ಕೋಲಾರ: ಬಿಜೆಪಿ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ದರೆ ರಾಷ್ಟ್ರ ವಿರೋಧಿಗಳನ್ನು ಬೆಂಬಲಿಸುತ್ತ ಅಭಿವೃದ್ಧಿ ಹೆಸರಿನಲ್ಲಿ ತಾವೂ ಅಭಿವೃದ್ಧಿಯಾಗುವುದು, ಹುಸಿ ಭರವಸೆಗಳನ್ನು ನೀಡುವುದು ಕಾಂಗ್ರೆಸ್ಸಿಗರ ಜಾಯಮಾನ ಎಂದು ಸಂಸದ ಎಸ್.ಮುನಿಸ್ವಾಮಿ ಟೀಕಿಸಿದರು.
ನಗರದ ಗಾಂಧಿನಗರದಲ್ಲಿ ಬಿಜೆಪಿ ಅಭ್ಯರ್ಥಿ ಆರ್.ವರ್ತೂರು ಪ್ರಕಾಶ್ ಪರ ಪ್ರಚಾರ ಕೈಗೊಂಡು ಮಾತನಾಡಿದರು. ಕಾಂಗ್ರೆಸ್ 2013ಕ್ಕೂ ಹಿಂದೆ ಕೊಟ್ಟಿದ್ದ ಭರವಸೆಗಳನ್ನು ಇಲ್ಲಿ ತನಕ ಈಡೇರಿಸಿರಲಿಲ್ಲ. ಭ್ರಷ್ಟಾಚಾರ ಅವರ ಅವಧಿಯಲ್ಲಿ ಮುಗಿಲು ಮುಟ್ಟಿತ್ತು. 2014ರಲ್ಲಿ ಬಿಜೆಪಿ ಸರ್ಕಾರ ಬಂದ ಬಳಿಕ ಆ ಭರವಸೆಗಳೂ ಸೇರಿ ಅಭಿವೃದ್ಧಿ ವೇಗ ಹೆಚ್ಚಿಸಲಾಯಿತು. ಫಲಾನುಭವಿಗಳ ಬ್ಯಾಂಕ್ ಅಕೌಂಟ್ಗೆ ನೇರ ಹಣ ವರ್ಗಾವಣೆ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಪಾರದರ್ಶಕ ಆಡಳಿತಕ್ಕೆ ಮುನ್ನುಡಿ ಬರೆದರು ಎಂದರು.
ಉಚಿತವಾಗಿ ವರ್ಷಕ್ಕೆ 3 ಸಿಲಿಂಡರ್, ಪ್ರತಿ ದಿನ ಅರ್ಧ ಲೀಟರ್ ಹಾಲು, ಬಡವರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಆರ್ಥಿಕ ಸಹಾಯ ಸೇರಿ ಹಲವು ಭರವಸೆಗಳನ್ನು ಬಿಜೆಪಿ ನೀಡಿದ್ದು, ಎಲ್ಲವನ್ನೂ ಈಡೇರಿಸುತ್ತೇವೆ ಎಂದರು.
ಅಭ್ಯರ್ಥಿ ಆರ್.ವರ್ತೂರ್ ಪ್ರಕಾಶ್ ಮಾತನಾಡಿ, ಕಾಂಗ್ರೆಸ್ 60 ವರ್ಷ ದಲಿತರನ್ನು ಬಳಸಿಕೊಂಡು, ಅವರಿಗಾಗಿ ಯಾವ ಕೊಡುಗೆ ಕೊಡಲಿಲ್ಲ. ಚುನಾವಣೆ ಬಂದಾಗ ಮಾತ್ರ ಅಂಬೇಡ್ಕರ್ ನೆನಪು ಬರುತ್ತದೆ. ಇಂತಹ ಪಕ್ಷಕ್ಕೆ ದಲಿತರು ಮತ ನೀಡಬೇಡಿ. ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಬೇಕು ಎಂದರು.
ನಗರಸಭಾ ಸದಸ್ಯ ಪ್ರವಿಣ್ಗೌಡ, ಜಿಪಂ ಮಾಜಿ ಸದಸ್ಯೆ ರೂಪಶ್ರೀ ಮಂಜುನಾಥ್, ಕುಡಾ ಅಧ್ಯಕ್ಷ ವಿಜಯ್ ಕುಮಾರ್, ನಗರ ಘಟಕ ಅಧ್ಯಕ್ಷ ತಿಮ್ಮರಾಯಪ್ಪ, ಮುಖಂಡರಾದ ಅಪ್ಪಿ, ವೆಂಕಟೇಶ್, ಮಹೇಶ್ ಇತರರು ಇದ್ದರು.
ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ಗಿಲ್ಲ ಭದ್ರನೆಲೆ
ವೇಮಗಲ್: ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ಗೆ ಭದ್ರ ನೆಲೆಯಿಲ್ಲ. ಇವೆರಡೂ ಪಕ್ಷಗಳು ಕಾರ್ಯಕರ್ತರನ್ನು ಚುನಾವಣೆ ಬಂದಾಗ ಬಳಸಿಕೊಂಡು ಬಳಿಕ ತಾತ್ಸಾರ ಮಾಡುತ್ತ ಬಂದಿರುವುದೇ ಇದಕ್ಕೆ ಕಾರಣ ಎಂದು ಬಿಜೆಪಿ ಅಭ್ಯರ್ಥಿ ಆರ್.ವರ್ತೂರು ಪ್ರಕಾಶ್ ಆರೋಪಿಸಿದರು.
ವೇಮಗಲ್ನಲ್ಲಿ ಜೆಡಿಎಸ್ ತೊರೆದು ಬಂದ ಹಲವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿ, ಜಾತಿ, ಮತ, ಪಕ್ಷ ನೋಡದೆ ಸಹಾಯ ಮಾಡಿದ್ದೇನೆ. ಬಡವರ ಕೆಲಸ ಮಾಡಿಕೊಡದವರನ್ನು ದಂಡಿಸಿದ್ದೇನೆ. ಹೀಗಾಗಿಯೇ ಜೆಡಿಎಸ್ ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ ಎಂದರು.
ಜೆಡಿಎಸ್ ಕುಟುಂಬ ರಾಜಕಾರಣದ ಪಕ್ಷ. ಹೀಗಾಗಿ ಜನಬೆಂಬಲ ಆ ಪಕ್ಷಕ್ಕಿಲ್ಲ. ಕೆಲವರು ಆ ಪಕ್ಷದ ಅಭ್ಯರ್ಥಿಯನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಕ್ಷೇತ್ರದ ಪ್ರತಿ ಗ್ರಾಮದಲ್ಲಿ ಶೇ.70ರಿಂದ 90 ಬಿಜೆಪಿ ಕಾರ್ಯಕರ್ತರಿದ್ದಾರೆ ಎಂದರು.
ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಗೊಂಡ ಗ್ರಾಪಂ ಸದಸ್ಯರಾದ ನವೀನ್ ಕುಮಾರ್ ಮತ್ತು ಕುರುಬರಹಳ್ಳಿ ಕುಮಾರ್ ಮಾತನಾಡಿ, ಜೆಡಿಎಸ್ನಲ್ಲಿ ಉಸಿರು ಕಟ್ಟಿದ ವಾತಾವರಣವಿದ್ದು, ಯುವಕರನ್ನು ಬೆಳೆಸುವುದಿಲ್ಲ. ಅಭಿವೃದ್ಧಿ, ಬಡವರ ಕಷ್ಟ ಆ ಪಕ್ಷದ ನಾಯಕರಿಗೆ ತಿಳಿಯದು. ಹೀಗಾಗಿ ಬಿಜೆಪಿ ಸೇರ್ಪಡೆಗೊಂಡಿದ್ದೇವೆ ಎಂದರು. ಮುಖಂಡರಾದ ಸ್ಟುಡಿಯೋ ಶಿವಶಂಕರ್, ಮಂಜುನಾಥ್, ನಿವೃತ್ತ ಶಿಕ್ಷಕ ಗೋಪಾಲಪ್ಪ, ಮುನಿರಾಜು ಮತ್ತಿತರರು ಬಿಜೆಪಿ ಸೇರ್ಪಡೆಯಾದರು. ಬಿಜೆಪಿ ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷ ಪೊಲೀಸ್ ಚಲಪತಿ ಇದ್ದರು.