More

    ಧರ್ಮದರ್ಶನ ಅಂಕಣ: ಗುರುಹಿರಿಯರ ಆಶೀರ್ವಾದವೇ ದೊಡ್ಡ ಶ್ರೀರಕ್ಷೆ…

    ಎಲ್ಲರೂ ಸ್ವರ್ಗಕ್ಕೆ ಹೋಗಬೇಕೆಂದು ಬಯಸುತ್ತಾರೆ. ಯಾಕೆಂದರೆ ಅಲ್ಲಿ ಎಲ್ಲ ವಿಧವಾದ ಸುಖಸಂತೋಷ ಸಿಗುತ್ತದೆ. ಸತ್ತನಂತರ ಸ್ವರ್ಗಕ್ಕೋ ನರಕಕ್ಕೋ ಎಂಬುದಕ್ಕಿಂತ ಬದುಕಿರುವಾಗಲೇ ಸ್ವರ್ಗವನ್ನು ನೋಡಬೇಕೆಂದರೆ ಧರ್ಮಮಾರ್ಗದಿಂದ ಜೀವನ ನಡೆಸಬೇಕು. ಸಮಾಜಕ್ಕೆ ಉಪಕಾರಕವಾದ ವ್ಯವಹಾರ ನಮ್ಮದಾಗಬೇಕು.

    ಧರ್ಮದರ್ಶನ ಅಂಕಣ: ಗುರುಹಿರಿಯರ ಆಶೀರ್ವಾದವೇ ದೊಡ್ಡ ಶ್ರೀರಕ್ಷೆ...ಪ್ರಪಂಚ ವೇಗವಾಗಿ ಬೆಳೆಯುತ್ತಿದೆ. ದೇಶ 50 ವರ್ಷದ ಹಿಂದೆ ಹೇಗಿತ್ತು ಮತ್ತು ಇಂದು ಹೇಗಿದೆ ಎಂಬುದನ್ನು ಅವಲೋಕಿಸಿದರೆ ಈ ಬೆಳವಣಿಗೆಯ ವೇಗ ಅರ್ಥವಾಗುತ್ತದೆ. ಈಗಿನ ತಲೆಮಾರಿನ ಜನರು ಬಹಳ ಪುಣ್ಯವಂತರೆಂದೇ ಹೇಳಬೇಕು. ಯಾಕೆಂದರೆ ಹಿಂದಿನ ಕಾಲದಲ್ಲಿ ಈಗಿನ ಹಾಗೆ ವ್ಯವಸ್ಥೆಗಳಿರಲಿಲ್ಲ. ಕಷ್ಟಗಳೂ ಅಧಿಕ. ಪರಿಶ್ರಮ ಹೆಚ್ಚಿಗೆ ಬೇಕಾಗುತ್ತಿತ್ತು. ಓಡಾಟಕ್ಕೆ ವಾಹನಸೌಕರ್ಯಗಳಿರಲಿಲ್ಲ. ಕೃಷಿಕೆಲಸಗಳಲ್ಲಿ ಯಂತ್ರೋಪಕರಣಗಳಿರಲಿಲ್ಲ. ಈಗಿನ ತಲೆಮಾರಿನವರಿಗೆ ಸುಖವನ್ನು ಅನುಭವಿಸಲು ಬೇಕಾದ ಎಲ್ಲ ಬಾಹ್ಯವ್ಯವಸ್ಥೆಯೂ ಇದೆ. ಹಿಂದಿನವರ ಬದುಕು ಕಷ್ಟದ ಮೂಟೆಯಾಗಿದ್ದರೂ ಆ ಬದುಕನ್ನೇ ಸಂತೋಷದಿಂದ ಅನುಭವಿಸಿದರು. ಜೊತೆಗೆ ದೇವರು-ಧರ್ಮದಲ್ಲಿ ಶ್ರದ್ಧೆ ಇರಿಸಿಕೊಂಡು ಸುಂದರವಾದ ಬದುಕನ್ನು ಬಾಳಿದರು. ಹಳ್ಳಿಜೀವನ, ಗುಡಿಸಲಿನಲ್ಲಿ ವಾಸ, ಚಳಿ-ಮಳೆಗೆ ಮೈಯೊಡ್ಡಿ ದುಡಿಯುವುದು, ಬೆಳೆದ ಬೆಳೆಗೆ ಸರಿಯಾದ ಮಾರುಕಟ್ಟೆ ಇರಲಿಲ್ಲ. ಒಳ್ಳೆಯ ಬೆಲೆ ಇರಲಿಲ್ಲ. ಮನೆಯಲ್ಲಿ ಸಂಪತ್ತು ಸಮೃದ್ಧವಾಗಿರಲಿಲ್ಲ. ಆದರೂ ಜೀವನದಲ್ಲಿ ಬ್ರಹ್ಮಾನಂದವನ್ನು ಅನುಭವಿಸಿದ್ದರು. ಯಾಕೆಂದರೆ ಅವರಲ್ಲಿ ಅಷ್ಟೇ ಮಾಹಿತಿ ಇತ್ತು, ಸುಖದ ಕಲ್ಪನೆ ಇತ್ತು. ತೃಪ್ತಿ ಎಂಬುದು ಹೇರಳವಾಗಿತ್ತು.

    ತೃಪ್ತಿ ಮತ್ತು ಸಂತೃಪ್ತಿ ಎಂಬೆರಡು ಶಬ್ದಗಳಿವೆ. ನಮಗೆ ಎಷ್ಟು ಸಂಪತ್ತು ಬಂದರೂ ತೃಪ್ತಿಯಾಗುವುದಿಲ್ಲ. ಇನ್ನಷ್ಟು ಬೇಕು ಮತ್ತಷ್ಟು ಬೇಕು ಎಂಬ ಬಯಕೆಯೇ ಅಸಂತೃಪ್ತಿ ಉಂಟುಮಾಡುತ್ತದೆ. ಈ ಕುರಿತು ನಮ್ಮ ಜಿಲ್ಲೆಯಲ್ಲಿ ಒಂದು ಮಾತಿದೆ. ಯಾರೋ ಒಬ್ಬರು ದೊಡ್ಡ ಹಡಗನ್ನು ತುಂಬಿಸುವುದಕ್ಕೆ ಹೋಗಿದ್ದರಂತೆ. ಆ ಹಡಗಿನಲ್ಲಿ ಐದಾರು ಸಾವಿರ ಟನ್​ಗಳಷ್ಟು ಅಂದರೆ ಸುಮಾರು ಐನೂರು ಲಾರಿಯಷ್ಟು ವಸ್ತುಗಳನ್ನು ತುಂಬಿಸಬಹುದಿತ್ತು. ಅಂತಹ ದೊಡ್ಡ ಹಡಗನ್ನಾದರೂ ತುಂಬಿಸಬಹುದಂತೆ. ಆದರೆ ಮನುಷ್ಯರ ಈ ಸಣ್ಣಹೊಟ್ಟೆಯನ್ನು ತುಂಬಿಸುವುದು ಮತ್ತು ಅದರಿಂದ ತೃಪ್ತಿಪಡುವುದು ಸಾಧ್ಯವಿಲ್ಲವಂತೆ. ಹಾಗಾಗಿ ‘ಹಡಗು ತುಂಬಿಸಿಕೊಳ್ಳಲು ಹೋದವನು ಹಿಂದೆ ತಿರುಗಿಬಂದನಂತೆ. ಹೊಟ್ಟೆ ತುಂಬಿಸಿಕೊಳ್ಳಲು ಹೋದವನು ಇನ್ನೂ ಬರಲಿಲ್ಲ’ ಎಂಬ ಮಾತಿದೆ.

    ನಾವಿವತ್ತು ಒಳ್ಳೆಯ ಸುಭಿಕ್ಷೆಯ ಕಾಲದಲ್ಲಿದ್ದೇವೆ. ಮಕ್ಕಳಿಗೆ ಶಿಕ್ಷಣ ಕೊಡಿಸುವುದಕ್ಕೆ ಸರ್ಕಾರ ಸಹಾಯ ಮಾಡುತ್ತದೆ. ಸರ್ಕಾರಿ ಶಾಲೆಗಳಲ್ಲಿ ಎಲ್ಲವೂ ಉಚಿತವಾಗಿ ದೊರಕುತ್ತದೆ. ಮೊದಲು ಒಂದು ತಾಲೂಕಿಗೆ ಒಂದು ಶಾಲೆಯೂ ಇರಲಿಲ್ಲ. ಇಂದು ಪ್ರತಿ ಪಂಚಾಯಿತಿ ಹಂತದಲ್ಲಿ ಒಂದೊಂದು ಶಾಲೆಗಳಿವೆ. ಎಲ್ಲ ವ್ಯವಸ್ಥೆಗಳು ನಮ್ಮ ಒಳಿತಿಗಾಗಿ ರೂಪಿಸಲ್ಪಟ್ಟದ್ದಾದರೂ ಅದು ಅರ್ಥಪೂರ್ಣವಾಗಬೇಕೆಂದರೆ ಮಾನವಜೀವನದ ಮೂಲಭೂತವಾದ ಧರ್ಮವನ್ನು ಮರೆಯಬಾರದು.

    ತೃಪ್ತಿ ಎಂಬುದು ಮನಸ್ಸಿನ ಭಾವನೆಯಲ್ಲಿರುತ್ತದೆ. ಕೆಲವರಿಗೆ ಎಷ್ಟು ಸಂಪಾದನೆ ಮಾಡಿದರೂ ತೃಪ್ತಿ ಇರುವುದಿಲ್ಲ. ಬೇರೆ ಯಾವುದರಿಂದಲೂ ಮನುಷ್ಯನನ್ನು ತೃಪ್ತಿಗೊಳಿಸಲಾಗದಿದ್ದರೂ ತಾತ್ಕಾಲಿಕವಾಗಿ ದಾಸೋಹದಿಂದ ಒಮ್ಮೆ ಅವನನ್ನು ತೃಪ್ತಿಗೊಳಿಸಬಹುದು. ಆದ್ದರಿಂದ ಎಲ್ಲ ಧಾರ್ವಿುಕಕ್ಷೇತ್ರಗಳಲ್ಲಿ ದಾಸೋಹವನ್ನು ನಡೆಸುತ್ತಾರೆ. ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಪ್ರತಿದಿನ ಸಾವಿರಾರು ಭಕ್ತರು ಅನ್ನಪೂರ್ಣದಲ್ಲಿ ಪ್ರಸಾದ ಸ್ವೀಕರಿಸುತ್ತಾರೆ. ಅಂತೆಯೇ ಬೇರೆಬೇರೆ ಧರ್ಮಕ್ಷೇತ್ರಗಳಲ್ಲೂ ದಾಸೋಹ ನಡೆಯುತ್ತದೆ. ಇದು ಧರ್ಮಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದಲೂ ಉತ್ತಮವಾದ ಮಾರ್ಗವಾಗಿದೆ. ಬೇರೆ ದಾನದಿಂದ ಮನುಷ್ಯನನ್ನು ತೃಪ್ತಿಪಡಿಸುವುದು ಕಷ್ಟಕರ. ಉದಾಹರಣೆಗೆ-ನಾವು ಚಿನ್ನವನ್ನು ಕೊಟ್ಟರೆ ‘ಇನ್ನಷ್ಟು ಕೊಡಬಹುದಿತ್ತು’ ಎನ್ನುತ್ತಾರೆ. ಹಣ ಕೊಟ್ಟರೆ ‘ಇನ್ನೊಂದಿಷ್ಟು ಕೊಡುವ ಸಾಮರ್ಥ್ಯ ಅವರಿಗಿತ್ತು, ಕೊಡಬಹುದಿತ್ತು’ ಎನ್ನುತ್ತಾರೆ. ಹೀಗೆ ಏನು ಕೊಟ್ಟರೂ ಮನುಷ್ಯ ತೃಪ್ತಿ ಹೊಂದುವುದಿಲ್ಲ. ಯಾಕೆಂದರೆ ಅವನಲ್ಲಿ ಇನ್ನಷ್ಟು ಬೇಕೆಂಬ ಭಾವನೆ ಜಾಗೃತವಾಗಿಯೇ ಇದ್ದುಬಿಡುತ್ತದೆ. ಆದರೆ ಒಮ್ಮೆ ಊಟಹಾಕಿದರೆ ಬೇಕಷ್ಟು ಸ್ವೀಕರಿಸುತ್ತಾರೆ. ಹೊಟ್ಟೆತುಂಬಿದ ತಕ್ಷಣ ‘ಸಾಕು’ ಎಂಬ ಭಾವ ಉಂಟಾಗುತ್ತದೆ. ಅದಕ್ಕಾಗಿಯೇ ನಮ್ಮ ಪೂರ್ವಜರು ದಾಸೋಹಕ್ಕೆ ವಿಶೇಷ ಮಹತ್ವ ನೀಡಿದ್ದಾರೆ. ಸಂಪತ್ತಿನಿಂದ ಯಾರನ್ನೂ ತೃಪ್ತಿಪಡಿಸಲು ಸಾಧ್ಯವಿಲ್ಲವೆಂಬ ಉದಾಹರಣೆಯನ್ನು ಅನೇಕ ಪುರಾಣಗಳು ತಿಳಿಸುತ್ತವೆ.

    ಒಬ್ಬ ರಾಜ ಸಾಧುವನ್ನು ತನ್ನ ಅರಮನೆಗೆ ಕರೆದುಕೊಂಡು ಬಂದು ತನ್ನೆಲ್ಲ ವೈಭೋಗಗಳನ್ನು ತೋರಿಸಿ, ‘ನನ್ನ ಅರಮನೆಯನ್ನು ನೋಡಿ, ನನ್ನ ಮನೆಯ ಕಲ್ಲಿನ ಕೆತ್ತನೆಯ ಕಂಬಗಳನ್ನು ನೋಡಿ’ ಎಂದು ವಿವರಿಸಿದ. ರಾಜ ಎಷ್ಟು ಉತ್ಸಾಹದಿಂದ ತನ್ನ ಸಂಪತ್ತನ್ನು ವೈಭವೀಕರಿಸಿ ಹೇಳಿದರೂ ಗುರುಗಳು ಅಂತಹ ಮಹತ್ವ ನೀಡಲಿಲ್ಲ. ಆಗ ರಾಜ-‘ಪೂಜ್ಯರೇ! ಇಷ್ಟೆಲ್ಲ ವಿವರಿಸಿ ಹೇಳಿದರೂ ಅನಾಸಕ್ತಿ ತೋರಿದಿರಿ. ಯಾಕೆ?’ ಎಂದು ಪ್ರಶ್ನಿಸಿದ. ಗುರುಗಳು, ‘ನೀನು ಹಳ್ಳಿಮನೆಯಲ್ಲಿರುವ ರುಬ್ಬುವ ಕಲ್ಲನ್ನು ನೋಡಿದ್ದೀಯಾ?’ ಎಂದು ಕೇಳಿದರು. ರಾಜನಿಗೆ ಅರ್ಥವಾಗಲಿಲ್ಲ. ‘ಅದು ನೀನು ತೋರಿಸಿದ ಈ ವಜ್ರದ ಹರಳಿಗಿಂತಲೂ ಬೆಲೆಬಾಳುವಂಥದ್ದು ಮತ್ತು ಬಹಳ ಮುಖ್ಯವಾದದ್ದು’ ಎಂದರು.

    ‘ಅದು ಹೇಗೆ ಗುರುಗಳೇ! ಅರಮನೆಯಲ್ಲಿ ಇಲ್ಲದ ಬೆಲೆಯ ಆ ಕಲ್ಲು ಹಳ್ಳಿಯ ಒಬ್ಬ ರೈತನಲ್ಲಿ ಹೇಗೆ ಇರಲು ಸಾಧ್ಯ?’ ಎಂದು ಪ್ರಶ್ನಿಸಿದ. ರಾಜ ರುಬ್ಬುವ ಕಲ್ಲನ್ನು, ಬೀಸುವ ಕಲ್ಲನ್ನು ನೋಡಿಯೇ ಇರಲಿಲ್ಲ. ‘ಅಕ್ಕಿ ಅಥವಾ ಯಾವುದಾದರೂ ಧಾನ್ಯವನ್ನು ಹಾಕಿ ರುಬ್ಬಿದರೆ, ಅದರಿಂದ ಹಿಟ್ಟನ್ನು ತಯಾರಿಸಬಹುದು. ಅದು ಎಲ್ಲರ ಹೊಟ್ಟೆಯನ್ನು ತುಂಬಿಸುತ್ತದೆ. ಆರೋಗ್ಯ, ಶಕ್ತಿ ಮತ್ತು ದುಡಿಯುವ ಸಾಮರ್ಥ್ಯ ನೀಡುತ್ತದೆ. ಅರ್ಥಾತ್ ಜೀವನವನ್ನೇ ಕೊಡುತ್ತದೆ. ಆದ್ದರಿಂದ ನಿಜವಾದ ಅರ್ಥದಲ್ಲಿ ಅದೇ ಬೆಲೆಬಾಳುವ ಕಲ್ಲು. ರುಬ್ಬುವ ಕಲ್ಲಿನಿಂದ ಸಿದ್ಧಪಡಿಸಿದ ಆಹಾರವನ್ನು ಸೇವಿಸಿ ಬದುಕುತ್ತೇವೆ. ನೀನು ತೋರಿಸಿದ ಈ ಬೆಲೆಬಾಳುವ ಕಲ್ಲನ್ನು ತಿಂದು ಬದುಕಲಾರೆವು, ಅದು ಹೊಟ್ಟೆಯನ್ನು ತುಂಬಿಸಲು ಸಾಧ್ಯವಿಲ್ಲ. ಹಾಗಾಗಿ ನಿನ್ನ ಶ್ರೀಮಂತಿಕೆಯ ಪ್ರತೀಕವಾದ ಈ ವೈಭೋಗವು ನಿರುಪಯುಕ್ತವಾದುದು’ ಎಂದರು ಸಾಧು.

    ಸಾಕ್ರೆಟಿಸ್ ಎಂಬ ಮೇಧಾವಿಯಿದ್ದ. ಆತ ದೊಡ್ಡ ವಿದ್ವಾಂಸನಾಗಿದ್ದರೂ ನೋಡಲು ಕುರೂಪಿಯಾಗಿದ್ದ. ಅವನು ಪ್ರತಿನಿತ್ಯ ಕನ್ನಡಿ ನೋಡಿಕೊಳ್ಳುತ್ತಿದ್ದನಂತೆ. ಉಳಿದವರು, ‘ನಿನ್ನ ಈ ಕೋತಿಮುಖವನ್ನು ಯಾಕೆ ಕನ್ನಡಿಯಲ್ಲಿ ಮತ್ತೆ ಮತ್ತೆ ನೋಡಿಕೊಳ್ಳುತ್ತಿ?’ ಎಂದು ಅಪಹಾಸ್ಯ ಮಾದಾಗ, ‘ನಾನು ಬಾಹ್ಯರೂಪವನ್ನು ನೋಡಿಕೊಳ್ಳುತ್ತಿಲ್ಲ. ಬದಲಾಗಿ ನನ್ನೊಳಗಿರುವ ಅಂತರಾತ್ಮವನ್ನು ನೋಡಿಕೊಳ್ಳುತ್ತೇನೆ. ನನ್ನನ್ನು ಬಾಹ್ಯವಾಗಿ ನೋಡುವ ಬದಲು ವ್ಯಕ್ತಿಧರ್ಮವನ್ನು, ಪ್ರಾಮಾಣಿಕತೆಯನ್ನು ನೋಡಿ’ ಎನ್ನುತ್ತಿದ್ದನಂತೆ. ಹೊರಗಿನಿಂದ ನಾವು ಬೇರೆ ಬೇರೆ ಜಾತಿ, ಧರ್ಮದವರು, ಅಂತಸ್ತಿನವರು ಆಗಿರಬಹುದು. ಅದನ್ನು ಮೀರಿ ಒಳಗಡೆ ಇರುವ ಜೀವಾತ್ಮ, ಅವನ ಶ್ರೇಷ್ಠತೆಯನ್ನು ಮನಗಂಡು ವ್ಯವಹರಿಸಬೇಕು. ಹೃದಯವೈಶಾಲ್ಯತೆ ಬೆಳೆಸಿಕೊಳ್ಳಬೇಕು. ನಾವು ನಮ್ಮನ್ನು ವೈಭವೀಕರಿಸಿಕೊಳ್ಳಬೇಕು. ಅಂದರೆ ಹೊರಗಿನ ರೂಪಕ್ಕಿಂತ ಒಳಗಡೆ ಇರುವ ಗುಣಧರ್ಮಗಳನ್ನು ಗುರುತಿಸಿ ಅವುಗಳಲ್ಲಿ ಒಳ್ಳೆಯದನ್ನು ಬೆಳೆಸಿಕೊಂಡು ಕೆಟ್ಟದ್ದನ್ನು ದೂರಮಾಡಿಕೊಳ್ಳುತ್ತ ಹೋಗಬೇಕು. ಒಳ್ಳೆಯ ಮಾನವರಾಗಿ ಧರ್ಮದಲ್ಲಿ ನಿರೂಪಿಸಿದ ಮಾರ್ಗದಂತೆ ಜೀವನ ನಡೆಸುವವರಾಗಬೇಕು.

    ಒಬ್ಬರು ಸ್ವಾಮೀಜಿ ಕಾರಾಗೃಹದ ಸಮೀಪ ಧ್ಯಾನಸ್ಥರಾಗಿ ಕುಳಿತುಕೊಂಡು ಭಗವತ್ ಚಿಂತನೆ ಮಾಡುತ್ತಿದ್ದರಂತೆ. ಆಗ ಅವರಲ್ಲಿ ಯಾರೋ ಒಬ್ಬರು-‘ಗುರುಗಳೇ! ಮಠದ ಬದಲು ಈ ಕಾರಾಗೃಹದ ಸಮೀಪದಲ್ಲಿ ಯಾಕೆ ಬಂದು ಕುಳಿತುಕೊಂಡಿದ್ದೀರಿ?’ಅಂತ ಕೇಳಿದರು. ಅದಕ್ಕೆ ಸ್ವಾಮೀಜಿ, ‘ನೋಡಿ! ಇದು ಕಾರಾಗೃಹ. ಇಲ್ಲಿ ತಪ್ಪು ಮಾಡಿದವರು, ಕೆಟ್ಟದ್ದನ್ನು ಮಾಡಿದವರು ಬರುತ್ತಾರೆ. ನಾನಿಲ್ಲಿ ಕೂತಿರುವುದು ಅವರ ಅಪರಾಧವನ್ನು ನೋಡುವುದಕ್ಕಾಗಿ ಅಲ್ಲ. ಬದಲಾಗಿ ಅವರು ಮಾಡಿರುವ ತಪ್ಪುಗಳನ್ನು ಅವರಿಗೆ ಮನವರಿಕೆ ಮಾಡಿ ಮುಂದೆ ಹಾಗೆ ಮಾಡದಂತೆ ಮಾರ್ಗದರ್ಶನ ನೀಡುವುದಕ್ಕಾಗಿ. ಇದು ನನ್ನ ಸಂನ್ಯಾಸ ಧರ್ಮ’ ಎಂದರು. ಅಂದರೆ ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಸನ್ಮಾರ್ಗವೂ ಇದೆ. ಕೆಟ್ಟಅಂಶವೂ ಇರುತ್ತದೆ. ಇದು ಮನುಷ್ಯರ ಸ್ವಭಾವ. ಕೆಟ್ಟದ್ದನ್ನು ದೂರ ಮಾಡಿಕೊಂಡು ಒಳಿತನ್ನು ಬೆಳೆಸಿಕೊಂಡವನು ಸಜ್ಜನನಾಗುತ್ತಾನೆ. ಪ್ರತಿಯೊಬ್ಬರಲ್ಲಿಯೂ ರಾಮನೂ ಇರುತ್ತಾನೆ, ರಾವಣನೂ ಇರುತ್ತಾನೆ. ಧರ್ಮರಾಯ ಮತ್ತು ಕೌರವನಿಗೆ ಏನು ವ್ಯತ್ಯಾಸ! ಅವರಿಬ್ಬರೂ ಮಾನವರೇ. ಹೊರಗಿನಿಂದ ನೋಡುವಾಗ ಅವರಿಬ್ಬರಲ್ಲಿ ಯಾವ ಅಂತರವೂ ತೋರುವುದಿಲ್ಲ. ಆದರೆ ಸ್ವಭಾವದಲ್ಲಿ ಅಜಗಜಾಂತರ ಇದೆ. ಆದ್ದರಿಂದ ನಾವು ಬದಲಾಯಿಸಿಕೊಳ್ಳಬೇಕಾದ್ದು ಹೊರಗಿನ ಸ್ವರೂಪವನ್ನಲ್ಲ. ಬದಲಾಗಿ ನಮ್ಮೊಳಗಡೆ ಇರುವ ಗುಣಧರ್ಮಗಳನ್ನು. ಧರ್ಮರಾಯ ಕೆಟ್ಟದ್ದನ್ನು ಅದುಮಿಟ್ಟುಕೊಂಡ ಅಥವಾ ಕಳಕೊಂಡ. ದುರ್ಯೋಧನ ಹಾಗೆ ಮಾಡಲಿಲ್ಲ. ಅದೇ ಅವರಿಬ್ಬರ ನಡುವಿನ ಅಂತರ. ಒಮ್ಮೆ ದುರ್ಯೋಧನನನ್ನು-‘ಅಲ್ಲಯ್ಯ! ನಿನ್ನನ್ನು ನೋಡುವಾಗ ಕೆಟ್ಟವನಂತೆ ಕಾಣುವುದಿಲ್ಲ. ಆದರೆ ಎಷ್ಟೆಲ್ಲ ಪಾಪಕರ್ಮಗಳನ್ನು ಮಾಡುತ್ತಿ. ಪಾಂಡವರಿಗೆ ತುಂಬ ಹಿಂಸೆಗಳನ್ನು ನೀಡುತ್ತಿದ್ದಿ. ಅನ್ಯಾಯ ಮಾಡುತ್ತಿದ್ದಿ. ಏಕೆ ಹೀಗೆ ಮಾಡುತ್ತಿ?’ ಎಂದು ಕೇಳಿದರಂತೆ. ಆಗ ದುರ್ಯೋಧನ-‘ನನಗೆ ಧರ್ಮ ಎಂದರೇನು ಗೊತ್ತು. ಇನ್ನೊಬ್ಬರಿಗೆ ಕೆಟ್ಟದ್ದನ್ನು ಮಾಡಬಾರದೆಂಬುದು ಗೊತ್ತು. ಆದರೆ ಹಾಗೆ ಮಾಡದಿರಲು ನನ್ನಿಂದಾಗುತ್ತಿಲ್ಲ’ (ಜಾನಾಮಿ ಧರ್ಮಂ ನ ಚ ಮೇ ಪ್ರವೃತ್ತಿಃ ಜಾನಾಮಿ ಅಧರ್ಮಂ ನ ಚ ಮೇ ನಿವೃತ್ತಿಃ|) ಎಂದು ಉತ್ತರಿಸಿದನಂತೆ. ಅಂದರೆ ಪ್ರತಿಯೊಬ್ಬರಿಗೂ ಒಂದೊಂದು ಸ್ವಭಾವ ಎಂದಿರುತ್ತದೆ. ಆ ಸ್ವಭಾವವನ್ನು ಬದಲಾಯಿಸಿಕೊಳ್ಳುವುದು ಕಷ್ಟಸಾಧ್ಯ. ಆದರೆ ಅಸಾಧ್ಯವಾದದ್ದೇನಲ್ಲ.

    ಒಂದು ನಗರದಲ್ಲಿ ಒಬ್ಬ ಶ್ರೀಮಂತ ಮರಣ ಹೊಂದಿದ. ಇದನ್ನು ತಿಳಿದ ಒಬ್ಬ ವೃದ್ಧೆ-‘ಅವರು ಸ್ವರ್ಗಕ್ಕೆ ಹೋಗಿದ್ದಾರೆ’ ಎಂದಳಂತೆ. ಎಲ್ಲರಿಗೂ ಆಶ್ಚರ್ಯವಾಯಿತು. ‘ಅವನು ಸ್ವರ್ಗಕ್ಕೆ ಹೋಗಿದ್ದಾನೆ ಎಂದು ಹೇಗೆ ಗೊತ್ತಾಯಿತು?’ ಎಂದು ಪ್ರಶ್ನಿಸಿದಾಗ ಅಜ್ಜಿ, ‘ಇದರಲ್ಲಿ ಯಾವ ವಿಶೇಷವೂ ಇಲ್ಲ. ಮರಣ ಹೊಂದಿದವರು ಎಲ್ಲಿಗೆ ಹೋಗಿದ್ದಾರೆ ಎಂದು ತಿಳಿದುಕೊಳ್ಳಬಹುದು! ಹೇಗೆಂದರೆ ಒಬ್ಬ ಸತ್ತಾಗ ಜನರು ಅಯ್ಯೋ ಒಳ್ಳೆಯ ಮನುಷ್ಯನಾಗಿದ್ದ. ನೂರಾರು ಜನರಿಗೆ ಉಪಕಾರಿಯಾಗಿದ್ದ. ಇನ್ನೂ ಕೆಲವು ವರ್ಷ ಬದುಕಬೇಕಾದವನಾಗಿದ್ದ ಎಂದು ಮಾತನಾಡಿಕೊಂಡರೆ ಅವನು ಸ್ವರ್ಗಕ್ಕೆ ಹೋಗಿದ್ದಾನೆ ಎಂದರ್ಥ. ಅದೇ ಸತ್ತವ್ಯಕ್ತಿಯನ್ನು ಕುರಿತು ಅಬ್ಬಾ ಇವನು ಸತ್ತನಲ್ಲ! ಇನ್ನಾದರೂ ಉಳಿದವರಿಗೆ ಒಳ್ಳೆಯದಾಗಲಿ. ಈತ ಕೆಟ್ಟವನಾಗಿದ್ದ. ಅಧರ್ವಿುಯಾಗಿದ್ದ ಎಂದರೆ ಆತ ನರಕಕ್ಕೆ ಹೋಗಿದ್ದಾನೆ ಎಂದರ್ಥ’ ಎಂದಳು. ಎಲ್ಲರೂ ಸ್ವರ್ಗಕ್ಕೆ ಹೋಗಬೇಕೆಂದು ಬಯಸುತ್ತಾರೆ. ಯಾಕೆಂದರೆ ಅಲ್ಲಿ ಎಲ್ಲ ವಿಧವಾದ ಸುಖಸಂತೋಷ ಸಿಗುತ್ತದೆ ಎಂದು. ಆದರೆ ಸತ್ತನಂತರ ಸ್ವರ್ಗಕ್ಕೋ ನರಕಕ್ಕೋ ಎಂಬುದಕ್ಕಿಂತ ಬದುಕಿರುವಾಗಲೇ ಸ್ವರ್ಗವನ್ನು ನೋಡಬೇಕೆಂದರೆ ಧರ್ಮಮಾರ್ಗದಿಂದ ಜೀವನ ನಡೆಸಬೇಕು. ಎಲ್ಲರೂ ಸುಖಸಂತೋಷದಿಂದ ಬದುಕುವಂತೆ, ಸಮಾಜಕ್ಕೆ ಉಪಕಾರಕವಾದ ವ್ಯವಹಾರ ನಮ್ಮದಾಗಬೇಕು.

    ಒಳ್ಳೆಯ ಜೀವನ ನಡೆಸುವುದಕ್ಕೆ ಗುರುಹಿರಿಯರ ಮಾರ್ಗದರ್ಶನ ಮತ್ತು ಆಶೀರ್ವಾದ ಬೇಕಾಗುತ್ತದೆ. ಗುರುಗಳಿಗೆ, ಗುರುಪೀಠಕ್ಕೆ ಯಾಕೆ ಶರಣಾಗಬೇಕೆಂದರೆ, ನಾವು ತಪ್ಪು ಮಾಡಿದಾಗ ಗುರುಗಳು ನಿರ್ದಾಕ್ಷಿಣ್ಯವಾಗಿ, ನಿರ್ವ್ಯಾಜದಿಂದ ಅದನ್ನು ತೋರಿಸಿ ತಿದ್ದುತ್ತಾರೆ. ಯಾಕೆಂದರೆ ಅವರಿಗೆ ಎಲ್ಲರ ಹಿತ, ಧರ್ಮದ ಒಳಿತು ಆದ್ಯತೆಯಾಗಿರುತ್ತದೆ. ಹಾಗಾಗಿ ನಮ್ಮ ಮತ್ತು ಸಮಾಜದ ಒಳಿತಿಗಾಗಿ ವಿಶಾಲದೃಷ್ಟಿಯುಳ್ಳ ಸಾಧು-ಸಂತರ, ಹಿರಿಯರ ಸಂಗವನ್ನು ಮಾಡಿ, ಅವರಿಂದ ಆಗಾಗ ಧಮೋಪದೇಶಗಳನ್ನು ಸನ್ಮಾರ್ಗದ ನೀತಿಯನ್ನು ಕಲಿಯುತ್ತಿರಬೇಕು. ಗುರುಪೀಠಗಳು, ಸಾಧುಸಂತರು ನಮ್ಮಲ್ಲಿರುವ ದುಷ್ಟ ಸ್ವಭಾವಗಳನ್ನು ದೂರ ಮಾಡಿ ಸತ್ಸ್ವಭಾವಗಳನ್ನು ಆವಾಹಿಸಿ ಕೊಳ್ಳುವುದಕ್ಕೆ ದಾರಿತೋರುತ್ತಾರೆ. ಆದ್ದರಿಂದ ಇಂಥವರ ಮಾರ್ಗದರ್ಶನದ ಅವಶ್ಯಕತೆ ಹಿಂದೆಂದಿಗಿಂತ ಇಂದು ಹೆಚ್ಚು ಪ್ರಸ್ತುತವಾಗಿದೆ.

    (ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts