ಕಲಬುರಗಿ: ಸಾವಿರಾರು ಜನರ ಜೈಕಾರದ ಮಧ್ಯೆ ಮಂಗಳವಾರ ನೂತನ ವಿದ್ಯಾಲಯ ಮೈದಾನದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಕಲ್ಯಾಣ ಕರ್ನಾಟಕ ಎಂಬ ಅಧಿಕೃತ ಮುದ್ರೆ ಒತ್ತಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಲ್ಯಾಣ ಪರ್ವಕ್ಕೆ ಮುನ್ನುಡಿಯಾಗಿ ಯೋಜನೆಗಳ ಭರಪೂರ ಮಳೆ ಸುರಿಸಿದರು.
ಕಲ್ಯಾಣ ಕರ್ನಾಟಕ ಉದ್ಘೋಷಣೆ ಸೇರಿ ನಾನಾ ಕಾರ್ಯಕ್ರಮಗಳನ್ನು ಉದ್ಘಾಟಿಸಿದ ಸಿಎಂ, ಈ ಭಾಗದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಪ್ರತ್ಯೇಕ ಸಚಿವಾಲಯ, ಅನುಭವ ಮಂಟಪ ಸ್ಥಾಪನೆ, ಮುಂದಿನ ಹಣಕಾಸು ವರ್ಷದಿಂದ ಪ್ರದೇಶಾಭಿವೃದ್ಧಿ ಮಂಡಳಿಗೆ ಅನುದಾನ ಹೆಚ್ಚಳ ಹೀಗೆ ನಾನಾ ಭರವಸೆ ಜತೆಗೆ ಸುಮಾರು 38 ಕೋಟಿ ರೂ. ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಈ ಭಾಗದಲ್ಲಿ ಇನ್ಮುಂದೆ ಪ್ರತಿವರ್ಷ ಕಲ್ಯಾಣ ಕರ್ನಾಟಕ ಉತ್ಸವ ನಡೆಯಲಿದೆ. ಜನರ, ಜನಪ್ರತಿನಿಧಿಗಳ ಮಠಾಧೀಶರು ಹೀಗೆ ಎಲ್ಲ ವರ್ಗಗಳವರ ಬೇಡಿಕೆಗಳಿಗೆ ಸ್ಪಂದಿಸಲಾಗುವುದು. ಎಲ್ಲ ಆರು ಜಿಲ್ಲೆಗಳನ್ನು ಮಾದರಿಯಾಗಿ ಅಭಿವೃದ್ಧಿ ಮಾಡಲು ನಿಮ್ಮೆಲ್ಲರ ಸಹಕಾರ ಬೇಕು ಎಂದು ಜನರಲ್ಲಿ ಮನವಿ ಮಾಡಿದರು. ಹಿಂದುಳಿದ ಜಿಲ್ಲೆಗಳು ಎಂಬ ಹಣೆಪಟ್ಟಿ ಕಳಚಿ ಹಾಕಲಾಗುವುದು. ಸ್ಥಗಿತಗೊಂಡಿರುವ ಅಭಿವೃದ್ಧಿ ಕೆಲಸಗಳಿಗೆ ಮರು ಚಾಲನೆ ನೀಡಲಾಗುವುದು. ಶೈಕ್ಷಣಿಕ, ಔದ್ಯೋಗಿಕವಾಗಿ ಈ ಭಾಗವನ್ನು ಮುಂದೆ ತರಲು ಸರ್ಕಾರ ಬದ್ಧವಾಗಿದೆ ಎಂದ ಅವರು, ಇದುವರೆಗೆ ಅಭಿವೃದ್ಧಿ ಬಗ್ಗೆ ಬರೀ ಮಾತಿನ ಮಂಟಪ ಕಟ್ಟಿದವರ ಬಗ್ಗೆ ಎಚ್ಚರದಿಂದ ಇರುವಂತೆ ಕೋರಿದರು.
ಸಂವಿಧಾನದ 371(ಜೆ) ಈಗಾಗಲೇ ಜಾರಿಯಲ್ಲಿದ್ದು, ಇನ್ನಷ್ಟು ಪರಿಣಾಮಕಾರಿ ಜಾರಿಗೆ ಪ್ರತ್ಯೇಕ ಸಚಿವಾಲಯದ ಬೇಡಿಕೆಯನ್ನು ಒಪ್ಪಿದ್ದೇನೆ. ಪ್ರತ್ಯೇಕ ಸಚಿವಾಲಯ ಸ್ಥಾಪಿಸುವ ಮೂಲಕ ಭಾವನಾತ್ಮಕ ಸಂಬಂಧ ಇನ್ನಷ್ಟು ಗಟ್ಟಿಗೊಳಿಸುವುದಾಗಿ ಹೇಳಿದರು.
ಔದ್ಯೋಗಿಕವಾಗಿ ಕಲಬುರಗಿ ಬೆಳೆಯಬೇಕಿದ್ದರಿಂದ ಮುಂದಿನ ತಿಂಗಳಿಂದ ವಿಮಾನ ಹಾರಾಟ ಆರಂಭಿಸಲಾಗುವುದು. ನಿಲ್ದಾಣ ಸಿದ್ಧವಾಗಿದ್ದು, ಹಾರಾಟಕ್ಕೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸುವುದಾಗಿ ಭರವಸೆ ನೀಡಿದರು.
ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತಕ್ಕೆ ಕಾನೂನು ಸಚಿವ ಮಾಧುಸ್ವಾಮಿ ಮತ್ತು ಎಲ್ಲ ಜನಪ್ರತಿನಿಧಿಗಳ ಜತೆ ಆಗಮಿಸಿದ ಯಡಿಯೂರಪ್ಪ, ಪಟೇಲ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವಿಸಿದರು. ನಂತರ ಪೊಲೀಸ್ ಪರೇಡ್ ಮೈದಾನಕ್ಕೆ ತೆರಳಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.
ಸಿಎಂ ಘೊಷಣೆಗಳು
- ಬೆಂಗಳೂರಲ್ಲಿರುವ 371(ಜೆ) ಅಭಿವೃದ್ಧಿ ಕೋಶದ ಪ್ರಾದೇಶಿಕ ಕಚೇರಿ ಕಲಬುರಗಿಯಲ್ಲಿ ಸ್ಥಾಪನೆ
- ವಿಮಾನ ಹಾರಾಟಕ್ಕೆ ತಿಂಗಳಲ್ಲಿ ಕ್ರಮ, ವ್ಯಾಪಾರ ಉದ್ಯಮ ಬೆಳೆಸಲು ಯೋಜನೆ
- 38 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಅಡಿಗಲ್ಲು ಮತ್ತು ಉದ್ಘಾಟನೆ
- ಕಲಬುರಗಿಯ 20 ಎಕರೆ ಪ್ರದೇಶದಲ್ಲಿ 50 ಕೋಟಿ ರೂ. ವೆಚ್ಚದಲ್ಲಿ 12ನೇ ಶತಮಾನ ಮಾದರಿ ಅನುಭವ ಮಂಟಪ ನಿರ್ವಣ, ಇದಕ್ಕೆ ಮೊದಲ ಹಂತವಾಗಿ 20 ಕೋಟಿ ರೂ. ಬಿಡುಗಡೆ
- ಮುಂದಿನ ದಿನಗಳಲ್ಲಿ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಿಗೆ ಮಂತ್ರಿ ಸ್ಥಾನ ್ಞ
- ಈ ಭಾಗದಲ್ಲಿ ಖಾಲಿ ಇರುವ ಎಲ್ಲ 10,700 ಹುದ್ದೆಗಳ ಭರ್ತಿಗೆ ಕ್ರಮ
- ಶರಣರ ಪರಂಪರೆ ಮುನ್ನಡೆಸಲು ಬದ್ಧ
- ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಅಧ್ಯಯನ ಪೀಠ
ಕೇವಲ ಹೆಸರು ಬದಲಾವಣೆಯಿಂದ ಅಭಿವೃದ್ಧಿ ಅಸಾಧ್ಯ ಎಂಬುದು ನನಗೂ ಗೊತ್ತಿದೆ. ಸಮಗ್ರ ಅಭಿವೃದ್ಧಿಯೊಂದಿಗೆ ಜನಕಲ್ಯಾಣ ಪರ್ವ ಶುರು ಮಾಡಲು ಯೋಜಿಸಲಾಗಿದೆ. ಮುಂದಿನ ಆಯವ್ಯಯದಲ್ಲಿ ಕಲ್ಯಾಣ ಕರ್ನಾಟಕಕ್ಕೆ ಹೆಚ್ಚಿನ ಅನುದಾನ ನೀಡುವ ಮೂಲಕ ಮಾದರಿಯಾಗಿ ಅಭಿವೃದ್ಧಿ ಮಾಡಲಾಗುವುದು.
| ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ