ಉತ್ತರ ಕನ್ನಡ: ಆಹಾರ ಅರಸಿ ಗ್ರಾಮಕ್ಕೆ ಬಂದ ಚಿರತೆ ಬಾವಿಗೆ ಬಿದ್ದಿರುವ ಘಟನೆ ಕುಮಟಾ ತಾಲೂಕಿನ ಬರ್ಗಿ ಗ್ರಾಮದಲ್ಲಿ ನಡೆದಿದೆ.
ವಸಂತ ನಾಯಕ ಎಂಬುವವರ ಮನೆ ಆವರಣದಲ್ಲಿ ಇದ್ದ ಬಾವಿಗೆ ಚಿರತೆ ಬಿದ್ದಿದೆ. ಮೇಲಕ್ಕೆ ಬರಲು ಚಿರತೆ ಯತ್ನಿಸುತ್ತಿದ್ದ ವೇಳೆ ಉಂಟಾದ ಶಬ್ಧದಿಂದ ಚಿರತೆ ಬಾವಿಗೆ ಬಿದ್ದಿರುವುದು ಗಮನಕ್ಕೆ ಬಂದಿದೆ.
ಕೂಡಲೇ ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದರು. ಬಾವಿಗೆ ಬಿದ್ದಿರುವ ಚಿರತೆಯನ್ನು ರಕ್ಷಣೆ ಮಾಡಲು ಅರಣ್ಯ ಸಿಬ್ಬಂದಿ ಪರಿಕರಗಳೊಂದಿಗೆ ಗ್ರಾಮಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬಾವಿಗೆ ಬಿದ್ದಿರುವ ಚಿರತೆ ವೀಕ್ಷಿಸಲು ಗ್ರಾಮಸ್ಥರು ತಂಡವಾಗಿ ಆಗಮಿಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್)