
ನಾಡೋಜ ಡಾ. ಜಿ.ಶಂಕರ್ ಅನಿಸಿಕೆ
ಕೆಎಂಸಿಯಲ್ಲಿ ವಿಶ್ವ ರಕ್ತದಾನಿಗಳ ದಿನ ಉದ್ಘಾಟನೆ
ವಿಜಯವಾಣಿ ಸುದ್ದಿಜಾಲ ಉಡುಪಿ
ವೈದ್ಯಕಿಯ ಲೋಕದಲ್ಲಿ ಆರೈಕೆ, ಚಿಕಿತ್ಸೆ, ಶಸ್ತ್ರಚಿಕಿತ್ಸೆಯಲ್ಲಿ ಗಣನೀಯ ಬದಲಾವಣೆ, ಬೆಳವಣಿಗೆ ನೋಡುತ್ತಿದ್ದೇವೆ. ದೇಹದ ಯಾವುದೇ ಅಂಗಾಂಗವನ್ನು ಮರುಜೋಡಿಸಿ ಮರುಜೀವ ನೀಡುವುದನ್ನೂ ಕಾಣುತ್ತಿದ್ದೇವೆ. ಆದರೆ, ರಕ್ತದ ವಿಚಾರ ಬಂದಾಗ ಭರಿಸಲಾಗದ ಪಾತ್ರ ಕಂಡುಬರುತ್ತದೆ. ರಕ್ತಕ್ಕೆ ಯಾವುದೇ ಜಾತಿ, ಧರ್ಮವಿಲ್ಲ ಮತ್ತು ಪರ್ಯಾಯವಿಲ್ಲ. ಹೀಗಾಗಿ ಇನ್ನೊಬ್ಬರ ಜೀವ ಉಳಿಸಲು ಅರ್ಹರು ನಿಯಮಿತವಾಗಿ ರಕ್ತದಾನ ಮಾಡಬೇಕು ಎಂದು ನಾಡೋಜ ಡಾ. ಜಿ.ಶಂಕರ್ ಅನಿಸಿಕೆ ವ್ಯಕ್ತಪಡಿಸಿದರು.
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಜೂನ್ 14ರಂದು ಸಂಜೆ ಆಯೋಜಿಸಿದ್ದ ವಿಶ್ವ ರಕ್ತದಾನಿಗಳ ದಿನ ಉದ್ಘಾಟಿಸಿ ಮಾತನಾಡಿದರು.
ಯುವ ಸಮುದಾಯಕ್ಕೆ ಕರೆ
ಉಡುಪಿ ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ದೇಶಾದ್ಯಂತ ರಕ್ತದ ಕೊರತೆ ಕಾಡುತ್ತಿದ್ದು, ಯುವ ಸಮುದಾಯ ರಕ್ತದಾನ ಮಾಡುವ ಮೂಲಕ ಅನ್ಯರ ಜೀವ ಉಳಿಸುವ ಮಹತ್ತರ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದರು.
ದಾನಿಗಳಿಗೆ ಸನ್ಮಾನ
ನಿಯಮಿತವಾವಿ ರಕ್ತದಾನ ಮಾಡುವವರು, ಅಫೆರೆಸಿಸ್ ದಾನಿಗಳು, ರಕ್ತದಾನ ಪ್ರೇರಕರು ಮತ್ತು ಸಂಘಟಕರನ್ನು ಸನ್ಮಾನಿಸಲಾಯಿತು. ವಿಶ್ವೇಶ ಎನ್. ಸನ್ಮಾನಿತರ ಪಟ್ಟಿ ವಾಚಿಸಿದರು. ಸಾರ್ವಜನಿಕರಿಗಾಗಿ ಆಯೋಜಿಸಿದ್ದ ಘೋಷ ವಾಕ್ಯ ಬರವಣಿಗೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕೆಎಂಸಿ ಮಣಿಪಾಲದ ಡೀನ್ ಡಾ. ಅನಿಲ ಕೆ. ಭಟ್, ಮಾಹೆ ಬೋಧನಾ ಆಸ್ಪತ್ರೆಗಳ ಸಿಒಒ ಡಾ. ಆನಂದ ವೇಣುಗೋಪಾಲ, ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ, ಶ್ಯಾಮಿಲಿ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ರಕ್ತ ಕೇಂದ್ರದ ಮುಖ್ಯಸ್ಥ ಡಾ. ಗಣೇಶ ಮೋಹನ ಸ್ವಾಗತಿಸಿದರು. ಡಾ. ದೀಪ್ ಕಾರ್ಯಕ್ರಮ ನಿರೂಪಿಸಿದರು. ರಕ್ತ ಕೇಂದ್ರದ ಪ್ರಾಧ್ಯಾಪಕ ಡಾ. ಶಮೀ ಶಾಸ್ತ್ರೀ ವಂದಿಸಿದರು.
ಒಂದು ಯೂನಿಟ್ನಿಂದ ಮೂರು ಜನರಿಗೆ ಜೀವ
ಉಡುಪಿ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶ್ರೀರಾಮ ರಾವ್ ಮಾತನಾಡಿ, ಭಾರತವು ವಾರ್ಷಿಕವಾಗಿ ಸುಮಾರು ಒಂದು ಮಿಲಿಯನ್ ಯೂನಿಟ್ಗಳಷ್ಟು ರಕ್ತದ ಕೊರತೆ ಎದುರಿಸುತ್ತಿದೆ. ಜಾಗತಿಕವಾಗಿ ಪ್ರತಿ ಎರಡು ಸೆಕೆಂಡ್ಗೆ ಒಬ್ಬರಿಗೆ ರಕ್ತದ ಅವಶ್ಯಕತೆಯಿದೆ. 18 ವಯಸ್ಸು ದಾಟಿದ ಆರೋಗ್ಯವಂತರು ವರ್ಷಕ್ಕೆ ಮೂರು ಬಾರಿಯಂತೆ 60ನೇ ವಯಸ್ಸಿನವರೆಗೆ ದಾನ ಮಾಡಿದರೆ ಸುಮಾರು 30 ಗ್ಯಾಲನ್ನಷ್ಟು ಆಗುತ್ತದೆ. ಇದು 500ಕ್ಕೂ ಹೆಚ್ಚು ಜನರನ್ನು ಬದುಕಿಸಬಹುದು. ಒಂದು ಯೂನಿಟ್ ರಕ್ತದಿಂದ ಮೂರು ಜೀವ ಉಳಿಸಬಹುದು. ಹೀಗಾಗಿ ಸ್ವಯಂಪ್ರೇರಿತ ರಕ್ತದಾನ ಮಾಡಬೇಕು ಎಂದರು.
ಈ ವರ್ಷದ ಘೋಷವಾಕ್ಯ ರಕ್ತ ನೀಡಿ-ಭರವಸೆ ನೀಡಿ; ಜತೆಯಾಗಿ ಜೀವ ಉಳಿಸೋಣ ಎನ್ನುವುದಾಗಿದೆ. ಇದು ರಕ್ತದಾನದ ಮಹತ್ವ ಮತ್ತು ಇನ್ನೊಬ್ಬರ ಜೀವ ಉಳಿಸುವಲ್ಲಿ ಸಮುದಾಯದ ಭಾಗವಹಿಸುವಿಕೆಯ ಆಶಯವಾಗಿದೆ. ರಕ್ತದಾನದ ಮೂಲಕ ಇನ್ನೊಬ್ಬರ ಜೀವ ಉಳಿಸಿ ಉದಾತ್ತ ಕೊಡುಗೆ ನೀಡುತ್ತಿರುವ ಎಲ್ಲರಿಗೆ ಕೃತಜ್ಞತೆ ಅರ್ಪಿಸುತ್ತೇನೆ.
| ಕ್ಯಾ. ಬ್ರಿಜೇಶ್ ಚೌಟ. ದ.ಕ. ಸಂಸದ