ಹುಬ್ಬಳ್ಳಿ: ಅವಳಿನಗರದಲ್ಲಿ ತ್ಯಾಜ್ಯ ಸಂಗ್ರಹ ಹಾಗೂ ಸ್ವಚ್ಛತೆ ಕಾರ್ಯವು ಸರಿಯಾದ ನಿರ್ವಹಣೆ ಇಲ್ಲದೇ ಮತ್ತಷ್ಟು ಸಮಸ್ಯೆಗಳು ಉಲ್ಬಣವಾಗುತ್ತಿವೆ. ಇದು ಕಳೆದೊಂದು ತಿಂಗಳು ವಿವಿಧೆಡೆ ಪರಿಶೀಲನೆ ಮಾಡಿದ ನಂತರ ಗಮನಕ್ಕೆ ಬಂದಿದೆ. ಈ ದಿಸೆಯಲ್ಲಿ ಸಮಗ್ರ ಕಸ ನಿರ್ವಹಣೆಗೆ ಯೋಜನೆ ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಉದ್ದೇಶಿಸಲಾಗಿದೆ ಎಂದು ಸಾರ್ವಜನಿಕ ಆರೋಗ್ಯ ಶಿಕ್ಷಣ ಹಾಗೂ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಜಣ್ಣ ಕೊರವಿ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ- ಧಾರವಾಡದಲ್ಲಿ ಕಸಾಯಿಖಾನೆಗಳನ್ನು ಬೇಕಾಬಿಟ್ಟಿಯಾಗಿ ನಡೆಸಲಾಗುತ್ತಿದೆ. ಅಲ್ಲಿ ಯಾವುದೇ ನಿಯಮಾವಳಿ ಪಾಲನೆಯಾಗುತ್ತಿಲ್ಲ. ಅಲ್ಲದೇ ರಸ್ತೆ ಬದಿ ಎಲ್ಲೆಂದರಲ್ಲಿ ದನ, ಕುರಿ, ಕೋಳಿ ಕಡಿದು ತ್ಯಾಜ್ಯ ಎಸೆಯಲಾಗುತ್ತಿದೆ. ಇದರಿಂದ ವಾತಾವರಣ ಹದಗೆಡುತ್ತಿದೆ. ಕಸಾಯಿಖಾನೆ ನಿರ್ವಹಣೆ ಬಗ್ಗೆ ಸ್ವತಃ ಅಧಿಕಾರಿಗಳಿಗೂ ಸರಿಯಾದ ಮಾಹಿತಿ ಎಂದು ವಿಷಾದಿಸಿದರು.
ಕಾರವಾರ ರಸ್ತೆ ಹಾಗೂ ಧಾರವಾಡದ ಕಸದ ಗುಡ್ಡೆ ಕರಗಿಸುವ ಕಾರ್ಯ ಬಹಳ ನಿಧಾನ ಗತಿಯಲ್ಲಿ ನಡೆದಿದೆ. ಇದನ್ನು ವೇಗವಾಗಿ ಮಾಡಲು ಇನ್ನೆರಡು ಕಸ ಪ್ರತ್ಯೇಕಗೊಳಿಸುವ ಯಂತ್ರ ತರಿಸಬೇಕು. ಮನೆಮನೆಯಿಂದ ಕಸ ಸಂಗ್ರಹಕ್ಕೆ ಇನ್ನೂ 200ಕ್ಕೂ ಹೆಚ್ಚು ವಾಹನ ಖರೀದಿ ಮಾಡಬೇಕು. ಸಾರ್ವಜನಿಕರು ಸಹ ಕಸ ವಿಂಗಡಣೆ ಮಾಡಿ ಪಾಲಿಕೆ ಸಿಬ್ಬಂದಿಗೆ ಕೊಡಬೇಕು ಎಂದು ಹೇಳಿದರು.
ಇಂದೋರ್ ಮಾದರಿ:
ಮಧ್ಯಪ್ರದೇಶದ ಇಂದೋರ್ ಮಹಾನಗರ ಕಸ ನಿರ್ವಹಣೆಯಲ್ಲಿ ಮೊದಲ ಸ್ಥಾನದಲ್ಲಿದೆ. ಹುಬ್ಬಳ್ಳಿಯಂತೆ ಅಲ್ಲಿಯೂ ಕಸದ ರಾಶಿ ಇತ್ತು. ಅದನ್ನು ಕರಗಿಸಿ ಈಗ ಅಲ್ಲಿ ಅದ್ಭುತ ಉದ್ಯಾನ ನಿಮಿರ್ಸಿದ್ದಾರೆ. ಅದೇ ಮಾದರಿಯಲ್ಲಿ ಕಾರವಾರ ರಸ್ತೆಯಲ್ಲಿರುವ 19 ಎಕರೆ ಜಮೀನಿನಲ್ಲಿನ ಕಸದ ಗುಡ್ಡೆ ಕರಗಿಸಿದರೆ ಸುಂದರ ಗಾರ್ಡನ್ ನಿಮಿರ್ಸಬಹುದಾಗಿದೆ. ಹುಬ್ಬಳ್ಳಿಯನ್ನು ಸಹ ಮಾದರಿ ನಗರ ಯಾಕೆ ಮಾಡಬಾರದು? ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ. ಈ ಬಗ್ಗೆ ಪಾಲಿಕೆ ಆಯುಕ್ತರು ಯೋಜನೆ ರೂಪಿಸಬೇಕು. ಹೊಸ ಬದಲಾವಣೆಗೆ ಹೆಜ್ಜೆ ಇಡಬೇಕು. ಸ್ವಚ್ಛತೆಯಲ್ಲಿ ವೃತ್ತಿಪರತೆ ತರಬೇಕು ಎಂದು ಸಲಹೆ ನೀಡಿದರು.
ಬಿಡಾಡಿ ದನ, ನಾಯಿ ಹಾವಳಿ ವಿಪರೀತವಾಗಿದೆ. ಅವಳಿನಗರದಲ್ಲಿ ಸಾರ್ವಜನಿಕ ಮೂತ್ರಿಗಳಿಲ್ಲ. ಈ ಎಲ್ಲದರ ಬಗ್ಗೆ ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದೆ. ತೆರಿಗೆದಾರರು ಸಹ ಈ ಕಾರ್ಯದಲ್ಲಿ ಭಾಗವಹಿಸಬೇಕು. ಅಧಿಕಾರಿಗಳು, ಪೌರ ಕಾರ್ಮಿಕರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಣೆ ಮಾಡಬೇಕು ಎಂದು ಮನವಿ ಮಾಡಿದರು.
ಈ ಭಾಗದ ಶಾಸಕರು, ಜನಪ್ರತಿನಿಧಿಗಳೊಂದಿಗೆ ಸೇರಿ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಶಾಸಕರು ಇದರ ಬಗ್ಗೆ ಗಮನ ಹರಿಸಿ ಅನುದಾನ ಮಂಜೂರಾತಿ ಪಡೆಯಲು ಶ್ರಮಿಸಬೇಕು ಎಂದು ಮನವಿ ಮಾಡಿದ ಅವರು, ಎಲ್ಲವೂ ಅಂದುಕೊಂಡಂತೆ ನಡೆದರೆ ಕಾರವಾರ ರಸ್ತೆಯ ಗಾರ್ಬೇಜ್ ಯಾರ್ಡ್ ಮುಂದೊಂದು ದಿನ ಉತ್ತಮ ಗಾರ್ಡನ್ ಆಗಿ ಪರಿವರ್ತನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಮಿತಿ ಸದಸ್ಯರಾದ ಇಕ್ಬಾಲ್ ನವಲೂರ, ಮಹದೇವಪ್ಪ ನರಗುಂದ, ಚಂದ್ರಕಲಾ ಕೊಟಬಾಗಿ, ಸುಮಿತ್ರಾ ಗುಂಜಾಳ ಗೋಷ್ಠಿಯಲ್ಲಿದ್ದರು.