ಇಂದಿನಿಂದ ಮಹಿಳಾ ಟಿ20 ಹಬ್ಬ; ಡಬ್ಲ್ಯುಪಿಎಲ್​ 3ನೇ ಆವೃತ್ತಿಯಲ್ಲಿ ಆರ್​ಸಿಬಿ-ಗುಜರಾತ್​ ಮೊದಲ ಪಂದ್ಯ

blank

ವಡೋದರ: ಮಹಿಳೆಯರ ಐಪಿಎಲ್​ ಖ್ಯಾತಿಯ ವುಮೆನ್ಸ್​ ಪ್ರೀಮಿಯರ್​ ಲೀಗ್​ (ಡಬ್ಲ್ಯುಪಿಎಲ್​) ಟಿ20 ಟೂರ್ನಿಯ 3ನೇ ಆವೃತ್ತಿಗೆ ಶುಕ್ರವಾರ ಚಾಲನೆ ಸಿಗಲಿದೆ. ವಡೋದರದ ನೂತನ ಕೋಟಂಬಿ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಆರ್​ಸಿಬಿ ಮತ್ತು ಗುಜರಾತ್​ ಜೈಂಟ್ಸ್​ ಮುಖಾಮುಖಿ ಆಗಲಿವೆ. ಅಂತಾರಾಷ್ಟ್ರೀಯ ಕ್ರಿಕೆಟ್​ ತಾರೆಯರೊಂದಿಗೆ ದೇಶೀಯ ಆಟಗಾರ್ತಿಯರಿಗೂ ಉತ್ತಮ ಅವಕಾಶವೆನಿಸಿದೆ.

ಇತ್ತೀಚೆಗೆ ಸತತ 2ನೇ ಬಾರಿ 19 ವಯೋಮಿತಿಯ ಟಿ20 ವಿಶ್ವಕಪ್​ ಗೆದ್ದಿರುವ ಭಾರತಕ್ಕೆ ಮಹಿಳಾ ಕ್ರಿಕೆಟ್​ನಲ್ಲಿ ಇನ್ನಷ್ಟು ಪ್ರಗತಿ ಕಾಣಲು ಡಬ್ಲ್ಯುಪಿಎಲ್​ ಪ್ರಮುಖ ವೇದಿಕೆ ಎನಿಸಿದೆ. ಕಳೆದ 2 ಆವೃತ್ತಿಗಳಲ್ಲೇ ಸೈಕಾ ಇಶಾಕ್​, ಆಶಾ ಶೋಭನಾ, ಕನ್ನಡತಿ ಶ್ರೇಯಾಂಕಾ ಪಾಟೀಲ್​ರಂಥ ಭಾರತದ ಕೆಲ ಯುವ ಕ್ರಿಕೆಟಿಗರು ಗಮನಸೆಳೆದಿದ್ದು, ರಾಷ್ಟ್ರೀಯ ತಂಡದ ಪರವಾಗಿಯೂ ಆಡುವ ಅವಕಾಶ ಪಡೆದುಕೊಂಡಿದ್ದಾರೆ.
ಆರ್​ಸಿಬಿ ತಂಡ ಸತತ 2ನೇ ಬಾರಿ ಪ್ರಶಸ್ತಿ ಜಯಿಸುವ ಕನಸು ಹೊಂದಿದ್ದರೂ, ಕಳೆದ ಆವೃತ್ತಿಯ ಆಡುವ 11ರ ಬಳಗದಲ್ಲಿ ಈ ಬಾರಿ ಕೆಲ ಬದಲಾವಣೆಗಳ ಹಿನ್ನಡೆ ಇದೆ. ಹರ್ಮಾನ್​ಪ್ರೀತ್​ ಕೌರ್​ ಸಾರಥ್ಯದ ಮುಂಬೈ ಇಂಡಿಯನ್ಸ್​ ಮೊದಲ ಆವೃತ್ತಿಯ ಪ್ರಶಸ್ತಿ ಸಾಧನೆ ಮರುಕಳಿಸುವ ಹಂಬಲದಲ್ಲಿದ್ದರೆ, ಕಳೆದೆರಡು ಆವೃತ್ತಿಗಳ ಫೈನಲ್​ನಲ್ಲಿ ಎಡವಿದ್ದ ಮೆಗ್​ ಲ್ಯಾನಿಂಗ್​ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್​ 3ನೇ ಯತ್ನದಲ್ಲಿ ಪ್ರಶಸ್ತಿ ಎತ್ತುವ ತವಕದಲ್ಲಿದೆ. ಗುಜರಾತ್​ ಜೈಂಟ್ಸ್​ ಮತ್ತು ಯುಪಿ ವಾರಿಯರ್ಸ್​ ಈ ಬಾರಿ ಹೊಸ ನಾಯಕಿಯರನ್ನು ನೇಮಿಸಿದ್ದು, ಅದೃಷ್ಟ ಬದಲಾವಣೆಯ ನಿರೀಕ್ಷೆಯಲ್ಲಿವೆ. ದೀಪ್ತಿ ಶರ್ಮ ಯುಪಿ ಮತ್ತು ಆಶ್ಲೆ ಗಾರ್ಡ್​ನರ್​ ಗುಜರಾತ್​ ಸಾರಥ್ಯ ವಹಿಸಲಿದ್ದಾರೆ.

ಆರ್​ಸಿಬಿಗೆ ಪ್ರಶಸ್ತಿ ಉಳಿಸಿಕೊಳ್ಳುವ ಸವಾಲು
ಕಳೆದ ಆವೃತ್ತಿಯಲ್ಲಿ ಅಮೋ ನಿರ್ವಹಣೆ ತೋರುವ ಮೂಲಕ ಅಭಿಮಾನಿಗಳ ಬಹುದಿನಗಳ ಪ್ರಶಸ್ತಿ ಕನಸು ನನಸಾಗಿಸಿದ್ದ ಆರ್​ಸಿಬಿ ತಂಡ ಈ ಬಾರಿ ಪ್ರಶಸ್ತಿ ಉಳಿಸಿಕೊಳ್ಳುವ ಸವಾಲು ಹೊಂದಿದೆ. ಆದರೆ ಸ್ಮೃತಿ ಮಂದನಾ ಬಳಗ ಈ ಬಾರಿ ಕೆಲ ಪ್ರಮುಖ ಆಟಗಾರ್ತಿಯರ ಗೈರಿನ ಹಿನ್ನಡೆಯನ್ನು ಸಮರ್ಥವಾಗಿ ನಿಭಾಯಿಸಬೇಕಾಗಿದೆ. ಆಲ್ರೌಂಡರ್​ ಸೋಫಿ ಡಿವೈನ್​, ಸ್ಪಿನ್ನರ್​ಗಳಾದ ಮೊಲಿನೆಕ್ಸ್​ ಮತ್ತು ಆಶಾ ಶೋಭನಾ ಟೂರ್ನಿಗೆ ಅಲಭ್ಯರಾಗಿದ್ದರೆ, ಶ್ರೇಯಾಂಕಾ ಪಾಟೀಲ್​ ಇದೀಗಷ್ಟೇ ಗಾಯದಿಂದ ಚೇತರಿಸಿಕೊಂಡಿದ್ದಾರೆ. ಇದರಿಂದ ಆಲ್ರೌಂಡರ್​ ಎಲ್ಲಿಸ್​ ಪೆರ್ರಿ ಈ ಬಾರಿ ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳಬೇಕಾಗಿದೆ. ಇತ್ತೀಚೆಗೆ ಐಸಿಸಿ ವರ್ಷದ ಆಟಗಾರ್ತಿ ಪ್ರಶಸ್ತಿ ಗೆದ್ದಿರುವ ನಾಯಕಿ ಸ್ಮೃತಿ ಮಂದನಾ ಭರ್ಜರಿ ಫಾರ್ಮ್​ನಲ್ಲಿರುವುದು ಆರ್​ಸಿಬಿಗೆ ಬಲ ತುಂಬುವ ನಿರೀಕ್ಷೆ ಇದೆ.

ಕೆಲ ಪ್ರಮುಖರು ಮಿಸ್​
ಈ ಬಾರಿ ಗಾಯ ಮತ್ತಿತರ ಕಾರಣದಿಂದಾಗಿ ಕೆಲ ಪ್ರಮುಖ ಆಟಗಾರ್ತಿಯರು ಟೂರ್ನಿಯನ್ನು ತಪ್ಪಿಸಿಕೊಳ್ಳಲಿದ್ದಾರೆ. ಆಸ್ಟ್ರೆಲಿಯಾದ ವಿಕೆಟ್​ ಕೀಪರ್​-ಬ್ಯಾಟರ್​ ಅಲಿಸ್ಸಾ ಹೀಲಿ, ಸೋಫಿ ಮೊಲಿನೆಕ್ಸ್​, ಇಂಗ್ಲೆಂಡ್​ನ ಕೇಟ್​ ಕ್ರಾಸ್​, ನ್ಯೂಜಿಲೆಂಡ್​ನ ಸೋಫಿ ಡಿವೈನ್​, ಭಾರತದ ಆಶಾ ಶೋಭನಾ, ಪೂಜಾ ವಸ್ತ್ರಾಕರ್​ ಇವರಲ್ಲಿ ಪ್ರಮುಖರು. ಟೂರ್ನಿಗೆ ಮುನ್ನಾದಿನವೂ ತಂಡಗಳಲ್ಲಿ ಬದಲಾವಣೆಯಾಗಿದ್ದು, ಮುಂಬೈಗೆ ಪೂಜಾ ವಸ್ತ್ರಾಕರ್​ ಬದಲಿಗೆ ಪುರಾಣಿಕಾ ಸಿಸೋಡಿಯಾ ಮತ್ತು ಆರ್​ಸಿಬಿಗೆ ಆಶಾ ಶೋಭನಾ ಬದಲಿಗೆ ನುಜತ್​ ಪರ್ವೀನ್​ ಸೇರ್ಪಡೆಯಾಗಿದ್ದಾರೆ.

*ಡಬ್ಲ್ಯುಪಿಎಲ್​ ಚಾಂಪಿಯನ್ಸ್​
2023: ಮುಂಬೈ ಇಂಡಿಯನ್ಸ್​
2024: ಆರ್​ಸಿಬಿ-ಬೆಂಗಳೂರು

ಬಹುಮಾನ ಮೊತ್ತ: ಒಟ್ಟು 10 ಕೋಟಿ ರೂ.
ಚಾಂಪಿಯನ್​: 6 ಕೋಟಿ ರೂ.
ರನ್ನರ್​ಅಪ್​: 3 ಕೋಟಿ ರೂ.
3ನೇ ಸ್ಥಾನಿ: 1 ಕೋಟಿ ರೂ.

ಇಂದಿನ ಪಂದ್ಯ
ಗುಜರಾತ್-ಆರ್​ಸಿಬಿ
ಎಲ್ಲಿ: ವಡೋದರ
ಎಲ್ಲ ಪಂದ್ಯಗಳು ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಡಿಸ್ನಿ+ಹಾಟ್​ಸ್ಟಾರ್​

4 ತಾಣಗಳಲ್ಲಿ ಪಂದ್ಯ
ಮೊದಲ ಆವೃತ್ತಿ ಒಂದೇ ನಗರದಲ್ಲಿ ನಡೆದಿದ್ದರೆ, 2ನೇ ಆವೃತ್ತಿ 2 ತಾಣಗಳಲ್ಲಿ ಆಯೋಜನೆಗೊಂಡಿತ್ತು. ಇದೀಗ 3ನೇ ಆವೃತ್ತಿ 4 ನಗರಗಳಿಗೆ ವಿಸ್ತರಣೆಗೊಂಡಿದೆ. ವಡೋದರದಲ್ಲಿ ಟೂರ್ನಿಗೆ ಚಾಲನೆ ಸಿಗಲಿದ್ದು, ನಂತರ ಬೆಂಗಳೂರು, ಲಖನೌದಲ್ಲಿ ಪಂದ್ಯಗಳು ನಡೆಯಲಿವೆ. ಅಂತಿಮ ಲೀಗ್​, ಪ್ಲೇಆಫ್​ ಹಾಗೂ ಫೈನಲ್​ ಪಂದ್ಯಗಳು ಮುಂಬೈನಲ್ಲಿ ನಿಗದಿಯಾಗಿವೆ.

ಇಂದಿನಿಂದ ಮಹಿಳಾ ಟಿ20 ಹಬ್ಬ; ಡಬ್ಲ್ಯುಪಿಎಲ್​ 3ನೇ ಆವೃತ್ತಿಯಲ್ಲಿ ಆರ್​ಸಿಬಿ-ಗುಜರಾತ್​ ಮೊದಲ ಪಂದ್ಯ

ಲೀಗ್​ ಸ್ವರೂಪ
ಟೂರ್ನಿಯಲ್ಲಿ ಆಡುವ ಒಟ್ಟು 5 ತಂಡಗಳು ಲೀಗ್​ ಹಂತದಲ್ಲಿ ರೌಂಡ್​ ರಾಬಿನ್​ ಮಾದರಿಯಲ್ಲಿ ತಲಾ 2 ಬಾರಿ ಮುಖಾಮುಖಿ ಆಗಲಿವೆ. ಲೀಗ್​ ಹಂತದಲ್ಲಿ ಎಲ್ಲ ತಂಡಗಳು ತಲಾ 8 ಪಂದ್ಯ ಆಡಲಿವೆ. ಅಂತಿಮವಾಗಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ತಂಡ ನೇರವಾಗಿ ಫೈನಲ್​ಗೇರಲಿದೆ. 2-3ನೇ ಸ್ಥಾನ ಪಡೆದ ತಂಡಗಳು ಎಲಿಮಿನೇಟರ್​ ಪಂದ್ಯದಲ್ಲಿ, ಫೈನಲ್​ಗೇರಲು ಹೋರಾಡಲಿವೆ. ಮಾರ್ಚ್​ 15ರಂದು ಫೈನಲ್​ ಪಂದ್ಯ ನಡೆಯಲಿದೆ.

ನಾಲ್ವರು ಕನ್ನಡತಿಯರು
ಈ ಬಾರಿ ಡಬ್ಲುಪಿಎಲ್​ನಲ್ಲಿ ನಾಲ್ವರು ಕನ್ನಡತಿಯರು ಕಣದಲ್ಲಿದ್ದಾರೆ. ಆಲ್ರೌಂಡರ್​ ಶ್ರೇಯಾಂಕಾ ಪಾಟೀಲ್​ ಆರ್​ಸಿಬಿ ತಂಡದಲ್ಲಿ ಪ್ರಮುಖ ಸದಸ್ಯೆ ಆಗಿದ್ದರೆ, ಅನುಭವಿ ಸ್ಪಿನ್ನರ್​ ರಾಜೇಶ್ವರಿ ಗಾಯಕ್ವಾಡ್​, ವೃಂದಾ ದಿನೇಶ್​ ಯುಪಿ ವಾರಿಯರ್ಸ್​ ತಂಡದಲ್ಲಿದ್ದಾರೆ. ಇತ್ತೀಚೆಗೆ 19 ವಯೋಮಿತಿ ಮಹಿಳಾ ಟಿ20 ವಿಶ್ವಕಪ್​ ಗೆದ್ದ ಭಾರತ ತಂಡದ ನಾಯಕಿಯಾಗಿದ್ದ ಕನ್ನಡತಿ ನಿಕಿ ಪ್ರಸಾದ್​ ಡೆಲ್ಲಿ ಪರ ಡಬ್ಲುಪಿಎಲ್​ ಪದಾರ್ಪಣೆ ನಿರೀಕ್ಷೆಯಲ್ಲಿದ್ದಾರೆ.

ಫುಟ್​ಬಾಲ್ ಕನಸು ಹೊತ್ತ ಮಕ್ಕಳಿಗೊಂದು ಉತ್ತಮ ವೇದಿಕೆ; ರೆಸಿಡೆನ್ಶಿಯಲ್ ಅಕಾಡೆಮಿಗೆ ಮುಕ್ತ ಟ್ರಯಲ್ಸ್ ಆಯೋಜಿಸಿದ ಎಸ್​ಯುಎಫ್​ಸಿ

TAGGED:
Share This Article

ನಿಮ್ಮ ಮಕ್ಕಳನ್ನು ಸ್ಮಾರ್ಟ್‌ಫೋನ್‌ಗಳಿಂದ ದೂರವಿಡುವುದು ಹೇಗೆ? Child Care Tips

Child Care Tips: ನೀವು ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಮೊಬೈಲ್ ಫೋನ್ ಕೊಡಬಾರದು. ನಿಮ್ಮ ಮಗು ನಿಮ್ಮೊಂದಿಗೆ…

ಈ 3 ರಾಶಿಯ ಮಹಿಳೆಯರು ಹುಟ್ಟಿನಿಂದಲೇ ಅಪಾರ ಬುದ್ಧಿಶಕ್ತಿ ಹೊಂದಿರುತ್ತಾರಂತೆ! ನಿಮ್ಮದೂ ಇದೇ ರಾಶಿನಾ? Zodiac Signs

Zodiac Signs : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ಯಾವ ರಾಶಿಚಕ್ರ ಮತ್ತು ನಕ್ಷತ್ರದಲ್ಲಿ…

ಬೇಸಿಗೆ ತಂಪಾಗಿರಲು ಹಾಲು ಹಾಕದ ಮಿಲ್ಕ್ ಶೇಕ್

ಬೇಸಿಗೆಯಲ್ಲೂ ನಮ್ಮನ್ನು ತಂಪಾಗಿಟ್ಟು, ಸಾಮಾನ್ಯವಾಗಿ ಆಗುವ ಸುಸ್ತನ್ನು ಕಡಿಮೆ ಮಾಡುವ ವಿಶೇಷ ಮಿಲ್ಕ್ ಶೇಕ್ ಬಗ್ಗೆ…