ವಿಜಯಪುರ: ಕೇಂದ್ರ ಬಸ್ ನಿಲ್ದಾಣ ಆವರಣದಲ್ಲಿ ನಿರ್ಮಾಣಗೊಂಡಿರುವ ಸ್ವಾತಂತ್ರೃ ಹೋರಾಟಗಾರ್ತಿ ರಾಣಿ ಚೆನ್ನಮ್ಮನವರ ಮೂರ್ತಿ ಪ್ರತಿಷ್ಟಾಪನೆಗೆ ರೂ.50 ಲಕ್ಷ ರೂಪಾಯಿ ಕೊಡುವುದಾಗಿ ಸಚಿವ ಎಂ.ಬಿ. ಪಾಟೀಲ ಭರವಸೆ ನೀಡಿದರು.
ನಗರದ ಗೃಹ ಕಚೇರಿಯಲ್ಲಿ ತಮ್ಮನ್ನು ಭೇಟಿ ಮಾಡಿದ ವಿ.ಎನ್. ಬಿರಾದಾರ ಹಾಗೂ ಆರ್.ಜಿ. ಯಾರನಾಳ ಮತ್ತಿತರ ಮುಖಂಡರ ಮನವಿ ಮೇರೆಗೆ ಸಚಿವರು ಹಣ ಒದಗಿಸುವ ಭರವಸೆ ನೀಡಿದರು.
ಈ ವೇಳೆ ಮಾತನಾಡಿದ ಉಭಯ ನಾಯಕರುಗಳು, ಹಲವು ದಶಕಗಳ ಕಾಲ ನಿವೇಶನವಿಲ್ಲದೆ ರಾಣಿ ಚೆನ್ನಮ್ಮ ಮೂರ್ತಿ ಪ್ರತಿಷ್ಠಾಪನೆ ಕಾರ್ಯ ಸ್ಥಗಿತಗೊಂಡಿದ್ದ ಸಂದರ್ಭದಲ್ಲಿ ಸಮಾಜದ ಮುಖಂಡರೆಲ್ಲರೂ ಸೇರಿ ಎಂ.ಬಿ. ಪಾಟೀಲರಲ್ಲಿ ವಿನಂತಿಸಿದಾಗ, ತಾವೇ ಖುದ್ದಾಗಿ ಮುತುವರ್ಜಿವಹಿಸಿ ವಿಜಯಪುರ ಕೇಂದ್ರ ಬಸ್ ನಿಲ್ದಾಣದಲ್ಲಿ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ, ಬಸ್ ನಿಲ್ದಾಣದ ಆವರಣದಲ್ಲಿಯ ನಿವೇಶನವನ್ನು ಮೂರ್ತಿ ಪ್ರತಿಷ್ಠಾಪನೆಗೆ ಮೀಸಲಿರಿಸಿ, ಮುಖ್ಯಮಂತ್ರಿಗಳಿಂದ ಭೂಮಿ ಪೂಜೆ ನೆರವೇರಿಸಿ ರಾಣಿ ಚೆನ್ನಮ್ಮ ಮೂರ್ತಿ ಪ್ರತಿಷ್ಠಾಪನೆಗೆ ಕಾರಣರಾಗಿದ್ದೀರಿ. ಅಲ್ಲದೇ, ಹಣಕಾಸಿನ ಅಭಾವದಿಂದ ಅರ್ಧಕ್ಕೆ ನಿಂತಿದ್ದ ರಾಣಿ ಚೆನ್ನಮ್ಮ ಸಮುದಾಯ ಭವನದ ನಿರ್ಮಾಣ ಕಾರ್ಯವನ್ನೂ ತಾವೇ ಮುತುವರ್ಜಿ ವಹಿಸಿ 3 ಕೋಟಿ ರೂಪಾಯಿ ಅನುದಾನ ಒದಗಿಸಿ, ರಾಣಿ ಚೆನ್ನಮ್ಮ ಸಮುದಾಯ ಭವನ ನಿರ್ಮಾಣ ಪೂರ್ಣಗೊಳ್ಳಲು ನೀವೇ ಕಾರಣರಾಗಿದ್ದೀರಿ. ಇಂದು ರಾಣಿ ಚೆನ್ನಮ್ಮ ಮೂರ್ತಿ ಕೂಡ ನಿಮ್ಮಿಂದಲೇ ಪೂರ್ಣಗೊಳ್ಳಬೇಕು ಎಂದು ವಿನಂತಿ ಮಾಡಿದರು.
ಮುಖಂಡರ ಮನವಿಗೆ ಸ್ಪಂದಿಸಿ ಮಾತನಾಡಿದ ಸಚಿವ ಎಂ.ಬಿ ಪಾಟೀಲರು, ಅಂದು ನಿಮ್ಮೆಲ್ಲರ ಮನವಿಗೆ ಸ್ಪಂದಿಸಿ, ನಿವೇಶನ ಒದಗಿಸಿ ಮುಖ್ಯಮಂತ್ರಿಗಳಿಂದ ಭೂಮಿ ಪೂಜೆ ನೆರವೇರಿಸಿದ್ದೇನೆ. ಸಮುದಾಯ ಭವನಕ್ಕೆ ಮುಖ್ಯಮಂತ್ರಿಗಳಿಂದ 3 ಕೋಟಿ ಅನುದಾನ ಒದಗಿಸಿದ್ದೇನೆ. ಇಂದು ಕೂಡ ಏನಾದರೂ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ಕೆ ಅನುದಾನ ಕೊರತೆ ಇದೆಯೇ? ಎಂದು ಪ್ರಶ್ನಿಸಿದರು.
ಆಗ ಮುಖಂಡ ವಿ.ಎನ್. ಬಿರಾದಾರ 25 ಲಕ್ಷ ರೂಪಾಯಿಗಳ ಅಗತ್ಯವಿದೆ ಎನ್ನಲಾಗಿ ಕೂಡಲೇ ಸ್ಪಂದಿಸಿದ ಸಚಿವ ಎಂ.ಬಿ. ಪಾಟೀಲ, ರಾಣಿ ಚೆನ್ನಮ್ಮ ನಮ್ಮೆಲ್ಲರ ಆಸ್ಮಿತೆ ಆಗಿದ್ದಾರೆ. 25 ಲಕ್ಷ ರೂಪಾಯಿ ಯಾಕೆ? 50 ಲಕ್ಷ ರೂಪಾಯಿಗಳನ್ನು ಒದಗಿಸುತ್ತೇನೆ. ಮೂರ್ತಿ ಅನಾವರಣಕ್ಕೆ ಮುಖ್ಯಮಂತ್ರಿಗಳನ್ನೆ ಆಹ್ವಾನಿಸುತ್ತೇನೆ. ಅಲ್ಲದೇ, ಕೇಂದ್ರ ಬಸ್ ನಿಲ್ದಾಣಕ್ಕೆ ರಾಣಿ ಚೆನ್ನಮ್ಮನವರ ಹೆಸರು ಇಡಲು ನಾಳೆಯೇ ಮುಖ್ಯಮಂತ್ರಿಗಳಿಗೆ ಹಾಗೂ ಸಾರಿಗೆ ಸಚಿವರಿಗೆ ವಿನಂತಿ ಮಾಡುತ್ತೇನೆ ಎಂದು ಹೇಳಿದರು.
ಮಹಾನಗರ ಪಾಲಿಕೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ದೂರವಾಣಿ ಕರೆ ಮಾಡಿದ ಸಚಿವರು ಪಾಲಿಕೆ ಮತ್ತು ಪ್ರಾಧಿಕಾರದ ವತಿಯಿಂದ ತಲಾ 25 ಲಕ್ಷ ರೂಪಾಯಿಯಂತೆ ಒಟ್ಟು 50 ಲಕ್ಷ ರೂಪಾಯಿ ಅನುದಾನ ಒದಗಿಸಬೇಕು. ಅಲ್ಲದೇ, ಕಾಮಗಾರಿ ಪೂರ್ಣಗೊಳಿಸಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ನಿರ್ದೇಶನ ನೀಡಿದರು.
ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ರಾಜುಗೌಡ ಕುದುರಿಸಾಲೋಡಗಿ, ಡಾ. ಗಜಾನನ ಮಹಿಶಾಳೆ, ಬಿ.ಜಿ. ಬಿರಾದಾರ ಮತ್ತಿತರರಿದ್ದರು.