ಸೊರಬ: ವೀರಭದ್ರ ದೇವರು ಗುಣವಾಚಕ. ದೇವರ ಇತಿಹಾಸದಿಂದ ವೀರತ್ವ ಗುಣದ ಬಗ್ಗೆ ಅರಿವು ಮೂಡುತ್ತದೆ ಎಂದು ಕಾನುಕೇರಿ ಮಠದ ಶ್ರೀ ಘನಬಸವ ಅಮರೇಶ್ವರ ಸ್ವಾಮೀಜಿ ಹೇಳಿದರು.
ಉದ್ರಿ ಗ್ರಾಮದಲ್ಲಿ ವೀರಶೈವ ಸಮಾಜ, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಶ್ರೀ ವೀರಭದ್ರ ಸ್ವಾಮಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಧರ್ಮದಿಂದ ನಡೆಯುತ್ತಿದ್ದ ಯಜ್ಞವನ್ನು ನಾಶಪಡಿಸಿ ಸುಧರ್ಮದ ಯಜ್ಞವನ್ನು ನಡೆಸಿ, ಧರ್ಮ ರಕ್ಷಣೆ ಮಾಡಿದವ ವೀರಭದ್ರಸ್ವಾಮಿ. ಆ ವೀರತನ ಬರುವುದು ಸುಲಭವಲ್ಲ. ನಮ್ಮ ಪರಿಶ್ರಮದಿಂದ ನಾವು ವೀರ ಎನ್ನಿಸಿಕೊಳ್ಳಬೇಕು. ಅದಕ್ಕಾಗಿ ಸಾಕಷ್ಟು ತ್ಯಾಗ ಮಾಡಬೇಕು. ವೀರಭದ್ರ ಸ್ವಾಮಿ ಅನೇಕ ಸಂದೇಶ ನೀಡಿದ್ದು ಮಾತೃಪ್ರೇಮ, ಪಿತೃವಾಕ್ಯ ಪರಿಪಾಲನೆ, ನಂಬಿದ ಭಕ್ತರ ರಕ್ಷಣೆ ಬಗ್ಗೆ ಸಂದೇಶ ಸಾರಿದ್ದಾರೆ ಎಂದು ತಿಳಿಸಿದರು.
ವೀರಶೈವ ಲಿಂಗಾಯತ ಸಂಘಟನೆ ಮಧ್ಯ ಕರ್ನಾಟಕದ ಅಧ್ಯಕ್ಷ ಸಿ.ಪಿ.ಈರೇಶ್ ಗೌಡ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಂಸ್ಕಾರ ಹಾಗೂ ಸಂಘಟನೆ ಕಡಿಮೆಯಾಗುತ್ತಿದೆ. ಇಂತಹ ಆಚರಣೆಗಳಿಂದ ಉತ್ತಮ ಸಮಾಜ ಮತ್ತು ಸಂಘಟನೆ ಕಟ್ಟಲು ಸಾಧ್ಯ ಎಂದರು.
ಪ್ರಾತಃಕಾಲದಲ್ಲಿ ವೀರಭದ್ರ ಸ್ವಾಮಿಗೆ ಅಭಿಷೇಕ, ವಿಶೇಷ ಪೂಜೆ ನಡೆಯಿತು. ಗ್ರಾಮದಲ್ಲಿ ದೇವರ ಉತ್ಸವ ವಿಜೃಂಭಣೆಯಿಂದ ಜರುಗಿತು. ಗ್ರಾಮದ ವೀರಶೈವ ಸಮಾಜದ ಅಧ್ಯಕ್ಷ ಪುಟ್ಟಸ್ವಾಮಿ, ನಾಗರಾಜ ಗುತ್ತಿ, ನಿಜಗುಣ ಚಂದ್ರಶೇಖರ, ಬಸವಲಿಂಗಪ್ಪ ಗೌಡ, ಷಣ್ಮುಖಪ್ಪ, ಸದಾನಂದ ಗೌಡ, ಹರಳಿಗೆ ಷಣ್ಮುಖಪ್ಪ ಗೌಡ, ಡಾ. ಮಹೇಶ್, ಉಮೇಶ್, ದೇಸಾಯಿ ಗೌಡ ಇತರರಿದ್ದರು.