ಸುಗುಣೇಂದ್ರ ತೀರ್ಥ ಶ್ರೀಪಾದರ ಆಶೀರ್ವಚನ
ಗೀತಾಮಂದಿರದಲ್ಲಿ ವಸಂತ ಶಿಬಿರ ಸಮಾರೋಪ
ವಿಜಯವಾಣಿ ಸುದ್ದಿಜಾಲ ಉಡುಪಿ
ಶಾಲೆಯಲ್ಲಿ ಕಲಿಯುವ ವಿದ್ಯೆ ಹೊಟ್ಟೆಪಾಡಿನದ್ದಾಗಿದೆ. ಅದೊಂದು ನೈವೇದ್ಯ ವಿದ್ಯೆ. ಆದರೆ, ಜನ್ಮಾಂತರದಲ್ಲಿಯೂ ನಮ್ಮೊಂದಿಗೆ ಬರುವ ವಿದ್ಯೆ ಇದ್ದರೆ ಅದು ಸನಾತಮ ಧರ್ಮದ ವೇದ ವಿದ್ಯೆ ಮಾತ್ರ. ಅದನ್ನು ಎಳವೆಯಲ್ಲೇ ಮಕ್ಕಳು ಕಲಿತರೆ ಸಾಧನೆಗೆ, ಮುಂದಿನ ಭವಿಷ್ಯಕ್ಕೆ ಅನುಕೂಲವಾಗಲಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.

ಉಡುಪಿಯ ಗೀತಾ ಮಂದಿರದಲ್ಲಿ ಪುತ್ತಿಗೆ ಮಠದ ವತಿಯಿಂದ ವಿಪ್ರ ಸಮಾಜದ ಮಕ್ಕಳಿಗಾಗಿ 20 ದಿನಗಳ ಕಾಲ ಆಯೋಜಿಸಿದ್ದ ವಸಂತ ಧಾರ್ಮಿಕ ಬೇಸಿಗೆ ಶಿಬಿರದ ಸಮಾರೋಪದಲ್ಲಿ ಶಿಬಿರಾರ್ಥಿಗಳಿಗೆ ಏ.28ರಂದು ಪ್ರಮಾಣಪತ್ರ ವಿತರಿಸಿ ಆಶೀರ್ವಚನ ನೀಡಿದರು.
ಬ್ರಾಹ್ಮಣ್ಯದ ರಕ್ಷಣೆ ಅತ್ಯಗತ್ಯ
ಶಿಬಿರದಲ್ಲಿ ಕಲಿತದ್ದನ್ನು ನಿತ್ಯವೂ ಪ್ರಾಯೋಗಿಕವಾಗಿ ಮುಂದುವರಿಸಬೇಕು. ಅದರಿಂದ ಜ್ಞಾನವೂ ವರ್ಧನೆಯಾಗುತ್ತದೆ. ತಂದೆ-ತಾಯಿಯನ್ನು ಗೌರವಿಸಬೇಕು. ಇಂದು ಬ್ರಾಹ್ಮಣ್ಯದ ರಕ್ಷಣೆ ಅತ್ಯಗತ್ಯವಾಗಿ ಆಗಬೇಕಿದೆ. ಅದನ್ನು ಆಚರಣೆಗಳ ಮೂಲಕ ಉಳಿಸಿಕೊಳ್ಳಬೇಕು ಎಂದು ಶ್ರೀಪಾದರು ಮಕ್ಕಳಿಗೆ ತಿಳಿಹೇಳಿದರು.
ಮಠದ ದಿವಾನ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಶ್ರೀಗಳ ಕಾರ್ಯದರ್ಶಿ ರತೀಶ ತಂತ್ರಿ, ಶಿಬಿರದ ಸಂಚಾಲಕ ರಮೇಶ ಭಟ್, ಅಧ್ಯಾಪಕರು, ಸಂಪನ್ಮೂಲ ವ್ಯಕ್ತಿಗಳು ಇದ್ದರು. ಸುಗುಣಮಾಲಾ ಪತ್ರಿಕೆಯ ಸಂಪಾದಕ ಮಹಿತೋಷ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ವಿವಿಧ ಸಂಸ್ಕಾರಗಳ ಕಲಿಕೆ
ಶಿಬಿರದಲ್ಲಿ ಗಂಡು ಮಕ್ಕಳಿಗೆ ಸಂಧ್ಯಾವಂದನೆ, ಸೂಕ್ತ, ದ್ವಾದಶ ಸ್ತೋತ್ರಗಳು, ಹೆಣ್ಣು ಮಕ್ಕಳಿಗೆ ಲಕ್ಷ್ಮೀ ಶೋಬಾನೆ, ಹೂ ಕಟ್ಟುವುದು, ಬತ್ತಿ ಹೊಸೆಯುವುದು, ರಂಗವಲ್ಲಿ ಹಾಕುವುದು ಇತ್ಯಾದಿ ಸಂಸ್ಕಾರಯುತ ದಿನಚರಿಗಳನ್ನು ಕಲಿಸಲಾಯಿತು.
ಗೋಪಿಚಂದನ ಧಾರಣೆಯಿಂದ ಸಂಸ್ಕಾರ ಲಭಿಸುತ್ತದೆ. ಸಂಸ್ಕೃತಿಯ ಮಹತ್ವ ಅರಿವಾಗುತ್ತದೆ. ಇದು ಶ್ರೀಕೃಷ್ಣ ಮೆಟ್ಟಿದ ಮಣ್ಣಾಗಿದ್ದರಿಂದ ಅದರಿಂದ ಕೃಷ್ಣಪ್ರಜ್ಞೆ ಜಾಗೃತಗೊಳಿಸುತ್ತದೆ. ಸ್ತ್ರೀ-ಪುರುಷರಾದಿಯಾಗಿ ಎಲ್ಲರೂ ಗೋಪಿಚಂದನ ಧಾರಣೆ ಮಾಡಬೇಕು.
| ಸುಶ್ರೀಂದ್ರ ತೀರ್ಥ ಶ್ರೀಪಾದರು. ಪುತ್ತಿಗೆ ಮಠದ ಕಿರಿಯ ಯತಿ.