ಮುಂಡಗೋಡ: ತಾಲೂಕಿನ ಹಲವು ಭಾಗಗಳಲ್ಲಿ ಅಂತರ್ಜಲ ಕುಸಿತ ಕಂಡಿರುವ ಪರಿಣಾಮ ಹಿಂಗಾರು ಹಾಗೂ ನೀರಾವರಿ ಗೋವಿನಜೋಳ ಬೆಳೆದಿರುವ ರೈತರು ಆತಂಕಕ್ಕೀಡಾಗಿದ್ದಾರೆ.
2024ರಲ್ಲಿ ತಾಲೂಕಿನಾದ್ಯಂತ ಅತಿ ಹೆಚ್ಚು ಮಳೆ ಸುರಿದಿತ್ತು. ಇದರಿಂದ ತಾಲೂಕಿನಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದೆ ಎಂದು ಬೋರವೆಲ್ವುಳ್ಳ ರೈತರು ಹಿಂಗಾರು ಹಾಗೂ ನೀರಾವರಿ ಬೆಳೆಯಾಗಿ ಗೋವಿನಜೋಳ ಬೆಳೆದಿದ್ದಾರೆ. ಆದರೆ, ಗೋವಿನಜೋಳವು ತೆನೆ ಹಾಕಿದ್ದು ಕಾಳು ಕಟ್ಟಿದೆ. ಮಾರ್ಚ್ನಲ್ಲಿ ಬೆಳೆ ಕಟಾವಿಗೆ ಬರುತ್ತದೆ. ಅಂಥದ್ದರಲ್ಲಿ ಬೆಳೆಗೆ ಸಮರ್ಪಕವಾಗಿ ನೀರು ಪೂರೈಸಲು ಅಂತರ್ಜಲ ಮಟ್ಟ ಕುಸಿದಿದ್ದು, ಬೋರ್ವೆಲ್ಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ಪರದಾಡುವಂತಾಗಿದೆ.
ತಾಲೂಕಿನ ಚವಡಳ್ಳಿ, ನಾಗನೂರ, ಇಂದೂರ, ಹುನಗುಂದ, ನಂದಿಗಟ್ಟ, ಚಿಗಳ್ಳಿ, ಕಾತೂರ ಪಂಚಾಯಿತಿ ವ್ಯಾಪ್ತಿಯ ಕೆಲ ಭಾಗಗಳಲ್ಲಿ ದಿಢೀರನೆ ಅಂತರ್ಜಲ ಕುಸಿತವಾಗಿದೆ. ಬೋರ್ವೆಲ್ಗಳಲ್ಲಿ ಸರಿಯಾಗಿ ನೀರು ಬರುತ್ತಿಲ್ಲ. ಮೊದಲೆಲ್ಲ ಬೆಳಗ್ಗೆಯಿಂದ ಸಂಜೆಯವರೆಗೂ ನೀರು ಹಾಯಿಸುತ್ತಿದ್ದ ರೈತರು ಅಂತರ್ಜಲ ಬತ್ತಿದ್ದರಿಂದ ಮೂರ್ನಾಲ್ಕು ತಾಸುಗಳಲ್ಲಿ ಬೋರ್ವೆಲ್ಗಳಿಂದ ನೀರು ಬರುತ್ತಿಲ್ಲ. ಬಂದರೂ ಸಮರ್ಪಕವಾಗಿ ಬರುತ್ತಿಲ್ಲ. ಒಂದೆರಡು ತಾಸು ಬೋರ್ವೆಲ್ ಬಂದ್ ಮಾಡಿ ಮತ್ತೆ ಮೋಟಾರ್ ಚಾಲೂ ಮಾಡಿದಾಗ ನೀರು ಬರುತ್ತದೆ. ಮತ್ತೆರಡು ತಾಸಿಗೆ ನೀರು ಸಣ್ಣವಾಗುತ್ತದೆ. ಇದರಿಂದಾಗಿ ಸಮರ್ಪಕ ನೀರು ಬೋರ್ವೆಲ್ನಿಂದ ಹೊರಬಾರದೇ ಬೆಳೆಗೆ ನೀರು ಹಾಯಿಸುವುದು ಕಷ್ಟ ಸಾಧ್ಯವಾಗಿದೆ.
ತಾಲೂಕಿನ ಚವಡಳ್ಳಿ, ಚಿಗಳ್ಳಿ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಂತರ್ಜಲ ಕುಸಿತವಾಗಿದ್ದು ಒಂದೆರಡು ತಾಸು ಮಾತ್ರ ಬೋರ್ಗಳಲ್ಲಿ ನೀರು ಬರುತ್ತಿದೆ. ಇದರಿಂದಾಗಿ ಗೋವಿನಜೋಳ ಬೆಳೆಗಾರರು ಹಗಲು-ರಾತ್ರಿ ಎನ್ನದೆ ಬೋರವೆಲ್ಗಳಿಂದ ಬರುವ ಅಲ್ಪ ಸ್ವಲ್ಪ ನೀರನ್ನು ಬೆಳೆಗೆ ಹಾಯಿಸಿ ಶತಾಯ ಗತಾಯ ಬೆಳೆ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಈ ಭಾಗಗಳಲ್ಲಿ ಅತಿ ಹೆಚ್ಚು ಮಳೆಯಾಗಿದ್ದರೂ ಅಂತರ್ಜಲ ಕುಸಿತವಾಗಿರುವುದರಿಂದ ರೈತರು ಆತಂಕಕ್ಕೊಳಗಾಗಿದ್ದಾರೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಎದುರಾಗುವ ಸಾಧ್ಯತೆ ಇಲ್ಲದಿಲ್ಲ.