ಕೊಲ್ಕತಾ: ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆನ್ನಿಗೆ ಬೆಂಬಲವಾಗಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷ ನಿಂತಿದೆ.
ಚುನಾವಣೆ ಪ್ರಚಾರದ ವೇಳೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ದೀದಿ ಓ ದೀದಿ ಎಂದು ಕರೆಯುವ ಮೂಲಕ ಬಿಜೆಪಿ ನಾಯಕರು ವ್ಯಂಗ್ಯವಾಡಿದ್ದಾರೆ. ಮೋದಿ ಉಪನಾಮದ ಕುರಿತು ಮಾತನಾಡಿದ ರಾಹುಲ್ ಗಾಂಧಿ ಅವರಿಗೆ ಅನರ್ಹ ಶಿಕ್ಷೆ ಎಂದಾದರೆ ಪ್ರಧಾನಿ ನರೇಂದ್ರ ಮೋದಿ, ಸುವೇಂದು ಅಧಿಕಾರಿ ಸೇರಿದಂತೆ ಬಿಜೆಪಿ ನಾಯಕರನ್ನು ಅನರ್ಹಗೊಳಿಸಬೇಕು ಎಂದು TMC ಆಗ್ರಹಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ TMC ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ದೀದಿ ಓ ದೀದಿ ಕ್ಯಾಟ್ಕಾಲ್ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಮಹಿಳೆಯರಿಗೆ ಅಪಮಾನ ಮಾಡಿದ್ಧಾರೆ. ಹಾಗಾದರೆ ಪ್ರಧಾನಿ ಮೋದಿ ಅವರನ್ನು ಅವರ ಸ್ಥಾನದಿಂದ ಏಕೆ ಅನರ್ಹಗೊಳಿಸಬಾರದು ಎಂದು ಪ್ರಶ್ನಿಸಿದ್ದಾರೆ.
ಇದಲ್ಲದೆ ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕರಾದ ಸುವೇಂದು ಅಧಿಕಾರಿ ಎಸ್ಸಿ ಸಮುದಾಯಕ್ಕೆ ಸೇರಿದ್ದ ಸಚಿವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ಧಾರೆ. ಕಳೆದ ವರ್ಷ ನವೆಂಬರ್ನಲ್ಲಿ TMC ಪಕ್ಷವು ಸುವೇಂದು ಅಧಿಕಾರಿ ಶಾಸಕರಾದ ದೇಬನಾಥ್ ಹನ್ಸ್ಡಾ, ಬಿರ್ಬಹಾ ಹನ್ಸ್ಡಾ ತಮ್ಮ ಕಾಲಿನ ಕೆಳಗೆ ಇರುವವರು ಎಂದು ಹೇಳಿಕೆ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಇದನ್ನೂ ಓದಿ: ರಾಜಕಾರಣದಲ್ಲಿ ಧರ್ಮ ಬಳಸುವುದನ್ನು ನಿಲ್ಲಿಸಿದರೆ ದ್ವೇಷ ಭಾಷಣ ನಿಲ್ಲುತ್ತದೆ: ಸುಪ್ರೀಂ ಕೋರ್ಟ್
ಮೋದಿ ಉಪನಾಮದ ಕುರಿತು ವ್ಯಂಗ್ಯವಾಡಿದ್ದಕ್ಕೆ OBC ಭಾವನೆಗಳಿಗೆ ಧಕ್ಕೆ ಆಗಿದೆ ಎಂದು ಆರೋಪಿಸಿ ರಾಹುಲ್ ಅವರನ್ನು ಅನರ್ಹ ಮಾಡಿ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ್ದೀರಾ. ಅದೇ ರೀತಿ ನಿಮ್ಮ ಪಕ್ಷದ ನಾಯಕರಿಗೂ ಇದು ಅನ್ವಯವಾಗುವುದಿಲ್ಲವೇ ಎಂದು ಅಭಿಷೇಕ್ ಕೇಳಿದ್ದಾರೆ.
ಕಾನೂನು ನಿಮಗೆ ಮತ್ತು ನಮಗೆ ಬೇರೆ ಇದೆಯೇ ಸೂರತ್ ನ್ಯಾಯಾಲಯದ ತೀರ್ಪನ್ನು ಉದಾಹರಣೆಯಾಗಿ ತೆಗೆದುಕೊಂಡು ನಾನು ನಮ್ಮ ವಕೀಲರಿಗೆ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಯಾಗಿ ಮೊಕದ್ದಮೆಯನ್ನು ದಾಖಲಿಸಲು ಸೂಚಿಸುತ್ತೇನೆ ಎಂದು ತಿಳಿಸಿದ್ದಾರೆ.
ಮಾನನಷ್ಟ ಮೊಕದ್ದಮೆ ಮತ್ತು ಸಂಸತ್ ಸದಸ್ಯತ್ವದಿಂದ ಅನರ್ಹತೆ ವಿಚಾರವಾಗಿ ರಾಹುಲ್ ಗಾಂಧಿ ಅವರನ್ನು ಬೆಂಬಲಿಸಲು ತೃಣಮೂಲ ಕಾಂಗ್ರೆಸ್ ನಿರ್ಧರಿಸಿದೆ. ಮುಂದಿನ ದಿನಗಳಲ್ಲಿ ವಿರೋಧ ಪಕ್ಷದ ನಾಯಕರ ಮೇಲೂ ಈ ರೀತಿ ಆಗಬಹುದೆಂಬ ಕಾರಣಕ್ಕೆ ನಾವು ರಾಹುಲ್ ಗಾಂಧಿ ಅವರನ್ನು ಬೆಂಬಲಿಸಿದ್ದೇವೆ ಎಂದು ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ.