More

    ಶ್ರೀರಾಮಕೃಷ್ಣರಲ್ಲಿನ ಮನಃಶಾಸ್ತ್ರಜ್ಞನ ಅನಾವರಣ

    ‘ಜನರೊಂದಿಗೆ ಮಾತುಕತೆ ಆಡುವುದು, ಸ್ನೇಹ ಬೆಳೆಸುವುದು ಮತ್ತು ವ್ಯವಹರಿಸುವುದು ಅವಶ್ಯಕವೇ ಹೌದು. ಅದು ಫಲಿಸದಿದ್ದರೆ ವ್ಯಥೆ ಪಡಬೇಕಿಲ್ಲ. ಭಗವಂತನನ್ನು ಮರೆತು ಏನೆಲ್ಲ ಚಿಂತನೆಯನ್ನು ಮಾಡಿದರೂ ಅದರಿಂದ ಮನಸ್ಸು ಕೆಡುತ್ತದೆಯಾದ್ದರಿಂದ ಆತ್ಮಚಿಂತನೆಯಲ್ಲಿ ಮುಳುಗು’ ಎಂದು ನುಡಿದಿದ್ದಾರೆ ಶ್ರೀರಾಮಕೃಷ್ಣ ಪರಮಹಂಸರು.

    ಶ್ರೀರಾಮಕೃಷ್ಣರಲ್ಲಿನ ಮನಃಶಾಸ್ತ್ರಜ್ಞನ ಅನಾವರಣವಿಶ್ವಕವಿ ರವೀಂದ್ರನಾಥ ಟ್ಯಾಗೋರರು ಭಗವಾನ್ ಶ್ರೀರಾಮಕೃಷ್ಣರ ಕುರಿತು ಹೇಳುತ್ತಾರೆ: ‘ಲಕ್ಷ ಲಕ್ಷ ಸಾಧಕರ ವಿವಿಧ ಸಾಧನೆಗಳ ಪ್ರವಾಹಗಳು ನಿಮ್ಮ ಧ್ಯಾನದಲ್ಲಿ ಲೀನವಾಗಿವೆ. ನಿಮ್ಮ ಜೀವನದ ಅಸೀಮ ಲೀಲಾಪಥಗಳು ಈ ಜಗತ್ತಿನಲ್ಲಿ ಹೊಸದೊಂದು ತೀರ್ಥಕ್ಷೇತ್ರದ ರೂಪವನ್ನು ತಾಳಿವೆ; ಆ ತೀರ್ಥಕ್ಷೇತ್ರವು ದೇಶವಿದೇಶಗಳ ಪ್ರಣಾಮಗಳನ್ನು ಸೆಳೆಯುತ್ತಿದೆ. ಇವಕ್ಕೆ ಇದೋ ನನ್ನ ಪ್ರಣಾಮವನ್ನೂ ಅರ್ಪಿಸುತ್ತಿದ್ದೇನೆ’.

    ಬಂಗಾಳದ ಕ್ರಾಂತಿಕಾರಿ ಕವಿ ಕಾಜಿ ನಸರುಲ್ ಇಸ್ಲಾಂ ಶ್ರೀರಾಮಕೃಷ್ಣರನ್ನು: ‘ದೇವರನ್ನು ನೀವು ದೇವಾಲಯದಲ್ಲಿ ಪೂಜಿಸಿದಷ್ಟೇ ಪ್ರೇಮಭರದಿಂದ ರ್ಚಚಿನಲ್ಲೂ ಪೂಜಿಸಿದಿರಿ, ಮಸೀದಿಯಲ್ಲೂ ಪೂಜಿಸಿದಿರಿ. ಆ ಕಾರಣದಿಂದಲೇ ಇಡೀ ಜಗತ್ತು ನೀವು ಯಾವ ಪ್ರೇಮದ ಸ್ವರೂಪವಾಗಿದ್ದೀರೋ ಅದರಿಂದ ತುಂಬಿ ತುಳುಕುತ್ತಿದೆ. ಪೂಜ್ಯರೇ, ನಿಮ್ಮ ಶಿಷ್ಯ ಸ್ವಾಮಿ ವಿವೇಕಾನಂದರು ನವಭಾರತಕ್ಕೆ ನವವೇದವನ್ನು ತಂದರು. ಮಾನವನಲ್ಲಿ ಅಂತರ್ಗತವಾಗಿರುವ ದೇವತ್ವವನ್ನು ಮಾಳಿಗೆಯ ಮೇಲೆ ನಿಂತು ಸ್ಪಷ್ಟವಾಗಿ ಸಾರಿದ ಮೇಲೆ ಜಾತಿ, ಧರ್ಮ ಭೇದಗಳಿಂದ ಬಂದಿದ್ದ ಕಳಂಕವು ನಿಮೂಲನೆಗೊಂಡಿತು’ ಎಂದು ಹಾಡಿದ್ದಾರೆ.

    ರಾಷ್ಟ್ರಕವಿ ಕುವೆಂಪು, ‘ಭಗವಾನ್ ಶ್ರೀರಾಮಕೃಷ್ಣರ ದಿವ್ಯಸಂದೇಶಗಳ ಸಂಗ್ರಹವಾದ ವಚನವೇದ ಗ್ರಂಥವು ಕರತಲ ದೇವಸ್ಥಾನ, ಕರತಲ ತಪೋರಂಗ, ಕರತಲ ಪುಣ್ಯಕ್ಷೇತ್ರ, ಇದು ಇತರ ದೇವಾಲಯಗಳಂತೆ ಎಂದಿಗೂ ಕಲುಷಿತವಾಗುವುದಿಲ್ಲ, ಶಿಥಿಲವೂ ಆಗುವುದಿಲ್ಲ. ಈ ಸದ್ ಗ್ರಂಥವಿರುವ ಮನೆಯು ಮಂದಿರವಾಗುತ್ತದೆ, ಈ ಗ್ರಂಥವನ್ನು ಹಿಡಿದ ಕೈ ಭಗವಂತನ ಪಾದಾರವಿಂದವನ್ನೇ ಧರಿಸಿರುತ್ತದೆ. ಇದನ್ನು ಪಠಿಸುವ ಜಿಹ್ವೆಯು ಅಮೃತವನ್ನೇ ಈಂಟುತ್ತಿರುತ್ತದೆ. ಇದು ಆನಂದದ ಆಗರ, ಶಾಂತಿಯ ಸಾಗರ, ದಿವ್ಯಜ್ಞಾನದ ಓಗರ. ಕಷ್ಟದ ಸಮಯದಲ್ಲಿ ಧೈರ್ಯವೀಯುವ ಸಖ, ಸುಖದ ಸಮಯದಲ್ಲಿ ಸಮರ್ಪಣ ಭಾವವಿತ್ತು ವಿನಯ, ಭಕ್ತಿಗಳನ್ನು ಪ್ರಚೋದಿಸುವ ಗುರು; ಕತ್ತಲಲ್ಲಿ ದೀಪ; ದಾರಿಗೆ ಊರೆಗೋಲು. ದಿಕ್ಕುಗೆಡದಂತೆ ಗುರಿದೋರುವ ಧ್ರುವತಾರೆ. ಇಲ್ಲಿ ವೇದವೇದಾಂತ ದರ್ಶನಾದಿ ಸಾರವಿದೆ. ಓದು ಬರುವ ಅತ್ಯಂತ ಸಾಮಾನ್ಯನೂ ಇದನ್ನು ಓದಿದ ಮೇಲೆ ಯಾವ ಪಂಡಿತನಿಗೂ ಕರುಬುವ ಅವಶ್ಯಕತೆ ಇಲ್ಲ; ಯಾವ ವಿದ್ವತ್ಪೂರ್ಣ ತತ್ತ್ವಜ್ಞಾನಿಗೂ ಕೀಳೆಂದು ನಾಚಬೇಕಾಗಿಲ್ಲ. ಅದಕ್ಕೆ ಬದಲು ಭಗವಂತನ ಕೃಪೆಯಿಂದ ತನಗಿಂತಲೂ ಧನ್ಯರಿಲ್ಲ ಎಂದರಿತು ನಿರ್ಮಲನಾಗುತ್ತಾನೆ, ಶಾಂತನಾಗುತ್ತಾನೆ, ಪೂರ್ಣನಾಗುತ್ತಾನೆ. ಆತನಿಗೆ ಗಗನದ ವೈಶಾಲ್ಯ, ಹೈಮಾಚಲನ ಔನ್ನತ್ಯ, ಅಂಬುಧಿಯ ಗಂಭೀರ ಗಾಂಭೀರ್ಯ ಎಲ್ಲವೂ ಸಿದ್ಧಿಸುತ್ತದೆ. ಇಷ್ಟು ಸರ್ವಜನ ಸಾಮಾನ್ಯರೂಪದಲ್ಲಿ, ಇಷ್ಟು ಸರ್ವಸುಲಭರೂಪದಲ್ಲಿ ಭಗವಂತ ಎಂದಿಗೂ ಅವತರಿಸಿರಲಿಲ್ಲ; ಭಗವದ್​ವಾಣಿ ತಾನೆಂದೂ ಕೃತಿಗೊಂಡಿರಲಿಲ್ಲ’ ಎಂದಿದ್ದಾರೆ.

    ಮೂವರು ಮಹಾನುಭಾವರ ಅಂತರಂಗದಿಂದುದಿಸಿ ಹೊರಹೊಮ್ಮಿದ ಈ ಮಾತುಗಳನ್ನು ಅವಲೋಕಿಸಿದಾಗ ಭಗವಾನ್ ಶ್ರೀರಾಮಕೃಷ್ಣರ ದಿವ್ಯ ವ್ಯಕ್ತಿತ್ವದಲ್ಲಿದ್ದ ಭಕ್ತಸಂತನ, ವೇದಾಂತಿಯ, ವಿಜ್ಞಾನಿಯ, ದಾರ್ಶನಿಕನ ಅಷ್ಟೇ ಏಕೆ ವಿಶ್ವಮಾನವನ ಅದ್ಭುತ ಆಯಾಮಗಳು ಅನಾವರಣಗೊಳ್ಳುತ್ತವೆ. ತಮ್ಮ ಕೊಠಡಿಯಿಂದ ಬಹುತೇಕ ಹೊರಗೆ ಅಡ್ಡಾಡಲು ಬಯಸದ ಶ್ರೀರಾಮಕೃಷ್ಣರು ಜೀವಿಸಿದ್ದು ಕೇವಲ ಐವತ್ತು ವರ್ಷಗಳಷ್ಟೇ ಆದರೂ ಅವರ ನಿರ್ಯಾಣದ ನಂತರದ ಕೆಲವೇ ದಶಕಗಳಲ್ಲಿ ವಿಶ್ವದ ನೂರಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ತಮ್ಮ ಯುಗಧರ್ಮ ಸದೃಶವಾದ ಬೋಧನೆಗಳಿಂದ ಮನೆಮಾತಾದದ್ದು ಉತ್ಪ್ರೇಕ್ಷೆಯಲ್ಲ. ಕುವೆಂಪು ನಿರ್ಷRಸಿದಂತೆ, ‘ಸನಾತನವಾದ ನಿತ್ಯಜ್ಞಾನದ ಆಕರವೇ ವೇದ, ಅದು ದ್ರಷ್ಟಾರರ ಮೂಲಕ ಹರಿಯುವಂಥದ್ದು, ವೇದದ ಮಹಾಗ್ರಂಥಕ್ಕೆ ಕಾಲಕಾಲಕ್ಕೂ, ಯುಗಯುಗಕ್ಕೂ ಹೊಸಹೊಸ ಅಧ್ಯಾಯಗಳು, ಪ್ರಕರಣಗಳೂ ಸೇರುತ್ತಲೇ ಹೋಗುತ್ತವೆ. ಅವುಗಳಲ್ಲಿ ಆಧುನಿಕ ವಿಜ್ಞಾನ ಶಾಸ್ತ್ರಗಳಿಗೂ ಗೌರವಸ್ಥಾನವಿದೆ. ನಮ್ಮ ಅನುಭವಗಳು ವಿಸ್ತರಿಸಿದಂತೆಲ್ಲ, ಹೊಸ ಹೊಸ ಸಾಕ್ಷಾತ್ಕಾರಗಳು, ಸಿದ್ಧಿಗಳು ಮೈದೋರಿದಂತೆಲ್ಲ ವೇದವೂ ವಿಸ್ತರಣಗೊಳ್ಳುತ್ತದೆ’.

    ಶ್ರೀರಾಮಕೃಷ್ಣರ ಮಾತಾಪಿತೃಗಳು ಸಂತರಂತೆ ಬಾಳಿದವರು. ಅವರ ಒಡನಾಡಿಗಳು ಎಲ್ಲ ಮನೋಧರ್ಮದವರೂ ಇದ್ದರು. ಅವರೋ ನಿರಕ್ಷರಕುಕ್ಷಿ! ಅವರ ದೃಷ್ಟಿಯಲ್ಲಿ ಕೊಠಡಿಯಲ್ಲಿ ಪರಿಚಾರಿಕಿ ಬೃಂದೆ ಮತ್ತು ಷೋಡಶೀ ಪೂಜೆಗೆ ಒಳಪಟ್ಟ ಶ್ರೀಮಾತೆ ಶಾರದಾದೇವಿ, ಈರ್ವರೂ ಜಗನ್ಮಾತೆಯ ಸ್ವರೂಪ! ವಿಶ್ವವಿಖ್ಯಾತರು ಹಾಗೂ ಜಾಡಮಾಲಿ ರಸಿಕನೂ ಆತ್ಮಸ್ವರೂಪವೇ! ತಮ್ಮ ಬಳಿಗೆ ಬಂದ ಹದಿನಾರು ಯುವಕರನ್ನು ಹದಿನಾರು ವಿವಿಧ ಮಾರ್ಗಗಳಲ್ಲೇ ಸಾಧನಾನಿಷ್ಠರನ್ನಾಗಿಸಿದ ವಿಶೇಷತೆ, ಗೃಹಸ್ಥರಾದರೂ ಸಂನ್ಯಾಸಿಯೂ ನಿಬ್ಬೆರಗಾಗುವಂಥ ವೈರಾಗ್ಯಜೀವನ- ಇವೆಲ್ಲದರ ನಡುವೆ ಯಾವುದೇ ದ್ವಂದ್ವ, ವೈರುಧ್ಯ, ವಿಕೃತಿಗಳಿಗೆ ಎಡೆಮಾಡಿಕೊಡದ ಅವರ ಅದ್ಭುತ ಸರಳ ಜೀವನ! ಇವೆಲ್ಲವನ್ನೂ ಕಂಡಾಗ ಅವರೊಬ್ಬ ಮನಃಶಾಸ್ತ್ರಜ್ಞರೇ ಹೌದು ಎಂದೆನಿಸದಿರದು!

    ಶ್ರೀರಾಮಕೃಷ್ಣರು ಜಗತ್ತಿಗೆ ಅತ್ಯವಶ್ಯಕವಾದ ಹಾಗೂ ಅತ್ಯಮೂಲ್ಯವಾದ ಬೋಧನೆಯನ್ನಿತ್ತು ಸಾಮಾನ್ಯನಿಂದ ಹಿಡಿದು ವಿಶ್ವವಿಖ್ಯಾತರವರೆಗೂ ಸಾಧನಾತಂತುವನ್ನು ಜಾಗೃತಗೊಳಿಸಿದ್ದು ಅದ್ಭುತ. ಅವರ ದಿವ್ಯಸಂದೇಶಗಳನ್ನು ಲೋಕವ್ಯವಹಾರ, ಮನೋವ್ಯಾಪಾರ ಹಾಗೂ ಭಗವತ್ಸಾಕ್ಷಾತ್ಕಾರದ ಸ್ತರಗಳಲ್ಲಿ ಗುರುತಿಸಿ ಅವರೊಬ್ಬ ಅತ್ಯುತ್ಕೃಷ್ಟ ಮನಃಶಾಸ್ತ್ರಜ್ಞರೆಂದು ಅರಿಯಬಹುದಾಗಿದೆ.

    ಲೋಕ ವ್ಯವಹಾರ: ‘ಕಡುಬುಗಳಲ್ಲಿ ಹಾಲುಕೋವ ಅಥವಾ ಉದ್ದಿನ ಹೂರಣ ತುಂಬಿದ್ದರೂ ಹೊರನೋಟಕ್ಕೆ ಒಂದೇ ರೀತಿಯಲ್ಲಿ ಕಾಣುವಂತೆ ಮನುಷ್ಯರೂ ಹೊರನೋಟದಲ್ಲಿ ಒಂದೇ ವಿಧವಾಗಿ ಕಾಣುತ್ತಾರೆ. ಆದರೆ ಆಂತರ್ಯವೇ ಬೇರೆಯಾಗಿರುತ್ತದೆ… ವ್ಯಕ್ತಿಯ ನಡಿಗೆಯಲ್ಲೇ ಅವನ ಸ್ವಭಾವ ಒಳ್ಳೆಯದೋ, ಕೆಟ್ಟದ್ದೋ ಎಂಬ ಸೂಕ್ಷ್ಮ ಗೊತ್ತಾಗಿಬಿಡುತ್ತದೆ!’

    ‘ಜನರೊಂದಿಗೆ ಮಾತುಕತೆ ಆಡುವುದು, ಸ್ನೇಹ ಬೆಳೆಸುವುದು ಮತ್ತು ವ್ಯವಹರಿಸುವುದು ಅವಶ್ಯಕವೇ ಹೌದು. ಅದು ಫಲಿಸದಿದ್ದರೆ ವ್ಯಥೆ ಪಡಬೇಕಿಲ್ಲ. ಭಗವಂತನನ್ನು ಮರೆತು ಏನೆಲ್ಲ ಚಿಂತನೆಯನ್ನು ಮಾಡಿದರೂ ಅದರಿಂದ ಮನಸ್ಸು ಕೆಡುತ್ತದೆಯಾದ್ದರಿಂದ ಆತ್ಮಚಿಂತನೆಯಲ್ಲಿ ಮುಳುಗು’ ಎಂದಿದ್ದಾರೆ ಪರಮಹಂಸರು. ಮೇಲಿನ ಮಾತುಗಳಲ್ಲಿ ಅವರು ವ್ಯಕ್ತಿಯ, ಸಮಾಜದ ಜೊತೆ ವ್ಯವಹರಿಸುವಾಗ ಉಂಟಾಗುವ ಅನುಭವವನ್ನು ಅದರ ವಾಸ್ತವವನ್ನು ತೆರೆದಿಟ್ಟು ವಿವರಿಸಿದ್ದಾರೆ.

    ಮುಂದುವರಿದು ಹೇಳುತ್ತಾರೆ: ‘ಗೃಹಸ್ಥನು ಮನೆಯಲ್ಲಿ ಸಾಧು-ಸಂನ್ಯಾಸಿಗಳ ಪಟಗಳನ್ನಿಟ್ಟುಕೊಳ್ಳುವುದು ಯೋಗ್ಯವಾದದ್ದು. ಪ್ರಾತಃಕಾಲ ಹಾಸಿಗೆಯಿಂದ ಮೇಲೇಳುವಾಗ ಸಾಧು-ಸಂತರ ಪಟಗಳನ್ನು ನೋಡಿ ದಿನವನ್ನು ಪ್ರಾರಂಭಿಸುವುದು ಶ್ರೇಯಸ್ಕರ. ಮನೆಯ ಗೋಡೆಗಳ ಮೇಲೆ ಆಂಗ್ಲರ, ರಾಜರಾಣಿಯರ, ಧನಿಕರ, ಪ್ರಾಪಂಚಿಕ ದಂಪತಿಗಳ ಭಾವಚಿತ್ರಗಳನ್ನು ಇರಿಸಿದ್ದರೆ, ಅವುಗಳನ್ನು ನೋಡುವುದರಿಂದ ನಮ್ಮ ರಜೋಗುಣವು ವೃದ್ಧಿಯಾಗುತ್ತದೆ. ತ್ಯಾಗಿ ಸಂನ್ಯಾಸಿಗಳು ಕಣ್ಣಿಗೆ ಬಿದ್ದಾಗ ಸಂಸಾರಿಗಳೂ ತ್ಯಾಗದ ತತ್ತ್ವಆದರ್ಶಕ್ಕೆ ತಲೆಬಾಗಿ ಅನುಸರಿಸಲು ಯತ್ನಿಸುತ್ತಾರೆೆ. ಇಲ್ಲದಿದ್ದರೆ ಸಂಸಾರಿಗಳು ಇನ್ನೂ ಆಳಕ್ಕೆ ಮುಳುಗುತ್ತಾರೆ’.

    ‘ಭಗವದಭಿಮುಖ ಆದವರನ್ನು ಕಂಡು ವಿಷಯಾಸಕ್ತರು ನಿಂದಿಸುವುದು ಸತ್ಯ! ಭಗವಂತ ಎಲ್ಲರಲ್ಲೂ ಇದ್ದಾನೆ. ಆದ್ದರಿಂದ ಯಾರನ್ನೂ ನಿರ್ಲಕ್ಷಿಸುವಂತಿಲ್ಲ, ದ್ವೇಷಿಸುವಂತಿಲ್ಲ, ಕೆಟ್ಟವರಿಂದ ದೂರವಿರೋಣ, ಒಳ್ಳೆಯವರೊಡನೆ ಹೆಚ್ಚೆಚ್ಚು ಬೆರೆಯೋಣ. ಶಾಸ್ತ್ರದಲ್ಲಿ ‘ಆಪೋನಾರಾಯಣಃ’ ಎಂದು ಹೇಳಲಾಗಿದೆ. ಅಂದರೆ ನೀರು ಭಗವಂತನ ಒಂದು ರೂಪ. ಆದರೆ, ಕೆಲವು ನೀರು ಪೂಜೆಗೆ ಅರ್ಹ, ಕೆಲವು ಮುಖ ತೊಳೆಯಲು ಮತ್ತೆ ಕೆಲವು ಮುಸುರೆ ತೊಳೆಯಲು, ಮತ್ತೂ ಕೆಲವು ಬಟ್ಟೆ ಒಗೆಯಲು. ಆದರೆ ಇವುಗಳನ್ನು ಕುಡಿಯುವುದಕ್ಕಾಗಲಿ, ದೇವರ ಪೂಜೆಗಾಗಲಿ ಬಳಸುವಂತಿಲ್ಲ. ಅಂತೆಯೇ ಭಗವಂತ ಎಲ್ಲರ ಹೃದಯದಲ್ಲೂ ಇದ್ದಾನೆಂಬ ಸತ್ಯವನ್ನು ಗೌರವಿಸಿ ವ್ಯಕ್ತಿಗೆ ತಕ್ಕಂತೆ ನಮ್ಮ ವ್ಯವಹಾರದಲ್ಲಿ ಇತಿಮಿತಿ ನಿರ್ಧರಿಸಬೇಕು’ ಎಂದಿದ್ದಾರೆ.

    ‘ಭಕ್ತನು ಕಮ್ಮಾರನ ಅಡಿಗಲ್ಲಿನಂತೆ ಸ್ಥಿರವಾಗಿರುವುದನ್ನು ಅಭ್ಯಾಸ ಮಾಡಬೇಕು. ದೇವರು ಬೇಕೇಬೇಕೆಂಬ ಸತ್ಸಂಕಲ್ಪವಿದ್ದಾಗ ನಿಂದಕರ ಹಾಗೂ ತಿಳಿಗೇಡಿಗಳ ಮಾತುಗಳನ್ನು ಸಹಿಸಿಕೊಳ್ಳಲೇಬೇಕು. ದುಷ್ಟಮೃಗಗಳ ನಡುವೆಯೂ ಅರಣ್ಯದಲ್ಲಿ ತಪಸ್ಸಾಚರಿಸಿದ ಮುನಿಗಳೇ ನಮಗೆ ಮಾದರಿ, ಭರವಸೆ ಆಗಬೇಕು’ ಎಂದಿದ್ದಾರೆ ಶ್ರೀರಾಮಕೃಷ್ಣರು. ವಕೀಲನು ಹೇಳಬೇಕಾದುದನ್ನೆಲ್ಲ ತಿಳಿಸಿ ಕೊನೆಗೆ ನ್ಯಾಯಾಧೀಶರಿಗೆ, ‘ಮಹಾಸ್ವಾಮಿ, ಏನೇನು ಹೇಳಬೇಕೋ ಅದನ್ನೆಲ್ಲ ತಮ್ಮ ಗಮನಕ್ಕೆ ತಂದಿದ್ದೇನೆ, ಉಳಿದದ್ದು ತಮ್ಮ ಚಿತ್ತ’ ಎನ್ನುವಂತೆ ಸಾಧಕನೂ ಎಲ್ಲವೂ ಜಗನ್ಮಾತೆಯ ಕೃಪೆಯನ್ನು ಅವಲಂಬಿಸಿದೆ ಎಂದರಿತು ಶ್ರದ್ಧಾಪೂರ್ವಕವಾಗಿ ಸಾಧನೆಯಲ್ಲಿ ಮುಳುಗಬೇಕೆಂಬ ವಿವೇಚನೆ ನೀಡುತ್ತಾರೆ.

    ಮನೋವ್ಯಾಪಾರ: ಶ್ರೀರಾಮಕೃಷ್ಣರು, ‘ತಾಯಿ ಆದವಳು ಮಕ್ಕಳ ಜೀರ್ಣಶಕ್ತಿಗೆ ಅನುಸಾರವಾಗಿ ವಿವಿಧ ಆಹಾರಗಳನ್ನು ತಯಾರಿಸುವಂತೆ ಜಗನ್ಮಾತೆಯು ಅಧಿಕಾರಭೇದಕ್ಕೆ ಅನುಸಾರವಾಗಿ ವಿವಿಧ ಪೂಜಾವಿಧಾನಗಳನ್ನು ರೂಪಿಸಿದ್ದಾಳೆ’ ಎಂದಿದ್ದಾರೆ. ‘ಸಾಕಾರ ಮತ್ತು ನಿರಾಕಾರಗಳು ವಿರುದ್ಧ ಅವಸ್ಥೆಗಳೆಂದು ಹೊರನೋಟಕ್ಕೆ ಅನ್ನಿಸಿದರೂ, ಯಾವುದರಲ್ಲಿ ವಿಶ್ವಾಸವೋ ಅದರಲ್ಲಿ ದೃಢಭಕ್ತಿ ಇಡು’ ಎಂದು ಎಚ್ಚರಿಸಿದ್ದಾರೆ.

    ‘ತಂದೆಯ ಭಾವಚಿತ್ರ ತಂದೆಯನ್ನೇ ನೆನಪಿಗೆ ತರುವಂತೆ’ ಪ್ರತಿಮಾಪೂಜೆಯ ಉಪಾಸನೆಯಿಂದ ಸತ್ಯದರೂಪ ಉದ್ದೀಪನವಾಗುತ್ತದೆ. ವೈದ್ಯನ ಸಂಪರ್ಕದಿಂದಷ್ಟೇ ನಮಗೆ ಕಫದನಾಡಿ, ಪಿತ್ತದನಾಡಿಗಳ ಪರಿಚಯ ಆಗುವುದು. ಅಂತೆಯೇ ಯಾವುದೇ ಸಾಧನಾಜೀವನಕ್ಕೂ ಸಿದ್ಧರಿಲ್ಲದ ಸಾಮಾನ್ಯರು ದೇವರನ್ನು ತೋರಿಸಿ ಎಂದು ಹಪಹಪಿಸಿದರೂ ಮಹಾತ್ಮರು ಏಕಾಏಕಿ ತೋರಿಸಲಾರರು!’ ಎಂದಿದ್ದಾರೆ.

    ‘ಕೈಯಲ್ಲಿ ಹಣವಿದ್ದರಷ್ಟೇ ಯಾರೂ ದೊಡ್ಡವರಾಗುವುದಿಲ್ಲ, ಮನುಷ್ಯ ಚತುರನಾದರಷ್ಟೇ ಸಾಲದು, ಕಾಗೆ ಬುದ್ಧಿವಂತ ಪಕ್ಷಿಯೇ ಆದರೂ ಪರರ ಹೇಸಿಗೆ ತಿನ್ನುತ್ತದೆ’ ಎಂದು ಕಿವಿಮಾತು ಹೇಳಿದ್ದಾರೆ. ‘ಸ್ವಮತಭ್ರಾಂತಿ ಒಳ್ಳೆಯದಲ್ಲ. ದೇಶಕಾಲ ಪಾತ್ರಕ್ಕೆ ತಕ್ಕಂತೆ ಭಗವಂತನು ನಾನಾಧರ್ಮಗಳನ್ನು ವ್ಯವಸ್ಥೆ ಮಾಡಿದ್ದಾನೆ. ಎಲ್ಲ ಮತಗಳೂ ಪಥಗಳೇ; ಆದರೆ ಮತಗಳೇ ಭಗವಂತನಲ್ಲ’ ಎಂದು ಎಚ್ಚರಿಸಿದ್ದಾರೆ.

    ದೈವಸಾಕ್ಷಾತ್ಕಾರ: ‘ಭಗವಂತ ನಮ್ಮ ಅಂತರ್ಯಾಮಿ ಎಂದರಿತು ಅಧಿಕ ಉತ್ಸಾಹದಲ್ಲಿ ಸಾಧನೆಯಲ್ಲಿ ತೊಡಗಬೇಕು. ಭಗವಂತನ ನಾಮಬೀಜದಲ್ಲಿ ಬಹಳ ಶಕ್ತಿ ಇದೆ. ಬೀಜವೂ ಮೃದು, ಮೊಳಕೆಯೂ ಮೃದು. ಆದರೂ ಗಟ್ಟಿ ನೆಲವನ್ನು ಭೇದಿಸಿ ಅದು ಮೊಳಕೆಗೆ ದಾರಿ ಮಾಡಿಕೊಡುತ್ತದೆ. ಅಂತೆಯೇ ಭಗವನ್ನಾಮ ನಮ್ಮ ಅವಿದ್ಯೆಯನ್ನು ನಾಶಮಾಡಿಬಿಡುತ್ತದೆ’.

    ‘ತ್ರಿಗುಣಾತೀತನಾದ ಭಗವಂತನ ಮಾಯೆಯಲ್ಲಿ ತಮಸ್ಸು ಮನುಷ್ಯನನ್ನು ನಾಶಮಾಡುತ್ತದೆ, ರಜಸ್ಸು ಸಂಸಾರದ ಬಂಧನಕ್ಕೆ ಸಿಲುಕಿಸುತ್ತದೆ; ಆದರೆ ಸತ್ತ್ವಗುಣವು ಭಗವಂತನ ಕಡೆಗೆ ಸಾಗಲು ಅವಶ್ಯವಾದ ಮಾರ್ಗವನ್ನು ತೋರುತ್ತದೆಯೇ ಹೊರತು ಭಗವಂತನ ಸಮೀಪಕ್ಕೆ ಕೊಂಡೊಯ್ಯದು’ ಎಂದಿದ್ದಾರೆ.

    ಶ್ರೀರಾಮಕೃಷ್ಣರು ಹೇಳುವಂತೆ- ‘ಭಗವತ್ಸಾಕ್ಷಾತ್ಕಾರಕ್ಕೆ ಭಕ್ತಿ ಹಾಗೂ ಜ್ಞಾನಗಳೆರಡೂ ಮಾರ್ಗಗಳೆನಿಸುತ್ತವೆ. ಕಲಿಯುಗದಲ್ಲಿ ಭಕ್ತಿ ಹಾಗೂ ಜ್ಞಾನಗಳೆರಡೂ ಮಾರ್ಗಗಳೆನಿಸುತ್ತವೆ. ಕಲಿಯುಗದಲ್ಲಿ ಅನ್ನಗತಪ್ರಾಣವಾದ್ದರಿಂದ ದೇಹಾತ್ಮ ಬುದ್ಧಿ, ಅಹಂಬುದ್ಧಿ ಹೋಗದಿರುವುದರಿಂದ ನಾರದೀಯ ಭಕ್ತಿಮಾರ್ಗ ಈ ಯುಗಧರ್ಮವಾಗಿದೆ. ತಂದೆ, ತಾತ, ಮುತ್ತಾತಂದಿರ ಕಾಲದಿಂದಲೂ ವ್ಯವಸಾಯವನ್ನೇ ಮಾಡುತ್ತ ಬಂದ ಕುಟುಂಬದ ಪ್ರಸ್ತುತ ವ್ಯಕ್ತಿ ಅನಾವೃಷ್ಟಿಗೆ ಅಂಜದೆ, ಕೃಷಿಕಾರ್ಯವನ್ನು ಮತ್ತಷ್ಟು ಶ್ರದ್ಧೆಯಿಂದ ಮುಂದುವರಿಸುವಂತೆ ಸಾಧಕನೂ ಕ್ರಿಯಾಶೀಲನಾಗಬೇಕು. ಭಗವತ್ಸಾಕ್ಷಾತ್ಕಾರಕ್ಕಾಗಿ ನಿಜವಾಗಿ ವ್ಯಾಕುಲಿಸುವ ವ್ಯಕ್ತಿಯ ಮನಸ್ಸಿನಲ್ಲಿ ಸಾಧನಾ ಸಮಯದಲ್ಲಿ ಒಂದೊಮ್ಮೆ ನಾಸ್ತಿಕ ಭಾವನೆಗಳು ಹೊಕ್ಕರೂ ಆತ ಭಗವಚ್ಚಿಂತನೆ ಮಾಡುವುದನ್ನು ಬಿಡುವುದಿಲ್ಲ’ ಎಂದು ಮೇಲಿನ ಉದಾಹರಣೆಯೊಂದಿಗೆ ಭರವಸೆ ತುಂಬಿದ್ದಾರೆ.

    ‘ಜ್ಞಾನ ದೊರೆತರೆ ಮುಕ್ತಿ. ಜ್ಞಾನಿಯು ಎಲ್ಲೇ ಸತ್ತರೂ, ಹೆಣದ ಗುಂಡಿಯಲ್ಲಾಗಲಿ, ಗಂಗೆಯಲ್ಲಾಗಲೀ ಅಥವಾ ಮತ್ತೆಲ್ಲಿಯಾಗಲಿ ಸತ್ತರೂ ಮುಕ್ತಿ ದೊರಕುತ್ತದೆ, ಆದರೆ ಅಜ್ಞಾನಿಗೆ ಗಂಗಾದಡವಷ್ಟೇ ಗತಿ’ ಎಂಬ ಒಳದೃಷ್ಟಿ ಬಿತ್ತಿದ್ದಾರೆ.

    ‘ಕಲಿಯುಗದಲ್ಲಿ ಸತ್ಯವಚನವೇ ತಪಸ್ಸು’ ಎಂದಿರುವ ಶ್ರೀರಾಮಕೃಷ್ಣರು ‘ವಕ್ರಬುದ್ಧಿಯವರಿಗೆ, ಸಂಶಯಾತ್ಮರಿಗೆ, ಸರಳತೆ ಇಲ್ಲದವರಿಗೆ ಮತ್ತು ಅತಿಯಾದ ಬಾಹ್ಯಶುದ್ಧಿಗೆ ತವಕಿಸುವವರಿಗೆ ಜ್ಞಾನವು ದೊರೆಯದು’ ಎಂದು ಹೇಳಿದ್ದಾರೆ.

    ‘ವೇದಾಧ್ಯಯನ, ಆತ್ಮಚಿಂತನೆಯಿಂದ ಮುಕ್ತಿ ಪಡೆಯಲು ಕೆಲವರಿಗೆ ಸಾಧ್ಯವಾಗಬಹುದಾದರೆ ಭಕ್ತಿಮಾರ್ಗದಿಂದ ಸಾಧನೆಗೈದು ಭಗವತ್ಸಾಕ್ಷಾತ್ಕಾರ ಪಡೆದ ಶಬರಿ, ವಿದುರ, ರೂಹಿದಾಸ-ಇವರೇ ಮೊದಲಾದವರು ಭಗವಂತನ ಲೀಲಾವತರಣದಲ್ಲಿ ಹಾಸುಹೊಕ್ಕಾಗಿದ್ದಾರೆ’ ಎಂದ ಶ್ರೀರಾಮಕೃಷ್ಣರು ಮಾನವರೆಲ್ಲರೂ ಭಗವತ್ಸಾಕ್ಷಾತ್ಕಾರಕ್ಕೆ ಅರ್ಹರೆಂದು ಸಾರಿದ್ದಾರೆ.

    ‘ಯಾರು ರಾಮನಾಗಿದ್ದನೋ, ಯಾರು ಕೃಷ್ಣನಾಗಿದ್ದನೋ, ಅವನೇ ಶ್ರೀರಾಮಕೃಷ್ಣನಾಗಿ ಅವತರಿಸಿದ್ದಾನೆ’ ಎಂಬ ಶ್ರೀರಾಮಕೃಷ್ಣರ ಮಾತು, ‘ಸರ್ವಧರ್ಮಸ್ಥಾಪಕರು, ಸರ್ವಧರ್ಮಸ್ವರೂಪಕರು. ಆಚಾರ್ಯರಲ್ಲಿ ಮಹಾಚಾರ್ಯರು’ ಎಂಬ ಸ್ವಾಮಿ ವಿವೇಕಾನಂದರ ಮಾತುಗಳು ನಮ್ಮಲ್ಲಿನ ಭಕ್ತಿ, ಶ್ರದ್ಧೆ, ಭರವಸೆಗಳನ್ನು ನೂರ್ಮಡಿಗೊಳಿಸಲಿ, ಸಾಧನಾಪಥದಲ್ಲಿ ನಮ್ಮನ್ನು ಮುನ್ನಡೆಸಲೆಂದು ಪ್ರಾರ್ಥಿಸುತ್ತ, ‘ಕಲಿಯುಗದಲ್ಲಿ ಸಂಶಯರಾಕ್ಷಸನನ್ನು ನಾಶಗೈದವ’ ಎಂದು ಸ್ತುತಿಸಲ್ಪಟ್ಟ ಶ್ರೀರಾಮಕೃಷ್ಣರೆಂಬ ಮನಃಶಾಸ್ತ್ರಜ್ಞನ ಮನೋರಂಗಕ್ಕೆ ಪ್ರವೇಶಿಸಲು ಅರ್ಹರಾಗೋಣ.

    (ಲೇಖಕರು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts