ಜಮಖಂಡಿ: ನಾವು ಶರೀರವನ್ನು ಗೆಲ್ಲಬೇಕು. ಒಂದೇ ಜಾಗದಲ್ಲಿ ಕುಳಿತರೆ ಅದು ನಮ್ಮ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಹುಬ್ಬಳ್ಳಿ ಹಾಗೂ ವಿಜಯಪೂರದ ಷಣ್ಮುಖಾರೂಡ ಮಠದ ಅಭಿನವ ಸಿದ್ಧಾರೂಡ ಮಹಾಸ್ವಾಮಿಗಳು ಹೇಳಿದರು.

ನಗರದ ಐತಿಹಾಸಿಕ ಓಲೇಮಠದ ಆಶ್ರಯದಲ್ಲಿ ಬಸವ ಜಯಂತಿ ಅಂಗವಾಗಿ ಏ.29ರ ವರೆಗೆ ಹಮ್ಮಿಕೊಂಡಿರುವ ಶರಣರ ವಚನ ಪ್ರವಚನ ಮತ್ತು ಸದ್ಭಾವನಾ ಪಾದಯಾತ್ರೆಯ ಹದಿಮೂರನೇ ದಿನವಾದ ಭಾನುವಾರ ಸಂಜೆ ನಡೆದ ವಚನ ಜಾತ್ರಾ ಮಹೋತ್ಸವದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ವಚನಗಳು ಕನ್ನಡದ ಉಪನಿಷತ್ತುಗಳು. ಶಿವಶರಣರು ರಚಿಸಿದ ವಚನಗಳು ಇಂದಿಗೂ ಜನಜನಿತವಾಗಿದ್ದು, ಜ್ಞಾನ ಒದಗಿಸುತ್ತಿವೆ. ಭಕ್ತಿ ಇಲ್ಲದೆ ದೇವರ ಪೂಜೆ ಮಾಡಿದೆಡೆ ಶಿವನು ಒಲಿಯುವುದಿಲ್ಲ. ಹೃದಯಕ್ಕಿಂತ ಸಮೀಪ ಪರಮಾತ್ಮ ಇದ್ದಾನೆ. ದೇವರು ದೊಡ್ಡವನಲ್ಲ ಭಕ್ತಿ ದೊಡ್ಡದು ಎಂದರು.
ಚಿತ್ರ ನಟ ಚೇತನ ಮಾತನಾಡಿ, ಆದರ್ಶವಾದ ಸಿದ್ಧಾಂತದಲ್ಲಿ ಉತ್ತಮ ಸಮಾಜವಿದೆ. ಬುದ್ಧ ಬಸವ ತತ್ವ ಸಮಾಜ ಸಮಾನತೆ ಕಲ್ಪನೆ ನ್ಯಾಯ ಪರಿಕಲ್ಪನೆ, ಸಂವಿಧಾನ ಹೇಳುತ್ತದೆ. ಬಸವ ತತ್ವ ಸಿದ್ಧಾಂತ ಸಮಾನತೆಯನ್ನು ತೋರುತ್ತದೆ ಎಂದರು.
ರೋಟರಿ ಸಂಸ್ಥೆಯ ಹಿರಿಯ ಸದಸ್ಯ ಅಶೋಕ ಕುಲ್ಹಳಿಕರ, ನಿವೃತ್ತ ಪ್ರಾಚಾರ್ ಆರ್.ಎನ್. ಮಡಿವಾಳರ, ಹುಣಶ್ಯಾಳದ ನಿವೃತ್ತ ಶಿಕ್ಷಕ ಸಿ.ಬಿ. ಮೇಟಿ, ಕನ್ನಡ ಸಂಘದ ಮಾಜಿ ಅಧ್ಯಕ್ಷ ರುದ್ರಯ್ಯ ಕರಡಿ ಮಾತನಾಡಿದರು.
ಕಲಾವಿದ ವಿನಾಯಕ ಸುತಾರ ಕಲಾಕೃತಿ ರಚಿಸಿದರು. ಬಿಗ್ಬಾಸ್ ಖ್ಯಾತಿಯ ಹನುಮಂತು ‘ಕೇಳ ಜಾನ ಶಿವದ್ಯಾನ ಮಾಡಣ್ಣ’ ಹಾಡು ಹಾಡಿ ಸಂಭ್ರಮಿಸಿದರು.
ವೇದಿಕೆಯಲ್ಲಿ ಮುತ್ತಿನಕಂತಿ ಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು, ಡಾ. ಕೆ.ಐ. ಗುರಮಠ, ಡಾ. ಆರ್.ವಿ. ಮೆಟಗುಡ್ಡ, ಈರಣ್ಣ ಕಾಸರ, ಈರಣಗೌಡ ಪಾಟೀಲ, ಆನಂದ ಪುಕಾಳೆ, ಗೋಪಾಲಕೃಷ್ಣ ವಿಠ್ಠಲಪ್ರಭು, ಅನೀಲ ಸುಣಗದ, ಅಬಾಕಾಯಿ ತೇಲಿ, ಸುಲೋಚನ ಮಡಿವಾಳರ, ಸೌಂದರ್ಯ ವರ್ಧಕಿಯರ ಮಹಿಳಾ ಮಂಡಳದ ಅಧ್ಯಕ್ಷೆ ಶಿವಲೀಲಾ ಎಸ್. ಉಪಾಧ್ಯಕ್ಷೆ ಕಾಂಚನಾ ಪುಕಾಳೆ, ರೇವಣಸಿದ್ದಯ್ಯ ಹಿರೇಮಠ, ಬಸವರಾಜ ಹೊಳೇಪ್ಪಗೋಳ ಇದ್ದರು. ಶಿಕ್ಷಕ ಶಿವಾನಂದ ಕಲ್ಯಾಣಿ ಸ್ವಾಗತಿಸಿ ನಿರೂಪಿಸಿದರು. ಆನಂದ ದೇವರು ಶರಣು ಸಮರ್ಪಿಸಿದರು.