇಮಠ, ನೀಲಪ್ಪ ಚುಕ್ಕಾಡಿ, ಪಡಿತರ ವಿತರಕರ ಸಂಘದ ಜಿಲ್ಲಾಧ್ಯಕ್ಷ ಹಾಲಯ್ಯ ಹುಡೆಜಾಲಿ, ಗಡಿ ರಕ್ಷಣಾ ಪಡೆಯ ನಿವೃತ್ತ ಯೋಧ ಚಿಕ್ಕಮ್ಯಾಗೇರಿ ಶಿವಶಂಕ್ರಪ್ಪ ಮೆಣಸಗೇರಿ, ರಾಜ್ಯ ಕೃಷಿ ಪ್ರಶಸ್ತಿ ವಿಜೇತ ರಸೂಲ್ಸಾಬ್ ದಮ್ಮೂರು, ಜನಪದ ಅಕಾಡೆಮಿ ನಿಕಟಪೂರ್ವ ಸದಸ್ಯ ಎಚ್.ಚಂದ್ರಶೇಖರ ಲಿಂಗದಳ್ಳಿ, ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಜಿಲ್ಲಾಧ್ಯಕ್ಷ ಲಕ್ಷ್ಮಣ ಪೀರಗಾರ, ಕಲಾವಿದರು ಹಾಗೂ ಗ್ರಾಮದ ಗಣ್ಯರನ್ನು ಸನ್ಮಾನಿಸಲಾಯಿತು. ಶಾಸ್ತ್ರೀಯ ಸಂಗೀತ, ಜನಪದ, ಸುಗಮ ಸಂಗೀತ, ತತ್ವಪದಗಳು, ರಂಗಗೀತೆ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಈ ಸಂದರ್ಭದಲ್ಲಿ ವಾಲ್ಮೀಕಿ ಸಾಂಸ್ಕೃತಿಕ ಮತ್ತು ಜನಪದ ಕಲಾ ಸಂಘದ ಅಧ್ಯಕ್ಷ ಫಕೀರಪ್ಪ ಹೊಸೂರು, ಕಾರ್ಯದರ್ಶಿ ಡಿ.ಎಸ್. ಪೂಜಾರ್, ಗ್ರಾಮದ ಮುಖಂಡರಿದ್ದರು.