ಮದ್ದೂರು: ಪಾಕಿಸ್ತಾನದ ಉಗ್ರರ ನೆಲೆ ಗುರಿಯಾಗಿಸಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆ ವಿಜಯೋತ್ಸವವನ್ನು ವರ್ತಕರು, ಹಮಾಲಿಗಳು, ಕೂಲಿ ಕಾರ್ಮಿಕರು ಆಚರಿಸಿದರು.

ಪಟ್ಟಣದ ಎ.ಪಿ.ಎಂ.ಸಿ ಎಳನೀರು ಮಾರುಕಟ್ಟೆ ಬಳಿ ಗುರುವಾರ ರೈತರು, ವರ್ತಕರು, ಹಮಾಲಿಗಳು, ಕೂಲಿಕಾರ್ಮಿಕರು ಭಾರತೀಯ ಸೇನೆ ಹಾಗೂ ಪ್ರಧಾನಿ ನರೇಂದ್ರಮೋದಿ ಪರ ಘೋಷಣೆಗಳನ್ನು ಕೂಗಿ ವಿಶೇಷವಾಗಿ ವಿಜಯೋತ್ಸವವನ್ನು ಆಚರಿಸಿದರು.
ವರ್ತಕರ ಸಂಘದ ಅಧ್ಯಕ್ಷ ರವಿಚನ್ನಸಂದ್ರ ಮಾತನಾಡಿ, ಪಾಕಿಸ್ತಾನದಲ್ಲಿ ಉಗ್ರರನ್ನು ದಮನ ಮಾಡಿದ ಕಾರ್ಯಾಚರನೆ ಶ್ಲಾಘನೀಯ. ಪಹಲ್ಗಾಮ್ನಲ್ಲಿ ಭಯೋತ್ಪಾದಕರು ದಾಳಿ ನಡೆಸಿ ಅಮಾಯಕರ ಪ್ರಾಣ ತೆಗೆದಿದ್ದಕ್ಕೆ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆ ದೇಶದ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ನಮ್ಮೆಲ್ಲರಿಗೂ ಸಂತಸ ತಂದಿದೆ ಎಂದರು.
ಪಾಕಿಸ್ತಾನದ ಉಗ್ರರನ್ನು ಹಾಗೂ ಅವರ ಮುಖಂಡರನ್ನು ಆಪರೇಷನ್ ಸಿಂಧೂರ ಮೂಲಕ ತಕ್ಕ ಶಾಸ್ತಿ ಮಾಡಿದ್ದು, ರಾತ್ರೋರಾತ್ರಿ ಭಾರತೀಯ ಸೇನಾಪಡೆ ಯೋಧರು ಕಾರ್ಯಾಚರಣೆ ನಡೆಸುವ ಮೂಲಕ ಉಗ್ರರ ನೆಲೆಯನ್ನು ದ್ವಂಸ ಮಾಡಿದ್ದಾರೆ. ಪ್ರಧಾನಿ ನರೇಂದ್ರಮೋದಿ ಅವರಂತಹ ದಿಟ್ಟ ನಾಯಕ ಇರುವವರೆಗೂ ದೇಶ ಹಾಗೂ ಜನತೆ ಸುರಕ್ಷಿತರಾಗಲಿದ್ದು, ಹತ್ಯಾಕಾಂಡದಲ್ಲಿ ಮೃತ ಹೊಂದಿದವರಿಗೆ ನ್ಯಾಯ ದೊರಕಿಸಿಕೊಟ್ಟಿದ್ದಾರೆ. ದೇಶವೇ ಪ್ರಧಾನಿ ಮೋದಿ ಅವರ ಬೆನ್ನೆಲುಬಾಗಿ ನಿಲ್ಲಬೇಕು. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರಕ್ಕೆ ಮತ್ತಷ್ಟು ಶಕ್ತಿ ತುಂಬುವಂತಹ ಕೆಲಸವಾಗಬೇಕಿದೆ ಎಂದರು.
ಉಗ್ರರನ್ನು ಹತ್ಯೆ ಮಾಡಿರುವ ಸೇನೆಯ ಕಾರ್ಯ ಪ್ರತಿಯೊಬ್ಬರೂ ಮೆಚ್ಚುವಂತಾಗಿದ್ದು, ಯಾವ ನಾಗರಿಕನಿಗೂ ತೊಂದರೆಯಾಗದಂತೆ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ದಾಳಿ ಮಾಡಿದೆ. ಜಮ್ಮು ಮತ್ತು ಕಾಶ್ಮೀರ ಭಾರತ ಮಾತೆಯ ಸಿಂಧೂರವಾಗಿದ್ದು ನಮ್ಮ ತಂಟೆಗೆ ಬಂದರೆ ಸುಮ್ಮನೆ ಬಿಡುವುದಿಲ್ಲ ಎನ್ನುವ ಸಂದೇಶವನ್ನು ಸೇನೆ ಸಾರಿದೆ ಎಂದು ಹೇಳಿದರು.
ಆಪರೇಷನ್ ಸಿಂಧೂರ ಮೂಲಕ ಉಗ್ರರಿಗೆ ತಕ್ಕ ಶಾಸ್ತಿ ಮಾಡಿರುವ ಭಾರತೀಯ ಸೇನೆಯ ಕಾರ್ಯವನ್ನು ಮೆಚ್ಚಿ ವರ್ತಕರು, ಕಾರ್ಮಿಕರು, ಹಮಾಲಿಗಳು, ರೈತರು ಸಿಹಿ ವಿತರಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ವರ್ತಕರ ಸಂಘದ ಉಪಾಧ್ಯಕ್ಷ ಉಮೇಶ್, ಕಾರ್ಯದರ್ಶಿ ರಾಜು, ನಿರ್ದೇಶಕರಾದ ಯೋಗೇಶ್, ಎಸ್.ಶಿವರಾಜು, ಶಿವಣ್ಣ, ಬೆಟ್ಟೇಗೌಡ, ಶಿವು, ಮುಖಂಡರಾದ ಲೋಕೇಶ್, ಕೃಷ್ಣ, ಹೊನ್ನೇಶ್, ವೆಂಕಟೇಶ್, ಸಂದೀಪ್, ಮಲ್ಲರಾಜು, ಪ್ರತಾಪ್, ಸುರೇಶ್, ಕುಮಾರ್, ಇಮ್ರಾನ್, ರಫಿಕ್, ಸಿ.ಎಸ್.ಪ್ರಕಾಶ್, ವಿನೋದ್ರಾಜು, ಆರ್.ಸಂದೀಪ್ ಇತರರಿದ್ದರು.