ವಡೋದರ: ಮಹಿಳೆಯರ ಐಪಿಎಲ್ ಖ್ಯಾತಿಯ ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಟಿ20 ಟೂರ್ನಿಯ 3ನೇ ಆವೃತ್ತಿಗೆ ಶುಕ್ರವಾರ ಚಾಲನೆ ಸಿಗಲಿದೆ. ವಡೋದರದ ನೂತನ ಕೋಟಂಬಿ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್ಸಿಬಿ ಮತ್ತು ಗುಜರಾತ್ ಜೈಂಟ್ಸ್ ಮುಖಾಮುಖಿ ಆಗಲಿವೆ. ಅಂತಾರಾಷ್ಟ್ರೀಯ ಕ್ರಿಕೆಟ್ ತಾರೆಯರೊಂದಿಗೆ ದೇಶೀಯ ಆಟಗಾರ್ತಿಯರಿಗೂ ಉತ್ತಮ ಅವಕಾಶವೆನಿಸಿದೆ.
ಇತ್ತೀಚೆಗೆ ಸತತ 2ನೇ ಬಾರಿ 19 ವಯೋಮಿತಿಯ ಟಿ20 ವಿಶ್ವಕಪ್ ಗೆದ್ದಿರುವ ಭಾರತಕ್ಕೆ ಮಹಿಳಾ ಕ್ರಿಕೆಟ್ನಲ್ಲಿ ಇನ್ನಷ್ಟು ಪ್ರಗತಿ ಕಾಣಲು ಡಬ್ಲ್ಯುಪಿಎಲ್ ಪ್ರಮುಖ ವೇದಿಕೆ ಎನಿಸಿದೆ. ಕಳೆದ 2 ಆವೃತ್ತಿಗಳಲ್ಲೇ ಸೈಕಾ ಇಶಾಕ್, ಆಶಾ ಶೋಭನಾ, ಕನ್ನಡತಿ ಶ್ರೇಯಾಂಕಾ ಪಾಟೀಲ್ರಂಥ ಭಾರತದ ಕೆಲ ಯುವ ಕ್ರಿಕೆಟಿಗರು ಗಮನಸೆಳೆದಿದ್ದು, ರಾಷ್ಟ್ರೀಯ ತಂಡದ ಪರವಾಗಿಯೂ ಆಡುವ ಅವಕಾಶ ಪಡೆದುಕೊಂಡಿದ್ದಾರೆ.
ಆರ್ಸಿಬಿ ತಂಡ ಸತತ 2ನೇ ಬಾರಿ ಪ್ರಶಸ್ತಿ ಜಯಿಸುವ ಕನಸು ಹೊಂದಿದ್ದರೂ, ಕಳೆದ ಆವೃತ್ತಿಯ ಆಡುವ 11ರ ಬಳಗದಲ್ಲಿ ಈ ಬಾರಿ ಕೆಲ ಬದಲಾವಣೆಗಳ ಹಿನ್ನಡೆ ಇದೆ. ಹರ್ಮಾನ್ಪ್ರೀತ್ ಕೌರ್ ಸಾರಥ್ಯದ ಮುಂಬೈ ಇಂಡಿಯನ್ಸ್ ಮೊದಲ ಆವೃತ್ತಿಯ ಪ್ರಶಸ್ತಿ ಸಾಧನೆ ಮರುಕಳಿಸುವ ಹಂಬಲದಲ್ಲಿದ್ದರೆ, ಕಳೆದೆರಡು ಆವೃತ್ತಿಗಳ ಫೈನಲ್ನಲ್ಲಿ ಎಡವಿದ್ದ ಮೆಗ್ ಲ್ಯಾನಿಂಗ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ 3ನೇ ಯತ್ನದಲ್ಲಿ ಪ್ರಶಸ್ತಿ ಎತ್ತುವ ತವಕದಲ್ಲಿದೆ. ಗುಜರಾತ್ ಜೈಂಟ್ಸ್ ಮತ್ತು ಯುಪಿ ವಾರಿಯರ್ಸ್ ಈ ಬಾರಿ ಹೊಸ ನಾಯಕಿಯರನ್ನು ನೇಮಿಸಿದ್ದು, ಅದೃಷ್ಟ ಬದಲಾವಣೆಯ ನಿರೀಕ್ಷೆಯಲ್ಲಿವೆ. ದೀಪ್ತಿ ಶರ್ಮ ಯುಪಿ ಮತ್ತು ಆಶ್ಲೆ ಗಾರ್ಡ್ನರ್ ಗುಜರಾತ್ ಸಾರಥ್ಯ ವಹಿಸಲಿದ್ದಾರೆ.
ಆರ್ಸಿಬಿಗೆ ಪ್ರಶಸ್ತಿ ಉಳಿಸಿಕೊಳ್ಳುವ ಸವಾಲು
ಕಳೆದ ಆವೃತ್ತಿಯಲ್ಲಿ ಅಮೋ ನಿರ್ವಹಣೆ ತೋರುವ ಮೂಲಕ ಅಭಿಮಾನಿಗಳ ಬಹುದಿನಗಳ ಪ್ರಶಸ್ತಿ ಕನಸು ನನಸಾಗಿಸಿದ್ದ ಆರ್ಸಿಬಿ ತಂಡ ಈ ಬಾರಿ ಪ್ರಶಸ್ತಿ ಉಳಿಸಿಕೊಳ್ಳುವ ಸವಾಲು ಹೊಂದಿದೆ. ಆದರೆ ಸ್ಮೃತಿ ಮಂದನಾ ಬಳಗ ಈ ಬಾರಿ ಕೆಲ ಪ್ರಮುಖ ಆಟಗಾರ್ತಿಯರ ಗೈರಿನ ಹಿನ್ನಡೆಯನ್ನು ಸಮರ್ಥವಾಗಿ ನಿಭಾಯಿಸಬೇಕಾಗಿದೆ. ಆಲ್ರೌಂಡರ್ ಸೋಫಿ ಡಿವೈನ್, ಸ್ಪಿನ್ನರ್ಗಳಾದ ಮೊಲಿನೆಕ್ಸ್ ಮತ್ತು ಆಶಾ ಶೋಭನಾ ಟೂರ್ನಿಗೆ ಅಲಭ್ಯರಾಗಿದ್ದರೆ, ಶ್ರೇಯಾಂಕಾ ಪಾಟೀಲ್ ಇದೀಗಷ್ಟೇ ಗಾಯದಿಂದ ಚೇತರಿಸಿಕೊಂಡಿದ್ದಾರೆ. ಇದರಿಂದ ಆಲ್ರೌಂಡರ್ ಎಲ್ಲಿಸ್ ಪೆರ್ರಿ ಈ ಬಾರಿ ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳಬೇಕಾಗಿದೆ. ಇತ್ತೀಚೆಗೆ ಐಸಿಸಿ ವರ್ಷದ ಆಟಗಾರ್ತಿ ಪ್ರಶಸ್ತಿ ಗೆದ್ದಿರುವ ನಾಯಕಿ ಸ್ಮೃತಿ ಮಂದನಾ ಭರ್ಜರಿ ಫಾರ್ಮ್ನಲ್ಲಿರುವುದು ಆರ್ಸಿಬಿಗೆ ಬಲ ತುಂಬುವ ನಿರೀಕ್ಷೆ ಇದೆ.
ಕೆಲ ಪ್ರಮುಖರು ಮಿಸ್
ಈ ಬಾರಿ ಗಾಯ ಮತ್ತಿತರ ಕಾರಣದಿಂದಾಗಿ ಕೆಲ ಪ್ರಮುಖ ಆಟಗಾರ್ತಿಯರು ಟೂರ್ನಿಯನ್ನು ತಪ್ಪಿಸಿಕೊಳ್ಳಲಿದ್ದಾರೆ. ಆಸ್ಟ್ರೆಲಿಯಾದ ವಿಕೆಟ್ ಕೀಪರ್-ಬ್ಯಾಟರ್ ಅಲಿಸ್ಸಾ ಹೀಲಿ, ಸೋಫಿ ಮೊಲಿನೆಕ್ಸ್, ಇಂಗ್ಲೆಂಡ್ನ ಕೇಟ್ ಕ್ರಾಸ್, ನ್ಯೂಜಿಲೆಂಡ್ನ ಸೋಫಿ ಡಿವೈನ್, ಭಾರತದ ಆಶಾ ಶೋಭನಾ, ಪೂಜಾ ವಸ್ತ್ರಾಕರ್ ಇವರಲ್ಲಿ ಪ್ರಮುಖರು. ಟೂರ್ನಿಗೆ ಮುನ್ನಾದಿನವೂ ತಂಡಗಳಲ್ಲಿ ಬದಲಾವಣೆಯಾಗಿದ್ದು, ಮುಂಬೈಗೆ ಪೂಜಾ ವಸ್ತ್ರಾಕರ್ ಬದಲಿಗೆ ಪುರಾಣಿಕಾ ಸಿಸೋಡಿಯಾ ಮತ್ತು ಆರ್ಸಿಬಿಗೆ ಆಶಾ ಶೋಭನಾ ಬದಲಿಗೆ ನುಜತ್ ಪರ್ವೀನ್ ಸೇರ್ಪಡೆಯಾಗಿದ್ದಾರೆ.
*ಡಬ್ಲ್ಯುಪಿಎಲ್ ಚಾಂಪಿಯನ್ಸ್
2023: ಮುಂಬೈ ಇಂಡಿಯನ್ಸ್
2024: ಆರ್ಸಿಬಿ-ಬೆಂಗಳೂರು
ಬಹುಮಾನ ಮೊತ್ತ: ಒಟ್ಟು 10 ಕೋಟಿ ರೂ.
ಚಾಂಪಿಯನ್: 6 ಕೋಟಿ ರೂ.
ರನ್ನರ್ಅಪ್: 3 ಕೋಟಿ ರೂ.
3ನೇ ಸ್ಥಾನಿ: 1 ಕೋಟಿ ರೂ.
ಇಂದಿನ ಪಂದ್ಯ
ಗುಜರಾತ್-ಆರ್ಸಿಬಿ
ಎಲ್ಲಿ: ವಡೋದರ
ಎಲ್ಲ ಪಂದ್ಯಗಳು ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ+ಹಾಟ್ಸ್ಟಾರ್
4 ತಾಣಗಳಲ್ಲಿ ಪಂದ್ಯ
ಮೊದಲ ಆವೃತ್ತಿ ಒಂದೇ ನಗರದಲ್ಲಿ ನಡೆದಿದ್ದರೆ, 2ನೇ ಆವೃತ್ತಿ 2 ತಾಣಗಳಲ್ಲಿ ಆಯೋಜನೆಗೊಂಡಿತ್ತು. ಇದೀಗ 3ನೇ ಆವೃತ್ತಿ 4 ನಗರಗಳಿಗೆ ವಿಸ್ತರಣೆಗೊಂಡಿದೆ. ವಡೋದರದಲ್ಲಿ ಟೂರ್ನಿಗೆ ಚಾಲನೆ ಸಿಗಲಿದ್ದು, ನಂತರ ಬೆಂಗಳೂರು, ಲಖನೌದಲ್ಲಿ ಪಂದ್ಯಗಳು ನಡೆಯಲಿವೆ. ಅಂತಿಮ ಲೀಗ್, ಪ್ಲೇಆಫ್ ಹಾಗೂ ಫೈನಲ್ ಪಂದ್ಯಗಳು ಮುಂಬೈನಲ್ಲಿ ನಿಗದಿಯಾಗಿವೆ.
ಲೀಗ್ ಸ್ವರೂಪ
ಟೂರ್ನಿಯಲ್ಲಿ ಆಡುವ ಒಟ್ಟು 5 ತಂಡಗಳು ಲೀಗ್ ಹಂತದಲ್ಲಿ ರೌಂಡ್ ರಾಬಿನ್ ಮಾದರಿಯಲ್ಲಿ ತಲಾ 2 ಬಾರಿ ಮುಖಾಮುಖಿ ಆಗಲಿವೆ. ಲೀಗ್ ಹಂತದಲ್ಲಿ ಎಲ್ಲ ತಂಡಗಳು ತಲಾ 8 ಪಂದ್ಯ ಆಡಲಿವೆ. ಅಂತಿಮವಾಗಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ತಂಡ ನೇರವಾಗಿ ಫೈನಲ್ಗೇರಲಿದೆ. 2-3ನೇ ಸ್ಥಾನ ಪಡೆದ ತಂಡಗಳು ಎಲಿಮಿನೇಟರ್ ಪಂದ್ಯದಲ್ಲಿ, ಫೈನಲ್ಗೇರಲು ಹೋರಾಡಲಿವೆ. ಮಾರ್ಚ್ 15ರಂದು ಫೈನಲ್ ಪಂದ್ಯ ನಡೆಯಲಿದೆ.
ನಾಲ್ವರು ಕನ್ನಡತಿಯರು
ಈ ಬಾರಿ ಡಬ್ಲುಪಿಎಲ್ನಲ್ಲಿ ನಾಲ್ವರು ಕನ್ನಡತಿಯರು ಕಣದಲ್ಲಿದ್ದಾರೆ. ಆಲ್ರೌಂಡರ್ ಶ್ರೇಯಾಂಕಾ ಪಾಟೀಲ್ ಆರ್ಸಿಬಿ ತಂಡದಲ್ಲಿ ಪ್ರಮುಖ ಸದಸ್ಯೆ ಆಗಿದ್ದರೆ, ಅನುಭವಿ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್, ವೃಂದಾ ದಿನೇಶ್ ಯುಪಿ ವಾರಿಯರ್ಸ್ ತಂಡದಲ್ಲಿದ್ದಾರೆ. ಇತ್ತೀಚೆಗೆ 19 ವಯೋಮಿತಿ ಮಹಿಳಾ ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ನಾಯಕಿಯಾಗಿದ್ದ ಕನ್ನಡತಿ ನಿಕಿ ಪ್ರಸಾದ್ ಡೆಲ್ಲಿ ಪರ ಡಬ್ಲುಪಿಎಲ್ ಪದಾರ್ಪಣೆ ನಿರೀಕ್ಷೆಯಲ್ಲಿದ್ದಾರೆ.