ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ
ಹೆಮ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂತೋಷ ನಗರದ ಎರಡನೇ ವಾರ್ಡ್ನ ಬುಗುರಿಕಡುವಿನಿಂದ ಕೋಟೆಬೆಟ್ಟು ತನಕ ಬಹುತೇಕ ಭಾಗಗಳಲ್ಲಿ ಉಪ್ಪು ನೀರಿನ ಸಮಸ್ಯೆಯಿದ್ದು, ಸ್ಥಳೀಯ ಜನರಿಗೆ ಸೇರಿದ ಬಾವಿ ನೀರಿಗೆ ಕಂಟಕವಾಗಿದೆ.
ಬುಗುರಿಕಡುವಿನಿಂದ ಅಬ್ಬುಹಿತ್ಲು ತನಕ ಪ್ರದೇಶದ ಜಲಸಂಪನ್ಮೂಲವಿಡಿ ಉಪ್ಪು ನೀರಿನ ಮಿಶ್ರಣವಾಗಿದ್ದು, ಡಿಸೆಂಬರ್ನಿಂದ ಸಮಸ್ಯೆ ಆರಂಭವಾಗಿದೆ. ಇದರಿಂದ ಬಾವಿ, ಕೆರೆ ನೀರು ದಿನಬಳಕೆಗೆ ಉಪಯೋಗಿಸಲು ಅಸಾಧ್ಯವಾಗಿದ್ದು, ಕೃಷಿಕರ ಬೆಳೆ ಕೂಡ ಹಾಳಾಗುತ್ತಿದೆ.
ಐವತ್ತು ಮನೆಗೆ ಏಕೈಕ ಬಾವಿ
ಬುಗುರಿಕಡು ಭಾಗದಲ್ಲಿ 50ಕ್ಕೂ ಅಧಿಕ ಮನೆಗಳಿದ್ದು, ಉಪ್ಪುನೀರಿನ ಕಾರಣದಿಂದ ಬಾವಿ ನೀರಿನ ಬಣ್ಣ ಸಂಪೂರ್ಣ ಬದಲಾಗಿದೆ. ಬಹತೇಕ ಮನೆಯವರು ಸುಮಾರು 1 ಕಿ.ಮೀ. ದೂರದ ಕಂಠದಮನೆಯ ಬಾವಿಯನ್ನೇ ಆಶ್ರಯಿಸಿದ್ದಾರೆ. ಐವತ್ತು ಎಕರೆಗೂ ಅಧಿಕ ಭೂಪ್ರದೇಶ ಗದ್ದೆಯಾಗಿದ್ದು, ಅನೇಕ ರೈತರು ಉಪ್ಪು ನೀರಿನ ಸಮಸ್ಯೆಯಿಂದ ಹಿಂಗಾರಿನ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಈಗಾಗಲೇ ಬೆಳೆದ ಬೆಳೆ ಕೊಯ್ಯಲು ಅಸಾಧ್ಯ. ಅಲ್ಲದೇ ಬುಗುರಿಕಾಡು ಪ್ರದೇಶದಲ್ಲಿ ಕೃಷಿಗೆ ಸಂಬಂಧಿಸಿ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ ಎಂದು ರೈತ ಬಾಬು ಪೂಜಾರಿ ಅಳಲು ತೋಡಿಕೊಂಡಿದ್ದಾರೆ.
ನಾನು ಸದಸ್ಯನಾದ ನಂತರ ನಾಲ್ಕು ವರ್ಷದಿಂದ ಜನರಿಗೆ ನೆರವಾಗಲಿ ಎಂಬ ಉದ್ದೇಶದಿಂದ ನದಿದಂಡೆಗೆ ಬೇಡಿಕೆ ಇಡುತ್ತಲೇ ಇದ್ದು, ಸಂಸದರಿಗೂ ಮನವಿ ನೀಡಿದ್ದೇನೆ. ಶಾಸಕರ ಗಮನಕ್ಕೂ ತರಲಾಗಿದೆ. ಈ ಬಾರಿಯಾದರೂ ಮಾಡಿಕೊಡುವ ಭರವಸೆಯಿದೆ. ಇಲ್ಲಿ ಸುಮಾರು 2 ಕಿ.ಮೀ. ದೂರದವರೆಗೆ ನದಿದಂಡೆಯಾದರೆ ನೂರಾರು ಮನೆಗಳಿಗೆ ಅನುಕೂಲವಾಗಲಿದೆ. ಅದಕ್ಕಾಗಿ ಅಂದಾಜು 4 ಕೋಟಿ ರೂ. ಅನುದಾನ ಅಗತ್ಯವಿದೆ.
-ಆನಂದ ಪೂಜಾರಿ ಪಡುಮನೆ ಸ್ಥಳೀಯ ಗ್ರಾಪಂ ಸದಸ್ಯ