ಬೆಂಗಳೂರು: ವಿದೇಶದಲ್ಲಿ ಉದ್ಯೋಗ ಕೊಡಿಸುವ ಆಮಿಷವೊಡ್ಡಿದ ವ್ಯಕ್ತಿ 13 ಜನರಿಂದ 1.48 ಕೋಟಿ ರೂ. ಪಡೆದು ವಂಚಿಸಿದ್ದಾನೆ. ವಂಚನೆಗೊಳಗಾದ ಗಂಗಾನಗರದ ನಿವಾಸಿ ತೌಫಿಕ್ ಮೊಹಮದ್ ಈ ಬಗ್ಗೆ ದೂರು ನೀಡಿದ್ದು, ಎಂ.ಜಿ. ರಸ್ತೆಯಲ್ಲಿರುವ ಓಷಿಯನ್ ಇಂಟರ್ನ್ಯಾಷನಲ್ ನಾವೆಲ್ ಆಫೀಸರ್ಸ್ ಸೆಂಟರ್ನ ನಿರ್ದೇಶಕನೆಂದು ಹೇಳಿಕೊಂಡಿದ್ದ ಆರೋಪಿ ಶರತ್ಚಂದ್ರ ಎಂಬಾತನ ವಿರುದ್ಧ ಆರ್.ಟಿ.ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಉದ್ಯೋಗ ಇಲ್ಲದವರಿಗೆ ಸಿಂಗಾಪುರ, ಮಲೇಷ್ಯಾ, ಅರಬ್ ರಾಷ್ಟ್ರಗಳು, ಚೀನಾ ಮತ್ತಿತರ ದೇಶಗಳಲ್ಲಿ ಉದ್ಯೋಗ ಕೊಡಿಸುತ್ತೇನೆ ಎಂದು ಶರತ್ಚಂದ್ರ ನಂಬಿಸುತ್ತಿದ್ದ. ಎಂಟು ಜನರಿಗೆ ಉದ್ಯೋಗ ಕೊಡಿಸುವುದಾಗಿ ತೌಫಿಕ್ನಿಂದ 69.85 ಲಕ್ಷ ರೂ. ಹಾಗೂ ಐದು ಮಂದಿಗೆ ಉದ್ಯೋಗ ನೀಡುವುದಾಗಿ ಆತನ ಸ್ನೇಹಿತ ಅಬ್ದುಲ್ ಮುನೀರ್ನಿಂದ 78.35 ಲಕ್ಷ ರೂ. ಪಡೆದಿದ್ದ. ಈ ಎಲ್ಲ ಹಣವನ್ನೂ ಗೂಗಲ್ ಪೇ ಮೂಲಕ ತನ್ನ ಬ್ಯಾಂಕ್ ಖಾತೆಗೆ ಜಮೆ ಮಾಡಿಸಿಕೊಂಡಿದ್ದ. ಕಳೆದ ಆ.20ರಂದು ಕೊಚ್ಚಿ ವಿಮಾನ ನಿಲ್ದಾಣಕ್ಕೆ ಬಂದು ಎಲ್ಲ 13 ಮಂದಿಯ ಉದ್ಯೋಗ ನೇಮಕಾತಿ ಪತ್ರ, ಪಾಸ್ಪೋರ್ಟ್, ವೀಸಾ ಪಡೆದುಕೊಳ್ಳುವಂತೆ ತೌಫಿಕ್ಗೆ ಸೂಚಿಸಿದ್ದ. ಆದರೆ, ಅಂದು ತೌಫಿಕ್ ವಿಮಾನ ನಿಲ್ದಾಣಕ್ಕೆ ಹೋದಾಗ ಅಲ್ಲಿಗೆ ಆತ ಬಂದಿರಲಿಲ್ಲ. ಅಂದಿನಿಂದ ತಲೆಮರೆಸಿಕೊಂಡಿದ್ದು, ಮೊಬೈಲ್ ಆಫ್ ಮಾಡಿಕೊಂಡಿದ್ದಾನೆ. ಎಂ.ಜಿ. ರಸ್ತೆಯಲ್ಲಿದ್ದ ಆತನ ಕಚೇರಿಯನ್ನೂ ತೆರೆದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.