More

    ಸಿಎಎ ರೀತಿ ಪ್ರತಿಭಟನೆ ಊಹಿಸಿದ್ದರೇ ಅಂಬೇಡ್ಕರ್!

    ಇತ್ತೀಚೆಗೆ ಸಿಎಎ ವಿರುದ್ಧ ನಡೆದ ಪ್ರತಿಭಟನೆಗಳು ಹುದುಗಿದ್ದ ಅನೇಕ ಸತ್ಯಗಳನ್ನು ಬೆಳಕಿಗೆ ತಂದಿವೆ. ಶಾಂತವಾಗಿ ಕಂಡ ಜ್ವಾಲಾಮುಖಿ ಲಾವಾ ಉಗುಳಿ ಎಲ್ಲವನ್ನೂ ಆಪೋಶನ ತೆಗೆದುಕೊಳ್ಳಲು ಸಿದ್ಧವಾಗಿರುತ್ತದೆ ಎಂಬ ಸತ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಡಿಜಿಟಲ್ ಯುಗದಲ್ಲೂ ಸುಳ್ಳು ಹೇಳಿ ಜನರನ್ನು ತಪ್ಪುದಾರಿಗೆ ಎಳೆಯುವುದು ಕಷ್ಟವಲ್ಲ ಎಂಬುದಂತೂ ಸಾಮಾಜಿಕ ಜಾಲತಾಣಗಳ ನಿಜವಾದ ರೀಚ್ ಎಷ್ಟೆಂಬುದಕ್ಕೆ ಸಾಕ್ಷಿಯಾಗಿ ನಿಂತಿದೆ!

    ಆದರೆ ಒಂದಂತೂ ಸತ್ಯ. ಪ್ರತಿಬಾರಿ ಇಂತಹ ಘಟನೆಗಳಾದಾಗಲೂ ಅಂಬೇಡ್ಕರರ ದೂರದರ್ಶಿತ್ವದ ಕುರಿತಂತೆ, ಪರಿಸ್ಥಿತಿಯ ಗ್ರಹಿಕೆಗಳ ಕುರಿತಂತೆ ನಿಚ್ಚಳವಾದ ಪುರಾವೆ ದೊರೆಯುತ್ತದೆ. ನಿಸ್ಸಂಶಯವಾಗಿ ಭಾರತದ ಸಾಮಾಜಿಕ ಸ್ಥಿತಿಗತಿಗಳ ವಿಚಾರವಾಗಿ ಅವರೊಬ್ಬ ದೃಷ್ಟಾರರೇ ಸರಿ.

    ಸಿಎಎ ರೀತಿ ಪ್ರತಿಭಟನೆ ಊಹಿಸಿದ್ದರೇ ಅಂಬೇಡ್ಕರ್!ಇರಲಿ. ಈಗ ವಿಷಯಕ್ಕೆ ಬರುತ್ತೇನೆ. ಸ್ವಾತಂತ್ರ್ಯದ ಹೊಸ್ತಿಲಲ್ಲಿ ಮುಸಲ್ಮಾನರು ಪಾಕಿಸ್ತಾನದ ಬೇಡಿಕೆ ಮುಂದಿಟ್ಟಾಗ ಸಾವರ್ಕರ್ ಆದಿಯಾಗಿ ಅನೇಕರು ಅದನ್ನು ವಿರೋಧಿಸಿದ್ದರು. ಕೆಲವರು ರಾಷ್ಟ್ರ ವಿಭಜನೆಯಾದರೆ ಒಳಿತೆಂದು ಅಭಿಪ್ರಾಯಪಟ್ಟರು. ಆದರೆ ಈ ವಿಭಜನೆ ಏಕೆ ಅತ್ಯಗತ್ಯ ಎಂಬುದನ್ನು ತಾತ್ವಿಕ ನೆಲೆಗಟ್ಟಿನ ಆಧಾರದ ಮೇಲೆ ರ್ಚಚಿಸಿ ಅದಕ್ಕೆ ಮುಸಲ್ಮಾನರ ಮಾನಸಿಕ ಸ್ಥಿತಿಯ ಪುರಾವೆ ಕೊಟ್ಟು, ಜಾಗತಿಕ ವಿದ್ಯಮಾನಗಳನ್ನೆಲ್ಲ ಒರೆಗೆ ಹಚ್ಚಿ ಸಾಬೀತು ಪಡಿಸಿದವರು ಬಹುಶಃ ಅಂಬೇಡ್ಕರರು ಮಾತ್ರ! ಈ ಹಿನ್ನೆಲೆಯ ಅವರ Thoughts on Pakistan ನಿಜಕ್ಕೂ ಓದಲೇಬೇಕಾದ ಕೃತಿ. ಇದು ಆರಂಭವಾಗೋದೇ ಮುಸ್ಲಿಂ ಲೀಗ್​ನ ಬೇಡಿಕೆಗಳ ಪಟ್ಟಿಯಿಂದ. ಪುಸ್ತಕದ ಮೊದಲ ಸಾಲೇನು ಗೊತ್ತೇ? ‘1940ನೇ ಮಾರ್ಚ್ 26ರಂದು ಭಾರತದ ಹಿಂದೂಗಳು ತಾವು ಹಿಂದೆಂದೂ ಬೆದರದಷ್ಟು ಕಳವಳಿಸಿ ಎಚ್ಚೆತ್ತರು’ ಮತ್ತು ಹೀಗೆ ದಿಗ್ಭ›ಮೆಗೊಂಡು ಹಿಂದೂಗಳು ಜಾಗೃತರಾದದ್ದೇಕೆಂದರೆ ಮುಸಲ್ಮಾನರೇ ಬಹುಸಂಖ್ಯಾತರಾಗಿರುವ ಕ್ಷೇತ್ರಗಳನ್ನು ಸ್ವತಂತ್ರ ರಾಜ್ಯಗಳಾಗಿ ಪರಿವರ್ತಿಸಬೇಕೆಂದು ಮುಸ್ಲಿಂ ಲೀಗ್ ಅಂದು ಲಾಹೋರಿನಲ್ಲಿ ನಿರ್ಣಯ ಕೈಗೊಂಡಿತ್ತು. ಪ್ರತ್ಯೇಕ ಶಿಕ್ಷಣ ಸಂಸ್ಥೆಯ ಕಲ್ಪನೆಯಿಂದ ಆರಂಭವಾದ ಮುಸಲ್ಮಾನರ ಒಗ್ಗೂಡುವಿಕೆ ಪ್ರತ್ಯೇಕ ರಾಷ್ಟ್ರದವರೆಗೂ ಬಂದು ನಿಂತಿತ್ತು. ಇದೇ ಹಾದಿಯಲ್ಲಿ ಢಾಕಾದ ನವಾಬ್ ಸಲೀಮುಲ್ಲಾ ಖಾನ್ ಪ್ರೇರಣೆಯಿಂದ ನಿರ್ವಣಗೊಂಡ ಮುಸ್ಲೀಂ ಲೀಗ್ ಈ ವೇಳೆಗಾಗಲೇ ಸಮಸ್ತ ದೇಶದ ಮುಸಲ್ಮಾನರ ಪ್ರತಿನಿಧಿಯಾಗಿ ಬೆಳೆದು ನಿಂತಿತ್ತು. ಅದರರ್ಥ, ಮುಸ್ಲೀಂ ಲೀಗ್​ನ ಬೇಡಿಕೆ ರಾಷ್ಟ್ರದ ಮುಸ್ಲಿಮರ ಬೇಡಿಕೆಯಾಗಿ ಗಣಿಸಲ್ಪಡುತ್ತದೆ ಅಂತ! ಹಾಗಂತ ಇದು ಮೊದಲ ಬಾರಿಗೆ ಹುಟ್ಟಿಕೊಂಡ ಕಲ್ಪನೆಯಾಗಿರಲಿಲ್ಲ. 1930ರ ಲಕ್ನೋ ಅಧಿವೇಶನದಲ್ಲಿಯೇ ಪಾಕಿಸ್ತಾನದ ಮೊದಲ ಬೀಜ ಬಿತ್ತಲಾಗಿತ್ತು.

    ಹಾಗೆ ನೋಡಿದರೆ ದ್ವಿರಾಷ್ಟ್ರ ಸಿದ್ಧಾಂತದ ಮೊದಲ ಪ್ರಯೋಗ 1905ರ ಬಂಗಾಳ ವಿಭಜನೆಯೊಂದಿಗೆ ಆಗಿತ್ತು. ಹಿಂದೂ-ಮುಸಲ್ಮಾನರ ನಡುವೆ ಉರಿಯುತ್ತಿರುವ ಬೆಂಕಿಗೆ ತುಪ್ಪ ಹಾಕಿ ತಮ್ಮ ಅಧಿಕಾರವನ್ನು ಕಾಯಂಗೊಳಿಸಿಕೊಳ್ಳುವ ಆಕಾಂಕ್ಷೆ ಬ್ರಿಟೀಷರಿಗೆ ಇದ್ದೇ ಇತ್ತು. ಆದರೆ ಹಿಂದೂಗಳು ಬಲವಾಗಿ ನಿಂತಿದ್ದರಿಂದ ಈ ವಿಭಜನೆಯ ಗದ್ದಲ ತೀವ್ರಗೊಂಡು ಆರೇ ವರ್ಷಗಳಲ್ಲಿ ರದ್ದಾಗಿ ಬ್ರಿಟೀಷರು ತೀವ್ರ ಮುಖಭಂಗ ಅನುಭವಿಸಬೇಕಾಯ್ತು. ಈ ಘಟನೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದ ಅಂಬೇಡ್ಕರರು ಹಿಂದೂಗಳ ಮೇಲ್ಮೆಗೆ ಕಾರಣವನ್ನು ‘ತಮ್ಮತನ ತೋರಿಸಿಕೊಳ್ಳಲಾರದಷ್ಟು ಮುಸಲ್ಮಾನರು ದುರ್ಬಲರಾಗಿದ್ದುದು’ ಎಂದು ಊಹಿಸುತ್ತಾರೆ. ಒಂದು ವೇಳೆ ಆಗಲೇ ಅವರು ಬಲಾಢ್ಯವಾಗಿಬಿಟ್ಟಿದ್ದಿದ್ದರೆ, ‘ಮುಸಲ್ಮಾನ ರಾಷ್ಟ್ರವು ಹೊಸ ಯೋಜನೆಯಾಗುವುದರ ಬದಲು ಇಷ್ಟು ಹೊತ್ತಿಗೆ 39 ವರ್ಷ ಹಳೆಯದಾಗಿರುತ್ತಿತ್ತು’ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ವಿಚಾರವನ್ನು ಹೇಗೆ ಸ್ವೀಕರಿಸಬೇಕೆಂಬುದು ಓದುಗರಿಗೆ ಬಿಟ್ಟಿದ್ದು. ‘ತಮ್ಮತನ ತೋರಿಸಿಕೊಳ್ಳಲಾಗದ ಮುಸಲ್ಮಾನರು’ ಎಂಬುದರ ಅರ್ಥ ಅದೆಷ್ಟು ವಿಸ್ತಾರವಾದುದೆಂಬುದನ್ನು ಅರಿತುಕೊಳ್ಳುವುದು ಕಷ್ಟವಲ್ಲ. ಕೊನೆಯಪಕ್ಷ ಇತ್ತೀಚೆಗೆ ಸಿಎಎ ಪ್ರತಿಭಟನೆಯಲ್ಲಿ ಭಾಗವಹಿಸಿದ ದಂಗೆಕೋರರನ್ನು ನೋಡಿದ ನಂತರವಾದರೂ! ಅಂಬೇಡ್ಕರರೂ ಇದನ್ನು ಒಪ್ಪುತ್ತಾರೆ. ಇದೇ ಕೃತಿಯಲ್ಲಿ, ‘ಪಾಕಿಸ್ತಾನಕ್ಕೆ ಹಿಂದೂ ಪರ್ಯಾಯ’ ಎಂಬ ಅಧ್ಯಾಯದಲ್ಲಿ ಮುಸಲ್ಮಾನರ ಬರ್ಬರತೆಯ ಅನೇಕ ಕಥನಗಳನ್ನು ಕಟ್ಟಿಕೊಡುತ್ತಾರೆ. ಅದಕ್ಕೆ ಹಿಂದೂ ಪ್ರತಿರೋಧದ ವಿವರವನ್ನು ದಾಖಲಿಸುತ್ತಾರೆ. ಮತ್ತು ಕೊನೆಗೊಮ್ಮೆ, ಎರಡೂ ಕಡೆಯವರ ನಡುವೆ ಎಲ್ಲಾ ವಿಧದ ಕೊಲೆ, ಲೂಟಿ, ಅತ್ಯಾಚಾರ ಮತ್ತು ಅತಿಕ್ರಮಣಗಳು ಸಂಭವಿಸುತ್ತಿದ್ದು ಈ ಕೃತ್ಯಗಳನ್ನು ಹಿಂದೂಗಳು ಮುಸಲ್ಮಾನರ ವಿರುದ್ಧ ಮತ್ತು ಮುಸಲ್ಮಾನರು ಹಿಂದೂಗಳ ವಿರುದ್ಧ ಅದರಲ್ಲಿಯೂ ಮುಸಲ್ಮಾನರು ಹಿಂದೂಗಳ ವಿರುದ್ಧ ಹೆಚ್ಚು ಅವ್ಯಾಹತವಾಗಿ ಎಸಗಿದರು ಎಂದು ತಮ್ಮ ಅಭಿಪ್ರಾಯ ದಾಖಲಿಸುತ್ತಾರೆ. ಮುಸಲ್ಮಾನರು ಹಿಂದೂ ಮನೆಗಳಿಗೆ ಬೆಂಕಿ ಇಟ್ಟಾಗ ಅವುಗಳಲ್ಲಿ ಸ್ತ್ರೀಯರು, ಪುರುಷರು ಮತ್ತು ಮಕ್ಕಳು ಸುಟ್ಟು ಬೂದಿಯಾದರು ಎಂದೂ ಬಾಬಾ ಸಾಹೇಬರು ಬರೆಯುತ್ತಾರೆ. ಈ ಒಟ್ಟಾರೆ ಪ್ರಕರಣಗಳಲ್ಲಿ ಅವ್ಯಾಹತವಾಗಿ ಪಾಲ್ಗೊಂಡವರು ಮುಸಲ್ಮಾನರೇ ಎಂಬುದನ್ನು ಒತ್ತಿ ಹೇಳಲು ಹಿಂಜರಿಯದ ಅಂಬೇಡ್ಕರರು ಯುದ್ಧನಿರತ ಎರಡು ಗುಂಪುಗಳ ನಡುವಿನ ಕೃತ್ಯಗಳಂತೆ ಕಾಣುತ್ತಿದ್ದವು ಎಂದೂ ಭಯಾನಕ ಸತ್ಯವೊಂದನ್ನು ತೆರೆದಿಡುತ್ತಾರೆ.

    ಇತಿಹಾಸದ ಪುಟದ ಘಟನೆಗಳನ್ನು ಬಿಟ್ಟುಬಿಡಿ. ಇತ್ತೀಚೆಗೆ ಸಿಎಎ ವಿರುದ್ಧದ ಪ್ರತಿಭಟನೆಗೆ ಧುಮುಕಿದ ಕೆಲವರು ಕೈಗೆತ್ತಿಕೊಂಡಿದ್ದು ಕಲ್ಲು. ಕೆಲವೆಡೆ ಪೆಟ್ರೊಲ್ ಬಾಂಬುಗಳು ಎಸೆಯಲ್ಪಟ್ಟವು. ಪೊಲೀಸರ ಮೇಲೆ, ವ್ಯವಸ್ಥೆಯ ವಿರುದ್ಧ ಕೊನೆಗೆ ಹಿಂದೂ ಅಂಗಡಿ, ಮನೆಗಳ ಮೇಲೂ ಕಲ್ಲು ತೂರಲ್ಪಟ್ಟವು. ಸ್ವಲ್ಪ ಪೊಲೀಸರು ನಾಲ್ಕು ಲಾಠಿ ಬೀಸುವುದನ್ನು ತಡ ಮಾಡಿದ್ದರೆ ಅಂಬೇಡ್ಕರರು ಹೇಳಿದ ಕಥನಗಳಷ್ಟೂ ಮರುನಿರ್ವಣಗೊಂಡಿರುತ್ತಿದ್ದವು. ಹೀಗೇಕೆ? ಎಂದರೆ ಹಿಂದೂಗಳಾದ ನಾವು ಆಮ್​ದಿ್ಮ ಪಾರ್ಟಿಯತ್ತ, ಕಾಂಗ್ರೆಸ್ಸಿನತ್ತ ಕೈ ತೋರಿಸಿ ಸುಮ್ಮನಾಗಿಬಿಡುತ್ತೇವೆ. ಅವರು ತಪ್ಪು ಮಾಹಿತಿ ಕೊಟ್ಟು ಭಡಕಾಯಿಸಿಬಿಟ್ಟರು ಎನ್ನುತ್ತೇವೆ. ಸ್ವಾತಂತ್ರ್ಯಪೂರ್ವ ಕಾಲದಲ್ಲೂ ಬ್ರಿಟೀಷರು ಮುಸಲ್ಮಾನರನ್ನು ದಾರಿ ತಪ್ಪಿಸಿದರೆಂದು ಗಾಂಧಿವಾದಿಗಳು ಇಂದಿಗೂ ನಂಬಿಸುತ್ತಾರೆ. ಇರಲಿ, ದಾರಿ ತಪ್ಪಿಸುವವರು ಯಾವ ಕಾಲಘಟ್ಟದಲ್ಲಿಯೂ ಇದ್ದೇ ಇರುತ್ತಾರೆ. ಆದರೆ ದಾರಿ ತಪ್ಪುವವರಿಗೆ ಬುದ್ಧಿ ಬೇಡವೇ? ಏಕೆ ಹಿಂದೂಗಳು ಅಷ್ಟು ಸಲೀಸಾಗಿ ದಾರಿ ತಪ್ಪುವುದಿಲ್ಲ? ಬೌದ್ಧ-ಜೈನರದೇಕೆ ಭಡಕಾಯಿಸಲ್ಪಡುವುದಿಲ್ಲ? ಅಂಬೇಡ್ಕರರು ಅದಕ್ಕೂ ಉತ್ತರ ನೀಡುತ್ತಾರೆ. ‘ಸಾಮಾಜಿಕ ಜಡತೆ’ ಎಂಬ ಅಧ್ಯಾಯದಲ್ಲಿ ‘ಮುಸಲ್ಮಾನರ ಪ್ರಧಾನ ಶಕ್ತಿ ಕೇವಲ ಧಾರ್ವಿುಕವಾದುದು. ಮುಸ್ಲಿಂ ಚುನಾವಣಾ ಮೀಸಲು ಕ್ಷೇತ್ರದಲ್ಲಿ ಆರಿಸಿ ಬರಲು ಬಯಸುವ ಅಭ್ಯರ್ಥಿಯನ್ನು ಬೆಂಬಲಿಸಲು ಅವರು ಹಾಕುವ ನಿಬಂಧನೆಗಳಿಂದ ಇದು ಗೋಚರವಾಗುತ್ತದೆ’ ಎನ್ನುತ್ತಾರೆ. ಆಗೆಲ್ಲ ಮುಸಲ್ಮಾನರಿಗೆ ಪ್ರತ್ಯೇಕ ಮೀಸಲು ಕ್ಷೇತ್ರಗಳಿದ್ದು ಅಲ್ಲಿ ಅವರು ಬಯಸುವುದು ಅಭ್ಯರ್ಥಿಯ ಸ್ವಂತ ಖರ್ಚಿನಿಂದ ಮಸೀದಿಗೆ ಹೊಸ ದೀಪಗಳೋ, ಹರಿದ ನೆಲಹಾಸು ಬದಲಾವಣೆಯೋ, ಜೀರ್ಣಾವಸ್ಥೆಯ ಮಸೀದಿ ರಿಪೇರಿಯೋ ಮಾತ್ರವಷ್ಟೇ. ಪುಷ್ಕಳವಾದ ಔತಣಕೂಟ ಏರ್ಪಡಿಸಿದರೂ ಸಾಕು ಅವರು ಮತ ಹಾಕಿಬಿಡುತ್ತಾರೆ ಎಂದು ಸೇರಿಸಲು ಅಂಬೇಡ್ಕರರು ಮರೆಯುವುದಿಲ್ಲ.

    ‘ಮುಸ್ಲಿಮರಿಗೆ ಚುನಾವಣೆ ಎಂದರೆ ಅದು ಕೇವಲ ಹಣಕ್ಕೆ ಸಂಬಂಧಿಸಿದ ವಿಷಯ, ಕೆಲವೊಮ್ಮೆ ಅಪರೂಪಕ್ಕೆ ಸಾಮಾಜಿಕ ಕಾರ್ಯಕ್ರಮ ಎನಿಸಿಕೊಳ್ಳಬಹುದು ಅಷ್ಟೇ. ಮುಸ್ಲಿಂ ರಾಜಕೀಯ ಎಂದೂ ಜೀವನದ ನೈಜ ವ್ಯಾವಹಾರಿಕ ಸಮಸ್ಯೆಗಳನ್ನು ಉದಾಹರಣೆಗೆ ಬಡವ-ಬಲ್ಲಿದ, ಬಂಡವಾಳಶಾಹಿ-ಕಾರ್ವಿುಕ, ಆಸ್ತಿವಂತ-ಜೀತಗಾರ, ಪಂಡಿತ-ಪಾಮರ, ವೈಚಾರಿಕತೆ-ಕಂದಾಚಾರ ಇವುಗಳ ನಡುವಣ ವ್ಯತ್ಯಾಸವನ್ನು ಪರಿಗಣಿಸಿಲ್ಲ’ ಎಂದು ದೃಢದನಿಯಲ್ಲಿ ದಾಖಲಿಸುವ ಅಂಬೇಡ್ಕರರು ‘ಮುಸ್ಲಿಂ ರಾಜಕೀಯ ಕೇವಲ ಗುಮಾಸ್ತ ಬುದ್ಧಿಯದು’ ಎಂದುಬಿಡುತ್ತಾರೆ. ಸ್ವಾತಂತ್ರ್ಯಪೂರ್ವದಿಂದಲೇ ಮುಸಲ್ಮಾನರು ಹೀಗೆ ಉನ್ನತ ಆದರ್ಶಗಳತ್ತ ದೃಷ್ಟಿ ನೆಡದೆ ಜಡತ್ವಕ್ಕೆ ತುತ್ತಾದುದರಿಂದ ಯಾರು ಬೇಕಾದರೂ ಅವರನ್ನು ಬಳಸಿಕೊಂಡುಬಿಡಬಹುದೆಂಬ ನಿಷ್ಕರ್ಷೆಗೆ ಬರಬಹುದು. ಕೊನೆಯ ಪಕ್ಷ ಶಿಕ್ಷಿತ ಮುಸಲ್ಮಾನರಾದರೂ ಈ ದಿಕ್ಕಿನಲ್ಲಿ ತಮ್ಮ ಸಮಾಜವನ್ನು ಕೊಂಡೊಯ್ಯಬಲ್ಲರೆಂಬ ಆಸೆ ಈ ಬಾರಿಯ ಪ್ರತಿಭಟನೆಯ ವೇಳೆಗೆ ಕಮರಿಹೋಯ್ತು. ಅವರಿಗೂ ಅಂಬೇಡ್ಕರರು ಹೇಳುವಂತೆ ಒಂದು ಭ್ರಮೆ ಆವರಿಸಿದೆ. ‘ಇಸ್ಲಾಂ ಒಂದು ವಿಶ್ವಧರ್ಮ. ಇದು ಎಲ್ಲ ಜನರಿಗೆ, ಎಲ್ಲ ಕಾಲಕ್ಕೂ, ಎಲ್ಲ ಪರಿಸ್ಥಿತಿಯಲ್ಲೂ ಹೊಂದಿಕೊಳ್ಳುವಂಥದ್ದು ಎಂಬ ಮೂಲಭೂತ ಭ್ರಮೆ’. ಇದು ಎಲ್ಲ ಮುಸ್ಲಿಮರಲ್ಲೂ ಬೇರುಬಿಟ್ಟಿದೆ ಎನ್ನುತ್ತಾರೆ ಅವರು. ಈ ಕಾರಣದಿಂದಾಗಿಯೇ ಸಭ್ಯ ಸಮಾಜವೊಂದಕ್ಕೆ ಇಸ್ಲಾಂನ್ನು ಅಪ್ಪಿಕೊಳ್ಳುವುದು ಯಾವಾಗಲೂ ಸಂತೋಷವನ್ನೀಯಲಾರದು. ಹಾಗೆ ಒತ್ತಾಯಕ್ಕೆ ಸಿಕ್ಕು ಅಪ್ಪಿಕೊಂಡರೂ ಬರು-ಬರುತ್ತ ಆ ಸಮಾಜ ಕ್ರೌರ್ಯದ ಪ್ರತಿಬಿಂಬವಾಗುತ್ತದೆ. ಅಫ್ಘಾನಿಸ್ತಾನ ಇತಿಹಾಸದ ಪುಟಗಳಲ್ಲಿ ಪ್ರೇಮಮೂರ್ತಿ ಬುದ್ಧನ ಅನುಯಾಯಿಗಳಿಂದಲೇ ತುಂಬಿಹೋಗಿತ್ತಲ್ಲವೇ? ಇಸ್ಲಾಂ ಆಗಮನದ ನಂತರ ಅದು ಅತ್ಯಂತ ಕ್ರೂರಿ ಭಯೋತ್ಪಾದಕರ ನೆಲೆವೀಡಾಗಿ ಪರಿವರ್ತನೆಯಾಗಿಬಿಟ್ಟಿತ್ತಲ್ಲ, ಹಿಂದೂಸ್ತಾನವೂ ಹೀಗೆಯೇ ಬಾಗಿಬಿಟ್ಟಿದ್ದರೆ ಇಂದು ಏಷ್ಯಾ ಧಗಧಗನೆ ಹೊತ್ತಿ ಉರಿದು ಹೋಗಿರುತ್ತಿತ್ತು! ‘ಒಂದು ಧರ್ಮವಾಗಿ ಇಸ್ಲಾಂ ತನ್ನದೇ ಆದ ರಮ್ಯತೆಯನ್ನು ಹೊಂದಿದೆ. ಆದರೆ ಮಾನವತಾವಾದದ ದೃಷ್ಟಿಯಿಂದ ಯಾವಾಗಲೂ ಇದು ಅತ್ಯಂತ ಹಾನಿಕಾರಿ; ಬೆಳಕಿನ ಕಿರಣಗಳನ್ನು ದರ್ಶಿಸಲಾಗದಂತೆ ಇದು ಬುದ್ಧಿಯ ಅಂತಃಚಕ್ಷುಗಳನ್ನು ಮುಚ್ಚಿಬಿಟ್ಟಿದೆ. ಮುಕ್ತ ಆಲೋಚನೆಗೆ ತೀರ ವಿಧ್ವಂಸಕವಾಗಿಯಲ್ಲದಿದ್ದರೂ ಇತರ ಧರ್ಮಗಳಿಗಿಂತ ಸಾಕಷ್ಟು ಪರಿಣಾಮಕಾರಿಯಾಗಿ ಮಾರಕವಾಗಿದೆ’ ಎಂಬ ಅಂಬೇಡ್ಕರರು ಸಂಕಲಿಸಿದ ರೇನಾನ್​ರ ಮಾತುಗಳು ಇಂದಿನ ಮುಸ್ಲಿಂ ಸ್ಥಿತಿಗತಿಗಳಿಗೆ ಹಿಡಿದ ಕೈಗನ್ನಡಿ. ಭವಿಷ್ಯದ ದಿನಗಳನ್ನು ಅವರು ತಮ್ಮ ದೂರದರ್ಶಿತ್ವದಿಂದ ಗುರುತಿಸುವಲ್ಲಿ ಯಶಸ್ವಿಯಾಗಿದ್ದರೂ ಅರ್ಥೈಸಿಕೊಳ್ಳುವಲ್ಲಿ ನಾವು ಸೋತಿದ್ದೇವಷ್ಟೇ.

    ಹಾಗಂತ ಅವರು ಏಕಪಕ್ಷೀಯವಾಗಿ ಮುಸಲ್ಮಾನರನ್ನೇ ದೂಷಿಸುವುದಿಲ್ಲ. ಹಿಂದೂಗಳಿಂದಾವೃತವಾದ ಮುಸಲ್ಮಾನ ಸದಾ ಆತಂಕದಲ್ಲಿಯೇ ಇದ್ದಾನೆ. ಹೀಗಾಗಿಯೇ ಆತ ತನ್ನನ್ನು ತಾನು ರಕ್ಷಿಸಿಕೊಳ್ಳುವ ಧಾವಂತದಲ್ಲಿ ಇಂತಹ ಎಡವಟ್ಟುಗಳನ್ನು ಮಾಡಿಕೊಳ್ಳುತ್ತಿದ್ದಾನೆಂಬ ಸಂಗತಿಯನ್ನು ಮುನ್ನೆಲೆಗೆ ತರುತ್ತಾರೆ. ‘ಹಿಂದೂ ಪರಿಸರ ಮೌನವಾಗಿದ್ದುಕೊಂಡೇ ಅವನ ಮೇಲೆ ಯಾವಾಗಲೂ ಖಚಿತವಾದ ಆಕ್ರಮಣ ನಡೆಸುತ್ತ ಬಂದಿದೆ. ಇದು ತನ್ನ ಮುಸಲ್ಮಾನೀಯತೆಯನ್ನು ಶಿಥಿಲಗೊಳಿಸುವ ಸಂಚು ಎಂದು ಅವನ ಭಾವನೆ’ ಎನ್ನಲು ಮರೆಯುವುದಿಲ್ಲ ಅವರು. ಅವರ ಈ ಮಾತಿನಲ್ಲಿ ಮುಸಲ್ಮಾನನಿಗಿರಬಹುದಾದ ತಪ್ಪು ಕಲ್ಪನೆಯಿದು ಎಂಬ ಧ್ವನಿಯಂತೂ ಖಂಡಿತ ಇದೆ. ಏಕೆಂದರೆ ಉಳಿದೆಲ್ಲ ಕಡೆ ಹೇಳಬೇಕಾದ್ದನ್ನು ಪ್ರಖರವಾಗಿ ಹೇಳುವ ಬಾಬಾಸಾಹೇಬರು ಇಲ್ಲಿ ಮಾತ್ರ ‘ಅದು ಅವನ ಭಾವನೆ’ ಎನ್ನುತ್ತಾರೆಂದರೆ ಅದಕ್ಕೆ ಖಂಡಿತ ವಿಶೇಷ ಅರ್ಥವೇ ಇರಬೇಕು. ಏಕೆಂದರೆ ಗಾಂಧಿಯಂಥವರು ಹಿಂದೂ-ಮುಸಲ್ಮಾನ ಏಕತೆಗಾಗಿ ಕಾಂಗ್ರೆಸ್ ಅಧಿವೇಶನಗಳಲ್ಲಿ ಸಾಮೂಹಿಕವಾಗಿ ‘ಅಲ್ಲಾ ಹೋ ಅಕ್ಬರ್’ ಘೊಷಣೆ ಮಾಡಬೇಕೆಂದು ಕೇಳಿಕೊಂಡಾಗ ಹಿಂದೂಗಳು ಅದನ್ನು ಮರುಮಾತಾಡದೇ ಒಪ್ಪಿಕೊಂಡರು. ಕೇರಳದಲ್ಲಿ ದಂಗೆಗಳಾದಾಗ ಮುಸಲ್ಮಾನರು ಲೆಕ್ಕವಿಲ್ಲದಷ್ಟು ಅತ್ಯಾಚಾರವನ್ನು ಮಾಡಿದಾಗಲೂ ಅದನ್ನು ಕಾಂಗ್ರೆಸ್ಸು ಅವಗಣನೆ ಮಾಡಿತು. ಹಿಂದೂ-ಮುಸ್ಲಿಂ ಏಕತೆಗಾಗಿ ಇದನ್ನೂ ಸಹಿಸಿದರು ಹಿಂದೂಗಳು. ಇವೆಲ್ಲವನ್ನೂ ವಿಸõತವಾಗಿ ದಾಖಲಿಸುವ ಅಂಬೇಡ್ಕರರಿಗೆ ಹಿಂದೂಗಳ ತ್ಯಾಗದ ಪರಿಮಾಣ ಅರ್ಥವಾಗಿರಲು ಸಾಕು. ಹಾಗೆಂದೇ ಅವರು ‘ಮುಸಲ್ಮಾನ, ಈ ಬಗೆಯ ನಿಧಾನ ಶಿಥಿಲತೆಯ ವಿರುದ್ಧ ರಕ್ಷಣೆ ಪಡೆಯಲು ಇಸ್ಲಾಮೀಯವೆನಿಸಿದ್ದನ್ನೆಲ್ಲ ಅದು ತನ್ನ ಸಮಾಜಕ್ಕೆ ಅಗತ್ಯವಿರಲಿ ಬಿಡಲಿ, ಪೂರ್ವಾಪರ ವಿವೇಚನೆ ಮಾಡದೇ ಸಂರಕ್ಷಿಸಿಕೊಳ್ಳಲು ಮುಂದಾಗುತ್ತಿದ್ದಾನೆ’ ಎನ್ನುತ್ತಾರೆ.

    ಮೊನ್ನಿನ ಸಿಎಎ ಪ್ರತಿಭಟನೆಗಳಿಗೆ ಮರಳುವುದಾದರೆ ಅಲ್ಲಿ ನಾಗರಿಕತೆ ಕಸಿಯುವ ಅಂಶವೇ ಇರಲಿಲ್ಲ. ಪಕ್ಕದ ರಾಷ್ಟ್ರಗಳಲ್ಲಿ ಧಾರ್ವಿುಕ ಅಸಹಿಷ್ಣುತೆಗೆ ಒಳಗಾದವರಿಗೆ ಪೌರತ್ವ ಕೊಡುವ ಮಾತಾಗಿತ್ತು ಅಷ್ಟೇ. ಅನವಶ್ಯಕವಾಗಿ ಅದನ್ನು ತನ್ನ ವಿರೋಧಿ ಎಂದು ಭಾವಿಸಿದ ಸಮಾಜ ಪ್ರತಿಭಟನೆಗಿಳಿಯಿತು. ತಾವು ಬೆಂಕಿ ಹಚ್ಚುತ್ತಿರುವುದು ತಮ್ಮದೇ ದೇಶದ ಆಸ್ತಿ ಎಂದೆನಿಸಲೇ ಇಲ್ಲ ಅವರಿಗೆ. ಅಂಬೇಡ್ಕರರು ಈ ಕುರಿತಂತೆ ‘ಮುಸ್ಲಿಮರಿಗೆ ಪ್ರಜಾಪ್ರಭುತ್ವ ಪರಿಗಣನಾರ್ಹ ಅಂಶವಲ್ಲ. ಬಹುಸಂಖ್ಯಾತರ ಈ ಪ್ರಜಾಪ್ರಭುತ್ವ ಸರ್ಕಾರ ಹಿಂದೂಗಳ ವಿರುದ್ಧದ ಹೋರಾಟದಲ್ಲಿ ಮುಸ್ಲಿಮರನ್ನು ಎಷ್ಟರಮಟ್ಟಿಗೆ ಪ್ರಭಾವಿಸುತ್ತದೆ ಎಂಬುದಷ್ಟೇ ಅವರಿಗೆ ಬೇಕಾದ್ದು. ಅದು ಅವರ ಬಲವನ್ನು ಸಂವರ್ಧಿಸುತ್ತದೆಯೋ ಇಲ್ಲ ದುರ್ಬಲಗೊಳಿಸುತ್ತದೆಯೋ ಎಂಬುದಷ್ಟೇ ಅವರಿಗೆ ಮುಖ್ಯ. ಅದು ಅವರನ್ನು ದುರ್ಬಲಗೊಳಿಸುವುದೇ ಆದರೆ ಅಂಥ ಪ್ರಜಾಪ್ರಭುತ್ವ ಅವರಿಗೆ ಬೇಕಾಗಿಲ್ಲ’ ಎಂದು ಕಟುವಾಗಿ ನುಡಿಯುತ್ತಾರೆ. ಬಹುಶಃ ಮುಸಲ್ಮಾನರಿಗೆ ಕಾಂಗ್ರೆಸ್ಸಿನ ಮೇಲೇಕೆ ಈ ಪರಿ ಪ್ರೀತಿ ಎಂಬುದು ಈಗ ಅರ್ಥವಾದೀತು. ಆದರೆ ಈ ರೀತಿಯ ಧೋರಣೆ ಎಲ್ಲಿಯವರೆಗೆ ಮುಂದುವರಿದೀತು? ‘ಹಿಂದೂಗಳು ಮತ್ತು ಮುಸ್ಲಿಮರು ಏಕ ಸಂವಿಧಾನದಡಿಯಲ್ಲಿ ಒಂದೇ ರಾಷ್ಟ್ರದ ಪ್ರಜೆಗಳಾಗಿ ಬಾಳುವವರೆಗೆ ಖಂಡಿತವಾಗಿ ಈ ವಿಪತ್ತು ಇದ್ದೇ ಇರುತ್ತದೆ’ ಎಂದರು ಅಂಬೇಡ್ಕರರು! ಅದರರ್ಥ ಇಬ್ಬರೂ ಒಟ್ಟಿಗೆ ಬಾಳುವುದು ಸಾಧ್ಯವೇ ಇಲ್ಲ. ಆ ಕಾರಣಕ್ಕಾಗಿ ಪಾಕಿಸ್ತಾನ ಆಗಲೇಬೇಕು ಎಂದು ಅವರು ತಮ್ಮ ವಿಚಾರವನ್ನು ಮಂಡಿಸಿದ್ದರು. ಅಷ್ಟೇ ಅಲ್ಲ, ಹೀಗೆ ಪ್ರತ್ಯೇಕ ರಾಷ್ಟ್ರ ನಿರ್ವಣಗೊಂಡಾಗ ಜನಸಂಖ್ಯೆಯ ವರ್ಗಾವಣೆಯಿಂದ ಮಾತ್ರ ಹಿಂದೂಸ್ತಾನವನ್ನು ಏಕರೂಪಿ ಅಥವಾ ಸಮರೂಪಿ ರಾಷ್ಟ್ರವನ್ನಾಗಿಸಲು ಸಾಧ್ಯ. ಇದು ಆಗುವವರೆಗೂ ಪಾಕಿಸ್ತಾನದ ರಚನೆಯಾದರೂ ಬಹುಸಂಖ್ಯಾತರು, ಅಲ್ಪಸಂಖ್ಯಾತರು ಎಂಬ ಸಮಸ್ಯೆ ಮುಂಚಿನಂತೆಯೇ ಉಳಿದು ಹಿಂದೂಸ್ತಾನದ ರಾಜಕೀಯದಲ್ಲಿ ಘರ್ಷಣೆಯನ್ನುಂಟುಮಾಡುತ್ತದೆ ಎಂಬ ಎಚ್ಚರಿಕೆಯನ್ನು ಕೊಟ್ಟಿದ್ದರು.

    ಪೂರ್ಣ ವರ್ಗಾವಣೆ ಮಾಡುವಲ್ಲಿ ನಾವು ಸೋತೆವು. ಪಾಕಿಸ್ತಾನವನ್ನು ನಂಬಿದೆವು. ಅಲ್ಲಿನ ಹಿಂದೂಗಳು ಶೋಷಣೆಗೆ ಒಳಗಾಗಿ ಓಡಿಬಂದರು. ಇಲ್ಲಿನ ಕೆಲ ಮುಸಲ್ಮಾನರು ಪಾಕಿಸ್ತಾನವನ್ನೇ ಬೆಂಬಲಿಸಿ ನಮ್ಮೂರಿನ ಬಸ್ಸು-ರೈಲುಗಳಿಗೆ ಬೆಂಕಿ ಹಚ್ಚಿದರು! ಅಂಬೇಡ್ಕರರಂತಹ ದೃಷ್ಟಾರರ ಮಾತು ಕೇಳದಿದ್ದುದರ ಪರಿಣಾಮ ಅದು!

    (ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts