ಲಿಂಗಸುಗೂರು: ಭಾರತದ ಆತ್ಮವೇ ಸಂತರು. ಈ ಭೂಮಿಯು ಸಂತ ಶ್ರೇಷ್ಠರ ಧರಿತ್ರಿಯಾಗಿದೆ ಎಂದು ವಿದ್ವಾನ್ ಜಗದೀಶ ಶರ್ಮಾ ಸಂಪಾ ಹೇಳಿದರು.
ಪಟ್ಟಣದ ವೀವಿ ಸಂಘದ ಆವರಣದಲ್ಲಿ ನಾವು, ನೀವು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ಆನ್ವಯಿಕ ಮಹಾಭಾರತ ಒಂದು ಚಿಂತನ ಮಂಥನ ಸಮಾರೋಪ ಮತ್ತು ವಿಜಯಪುರದ ಸಿದ್ಧೇಶ್ವರ ಶ್ರೀಗಳ ನುಡಿನಮನ ಕಾರ್ಯಕ್ರಮದಲ್ಲಿ ಬುಧವಾರ ಸಂಜೆ ಮಾತನಾಡಿದರು. ಭಾರತದಲ್ಲಿ ಹುಟ್ಟಿದಷ್ಟು ಸಂತರು ಬೇರಾವ ದೇಶದಲ್ಲೂ ಜನ್ಮ ತಳೆದಿಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಅಲೆದಾಡಿದರೆ ನಮಗೆ ಅರಮನೆಗಳಿಗಿಂತ ಗುರುಮನೆಗಳು ಹೆಚ್ಚು ಕಾಣ ಸಿಗುತ್ತವೆ ಎಂದರು.
ಪರಮಪೂಜ್ಯ ಸಿದ್ಧೇಶ್ವರ ಮಹಾಸ್ವಾಮಿಗಳು ಭಾರತ ಭೂಮಿಯಲ್ಲಿ ಹುಟ್ಟಿ ಸಂಚಲನವನ್ನೇ ಸೃಷ್ಟಿಸಿದರು. ಅವರಲ್ಲಿ ಸರಳತೆ ಮಾತ್ರ ಇತ್ತು. ಸರಳತೆಯನ್ನು ಗುರುತಿಸುವುದು ಬಹಳ ಕಷ್ಟಕರವಾಗಿದೆ. ವೈಭವವನ್ನು ಗುರುತಿಸುವುದು ಸುಲಭ. ಅಂತಹ ಸರಳತೆ ಲಕ್ಷ ಲಕ್ಷ ಜನರನ್ನು ಸೆಳೆಯಿತು ಅಂದರೆ ಅವರೆಂತಹ ಮಹಾತ್ಮರೆಂಬುದು ತಿಳಿಯುತ್ತದೆ. ತೊಟ್ಟ ಬಟ್ಟೆ, ಆಡುವ ಮಾತು, ಸೇವಿಸುವ ಆಹಾರದಲ್ಲಿ ಸರಳತೆ ಮತ್ತು ಬದುಕಿನುದ್ದಕ್ಕೂ ಸರಳತೆಯನ್ನು ಮೆರೆದವರು ಎಂದರು.
ಕಜ್ಜಿಡೋಣಿ ಶಂಕರಾಚಾರ್ಯ ಅವಧೂತ ಆಶ್ರಮದ ವಿದ್ವಾನ್ ಕೃಷ್ಣಾನಂದ ಶರಣರು ಮಾತನಾಡಿದರು. ಇದೇ ವೇಳೆ ಹಟ್ಟಿ ಚಿನ್ನದಗಣಿಯ ನಿವೃತ್ತ ಕಾರ್ಯನಿರ್ವಾಹಕ ಎಂ.ಎಲ್.ಪಾಟೀಲ್ ಸಂಪಾದನೆಯ ಕೃಷ್ಣಾನಂದ ಶರಣರು ಉಪದೇಶಿಸಿದ ಕರ್ಮಯೋಗ ಮತ್ತು ಜ್ಞಾನಯೋಗ ಕೃತಿ ಬಿಡುಗಡೆಗೊಳಿಸಲಾಯಿತು. ದಿಕ್ಸೂಚಿ ಸಂಪಾದಕ ಎ.ಟಿ.ಪಾಟೀಲರನ್ನು ಸನ್ಮಾನಿಸಲಾಯಿತು.
ಬೆನಕನಹಳ್ಳಿ ಮಹಾಬೋಧನಾಲಯದ ದೇವಾನಂದ ಶರಣರು, ಅಧ್ಯಾತ್ಮ ಚಿಂತಕ ಗವಿಸಿದ್ಧಪ್ಪ ಸಾಹುಕಾರ ಕಾನಿಹಾಳ, ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಪುರ, ಎಸಿ ಬಸವಣೆಪ್ಪ ಕಲಶೆಟ್ಟಿ, ಪ್ರಮುಖರಾದ ಡಾ.ಎನ್.ಎಲ್.ನಡುವಿನಮನಿ, ಬಸವಂತರಾಯ ಕುರಿ, ಭೂಪನಗೌಡ ಪಾಟೀಲ್ ಇತರರಿದ್ದರು.