ಬೆಂಗಳೂರು: ನಗರದ ದಿ ಮಿಥಿಕ್ ಸೊಸೈಟಿಯ ‘ಅಕ್ಷರ ಭಂಡಾರ’ ಸಾಫ್ಟ್ವೇರ್ ಬಳಸಿ ಬೋಧಕರಿಗೆ ಪ್ರಾಚೀನ ಕನ್ನಡ ಲಿಪಿಗಳನ್ನು ಕಲಿಸುವ ಉಚಿತ ತರಬೇತಿ ಕಾರ್ಯಾಗಾರ ಭಾನುವಾರ (ಫೆ.17) ನಿಗದಿಯಾಗಿದೆ. ಅಂದು ಬೆಳಿಗ್ಗೆ 9.30ಕ್ಕೆ ಸಂಸ್ಥೆಯ ಶತಮಾನೋತ್ಸವ ಸಭಾಂಗಣದಲ್ಲಿ ಕಾರ್ಯಾಗಾರವನ್ನು ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಉದ್ಘಾಟಿಸಲಿದ್ದಾರೆ.
ಪದವಿ ಮತ್ತು ಸ್ನಾತಕೋತ್ತರ ಪದವಿ ಹಂತದ ವಿದ್ಯಾರ್ಥಿಗಳಿಗೆ ಪ್ರಾಚೀನ ಕನ್ನಡ ಲಿಪಿಗಳನ್ನು ಪರಿಣಾಮಕಾರಿಯಾಗಿ ಕಲಿಸಲು, ಶಿಕ್ಷಕರಿಗೆ ಅವಶ್ಯಕವಾದ ಜ್ಞಾನ ಮತ್ತು ಕೌಶಲ ಒದಗಿಸಲಾಗುತ್ತದೆ. ಇತ್ತೀಚಿಗೆ ಮಂಡ್ಯದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾದ ಈ ಸಾಫ್ಟ್ವೇರ್ ಬಗ್ಗೆ ಹಲವರಿಂದ ಕಲಿಕೆಗೆ ಇಚ್ಛೆ ವ್ಯಕ್ತವಾಗುತ್ತಿದೆ. ಜತೆಗೆ ಪ್ರಪಂಚದಾದ್ಯಂತ ಕಡಿಮೆ ಅವಧಿಯಲ್ಲೇ ಹೆಚ್ಚು ಬಳಕೆದಾರರನ್ನು ಸಂಪಾದಿಸಿದೆ. 5ರಿಂದ 17ನೇ ಶತಮಾನದವರೆಗಿನ 30,000ಕ್ಕೂ ಹೆಚ್ಚು ಪ್ರಾಚೀನ ಕನ್ನಡ ಅಕ್ಷರಗಳ ಡಿಜಿಟಲ್ ದತ್ತಾಂಶ ಈ ಸಾಫ್ಟ್ವೇರ್ನಲ್ಲಿದೆ.
ಈಗಾಗಲೇ 100ಕ್ಕೂ ಹೆಚ್ಚು ಶಿಕ್ಷಕರು ಹೆಸರು ನೋಂದಾಯಿಸಿಕೊಂಡಿದ್ದು, ಕೆಲವೇ ಸೀಟು ಮಾತ್ರ ಲಭ್ಯವಿವೆ (ಒಟ್ಟು – 125 ಸೀಟುಗಳು) ಎಂದು ಸಂಸ್ಥೆಯ ಪದಾಧಿಕಾರಿಗಳು ತಿಳಿಸಿದ್ದಾರೆ.