ಅಬುಧಾಬಿ: ಅರಬ್ ಸಂಯುಕ್ತ ಸಂಸ್ಥಾನ (ಯುಎಇ) ಮತ್ತು ಕತಾರ್ಗೆ ಎರಡು ದಿನಗಳ ಪ್ರವಾಸದ ಭಾಗವಾಗಿ ಮಂಗಳವಾರ ಯುಎಇ ರಾಜಧಾನಿ ಅಬುಧಾಬಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ಅತಿಥೇಯ ದೇಶದ ಅಧ್ಯಕ್ಷ ಶೇಖ್ ಮಹಮದ್ ಬಿನ್ ಝುಯೇದ್ ಅಲ್ ನಹ್ಯಾನ್ರೊಂದಿಗೆ ಮಹತ್ವದ ಮಾತುಕತೆ ನಡೆಸಿದರು. ಭಾರತ ರುಪೇ ಕಾರ್ಡ್ ಮತ್ತು ಯುಪಿಐ ಪಾವತಿ ಸೇವೆ ಬಗ್ಗೆ ಎರಡೂ ದೇಶಗಳ ನಡುವೆ ಸಹಮತ ವ್ಯಕ್ತವಾಯಿತು.

ವ್ಯೂಹಾತ್ಮಕ ಪಾಲುದಾರಿಕೆಯನ್ನು ಪರಿಶೀಲಿಸಿದ ಉಭಯ ನಾಯಕರು, ಸಹಕಾರದ ಹೊಸ ಕ್ಷೇತ್ರಗಳ ಕುರಿತು ಸಮಾಲೋಚನೆ ನಡೆಸಿದರು. ಅವರ ಸಮ್ಮುಖದಲ್ಲಿ ಒಂದು ದ್ವಿಪಕ್ಷೀಯ ಹೂಡಿಕೆ ಸಹಿತ ಹಲವು ಒಪ್ಪಂದಗಳಿಗೆ ಸಹಿ ಹಾಕಲಾಯಿತು. ವಾಣಿಜ್ಯ ಮತ್ತು ಹೂಡಿಕೆ, ಡಿಜಿಟಲ್ ಮೂಲಸೌಕರ್ಯ, ಫಿನ್ಟೆಕ್, ಇಂಧನ, ಮೂಲಸೌಕರ್ಯ, ಸಂಸ್ಕೃತಿ ಮತ್ತು ಜನರ ನಡುವಿನ ಬಾಂಧವ್ಯ ಸಹಿತ ಹಲವು ಕ್ಷೇತ್ರಗಳ ಸಮಗ್ರ ವ್ಯೂಹಾತ್ಮಕ ಪಾಲುದಾರಿಕೆ ಕುರಿತು ರ್ಚಚಿಸಿದರು. ಪ್ರಾದೇಶಿಕ ಮತ್ತು ಭೌಗೋಳಿಕ ವಿಚಾರಗಳ ಬಗ್ಗೆಯೂ ಉಭಯ ನಾಯಕರು ಸಮಾಲೋಚಿಸಿದರು.
ಭವ್ಯ ಸ್ವಾಗತ: ಅಬುಧಾಬಿಗೆ ಆಗಮಿಸಿದ ಪ್ರಧಾನಿ ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಅಧ್ಯಕ್ಷ ನಹ್ಯಾನ್ ಆತ್ಮೀಯವಾಗಿ ಸ್ವಾಗತಿಸಿದರು. ಉಭಯ ನಾಯಕರು ಪರಸ್ಪರ ಅಪ್ಪಿಕೊಂಡು ಸಂತಸ ಹಂಚಿಕೊಂಡರು. ಯುಎಇಯ ಸಾಂಪ್ರದಾಯಿಕ ಗೌರವ ವಂದನೆ ನೀಡಲಾಯಿತು. ಯುಎಇ ಉಪಾಧ್ಯಕ್ಷ, ಪ್ರಧಾನಿ ಹಾಗೂ ರಕ್ಷಣಾ ಸಚಿವರೂ ಆಗಿರುವ ಶೇಖ್ ಮಹಮದ್ ಬಿನ್ ರಷೀದ್ ಅಲ್ ಮಕ್ತೋಮ್ನ್ನು ಕೂಡ ಭೇಟಿಯಾಗಿ ಮೋದಿ ಜತೆ ರ್ಚಚಿಸಿದರು. ಖುದ್ದಾಗಿ ಆಗಮಿಸಿ ತಮ್ಮನ್ನು ಬರಮಾಡಿಕೊಂಡಿದ್ದಕ್ಕೆ ನಹ್ಯಾನ್ರಿಗೆ ಮೋದಿ ಕೃತಜ್ಞತೆ ಸಲ್ಲಿಸಿದರು. ಮೋದಿ, ಯುಎಇ ಅಧ್ಯಕ್ಷ ನಹ್ಯಾನ್ರ ಜೊತೆ ಸೇರಿ ಯುಪಿಐ ರುಪೇ ಕಾರ್ಡ್ ಸೇವೆಗೆ ಜಂಟಿಯಾಗಿ ಚಾಲನೆ ನೀಡಿದರು. ಅಧ್ಯಕ್ಷ ನಹ್ಯಾನ್, ತಮ್ಮ ಹೆಸರನ್ನು ಹೊಂದಿರುವ ಕಾರ್ಡ್ಅನ್ನು ಸ್ವೆಪ್ ಮಾಡುವ ಮೂಲಕ ಅಬುಧಾಬಿಯಲ್ಲಿ ಅದರ ಸೇವೆಯನ್ನು ಆರಂಭಿಸಿದರು.
ಹೊಸ ಯುಗಾರಂಭ: ‘ನನ್ನ ರುಪೇ ಕಾರ್ಡ್ ಮತ್ತು ನಿಮ್ಮ ಜಯ್ವಾನ್ ಕಾರ್ಡ್ಗೆ ಚಾಲನೆ ನೀಡುವ ಮೂಲಕ ಹೊಸ ಹಣಕಾಸು ತಂತ್ರಜ್ಞಾನ (ಫಿನ್ಟೆಕ್) ಯುಗವನ್ನು ನಾವು ಪ್ರವೇಶಿಸುತ್ತಿದ್ದೇವೆ’ ಎಂದು ಮೋದಿ ಹೇಳಿದರು. ಇದೊಂದು ದೊಡ್ಡ ಸಾಧನೆಯಾಗಿದೆ ಎಂದು ವರ್ಣಿಸಿದರು.
ಅಹ್ಲಾನ್ ಮೋದಿ: ತಮ್ಮ ಆಡಳಿತದ ಮೂರನೇ ಅವಧಿಯಲ್ಲಿ ಭಾರತವನ್ನು ಜಗತ್ತಿನ ಮೂರನೇ ಅತಿ ದೊಡ್ಡ ಆರ್ಥಿಕ ಶಕ್ತಿಯನ್ನಾಗಿ ಪರಿವರ್ತಿಸಲು ತಾವು ಗ್ಯಾರಂಟಿ ಕೊಟ್ಟಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಯುಎಇ ರಾಜಧಾನಿ ಅಬುಧಾಬಿಯಲ್ಲಿ ಘೋಷಿಸಿದರು. ಭಾರತದ ಅಸ್ಮಿತೆಯು ಇಂದು ಒಂದು ದೊಡ್ಡ ಶಕ್ತಿಯಾಗಿದೆ ಎಂದು ಇಲ್ಲಿನ ಝುಯೇದ್ ಕ್ರೀಡಾ ನಗರ ಸ್ಟೇಡಿಯಂನಲ್ಲಿ ನಡೆದ ‘ಅಹ್ಲಾನ್ ಮೋದಿ’ (ಹಲೋ ಮೋದಿ) ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾವಿರಾರು ಉತ್ಸಾಹಿ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದ ಮೋದಿ ಹೇಳಿದರು. ಭಾರತ ಮತ್ತು ಯುಎಇ ಸಂಬಂಧಗಳು ಅಭೂತಪೂರ್ವ ಎತ್ತರವನ್ನು ತಲುಪಿದ್ದು ಉಭಯ ದೇಶಗಳು ಪರಸ್ಪರರ ಪ್ರಗತಿಯಲ್ಲಿ ಪಾಲುದಾರನಾಗಿವೆ ಎಂದು ಪ್ರಧಾನಿ ಹೇಳಿದರು. ಉಭಯ ದೇಶಗಳ ಬಾಂಧವ್ಯದ ಮಹತ್ವವನ್ನು ವಿವರಿಸಿದ ಮೋದಿ, ಯುಎಇ ಇಂದು ಭಾರತದ ಮೂರನೇ ಅತಿ ದೊಡ್ಡ ವಾಣಿಜ್ಯ ಪಾಲುದಾರ ಆಗಿದೆ ಎಂದು ಹೇಳಿದರು. ‘ಸಹಿಷ್ಣುತೆಯ ಸಚಿವ ಶೇಖ್ ನಹ್ಯಾನ್ ಇಂದು ನಮ್ಮೊಂದಿಗಿದ್ದಾರೆ’ ಎಂದು ಯುಎಇ ಅಧ್ಯಕ್ಷರನ್ನು ಉದ್ದೇಶಿಸಿ ಮೋದಿ ವರ್ಣಿಸಿದರು.
ಪ್ರಥಮ ಹಿಂದು ದೇವಾಲಯ: ಅಬುಧಾಬಿಯಲ್ಲಿ ನಿರ್ವಿುಸಲಾಗಿರುವ ಬೋಚಸನ್ವಾಸಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥಾ (ಬಿಎಪಿಎಸ್) ಮಂದಿರವನ್ನು ಮೋದಿ ಬುಧವಾರ ಉದ್ಘಾಟಿಸಲಿದ್ದಾರೆ. ಇದು ಅಬುಧಾಬಿಯ ಪ್ರಪ್ರಥಮ ಹಿಂದು ದೇವಸ್ಥಾನವಾಗಿದೆ. ‘ಬಿಎಪಿಎಸ್ ಮಂದಿರ ಭಾರತದೊಂದಿಗಿನ ನಿಮ್ಮ ಬಾಂಧವ್ಯದ ಒಂದು ಉದಾಹರಣೆಯಾಗಿದೆ’ ಎಂದು ಅಧ್ಯಕ್ಷ ನಹ್ಯಾನ್ ಜೊತೆಗಿನ ಮಾತುಕತೆ ವೇಳೆ ಮೋದಿ ಹೇಳಿದರು. ದೇವಾಲಯ ನಿರ್ವಣಕ್ಕೆ ಬೆಂಬಲ ನೀಡಿದ್ದಕ್ಕೆ ನಹ್ಯಾನ್ರಿಗೆ ಕೃತಜ್ಞತೆ ಅರ್ಪಿಸಿದರು. ಯುಎಇ ಸರ್ಕಾರ ಕೊಡುಗೆಯಾಗಿ ನೀಡಿದ ಸುಮಾರು 27 ಎಕರೆ ಜಾಗದಲ್ಲಿ ಬಿಎಪಿಎಸ್ ಮಂದಿರವನ್ನು ನಿರ್ವಿುಸಲಾಗಿದೆ. ದುಬೈ-ಅಬುಧಾಬಿ ಶೇಖ್ ಝುಹೇದ್ ಹೆದ್ದಾರಿ ಸಮೀಪದ ಅಬು ಮುರೇಖಾ ಬಳಿ ಮಂದಿರ ನಿರ್ಮಾಣ ಕಾರ್ಯ 2019ರಲ್ಲಿ ಆರಂಭವಾಗಿತ್ತು. ಅಬುಧಾಬಿಯಲ್ಲೇ ಯುಎಇಯ ಇತರ ಮೂರು ಹಿಂದು ದೇವಾಲಯಗಳಿವೆ. ಬಿಎಪಿಎಸ್ ಮಂದಿರ ಇಡೀ ಕೊಲ್ಲಿ ವಲಯದಲ್ಲಿ ಅತ್ಯಂತ ದೊಡ್ಡ ಹಿಂದು ದೇವಸ್ಥಾನವೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ದ್ವಿಪಕ್ಷೀಯ ಒಪ್ಪಂದಗಳು: ಭಾರತದ ಪ್ರಧಾನಿ ಮೋದಿ ಹಾಗೂ ಯುಎಇ ಅಧ್ಯಕ್ಷ ನಹ್ಯಾನ್ ಹಲವು ದ್ವಿಪಕ್ಷೀಯ ಒಪ್ಪಂದಗಳ ವಿನಿಮಯಕ್ಕೆ ಸಾಕ್ಷಿಯಾದರೆಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ತಕ್ಷಣದ ಪಾವತಿ ವೇದಿಕೆಗಳಾದ ಯುಪಿಐ (ಭಾರತ) ಹಾಗೂ ಎಎಎನ್ಐ (ಯುಎಇ) ಇವುಗಳ ಪರಸ್ಪರ ಸಂಪರ್ಕದ ಒಪ್ಪಂದ ಅವುಗಳಲ್ಲಿ ಒಂದಾಗಿದೆ. ಉಭಯ ದೇಶಗಳ ನಡುವಣ ಸುಗಮ ಗಡಿ ವ್ಯವಹಾರಕ್ಕೆ ಇದರಿಂದ ಅನುಕೂಲವಾಗಲಿದೆ. ಉಭಯ ರಾಷ್ಟ್ರಗಳ ದೇಶೀಯ ಡೆಬಿಟ್/ಕ್ರೆಡಿಟ್ ಕಾರ್ಡ್ಗಳಾದ ರುಪೇ ಹಾಗೂ ಜಯ್ವಾನ್ಗಳ ಅಂತರ್ಸಂಪರ್ಕದ ಒಡಂಬಡಿಕೆ ಸಹಿ ಹಾಕಲಾದ ಇನ್ನೊಂದು ಒಪ್ಪಂದವಾಗಿದೆ.
ಕತಾರ್ ಭೇಟಿ ಮಹತ್ವ: ಪ್ರಧಾನಿ ನರೇಂದ್ರ ಮೋದಿ 2015ರಿಂದೀಚಿಗೆ ಯುಎಇಗೆ ನೀಡಿದ ಏಳನೇ ಭೇಟಿ ಇದಾಗಿದೆ. ಭಾರತದ ಎಂಟು ನೌಕಾಧಿಕಾರಿಗಳು ಕತಾರ್ ಸೆರೆಮನೆಯಿಂದ ಸೋಮವಾರ ಸ್ವದೇಶ್ಕೆ ವಾಪಸಾದ ಬೆನ್ನಲ್ಲೇ ಪ್ರಧಾನಿ ಮೋದಿ ಬುಧವಾರ ಆ ದೇಶಕ್ಕೆ ಭೇಟಿ ನೀಡಲಿರುವುದು ಮಹತ್ವ ಪಡೆದುಕೊಂಡಿದೆ.