ಕೋಲಾರ: ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತಿದ್ದಾರೆ. ಇದಕ್ಕೆ ತಕ್ಕಂತೆ ಕೋಲಾರದ ಅಭಿವೃದ್ಧಿಯೂ ಆಗಬೇಕಿದ್ದು, ಇದೇ ಉದ್ದೇಶದಿಂದ ಬಿಜೆಪಿ ಸೇರಿ ಚುನಾವಣೆ ಎದುರಿಸುತ್ತಿದ್ದೇನೆ. ಗೆದ್ದ ಮೇಲೆ ನಿಮ್ಮ ಮನೆಮಗನಾಗಿ ಕೆಲಸ ಮಾಡುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಆರ್.ವರ್ತೂರು ಪ್ರಕಾಶ್ ಭರವಸೆ ನೀಡಿದರು.
ಕೋಲಾರ ವಿಧಾನಸಭಾ ಕ್ಷೇತ್ರದ ಮಲ್ಲಿಯಪ್ಪನಹಳ್ಳಿಯಲ್ಲಿ ಜೆಡಿಎಸ್ ತೊರೆದು ಬಂದ ಮುಖಂಡರನ್ನು ಬಿಜೆಪಿಗೆ ಸ್ವಾಗತಿಸಿ ಮಾತನಾಡಿದರು.
16 ವರ್ಷದಿಂದ ಕ್ಷೇತ್ರದಲ್ಲಿದ್ದೇನೆ. 2 ಬಾರಿ ಗೆದ್ದು, ಒಮ್ಮೆ ಸೋತಾಗಲೂ ಕ್ಷೇತ್ರದ ಜನರನ್ನು ಬಿಟ್ಟು ದೂರಹೋಗಲಿಲ್ಲ. ಪ್ರತಿ ಮನೆಯ ಸದಸ್ಯರ ಹೆಸರು ತಿಳಿದಿರುವ ನಾನು ಕಷ್ಟವೆಂದು ಬಂದವರನ್ನು ಹಿಂದೆ ಕಳುಹಿಸಿಲ್ಲ. ಶಾಸಕ ಕೆ.ಶ್ರೀನಿವಾಸಗೌಡ ತನ್ನ ಹಿಂಬಾಲಕರಿಗೆ ಗುತ್ತಿಗೆ ನೀಡಿ ಬೆಳೆಸಿದರು. ಆದರೆ, ನಾನು ಅಧಿಕಾರದಲ್ಲಿದ್ದಾಗ ಮಕ್ಕಳು, ಸಂಬಂಧಿಕರು ಗುತ್ತಿಗೆ ಪಡೆಯಲಿಲ್ಲ. ಮತದಾರರನ್ನೇ ಕಾಮಗಾರಿ ನಡೆಸಲು ಅವಕಾಶ ಕಲ್ಪಿಸಿಕೊಟ್ಟಿದ್ದೆ. ಸೋತರೂ ಪ್ರತಿ ಗ್ರಾಮಕ್ಕೆ ಭೇಟಿ ಕೊಟ್ಟು ಕುಂದುಕೊರತೆ ಆಲಿಸಿ ಸರ್ಕಾರದ ಗಮನಕ್ಕೆ ತಂದು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇನೆ. ಅಭಿವೃದ್ಧಿ ಮಾಡಿದ್ದರೆ ಮಾತ್ರ ನನಗೆ ಮತ ಕೊಡಿ, ಕೊಟ್ಟ ಮಾತು ಉಳಿಸಿಕೊಂಡು ಹೋಗುತ್ತೇನೆ ಎಂದರು. ಡಬಲ್ ಇಂಜಿನ್ ಸರ್ಕಾರವಿದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ. ಇದನ್ನರಿತು ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ನವರ ಸುಳ್ಳು ಭರವಸೆಗಳಿಗೆ ಕಿವಿಗೊಡದೆ ಬಿಜೆಪಿ ಬೆಂಬಲಿಸಬೇಕು ಎಂದರು. ಮಲ್ಲಿಯಪ್ಪನಹಳ್ಳಿ ಡೇರಿ ಅಧ್ಯಕ್ಷ ಬೈಯಣ್ಣ, ಜೆಡಿಎಸ್ ಮುಖಂಡರಾದ ರಾಜೇಂದ್ರಪ್ರಸಾದ್, ಗೋಪಾಲಕೃಷ್ಣ, ಪುನೀತ್ ಕುಮಾರ್, ಟಿ. ರಾಜಣ್ಣ ಇತರರು ಬಿಜೆಪಿ ಸೇರ್ಪಡೆಯಾದರು. ಮುಖಂಡರಾದ ಬೆಗ್ಲಿ ಸೂರ್ಯಪ್ರಕಾಶ್, ತಾಲೂಕು ಅಧ್ಯಕ್ಷ ಸಿ.ಡಿ.ರಾಮಚಂದ್ರಗೌಡ ಇದ್ದರು
ಅಧಿಕಾರವಿಲ್ಲದಿದ್ದರೂ ಅಭಿವೃದ್ಧಿ ಕಾರ್ಯ
ಕೋಲಾರ: ಹೊಗರಿ ಗ್ರಾಮದಲ್ಲಿ ಕಳೆದ ಚುನಾವಣೆಗಳಲ್ಲಿ 800 ಮತ ಲೀಡ್ ಕೊಟ್ಟಿದ್ದು, ಈ ಬಾರಿ ಅಧಿಕಾರವಿಲ್ಲದಿದ್ದರೂ ಸರ್ಕಾರದಿಂದ ಗ್ರಾಮಕ್ಕೆ ಸಿಸಿ ರಸ್ತೆ ನಿರ್ಮಿಸಿ ಕೊಟ್ಟಿದ್ದೇನೆ. ಇನ್ನೂ ಹೆಚ್ಚಿನ ಅಭಿವೃದ್ಧಿ ಮಾಡಲು ಪೂರ್ಣ ಪ್ರಮಾಣದ ಮತಗಳನ್ನು ಬಿಜೆಪಿಗೆ ಹಾಕಬೇಕು ಎಂದು ಬಿಜೆಪಿ ಅಭ್ಯರ್ಥಿ ಆರ್.ವರ್ತೂರು ಪ್ರಕಾಶ್ ಹೇಳಿದರು.
ತಾಲೂಕಿನ ಹೊಗರಿಯಲ್ಲಿ ಮತಯಾಚನೆ ಮಾಡಿ ಮಾತನಾಡಿ, ಅಧಿಕಾರ ಕೊಟ್ಟರೆ ಕ್ಷೇತ್ರದ ಯಾವ ಗ್ರಾಮದಲ್ಲೂ ವಿರೋಧ ಪಕ್ಷ ಇರುವುದಿಲ್ಲ. ವಿರೋಧ ಪಕ್ಷಗಳು ಮಾತಾಡಲು ಅವಕಾಶ ನೀಡದ ರೀತಿಯಲ್ಲಿ ಅಭಿವೃದ್ಧಿ ಮಾಡುತ್ತೇನೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೋಲಾರವನ್ನು ಮಾದರಿ ಕ್ಷೇತ್ರವನ್ನಾಗಿಸುತ್ತೇನೆ ಎಂದರು.
ಗ್ರಾಪಂನಿಂದ ಜಿಪಂವರೆಗೆ ಅವಿರೋಧ ಆಯ್ಕೆಯಾಗಬೇಕು. ಕೋಲಾರದಲ್ಲಿ ಯಾರಿಗೂ ನಾನು ಮೋಸ ಮಾಡಿಲ್ಲ. ಯಾರ ಆಸ್ತಿಯನ್ನೂ ಹೊಡೆದಿಲ್ಲ. ಅಭಿವೃದ್ಧಿ ಮಾಡುವುದರಲ್ಲಿ ಹಿಂದೆ ಹೋಗುವುದಿಲ್ಲ. ನನ್ನಂಥ ರಾಜಕಾರಣಿ ನಿಮಗೆ ಸಿಗುವುದಿಲ್ಲ ಎಂದರು. ಮುಖಂಡ ರಾದ ಬೆಗ್ಲಿ ಸೂರ್ಯಪ್ರಕಾಶ್, ಅರುಣ್ಪ್ರಸಾದ್, ರೂಪಶ್ರೀ ಮಂಜುನಾಥ, ತಾಪಂ ಮಾಜಿ ಅಧ್ಯಕ್ಷ ಸೂಲೂರು ಆಂಜನಪ್ಪ, ಒಗರಿ ಗ್ರಾಪಂ ಸದಸ್ಯ ರಮೇಶ್, ಬಾಬು, ನಾರಾಯಣಸ್ವಾಮಿ, ಅಂಬರೀಶ್,
ಅರುಣ್ ಬಾಬು, ರವಿಕುಮಾರ್, ಪೃಥ್ವಿರಾಜ್, ನಾಗರಾಜ್, ಕಲ್ಲಪ್ಪ, ಚೌಡಪ್ಪ,
ಚಲಪತಿ ಇತರರಿದ್ದರು.