More

    ಯಶಸ್ಸಿನ ಸರ್ವಶ್ರೇಷ್ಠ ಆಂದೋಲನ ಆತ್ಮಾವಲಂಬನ

    ಯಶಸ್ಸಿನ ಸರ್ವಶ್ರೇಷ್ಠ ಆಂದೋಲನ ಆತ್ಮಾವಲಂಬನ

    ತತ್ತ್ವ ಆಧಾರಿತ ಸನಾತನ ಹಿಂದೂಧರ್ಮವು ಮನುಷ್ಯನನ್ನು ತತ್ತ್ವನಿಷ್ಠನನ್ನಾಗಿ, ತತ್ತ್ವ ಅನುಷ್ಠಾನಿಯನ್ನಾಗಿ ರೂಪಿಸಲು ಅತ್ಯವಶ್ಯಕವಾದ ಮಾರ್ಗದರ್ಶನವನ್ನು ನೀಡುತ್ತ ಸಾಗಿದೆ. ಹಿಂದೂಧರ್ಮದ ವೈಶಿಷ್ಟ್ಯವೆಂದರೆ ಇಲ್ಲಿ ನೂರಾರು ಸವೋತ್ಕೃಷ್ಟ ವ್ಯಕ್ತಿಗಳನ್ನು ಗಮನಿಸುತ್ತೇವೆ, ಅವರುಗಳನ್ನು ಗೌರವಿಸುತ್ತೇವೆ. ಆದರೆ ಹಿಂದೂಧರ್ಮದಲ್ಲಿ ತತ್ತ್ವಗಳು ಅನಿವಾರ್ಯವೆನಿಸುತ್ತವೆಯೇ ಹೊರತು ವ್ಯಕ್ತಿಗಳಲ್ಲ. ‘ವ್ಯಕ್ತಿಗಿಂತ ತತ್ತ್ವವಧಿಕ’ ಎಂಬ ಸಾರ್ವಕಾಲಿಕ ಸತ್ಯವನ್ನು ಇತರ ಧರ್ಮೀಯರು ಅರ್ಥಮಾಡಿಕೊಳ್ಳುವ ಹೋರಾಟದಲ್ಲೇ ನಿರತರಾಗಿದ್ದಾರೆ!

    ಆತ್ಮಾವಲಂಬನೆ- ಇದು ಅದ್ವೈತ ಸಿದ್ಧಾಂತದ ತಿರುಳು. ‘ಜಿತಂ ಜಗತ್ ಕೇನ ಮನೋಹಿ ಏನ’ ಎಂಬ ಆರ್ಷವಾಣಿ ‘ತನ್ನ ಮನಸ್ಸನ್ನು ಗೆದ್ದವನಷ್ಟೇ ಜಗತ್ತನ್ನು ಗೆದ್ದವನು’ ಎಂಬ ಅದ್ಭುತವಾದ ಸತ್ಯವನ್ನು ಅರುಹಿದೆ. ‘ಸಾವಿರ ಇಂದ್ರರನ್ನು ಜಯಿಸಿದವನಿಗಿಂತ ಇಂದ್ರಿಯಗಳನ್ನು ಜಯಿಸಿದವನೇ ನಿಜಧೀರ!’ ಎಂಬ ಬುದ್ಧಭಗವಾನನ ಮಾತೂ ಅತ್ಯದ್ಭುತ. ಆತ್ಮಾವಲಂಬನೆ ಎಂಬುದು ತನ್ನನ್ನೇ ತಾನು ನಂಬಬೇಕು ಎಂದು ಬಾಹ್ಯಾರ್ಥವನ್ನಿತ್ತರೂ ಇಲ್ಲಿ ‘ತಾನು’ ಎಂಬುದು ಇಂದ್ರಿಯಸ್ತರದಿಂದ ಮೊದಲ್ಗೊಂಡು ಇಂದ್ರಿಯಾತೀತವಾದ ‘ಆತ್ಮತತ್ತ್ವ’ದ ಹಂತಕ್ಕೆ ಅರ್ಥಾತ್ ಅನಂತತೆಯತ್ತ ಪಯಣವನ್ನು ನಿರ್ದೇಶಿಸುತ್ತದೆ. ಉಪನಿಷತ್ತಿನ ಧ್ಯೇಯವಾಕ್ಯಗಳಾದ ‘ಅಹಂ ಬ್ರಹ್ಮಾಸ್ಮಿ’, ‘ಸರ್ವಂ ಖಲ್ವಿದಂ ಬ್ರಹ್ಮ’, ‘ಅಯಮಾತ್ಮಾ ಬ್ರಹ್ಮ ಮತ್ತು ತತ್ತ್ವಮಸಿ’- ಇವುಗಳಲ್ಲಡಗಿರುವ ಶಾಶ್ವತ ಸತ್ಯತೆ, ಸಾರ್ವಕಾಲಿಕ ಪ್ರಸ್ತುತತೆ ಮನದಟ್ಟಾಗುತ್ತದೆ. ‘ನದಿಯನ್ನು ಹಿಂಬಾಲಿಸಿದರೆ ಸಮುದ್ರ ದೊರಕುವುದು ಶತಃಸಿದ್ಧ’ ಎಂಬ ಅನುಭಾವಿಗಳ ನುಡಿಯಂತೆ ಚರಮಸತ್ಯವನ್ನರಿಯುವ ಪ್ರಯತ್ನ ನಮ್ಮದಾಗಬೇಕು. ‘ಮಾತಾ ಭೂಮಿಃ, ಪುತ್ರೋ ಅಹಂ ಪೃಥಿವ್ಯಾಃ…ವೇದೈಃ ಪಶ್ಯಂತಿ ಬ್ರಾಹ್ಮಣಾಃ’ ಎಂಬ ಋಷಿವಾಣಿ ಮಾನವನು ಭೂಮಿತಾಯಿಯ ಪುತ್ರನೆಂದೂ ಜ್ಞಾನಿಯಾದ ಬ್ರಾಹ್ಮಣನಿಗೆ ವೇದಗಳೇ ದೃಷ್ಟಿದೋರುವ ಚಕ್ಷುಗಳೆಂದೂ ನಿಶ್ಚಯಿಸುತ್ತವೆ.

    ಸ್ವಪ್ರಯತ್ನದ ಮಹಿಮೆ: ಮುಂಡಕೋಪನಿಷತ್, ‘ಬಲಹೀನನಿಗೆ ಆತ್ಮಜ್ಞಾನ ಲಭಿಸದು, ಪ್ರಮಾದರತನಿಗೆ, ಸಾಧನೆಗಳನ್ನು ತಪ್ಪಾಗಿ ಪಾಲಿಸುವವನಿಗೆ ಆತ್ಮತತ್ತ್ವ ಎಟುಕದು. ಸಾಧನೆಯಿಂದ ಪ್ರಯತ್ನಶೀಲನಾಗುವ ವಿವೇಕಿಯು ಅನಂತ ಆತ್ಮನನ್ನು ತಿಳಿಯುತ್ತಾನೆ’ ಎಂದಿದೆ. ಮುಕ್ತಿಕೋಪನಿಷತ್, ‘ಒಳಿತು ಕೆಡುಕಿನ ಕಾಲುವೆಗಳಲ್ಲಿ ಹರಿಯುವ ಸ್ವಭಾವಗಳನ್ನು ಸ್ವಪ್ರಯತ್ನದಿಂದ ಸನ್ಮಾರ್ಗದಲ್ಲಿ ಹರಿಯುವಂತೆ ನಿರ್ದೇಶಿಸಬೇಕು. ಅದು ಕೆಡುಕಿನೆಡೆಗೆ ತಿರುಗಿದಾಗಲೆಲ್ಲ ಒಳಿತಿನ ಕಡೆಗೆ ತಿರುಗಿಸಬೇಕು’ ಎಂದಿದೆ. ಮತ್ಸ್ಯಪುರಾಣವು ಹೀಗೆನ್ನುತ್ತದೆ: ‘ಸ್ವಪ್ರಯತ್ನದಿಂದ ವ್ಯಕ್ತಿಯ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ. ಪ್ರಯತ್ನದ ಅಭಾವವಿರುವವರು ವಿಧಿಯನ್ನು ಕುರಿತು ಮಾತನಾಡುತ್ತಾರೆ. ಆಲಸಿಗರು, ವಿಧಿಯಷ್ಟನ್ನೇ ನಂಬಿದವರು ಎಂದಿಗೂ ತಮ್ಮ ಗುರಿಯನ್ನು ತಲುಪುವುದಿಲ್ಲ. ಆದ್ದರಿಂದ ಮಾನವನು ಆತ್ಮಾವಲಂಬಿ ಆಗಲೇಬೇಕು’. ಯಾಜ್ಞವಲ್ಕ್ಯ ಸ್ಮೃತಿಯು, ‘ಒಂದು ಕಾರ್ಯದ ಯಶಸ್ಸು ವಿಧಿ ಮತ್ತು ಸ್ವಪ್ರಯತ್ನವನ್ನು ಸಮಾನ ವಾಗಿ ಅವಲಂಬಿಸಿದೆ. ಇವುಗಳಲ್ಲಿ ವಿಧಿಯೆಂಬುದು ಹಿಂದಿನ ಜನ್ಮಗಳಲ್ಲಿ ಮಾಡಿದ ಸ್ವಪ್ರಯತ್ನವೇ ಆಗಿದೆ’ ಎಂದಿದೆ. ‘ಸಾಧಕನಾದವನು ತನ್ನನ್ನು ತಾನೇ ಮೇಲೆತ್ತಿ ಕೊಳ್ಳಬೇಕು; ಕುಗ್ಗಿಸಿಕೊಳ್ಳಬಾರದು. ಏಕೆಂದರೆ ತನಗೆ ತಾನೇ ಬಂಧು; ತನಗೆ ತಾನೇ ಶತ್ರು’ ಎಂದಿದೆ ಭಗವದ್ಗೀತೆ. ‘ಕರ್ಮ ಮಾಡಲು ನಿನಗೆ ಅಧಿಕಾರವಿದೆ, ಆದರೆ ಅದರ ಫಲಕ್ಕಲ್ಲ. ಫಲಾಪೇಕ್ಷೆಯಿಂದ ಕರ್ಮ ಮಾಡಬೇಡ. ಅಂದ ಮಾತ್ರಕ್ಕೆ ಕರ್ಮ ಮಾಡುವುದರಿಂದಲೂ ದೂರ ಉಳಿಯಬೇಡ’ ಎಂದೂ ಗೀತೆ ಎಚ್ಚರಿಸುತ್ತದೆ.

    ಯತ್ತದಗ್ರೇ ವಿಷಮಿವ ಪರಿಣಾಮೇ ಅಮೃತೋಪಮಂ…

    ‘ಯಾವ ಸುಖವು ಪ್ರಾರಂಭದಲ್ಲಿ ವಿಷದಂತೆಯೂ ಅಂತ್ಯದಲ್ಲಿ ಅಮೃತಸದೃಶ ವಾಗಿರುತ್ತದೆಯೋ ಅದು ಸಾತ್ವಿಕವಾದದ್ದು ಮತ್ತು ಉತ್ಥಾನಕ್ಕೆ ಕಾರಣವಾದದ್ದು’.

    ಯತ್ತದಗ್ರೇ ಅಮೃತೋಪಮಂ ಪರಿಣಾಮೇ ವಿಷಮಿವ…

    ‘ಯಾವ ಸುಖವು ಪ್ರಾರಂಭದಲ್ಲಿ ಅಮೃತದಂತಿದ್ದು ಕೊನೆಯಲ್ಲಿ ವಿಷವಾಗುತ್ತದೆಯೋ ಅದು ರಾಜಸಿಕವಾದದ್ದು ಮತ್ತು ಪತನಕ್ಕೆ ಕಾರಣವಾಗುತ್ತದೆ’ ಎಂದಿದೆ ಗೀತೆ.

    ಭಿಕ್ಷುಕರಿಗೆ ಆಯ್ಕೆಯ ಸ್ವಾತಂತ್ರ್ಯವಿಲ್ಲವೆಂಬ ಸತ್ಯವು ಅಂದಿನಿಂದ ಇಂದಿನವರೆಗೂ ಬಹಳಷ್ಟು ಜನಸಂಖ್ಯೆಗೆ ಅರ್ಥವಾಗದೇ ಹೋದ ಕಟುಸತ್ಯ. ಆಸೆಗೆ ದಾಸರಾದವರು ತಮ್ಮನ್ನು ‘ಲೋಕದಾಸ’ರಾದೆವೆಂದು ತಿಳಿಯದಾದರು. ಕಷ್ಟಗಳೆಂದೂ ಮನುಷ್ಯನನ್ನು ರೂಪಿಸುತ್ತವೆಯೇ ಹೊರತು ಅವನನ್ನು ಶೋಷಿಸುವುದಿಲ್ಲ. ಬೀಜವೇ ಇಲ್ಲದೆ ಹೊಲವನ್ನು ಉತ್ತಿದರೆ ಅದು ಹೇಗೆ ನಿಷ್ಪಲವೋ ಅಂತೆಯೇ ಸ್ವಪ್ರಯತ್ನಹೀನನಿಗೆ ದೈವವೂ ಫಲವನ್ನೀಯುವುದಿಲ್ಲ! ಆದ್ದರಿಂದಲೇ ಪ್ರಯತ್ನವನ್ನೇ ಮಾಡದೆ ಕೇವಲ ಆಸೆಯ ಪಿಶಾಚಿ ಹಿಡಿದವರು ಯಾರೆಂದರವರ ಮುಂದೆ ನಮಸ್ಕರಿಸುತ್ತಾರೆ, ನಿಂದಿಸುತ್ತಾರೆ, ಸ್ತುತಿಸುತ್ತಾರೆ, ಅಳುತ್ತಾರೆ ಮತ್ತು ನಗುತ್ತಾರೆ. ಕೊನೆಗೆ ಜಗತ್ತಿನ ಮುಂದೆ ನಗೆಪಾಟಲೂ ಆಗುತ್ತಾರೆ!

    ಯಶಸ್ಸಿನ ರಹಸ್ಯವಿರುವುದು ಪ್ರಯತ್ನದಲ್ಲಿ! ನಿರಾಯಾಸವಾಗಿ ಬಾಳುವೆ ನಡೆಸಬೇಕೆಂದರೆ ಪ್ರಾರಂಭದಲ್ಲಿ ಪ್ರಯಾಸಪಡಲೇಬೇಕು. ಸಮುದ್ರಮಂಥನದ ಕಾರ್ಯದಲ್ಲಿ ಸುರರಿಗೆ ಸುಧೆ ಸುಲಭವಾಗಿ ಸಿಗಲಿಲ್ಲವಲ್ಲ! ‘ಸ್ವಪ್ರಯತ್ನಶೀಲನಿಗೆ ಈ ಜಗತ್ತಿನಲ್ಲಿ ದಕ್ಕದೇ ಇರುವುದು ಯಾವುದೂ ಇಲ್ಲ’ ಎಂದಿದೆ ಯೋಗವಾಸಿಷ್ಠ. ‘ಪ್ರಯತ್ನದಿಂದ ಕಾರ್ಯಗಳು ಸಿದ್ಧಿಸುತ್ತವೆಯೇ ಹೊರತು ಬರಿಯ ಬಯಕೆಗಳಿಂದಲ್ಲ. ಸಿಂಹವೇ ಆದರೂ ಅದು ನಿದ್ರಿಸುತ್ತಿದ್ದರೆ ಮೃಗಗಳು ತಾವಾಗಿಯೇ ಅದರ ಬಾಯಲ್ಲಿ ಬಂದು ಬೀಳುವುದಿಲ್ಲ’ ಎಂದಿದೆ ಪಂಚತಂತ್ರ.

    ವಿಪರ್ಯಾಸವೆಂದರೆ ನಮ್ಮನ್ನು ನಾವೇ ಅರಿಯದಾದಾಗ ಇನ್ನು ಇತರರು ನಮ್ಮನ್ನು ಅರ್ಥಮಾಡಿಕೊಳ್ಳಲಿಲ್ಲವೆಂಬ ಕೊರಗಿಗೆ ಕಿಮ್ಮತ್ತಿದೆಯೇ? ಕುಳಿತವನಲ್ಲ ಎಡವುವುದು, ನಡೆಯುವವನೇ! ನಿತ್ಯಜೀವನದಲ್ಲಿ ನಮ್ಮನ್ನು ಸಹಮಾನವರು ಎಚ್ಚರಿಸುವುದು ಒಳಿತು ಎಂದಾದರೂ ನಾವೇ ಎಚ್ಚರದಿಂದ ಬದುಕುವುದು ಹೆಚ್ಚು ಶ್ರೇಯಸ್ಕರ! ನಿಜ ಹೇಳಬೇಕೆಂದರೆ ಜೀವನದಲ್ಲಿ ‘ಸಾವು’ ದೊಡ್ಡ ನಷ್ಟವೇನಲ್ಲ! ಆದರೆ ಬದುಕಿರುವಾಗಲೇ ನಮ್ಮ ಆಂತರ್ಯದಲ್ಲಿ ಉತ್ತಮವಾದುದೆಲ್ಲ ಸಾಯುತ್ತವೆಯಲ್ಲ, ಅದುವೇ ಅತಿದೊಡ್ಡ ನಷ್ಟ! ಪಂಡಿತರು ಈರ್ಷೆಯಿಂದ, ಶ್ರೀಮಂತರು ಅಹಂಕಾರದಿಂದ ಮತ್ತು ಇನ್ನುಳಿದವರು ಅಜ್ಞಾನದಿಂದ ನರಳುವುದು ಲೋಕಾರೂಢಿ.

    ಬುದ್ಧ-ಶಂಕರ ಹಿತೋಕ್ತಿ: ‘ಸ್ವಪ್ರಯತ್ನದಿಂದ ಅದೃಷ್ಟವು ನಿರ್ವಣವಾಗುತ್ತದೆ. ಸ್ವಪ್ರಯತ್ನ ದಿಂದಲೇ ಅದೃಷ್ಟವನ್ನು ಬದಲಿಸಲೂಬಹುದು. ನಾವು ಮಾಡಿದ್ದನ್ನು ಮತ್ತೂ ಸುಧಾರಿಸಿಕೊಳ್ಳಲೂ ಬಹುದು. ಆದ್ದರಿಂದ ಬಿತ್ತಿದ ವಿಚಾರದಿಂದ ಸತ್ಕರ್ಮ, ಸತ್ಕಾರ್ಯದಿಂದ ಚಾರಿತ್ರ್ಯ ಮತ್ತು ಚಾರಿತ್ರ್ಯದಿಂದ ಭವಿಷ್ಯ ನಿರ್ವಣವಾಗುತ್ತದೆ’ ಎಂಬ ಆಚಾರ್ಯರುಗಳ ಅಭಿಮತವು ಸ್ವಪ್ರಯತ್ನದ ಮಹತ್ವ ಸಾರುತ್ತದೆ. ಬುದ್ಧಭಗವಾನನ ಪ್ರಾಣೋತ್ಕ್ರಮಣ ಕಾಲದಲ್ಲಿ ಶಿಷ್ಯರು ಕೇಳುತ್ತಾರೆ: ‘ಪ್ರಭು ನೀವು ನಿರ್ಗಮಿಸಿದ ಮೇಲೆ ನಮಗೆ ದಾರಿದೋರುವವರಾರು?’ ಬುದ್ಧ ಹೇಳುತ್ತಾನೆ: ‘ನಿಮಗೆ ನೀವೇ ದಾರಿದೀಪ ವಾಗಿರಿ… ಬಾಹ್ಯ ನೆರವನ್ನು ಎಂದೂ ಅವಲಂಬಿಸಬೇಡಿ, ನಿಮ್ಮನ್ನು ನೀವು ಅವಲಂಬಿಸಿ. ಆಗಷ್ಟೇ ನಿಮ್ಮ ಸಾಮರ್ಥ್ಯ ಸಾಧ್ಯತೆಗಳು ಶ್ರೇಷ್ಠ ರೀತಿಯಲ್ಲಿ ವ್ಯಕ್ತವಾಗುತ್ತವೆ…’ ಜಗದ್ಗುರು ಶ್ರೀಶಂಕರಾಚಾರ್ಯರು ಹೇಳುತ್ತಾರೆ: ‘ತಂದೆಯನ್ನು ಸಾಲದ ಬಾಧೆಯಿಂದ ಮಗನೇ ಮೊದಲಾದವರು ಬಿಡಿಸಬಲ್ಲರು. ಆದರೆ ಅವಿದ್ಯಾಬಂಧನದಿಂದ ಬಿಡುಗಡೆ ಮಾಡಲು ತನ್ನನ್ನು ಬಿಟ್ಟರೆ ಬೇರ್ಯಾರಿಂದಲೂ ಸಾಧ್ಯವಿಲ್ಲ… ತನ್ನ ತಲೆಯ ಮೇಲಿರುವ ಭಾರವನ್ನು ಇತರರು ಹೋಗಲಾಡಿಸಬಲ್ಲರು, ಆದರೆ ತನ್ನ ಹಸಿವಿನಿಂದುಂಟಾದ ಕಷ್ಟಗಳಿಗೆ ತನ್ನಿಂದಲ್ಲದೆ ಇತರರಾರೂ ಪರಿಹಾರ ಕೊಡಲಾರರು… ರೋಗಿಗೆ ಆರೋಗ್ಯಲಾಭವು ಪ್ರಾಪ್ತವಾಗುವುದು ಔಷಧ ಮತ್ತು ಅನುಸರಿಸಿದ ಪಥ್ಯಕ್ರಮದಿಂದಲೇ ಹೊರತು ಇತರರು ಮಾಡಿದ ಕೆಲಸಗಳಿಂದಲ್ಲ. ಅಂತೆಯೇ ಬಂಧನಕ್ಕೆ ಒಳಗಾದವನು ಬಿಡುಗಡೆ ಸಾಧಿಸುವುದು ಅವನ ವೈಯಕ್ತಿಕ ಪ್ರಯತ್ನವನ್ನೇ ಅವಲಂಬಿಸಿದೆ’.

    ಅಮೆರಿಕದ ಅಧ್ಯಕ್ಷನಾಗಿದ್ದ ಅಬ್ರಹಾಂ ಲಿಂಕನ್ ತನ್ನ ಮಗನ ಅಧ್ಯಾಪಕರಿಗೆ ಬರೆದ ಪತ್ರದಲ್ಲಿ ಸ್ವಾಭಿಮಾನ, ಆತ್ಮಾವಲಂಬನ ಮತ್ತು ಸ್ವಪ್ರಯತ್ನದ ವಿಚಾರಗಳು ಹೀಗೆ ಬಿಂಬಿತವಾಗಿವೆ: ‘ಬಿಟ್ಟಿಯಾಗಿ ಗಿಟ್ಟಿದ ಐದು ಡಾಲರ್​ಗಳಿಗಿಂತ ಕಷ್ಟಪಟ್ಟು ದುಡಿದ ಒಂದು ಡಾಲರ್ ಹೆಚ್ಚು ಶ್ರೇಯಸ್ಕರ ಎಂಬ ತಿಳಿವಳಿಕೆಯನ್ನು ನನ್ನ ಮಗನಿಗೆ ನೀಡಿ. ಅವನು ಸೋಲುವುದನ್ನು ಕಲಿಯಲಿ, ವಿಜಯದ ಆನಂದ ಅನುಭವಿಸುವುದನ್ನು ಕಲಿಯಲಿ, ಅಸೂಯೆಯಿಂದ ದೂರವಿರುವ ಪಾಠ ಕಲಿಯಲಿ. ಮೋಸ ಮಾಡುವುದಕ್ಕಿಂತ ನೈಜವಾಗಿ ಸೋಲೊಪು್ಪವುದು ಘನತೆಪೂರ್ಣ ನಡವಳಿಕೆ ಎಂಬುದನ್ನು ಕಲಿಯಲಿ, ತನ್ನ ಅಭಿಪ್ರಾಯವನ್ನು ಇತರರು ಟೀಕಿಸಿದರೂ ತನ್ನ ಸ್ವಂತ ಅಭಿಪ್ರಾಯದ ಬಗ್ಗೆ ಅವನು ಶ್ರದ್ಧೆ ಉಳಿಸಿಕೊಳ್ಳಲು ಕಲಿಸಿ. ಸಜ್ಜನರೊಡನೆ ಸಜ್ಜನನಾಗಿ ಮತ್ತು ಫಟಿಂಗರೊಡನೆ ಕಟುವಾಗಿ ನಡೆದುಕೊಳ್ಳುವುದನ್ನು ಅವನಿಗೆ ಕಲಿಸಿ, ದುಃಖದಲ್ಲಿ ನಗುವುದನ್ನು ಕಲಿಸಿ, ಕಣ್ಣೀರಿಡುವುದು ನಾಚಿಕೆಯಲ್ಲವೆಂದು ತಿಳಿಸಿ, ಅರಚಿಕೊಳ್ಳುತ್ತಿರುವ ಜನಮಂದೆಯ ಮುಂದೆ ತನಗೆ ಸರಿ ಎಂದೆನಿಸಿದ್ದನ್ನು ಕಾರ್ಯರೂಪಕ್ಕೆ ತರಲು ಹೋರಾಡುವ ಛಲ ಕಲಿಸಿ, ಅವನನ್ನು ಪ್ರೀತಿಯಿಂದ ನೋಡಿಕೊಳ್ಳಿ, ಮುದ್ದುಮಾಡಬೇಡಿ, ಏಕೆಂದರೆ ಲೋಹಗಳು ಶುದ್ಧವಾಗುವುದು ಕುಲುಮೆಯಲ್ಲಿ’.

    ಇಂದಿನ ದುಃಸ್ಥಿತಿ: ಅವಿವೇಕಿಗಳಿಂದು ತಮ್ಮ ವಿದ್ಯೆಯನ್ನು ವಿನಾಶಕ್ಕೆ, ಧನವನ್ನು ಮದಪ್ರದರ್ಶನಕ್ಕೆ ಮತ್ತು ಶಕ್ತಿಯನ್ನು ಪರಪೀಡನೆಗೆ ವಿನಿಯೋಗಿಸುತ್ತಿದ್ದಾರೆ. ದುರದೃಷ್ಟವಶಾತ್ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ವೈಯಕ್ತಿಕ ಲಾಭ, ಹಣ ಗಳಿಸು ವುದು, ಅಧಿಕಾರ ಕಬಳಿಸುವುದು, ಇಂದ್ರಿಯ ಸುಖ-ಇವುಗಳಿಗಿಂತ ಅಧಿಕವಾದ ಯಾವ ಗುಣವೂ ಕಾಣಸಿಗುತ್ತಿಲ್ಲ. ಇದರ ದುಷ್ಪರಿಣಾಮವೇ ‘ಸ್ವಾರ್ಥ-ಬುದ್ಧಿವಂತ ರಾಕ್ಷಸ ಸಂತಾನ ನಿರ್ವಣ’ ಮತ್ತು ‘ಸ್ವಾರ್ಥ-ಸ್ಪರ್ಧಾತ್ಮಕ ಸಮಾಜ’ದ ಬೆಳವಣಿಗೆ. ನಡತೆಗೆಟ್ಟವನು ಹಣವಂತನಾದರೂ ದುರ್ಗತಿಯಿಂದ ತಪ್ಪಿಸಿಕೊಳ್ಳಲಾರ!

    ವಿವೇಕವಾಣಿ: ‘ನಕಾರಾತ್ಮಕ ಶಿಕ್ಷಣವೆಂಬುದು ಮರಣಕ್ಕಿಂತಲೂ ಕೆಟ್ಟದ್ದು’. ‘ಸತ್ಕಾರ್ಯಗಳಿಗೆ ವಿಘ್ನಗಳೇ ಅಧಿಕವೆಂಬುದು ಪ್ರಪಂಚದ ಸ್ವಭಾವ. ಚಿತ್ತಸ್ಥೈರ್ಯ ವಿರಲಿ, ಕೆಲಸಕ್ಕೆ ಬಾರದ ಮನುಷ್ಯನ ನಿಂದನೆಗೆ ಸ್ವಲ್ಪವೂ ಗಮನ ಕೊಡಬೇಡಿ… ಸತ್ಯವನ್ನೇ ಪ್ರತಿಪಾದಿಸುತ್ತಿದ್ದರೂ ಕುಂದನ್ನೇ ಎತ್ತಿತೋರಲು ಹವಣಿಸುವ ವಕ್ರಬುದ್ಧಿಯವರನ್ನು ಸುಧಾರಿಸುವುದು ಬಲುಕಷ್ಟ! ಅವರನ್ನು ನಿರ್ಲಕ್ಷಿಸಿ’.

    ಬ್ರಹ್ಮಲೀನ ಪೂಜ್ಯ ಸ್ವಾಮಿ ಪುರುಷೋತ್ತಮಾನಂದರು ಹೇಳುತ್ತಾರೆ: ‘ಶ್ರೀಮಂತರೂ ವಿದ್ಯಾವಂತರೂ ಅಪರಾಧವೆಸಗಿದರೆ ಅದಕ್ಕೆ ಕಾರಣ ಅತ್ಯಾಸೆ ಮತ್ತು ಅಧಿಕಾರ ಲಾಲಸೆ. ಶ್ರೀಸಾಮಾನ್ಯರು ಅಪರಾಧವೆಸಗುವುದಕ್ಕೆ ಮೂಲಕಾರಣ ಅವರ ಬಡತನ. ಆದರೆ ಈ ಎಲ್ಲ ಅಪರಾಧಗಳ ಹಿನ್ನೆಲೆಯಲ್ಲಿನ ಸಾಮಾನ್ಯ ಅಂಶವೆಂದರೆ ‘ಆತ್ಮಗೌರವದ ಅಭಾವ!’ ನಮ್ಮನ್ನು ಮೇಲೆತ್ತಿ ಕಾಪಾಡುವುದೇ ಧರ್ಮ. ನಾವು ಧರ್ಮವನ್ನು ರಕ್ಷಿಸಿದರೆ ಧರ್ಮವು ನಮ್ಮನ್ನು ರಕ್ಷಿಸುತ್ತದೆ ಎಂಬ ಮಾತು ಎಂದೆಂದೂ ಸತ್ಯ. ಆದರೆ ಕೆಲವೊಮ್ಮೆ ಜನ ಹೇಳುವುದುಂಟು: ‘ಎಲ್ಲಿ? ಧರ್ಮ ನಮ್ಮನ್ನು ರಕ್ಷಿಸಿದ್ದು ಕಂಡುಬರಲಿಲ್ಲವಲ್ಲ?’ ಎಂದು. ಇದಕ್ಕೆ ಕಾರಣವಿಷ್ಟೇ, ‘ನಿಮ್ಮ ಧರ್ವನುಷ್ಠಾನದ ವಿಧಾನದಲ್ಲೇ ಏನೋ ದೋಷವಿರಬೇಕು! ಪುಷ್ಟಿಕರವಾದ ಬಾದಾಮಿ ತಿಂದರೂ ಬಲ ಬರಲಿಲ್ಲವೆಂದರೆ ಅಜೀರ್ಣದೋಷವಿರಬೇಕು!’. ‘ಯಶಸ್ಸೆಂಬುದು ಶೇ.99ರಷ್ಟು ಪರಿಶ್ರಮ ಮತ್ತು ಶೇ.1ರಷ್ಟು ಬಾಹ್ಯಸ್ಪೂರ್ತಿ’ ಎಂದಿದ್ದಾನೆ ವಿಜ್ಞಾನಿ ಎಡಿಸನ್.

    ‘ಕಷ್ಟಪಡು, ಕಂಡುಹುಡುಕು, ಪ್ರಯತ್ನವನ್ನು ಬಿಡಬೇಡ’ ಎಂದಿದ್ದಾನೆ ಆಂಗ್ಲಕವಿ ಟೆನ್ನಿಸನ್. ‘ನಿನ್ನನ್ನು ನೀನು ನಂಬುವುದೇ ನಿನ್ನ ಆಸ್ತಿಕ್ಯ ವ್ಯಕ್ತಿತ್ವದ ಮೊದಲ ಹೆಜ್ಜೆ. ಸಾವಿನ ಬಗ್ಗೆ ಧ್ಯಾನಿಸು. ಸಾವನ್ನು ಸಾಹಸದಿಂದ ಸ್ವಾಗತಿಸಬೇಕೆಂಬುದು ಹೌದಾದರೆ ಬದುಕನ್ನು ಅದಿನ್ನೆಷ್ಟು ಸಾಹಸಮಯ ವಾಗಿಸಿಕೊಳ್ಳಬೇಕಲ್ಲವೇ?’ ಎಂಬ ಸ್ವಾಮಿ ವಿವೇಕಾನಂದರ ದಿವ್ಯನುಡಿ ಹೃದಯಾಂತರಾಳವನ್ನು ತಟ್ಟಬೇಕು. ಮಾನವನು ಜಗತ್ತಿಗೆ ಏಕಾಂಗಿಯಾಗಿ ಬರುತ್ತಾನೆ, ಏಕಾಂಗಿಯಾಗಿ ನಿರ್ಗಮಿಸುತ್ತಾನೆ! ತನ್ನ ಸಂಪರ್ಕಕ್ಕೆ ಅಸಂಖ್ಯಾತ ಜನರು ಬಂದರೂ ವೈಯಕ್ತಿಕತೆ ಬಹುದೊಡ್ಡ ಪಾತ್ರ ವಹಿಸುತ್ತದೆ. ಆದ್ದರಿಂದ ವೈಯಕ್ತಿಕಪ್ರಜ್ಞೆಯನ್ನು ವಿಶ್ವಪ್ರಜ್ಞೆಯಲ್ಲಿ ತಾದಾತ್ಯ್ಮೊಳಿಸಿ ಕೊಳ್ಳುವುದರಿಂದಷ್ಟೇ ಅವನು ವಿಶ್ವಮಾನವ ಆಗಬಲ್ಲ. ಅದಕ್ಕೆ ಬೇಕಿದೆ ಸ್ವಪ್ರಯತ್ನದಲ್ಲಿ ನಿಷ್ಠೆ, ಆತ್ಮಾವಲಂಬನದಲ್ಲಿ ನಿರಂತರ ಪಯಣ! ಇದು ಯಶಸ್ಸಿಗೆ ಅತ್ಯವಶ್ಯಕವಾದ ಆಂದೋಲನವಲ್ಲವೇ? ಯೋಚಿಸಿ ನೋಡಿ!

    (ಲೇಖಕರು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts