ಬೆಂಗಳೂರು: ಬಸವಣ್ಣ ಮತ್ತು ವೀರಶೈವ ಮಹಾಸಭೆಯ ಬಗ್ಗೆ ಲಘುವಾಗಿ ಹೇಳಿಕೆ ನೀಡಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ವೀರಶೈವ ಮಹಾಸಭೆ ಅಸಮಾಧಾನ ವ್ಯಕ್ತಪಡಿಸಿದೆ. ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರವು ಮಹಾಸಭೆ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ನಾಲಿಗೆ ಮೇಲೆ ಹಿಡಿತವಿಟ್ಟುಕೊಳ್ಳುವಂತೆ ಎಚ್ಚರಿಕೆ ನೀಡಿದ್ದಾರೆ.
‘ನಾಲಿಗೆ ಕುಲ ಹೇಳುತ್ತದೆ ಎಂಬ ಮಾತಿದೆ. ನಿಮ್ಮ ಹೇಳಿಕೆಗಳು ಮತ್ತು ನಡವಳಿಕೆಗಳನ್ನು ಗಮನಿಸಿದಾಗ ನೀವು ವೀರಶೈವ ಲಿಂಗಾಯತರೇ ಎಂಬ ಅನುಮಾನ ಮೂಡುತ್ತದೆ. ವೀರಶೈವ ಲಿಂಗಾಯಿತರಿಗೆ ಇರಬೇಕಾದ ಆಚಾರವಾಗಲಿ, ಸಂಸ್ಕಾರವಾಗಲಿ ನಿಮ್ಮಲ್ಲಿ ಇರದೇ ಇರುವುದು ದುರದೃಷ್ಟಕರ. ಅಗ್ಗದ ಪ್ರಚಾರ ಮತ್ತು ತಮ್ಮ ರಾಜಕೀಯ ತೆವಲಿಗಾಗಿ ಇಂತಹ ಕೀಳು ಮಟ್ಟದ ಹೇಳಿಕೆಗಳನ್ನು ನೀಡುವುದು ಸರಿಯಲ್ಲ.
ಈ ಸಮಾಜದಲ್ಲಿ ಜನಿಸಿ, ಈ ಧರ್ಮದ ಬೆಳಕಾಗಿರುವ ಬಸವಣ್ಣನವರ ಬಗ್ಗೆ ಇಂತಹ ಕೀಳುಮಟ್ಟದ ಹೇಳಿಕೆಗಳನ್ನು ನೀಡುವುದನ್ನು ತಕ್ಷಣ ನಿಲ್ಲಿಸಬೇಕು. ಹಾಗೂ ಮಹಾಸಭೆಯ ಗೌರವಾಧ್ಯಕ್ಷರಾದ ಡಾ. ಭೀಮಣ್ಣ ಖಂಡ್ರೆಯವರು,ಸಮಾಜದ ಜನನಾಯಕರಾದ ಯಡಿಯೂರಪ್ಪನವರು ಮತ್ತು ನಾನು ಸಮಾಜಕ್ಕೆ ನೀಡಿರುವ ಕೊಡುಗೆಗಳನ್ನು ಅರಿತುಕೊಳ್ಳದೆ ವಿನಾಃಕಾರಣ ನಮ್ಮಗಳ ಬಗ್ಗೆ ಲಘುವಾಗಿ ಮಾತನಾಡಿರುವುದನ್ನು ಸಹಿಸಲಾಗದು. ನಮ್ಮ ಬಗ್ಗೆ ಹೇಳಿಕೆ ನೀಡುವ ಮೊದಲು ತಾವು ಸಮಾಜಕ್ಕೆ ನೀಡಿರುವ ಕೊಡುಗೆ ಏನೆಂಬುದನ್ನು ತಿಳಿಸಿ.
ತಾವು ಸಮಾಜದವರು ಎಂಬ ಕಾರಣಕ್ಕೆ ತಮ್ಮ ಹುಚ್ಚಾಟಗಳನ್ನು ಸಹಿಸಿಕೊಂಡಿದ್ದೇವೆ. ಮಹಾಸಭೆಗೆ ಇಂತಹ ಹುಚ್ಚಾಟಗಳನ್ನು ನಿಲ್ಲಿಸಲು ಬರುತ್ತದೆ. ಇಲ್ಲವಾದರೆ ಸಮಾಜವೇ ತಮ್ಮನ್ನು ಹೊಳೆಗಲ್ಲ ಹಾಳು ಬಾವಿಗೆ ನೂಕುತ್ತದೆ’ ಎಂದು ಶಾಮನೂರು ಎಚ್ಚರಿಸಿದ್ದಾರೆ.