More

    ಈ ರಾಶಿಯವರಿಗೆ ಮನ ಸಂಕಲ್ಪಗಳು ಸಿದ್ಧಿಸುವ ಕಾಲ: ವಾರಭವಿಷ್ಯ

    ಈ ರಾಶಿಯವರಿಗೆ ಮನ ಸಂಕಲ್ಪಗಳು ಸಿದ್ಧಿಸುವ ಕಾಲ: ವಾರಭವಿಷ್ಯಮೇಷ ರಾಶಿ

    ಮೇಷ ರಾಶಿಯವರಿಗೆ ಗುರು, ರಾಹು ಒಟ್ಟಿಗೆ ಇರುವುದರಿಂದ ನರಸಿಂಹನನ್ನು ಪೂಜಿಸಿದರೆ ಮೇಷ ಹಾಗೂ ವೃಷಭ ರಾಶಿಯವರು ಸಂಕಷ್ಟಗಳಿಂದ ಪಾರಾಗಿ ಗೊಂದಲ ಮನಸ್ಸು ತಿಳಿಯಾಗುತ್ತದೆ. ನರಸಿಂಹ ಸ್ವರೂಪದಲ್ಲಿರುವ ಗುರು ನರಸಿಂಹನು ಸಾಲಿಗ್ರಾಮದಲ್ಲಿ ನೆಲೆಸಿದ್ದಾನೆ. ಶನಿ ಲಾಭ ಕೊಟ್ಟರೂ ನಿಮಗೆ ದೈವ ಶಕ್ತಿ ಅಗತ್ಯ. ರಾಹು ಬದಲಾಗುವವರೆಗೂ ಯಾವ ಯೋಚನೆ ಮಾಡದೆ ಸುಬ್ರಮಣ್ಯನನ್ನು ನಿತ್ಯ ಪೂಜಿಸಿ. ನರಸಿಂಹ ಅಷ್ಟೋತ್ತರ ಪಾರಾಯಣ ಮಾಡಿ.

     

    ವೃಷಭ ರಾಶಿ

    ವೃಷಭ ರಾಶಿಯವರಿಗೆ ದ್ವಾದಶದಲ್ಲಿ ರವಿ, ಗುರು, ರಾಹು, ಬುಧ ಚತುರ್ಥ ಗ್ರಹಗಳು ಸೇರಿವೆ. ಕೆಲಸ ಕಾರ್ಯಗಳನ್ನು ಬಹಳ ಎಚ್ಚರಿಕೆಯಿಂದ ಮಾಡಿಕೊಳ್ಳಬೇಕು. ಜಾಗೃತರಾಗಿ ಮಾತನಾಡಬೇಕು. ನಿಮ್ಮ ಧರ್ಮವನ್ನು ನೀವು ಮೊದಲು ಅನುಸರಿಸಬೇಕು. ಅನ್ಯಮಾರ್ಗವನ್ನು ಅನುಸರಿಸಿದರೆ ನಿಮಗೆ ಅಪಕೀರ್ತಿ ಬಂದು ಸೇರುವುದು. ಶುಕ್ರನು ದ್ವಿತೀಯದಲ್ಲಿದ್ದು ಧನ, ಸುಖ ಬಂದು ಸೇರುತ್ತದೆ. ದುರ್ಗಾ ಸಹಸ್ರನಾಮ ಪಾರಾಯಣ ಮಾಡಿ.

     

    ಮಿಥುನ ರಾಶಿ

    ಮಿಥುನ ರಾಶಿಯಲ್ಲಿ ಜನಿಸಿದವರಿಗೆ ನವಮದಲ್ಲಿ ಶನಿ, ಏಕಾದಶದಲ್ಲಿ ಗುರುವಿದ್ದು, ಏಕಾದಶದಲ್ಲಿರುವ ರವಿ, ಬುಧ ಯೋಗವನ್ನು ತಂದುಕೊಡುತ್ತಾರೆ. ಆದರೆ, ನಿಮ್ಮನ್ನು ಮೀರಿ ಬುದ್ದಿವಂತರಿದ್ದಾರೆ, ಉತ್ತಮರು ಇದ್ದಾರೆ ಎಂಬುದನ್ನು ಮರೆಯಬೇಡಿ. ನಿಮ್ಮ ಕಾರ್ಯಗಳು ಸಾಗುವಂತೆ ಮಾಡಿಕೊಳ್ಳಬೇಕು. ರಾಮಾಯಣ ಪಾರಾಯಣವನ್ನು ಮಾಡಿ ಸತ್ ಫಲ ಹೊಂದಬಹುದು.

     

    ಕಟಕ ರಾಶಿ

    ಜನ್ಮಜನ್ಮಾಂತರದ ಪುಣ್ಯದಿಂದ ಮಾನವನ ಜನ್ಮವು ದೊರಕಿದೆ. ನಿಮ್ಮ ಜೀವನವು ಸಾರ್ಥಕತೆ ಹೊಂದಬೇಕಾದರೆ ಉಪಕಾರಿಗಳಾಗಿ ಬದುಕಿ. ಯಾವ ಗೊಂದಲವಿಲ್ಲದೆ ಜೀವನವನ್ನು ನಡೆಸಿಕೊಂಡು ಹೋಗಿ. ಮನಸ್ಸು ಮಾಡಿದರೆ ಏನು ಬೇಕಾದರೂ ದೊರೆಯಬಹುದು. ಶ್ರೀರಾಮ ಚಂದ್ರನನ್ನು ಪೂಜಿಸಿ. ಗುರು ದತ್ತಾತ್ರೇನನ್ನು ಭಜಿಸಿ, ಪೂಜಿಸಿ. ಗುರು ಚರಿತ್ರೆ ಪಾರಾಯಣವನ್ನು ಮಾಡಿ. ಎಲ್ಲವೂ ಶುಭವಾಗುವುದು.

     

    ಸಿಂಹ ರಾಶಿ

    ನವಮದಲ್ಲಿ ಗುರು ಇದ್ದರೂ ಸಪ್ತಮದಲ್ಲಿ ಶನಿ ಇದ್ದಾನೆ. ಬೇಡಿದ್ದೆಲ್ಲ ಪಡೆಯಲು ಆಗುವುದಿಲ್ಲ. ಆದರೆ, 9ರ ಗುರು ಧೈರ್ಯ, ಕೀರ್ತಿ, ಯಶೋ ಲಾಭವನ್ನು ತಂದುಕೊಟ್ಟು ನಿಮ್ಮನ್ನು ಕಾಪಾಡುವುದರಲ್ಲಿ ಸಂದೇಹ ಬೇಡ. ಕುಲದೇವರ ಸಹಿತ ನಿಮಗೆ ಮಾರ್ಗದರ್ಶನ ಕೊಟ್ಟ ಗುರುಗಳನ್ನು ಪ್ರಾರ್ಥಿಸಿ, ಶೃಂಗೇರಿಗೆ ತೆರಳಿ ಗುರುದ್ವಯರನ್ನು ಭೇಟಿ ಮಾಡಿ ಶಾರದೆಯನ್ನು ಪೂಜಿಸಿ. ಒಳ್ಳೆಯ ಕಾಲವನ್ನು ಸದುಪಯೋಗಪಡಿಸಿಕೊಳ್ಳಿ.

     

    ಕನ್ಯಾ ರಾಶಿ

    ಸುಳ್ಳುಗಳನ್ನು ಹೇಳಿ ತಪ್ಪಿಸಿಕೊಳ್ಳಲಾಗದು. ಗುರು ಅಷ್ಟಮದಲ್ಲಿದ್ದಾನೆ. ನಿಮ್ಮ ದುಡ್ಡೆಲ್ಲ ವ್ಯಾಧಿಗಳಿಗೆ ಖರ್ಚಾಗಿ ನಿಮ್ಮನ್ನು ದುಃಖಕ್ಕೆ ಈಡು ಮಾಡುತ್ತದೆ. ಒಳ್ಳೆಯದನ್ನು ಮಾಡಲು ಮರೆಯಬೇಡಿ. ಸಜ್ಜನರಿಗೆ ಕೊಟ್ಟ ಮಾತು ತಪ್ಪಬೇಡಿ. ಅಷ್ಟಮ ಗುರುವಿಗೆ ದಕ್ಷಿಣ ಮೂರ್ತಿಯನ್ನು ಪೂಜಿಸಿ. ಕಡಲೆಕಾಳು ದಾನ ಮಾಡಿ. ಅಷ್ಟಮದ ರಾಹುವಿಗೆ ಉದ್ದಿನಬೇಳೆ ದಾನ ಕೊಟ್ಟು ನಾಗರಾಜನನ್ನು ಪೂಜಿಸಿ. ಎಲ್ಲಾ ಶುಭವಾಗುವುದು.

     

    ತುಲಾ ರಾಶಿ

    ಸಪ್ತಮಕ್ಕೆ ಗುರು ಬಂದಿದ್ದಾನೆ, ಸುಖವನ್ನು ತಂದಿದ್ದಾನೆ. ಮನಸ್ಸಿಗೆ ಬೇಕಾದ ಕಾರ್ಯಗಳು, ಇಷ್ಟಾರ್ಥಗಳು, ಮನ ಸಂಕಲ್ಪಗಳು ಸಿದ್ಧಿಸುವ ಕಾಲ. ಸ್ವಕ್ಷೇತ್ರದಲ್ಲಿರುವ ಶನಿ ತುಲಾ ರಾಶಿಗೆ ಉಚ್ಚನಾಗಿದ್ದು ಅವನು ಛಾಯಾ ಪುತ್ರನು ಕೂಡ. ನಿಮ್ಮನ್ನು ಜೀವನದಲ್ಲಿ ಕಡೆಗಣಿಸಿದವರನ್ನು ಶಿಕ್ಷಿಸಿ ಅವರಿಂದ ಕ್ಷಮೆ ಕೇಳುವಂತೆ ಮಾಡುತ್ತಾನೆ. ಶುಕ್ರನಿಗಾಗಿ ದುರ್ಗೆಯನ್ನು ಪ್ರಾರ್ಥಿಸಿ. ಸಂಸಾರ ನೌಕೆಯಲ್ಲಿ ಕೂತವರು ದಡ ಸೇರಲೇಬೇಕು. ದುರ್ಗೆಯೇ ನಿಮ್ಮ ಹಡಗನ್ನು ತೀರದಲ್ಲಿ ಸೇರಿಸಿ ಸುಖವನ್ನು ಕೊಡುತ್ತಾಳೆ.

     

    ವೃಶ್ಚಿಕ ರಾಶಿ

    ದೇವರನ್ನು ನಂಬಿ ಕೆಟ್ಟವರಿಲ್ಲ. ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ಎಂಬ ಮಾತಿದೆ. ದೇವರು ನಿಮಗೆ ಪಾಪ ಪುಣ್ಯಗಳನ್ನು ಅಳೆದು ತೂಗಿ ಕೊಡುವ ಕಾಲ. ಕೋಪವನ್ನು ಕಡಿಮೆ ಮಾಡಿಕೊಳ್ಳಬೇಕು. ವೃಷಭ ರಾಶಿಗೆ ಸೂರ್ಯನು ಬಂದಾಗ ಎಲ್ಲವೂ ಶುಭವಾಗುತ್ತದೆ. ಊಟ ಬಿಟ್ಟರೂ ಪರವಾಗಿಲ್ಲ ಪ್ರತಿನಿತ್ಯ ಗುರು ಚರಿತ್ರೆ ಪಠಣ ಮಾಡುವುದನ್ನು ಮಾತ್ರ ಮರೆಯಬೇಡಿ.

     

    ಧನುರ್ ರಾಶಿ

    ವಿಶ್ವಾಮಿತ್ರರಿಂದ ಧನುರ್ ವಿದ್ಯೆಯನ್ನು ಕಲಿತ ಮಾನವ ದೈವ ಸ್ವರೂಪಿ ರಾಮನೊಬ್ಬನೆ. ನಿಮಗೆ ಒಳ್ಳೆಯ ಸಮಯವಿದ್ದು ಗುರು ಪಂಚಮಕ್ಕೆ ಬಂದಿದ್ದಾನೆ. ಶನಿ ತೃತೀಯದಲ್ಲಿ ಇದ್ದಾನೆ. ನಿಮ್ಮ ಕೆಲಸಗಳನ್ನು ಮಾಡಿಕೊಂಡು ದೈವತ್ವ ಸಂಪಾದಿಸಬಹುದು. ದೊಡ್ಡ ವಿಚಾರಗಳು ಬಂದಾಗ ಮನೆಯಲ್ಲಿ ರ್ಚಚಿಸಿ ನಿರ್ಧಾರ ಮಾಡಿದರೆ ಯಾವ ತಪ್ಪು, ನಷ್ಟ ಆಗುವುದಿಲ್ಲ. ಗುರು ದತ್ತಾತ್ರೇಯನನ್ನು ಪೂಜಿಸಿ. ಮೇಷದಲ್ಲಿರುವ ರಾಹುವಿಗೆ ಸುಬ್ರಹ್ಮಣ್ಯನನ್ನು ಅರ್ಚಿಸಿ ಪೂಜಿಸಿ.

     

    ಮಕರ ರಾಶಿ

    ಶನಿಯು ದ್ವಿತೀಯದಲ್ಲಿ ಇದ್ದಾನೆ. ಗುರು ಚತುರ್ಥದಲ್ಲಿ ಸೇರಿದ್ದಾನೆ. ಈ ಸಂವತ್ಸರದಲ್ಲಿ ನೀವು ಅರ್ಧ ಭಾಗ ಒಳ್ಳೆಯದನ್ನು ಪಡೆಯಬಹುದು. ದೇವರು ಒಳ್ಳೆಯದನ್ನು ಕೊಡುತ್ತಾನೆ ಎಂಬ ನಂಬಿಕೆ ಇರಲಿ. ಮಾಡುವ ಕೆಲಸಗಳಲ್ಲಿ ಶ್ರಮವಿರಲಿ. ಯಾರ ಮನಸ್ಸನ್ನು ನೋಯಿಸದೆ ನಿಮ್ಮ ಕೆಲಸವನ್ನು ಮಾಡಿಕೊಳ್ಳಿ. ಆಕಾಶ ಮುಟ್ಟುತ್ತೇನೆ ಎಂಬ ಹಠ ಬೇಡ. ದೈವ ಕೊಟ್ಟದ್ದನ್ನು ಸ್ವೀಕರಿಸಿ. ಪ್ರತಿ ಶನಿವಾರ ಶನಿ ಗ್ರಹ ಪೂಜಿಸಿ. ಸೋಮವಾರದಂದು ಈಶ್ವರನನ್ನು ಪ್ರದೋಷದಲ್ಲಿ ಪೂಜಿಸಿ.

     

    ಕುಂಭ ರಾಶಿ

    ಜನ್ಮದಲ್ಲಿ ಶನಿ ಇದ್ದು ತೃತೀಯದಲ್ಲಿ ಗುರು, ರಾಹು, ಬುಧ, ರವಿ ಗ್ರಹಗಳಿದ್ದಾರೆ. ತೃತೀಯ ಗುರು ಮನುಷ್ಯನಿಗೆ ಯಾವ ಸಂಕಟವನ್ನು ಕೊಡದು. ಆದರೆ, ಜನ್ಮ ಶನಿಯು ಕೆಲವೊಂದು ಆತಂಕವನ್ನು ತಂದೊಡ್ಡಬಹುದು. ದಶಮಾಸ ಪೌರ್ಣಮಿಯಂದು ಸಾಲಿಗ್ರಾಮಕ್ಕೆ ತೆರಳಿ ಗುರು ನರಸಿಂಹನನ್ನು ಭಕ್ತಿಯಿಂದ ಪೂಜಿಸಿ ಬನ್ನಿ. ನಿಮ್ಮ ಜೀವನದಲ್ಲಿ ಆಗುವ ಬದಲಾವಣೆಯನ್ನು ಕಂಡು ಸಂತೋಷ ಪಡುತ್ತೀರಾ.

     

    ಮೀನ ರಾಶಿ

    ದ್ವಿತೀಯದಲ್ಲಿ ಗುರು ಇರುವುದು ವಿಶೇಷವೇ. ಆದರೆ, ದ್ವಾದಶದಲ್ಲಿ ಶನಿ ಇದ್ದು , ಶನಿಯ ಸಂಚಾರ ಆರಂಭವಾಗಿದೆ. ಕೆಲಸಗಳನ್ನು ಮಾಡಲು ಉತ್ಸಾಹ, ಜಾಗ್ರತೆ ಇರಬೇಕು. ದ್ವಾದಶದ ಶನಿ ಕೆಲವೊಂದು ಬಾರಿ ಮನಸ್ಸನ್ನು ಉದ್ವೇಗಗೊಳಿಸಿ ತಪ್ಪು ಮಾಡುವಂತೆ ಮಾಡುತ್ತಾನೆ. ಈ ಸಂದರ್ಭವನ್ನು ನೀವು ತಾಳ್ಮೆಯಿಂದ ದಾಟಿದರೆ ಗುರುವಿನ ಎರಡನೆಯ ಮನೆಯ ಫಲವನ್ನು ಪಡೆದು ಸುಖವಾಗಿರಬಹುದು. ಲಲಿತಾ ಸಹಸ್ರನಾಮ ಪಾರಾಯಣ ಮಾಡಿ. ದ್ವಿತೀಯ ರಾಹುವಿಗೆ ಕುಕ್ಕೆ ಸುಬ್ರಹ್ಮಣ್ಯನನ್ನು ಪೂಜಿಸಿ ಬನ್ನಿ.

    ಎಲೆಕ್ಟ್ರಿಕ್ ದ್ವಿಚಕ್ರವಾಹನಗಳ ಬೆಲೆಯಲ್ಲಿ ಭಾರಿ ಇಳಿಕೆ; ಕಾರಣ ಇದು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts