ಚಿಕ್ಕಮಗಳೂರು: ಕಾಫಿ ತೋಟಗಳಿಗೆ ಕೂಲಿ ಕಾರ್ವಿುಕರಾಗಿ ಆಗಮಿಸಿರುವ ಅಸ್ಸಾಂ, ಬಿಹಾರ ಮೂಲದ ಕುಟುಂಬದವರ ಮಕ್ಕಳಿಗೆ ಬಿಸಿಯೂಟ ಹಾಗೂ ಶಿಕ್ಷಣ ನೀಡುವುದು ಶಿಕ್ಷಣ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
ಜಿಪಂ ಸಭಾಂಗಣದಲ್ಲಿ ಗುರುವಾರ ನಡೆದ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಸಭೆಯಲ್ಲಿ ಅನ್ಯ ರಾಜ್ಯದ ಕೂಲಿ ಕಾರ್ವಿುಕ ಮಕ್ಕಳಿಗೆ ಶಿಕ್ಷಣ, ಬಿಸಿಯೂಟ ಸಮಸ್ಯೆ ಬಗ್ಗೆ ವಿಸõತ ಚರ್ಚೆಯಲ್ಲಿ ಡಿಡಿಪಿಐ ಕೆ.ಎನ್.ಜಯಣ್ಣ ಅಳಲು ತೋಡಿಕೊಂಡರು.
ಶಾಲೆಗೆ ಬರುತ್ತಿರುವ ಇಂತಹ ಮಕ್ಕಳಿಗೆ ಬಿಸಿಯೂಟ ನೀಡುವುದು ಒಂದೆಡೆ ಸಮಸ್ಯೆಯಾದರೆ, ಭಾಷೆಯೇ ಗೊತ್ತಿಲ್ಲದವರಿಗೆ ಪಾಠ ಹೇಳಲು ಶಿಕ್ಷಕರು ಪರದಾಡತೊಡಗಿದ್ದಾರೆ. ಎರಡು ತಿಂಗಳಿಂದ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು ಈ ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ಶಾಲೆಗೆ ಅಧಿಕೃತವಾಗಿ ದಾಖಲಾಗದ ಈ ಮಕ್ಕಳಿಗೆ ಬಿಸಿಯೂಟ ನೀಡಲು ನಿಯಮದಲ್ಲಿ ಅವಕಾಶವಿಲ್ಲ. ಮಲೆನಾಡು ಭಾಗದ ತಾಲೂಕುಗಳಲ್ಲಿ ಒಟ್ಟು 383 ಮಕ್ಕಳು ಸಮೀಪದ ಶಾಲೆಗೆ ಬರುತ್ತಿದ್ದಾರೆ. ಒಂದು ಅಥವಾ ಎರಡು ಮಕ್ಕಳಾದರೆ ಶಿಕ್ಷಕರು ಊಟ ಹೇಗೋ ನಿಭಾಯಿಸುತ್ತಾರೆ. ಕೆಲ ಶಾಲೆಯಲ್ಲಿ ಐದಕ್ಕಿಂತ ಹೆಚ್ಚು ಮಕ್ಕಳು ಶಾಲೆಗೆ ಬರುತ್ತಿರುವುದರಿಂದ ಊಟ ಬಡಿಸಲು ತೊಂದರೆಯಾಗುತ್ತಿದೆ. ಅಲ್ಲದೆ ಆ ಮಕ್ಕಳಿಗೆ ಹಿಂದಿ, ಇಂಗ್ಲಿಷ್ ಬರುವುದಿಲ್ಲ. ಇದರಿಂದ ಇಲ್ಲಿನ ಶಿಕ್ಷಕರು ಅವರಿಗೆ ಪಾಠ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ವಿವರಿಸಿದರು.
ಜಿಲ್ಲಾ ಅಕ್ಷರ ದಾಸೋಹದ ಶಿಕ್ಷಣಾಧಿಕಾರಿ ಸುಂದರೇಶ್ ಮಾತನಾಡಿ, ಮಕ್ಕಳು ಶಾಲೆಗೆ ದಾಖಲಾದರೆ ಮಾತ್ರ ಬಿಸಿಯೂಟ ನೀಡಲು ಅವಕಾಶವಿದೆ. ಇಷ್ಟೊಂದು ಮಕ್ಕಳಿಗೆ ವ್ಯವಸ್ಥೆ ಮಾಡುವುದು ಕಷ್ಟವಾಗುತ್ತದೆ ಎಂದು ಸಭೆಗೆ ಮಾಹಿತಿ ನೀಡಿದರು.
ನಿಯಮ ಮುಂದು ಮಾಡದೆ ಮಾನವೀಯ ದೃಷ್ಟಿಯಿಂದಲಾದರೂ ಅನ್ಯ ರಾಜ್ಯದ ಕೂಲಿ ಕಾರ್ವಿುಕ ಮಕ್ಕಳಿಗೆ ಊಟ ಕೊಡಿ. ಅವರು ಎರಡು, ಮೂರು ತಿಂಗಳು ಇದ್ದು ಹೋಗುತ್ತಾರೆ. ಅಲ್ಲಿ ತನಕ ಹೇಗಾದರೂ ಮಾಡಿ ವ್ಯವಸ್ಥೆ ಮಾಡಿ ಎಂದು ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿತಿ ಸಮಿತಿ ಅಧ್ಯಕ್ಷೆ ಜಸಂತಾ ಅನಿಲ್ಕುಮಾರ್ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಶಾಲೆಗಳಲ್ಲಿ ಶಿಕ್ಷಕರು ಕಡ್ಡಾಯವಾಗಿ ದಾಖಲಾತಿ ಮಾಡಿಕೊಂಡು ಆನ್ಲೈನ್ನ ಸ್ಯಾಟ್ಸ್ನಲ್ಲಿ ವಿವರ ನೀಡಬೇಕು. ಆಗ ನಾವು ಎಂಐಸಿ ಮೂಲಕ ದಾಖಲೆ ಸಲ್ಲಿಸಿ ಊಟದ ಸಾಮಗ್ರಿ ಬೇಡಿಕೆ ಸಲ್ಲಿಸುತ್ತೇವೆ. ಇಲ್ಲದಿದ್ದರೆ ಕಷ್ಟವಾಗುತ್ತದೆ ಎಂದು ಅಕ್ಷರ ದಾಸೋಹ ಅಧಿಕಾರಿ ಅಸಹಾಯಕತೆ ವ್ಯಕ್ತಪಡಿಸಿದರು.
ಮಧ್ಯ ಪ್ರವೇಶಿಸಿದ ಎಸ್.ಎನ್.ರಾಮಸ್ವಾಮಿ, ತಾತ್ಕಾಲಿಕವಾಗಿ ಮಕ್ಕಳು ಆಗಮಿಸಿದರೂ ಅವರನ್ನು ಶಾಲೆಯಲ್ಲಿ ಅಧಿಕೃತವಾಗಿ ದಾಖಲು ಮಾಡಿಕೊಂಡು ಬಿಸಿಯೂಟ ವ್ಯವಸ್ಥೆ ಮಾಡಲಿ. ಬಿಟ್ಟು ಹೋದಾಗ ದಾಖಲೆಯಿಂದ ಅವರನ್ನು ಕೈಬಿಡಲು ಎಂದು ಸಲಹೆ ನೀಡಿದರು. ಈ ಸಲಹೆ ಒಪ್ಪಿಕೊಂಡ ಡಿಡಿಪಿಐ, ಅಸ್ಸಾಮಿ, ಬಿಹಾರಿ ಭಾಷೆೆ ಗೊತ್ತಿ್ತ್ಲ ಶಿಕ್ಷಕರು ಮಕ್ಕಳಿಗೆ ಬೋಧನೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
6-14 ವರ್ಷದ ಮಕ್ಕಳು ವಯಸ್ಸಿನ ಅನುಗುಣವಾಗಿ ತರಗತಿಯಲ್ಲಿ ಕೂರಲಿ. ಅವರಿಗೆ ಅರ್ಥವಾಗುವುದನ್ನು ಕೇಳಲಿ. ಎಲ್ಲ ಶಾಲೆಗಳಿಗೆ ಅಸ್ಸಾಮಿ, ಬಿಹಾರಿ ಶಿಕ್ಷಕರ ನೇಮಕ ಮಾಡುವುದು ಕಷ್ಟ. ಹೇಗಾದರೂ ಮಾಡಿ ಬಿಸಿಯೂಟ ಮಾತ್ರ ಅವರಿಗೆ ಕೊಡಬೇಕು ಎಂದು ಜಸಂತಾ ಅನಿಲ್ಕುಮಾರ್ ಸೂಚಿಸಿದರು. ನಿಖಿಲ್ ಚಕ್ರವರ್ತಿ, ಕಾವೇರಿ ಲಕ್ಕಪ್ಪ, ಉಪ ಕಾರ್ಯದರ್ಶಿ ರಾಜ್ಗೋಪಾಲ್ ಇದ್ದರು.