ಹೊಸ ವರ್ಷ ಆರಂಭ ಆಗುತ್ತಿದ್ದಂತೆಯೇ ಆ ವರ್ಷವಿಡೀ ಏನಾದರೊಂದು ಸಾಧಿಸಬೇಕು, ಕೆಟ್ಟ ಚಟ ಬಿಡಬೇಕು, ಒಳ್ಳೆಯದನ್ನೇ ಮಾಡಬೇಕು ಎಂದೆಲ್ಲಾ ಸಂಕಲ್ಪ ಮಾಡಿಕೊಳ್ಳುವವರೇ ಹೆಚ್ಚು. ಕೆಲವರು ಅದನ್ನು ಸಾಧಿಸಿದರೆ, ಇನ್ನು ಹಲವರ ರೆಸಲೂಷನ್ ಠುಸ್ ಆಗತ್ತೆ. ಅಂಥ ವಿಶಿಷ್ಟ ಅನುಭವಗಳನ್ನು ಹಂಚಿಕೊಳ್ಳುವಂತೆ ವಿಜಯವಾಣಿ ನೀಡಿದ ಕರೆಗೆ ನಿರೀಕ್ಷೆಗೂ ಮೀರಿದ ಪತ್ರಗಳು ಬಂದಿವೆ. ಆಯ್ದ ಕೆಲವು ಪತ್ರಗಳ ಮೊದಲ ಕಂತು ಇದು…
ನಾನು ವಾಚಾಳಿ. ಮಾತು ಕಡಿಮೆ ಮಾಡಬೇಕು, ಅನವಶ್ಯಕವಾಗಿ ಮಾತು ಆಡಲೇಕೂಡದು ಎಂದು ಸಂಕಲ್ಪ ತೊಟ್ಟಿದ್ದೆ. ಪ್ರತಿ ವರ್ಷದಂತೆ 2019ರಲ್ಲಿಯೂ ಈ ರೆಸಲೂಷನ್ ಹಳ್ಳ ಹಿಡಿಯಿತು. ಕಡಿಮೆ ಮಾತನಾಡಬೇಕು ಎಂದು ಮನಸ್ಸನ್ನು ಗಟ್ಟಿ ಮಾಡಿಕೊಂಡಾಗಲೆಲ್ಲಾ ಎಂದಿಗಿಂತ ಜಾಸ್ತಿ ಮಾತಾಡುತ್ತಿದ್ದೆ. ಮೌನವೂ ಒಂದು ಕಲೆ , ಅದು ಎಲ್ಲರಿಗೂ ಬರುವುದಿಲ್ಲ ಎಂದು ತೆಪ್ಪಗಾಗಿದ್ದೇನೆ. ಇನ್ನೊಂದು ದೊಡ್ಡ ರೆಸಲೂಷನ್ ಮಾಡಿದ್ದು ಕ್ಲಾಸ್ ಬಂಕ್ ಮಾಡಲೇಬಾರದೆಂದು.
ಆದರೆ ನಾನೇನು ಮಾಡಲಿ? ಕ್ಲಾಸ್ಗೆ ಹೋಗಲೇಬೇಕು ಎಂದುಕೊಂಡ ದಿನವೇ ಹೊಸ ಸಿನಿಮಾ ರಿಲೀಸ್ ಆಗಿರುತ್ತದಲ್ಲ! ಆದ್ದರಿಂದ 2020ಗೆ ಯಾವ ಹೊಸ ರೆಸಲೂಷನ್ ಮಾಡಲು ಸಾಹಸಕ್ಕೆ ಕೈಹಾಕಿಲ್ಲ. ಹಿಂದಿನ ವರ್ಷದ ಸಂಕಲ್ಪಗಳನ್ನು ಈ ವರ್ಷ ಈಡೇರಿಸುವುದೇ ಅತಿದೊಡ್ಡ ಸಂಕಲ್ಪ.
| ವೇದಾ ಸತ್ಯನಾರಾಯಣ ಹುಬ್ಬಳ್ಳಿ