Dr Rajkumar : ಪೂರ್ವ ಆಫ್ರಿಕಾದ ತಾಂಜಾನಿಯಾ ದೇಶದ ದರ್ ಎಸ್ ಸಲಾಂ ನಗರದಲ್ಲಿ ಪಟೇಲ್ ಸಮಾಜ ಹಾಗೂ ಕಾವೇರಿ ಕನ್ನಡ ಸಂಘ ಆಯೋಜಿಸಿದ್ದ ಬೆಳ್ಳಿಹಬ್ಬದ ಸಂಭ್ರಮ ಕಾರ್ಯಕ್ರಮವು ಹಿರಿಯ ಪತ್ರಿಕೋದ್ಯಮಿ ಮಂಜುನಾಥ್ ಚವಾಣ್ ಅವರು ರಚಿಸಿರುವ “ನಾದಯೋಗಿ – ಡಾ. ರಾಜ್ಕುಮಾರ್” ಪುಸ್ತಕದ ಮುಖ ಪುಟದ ಬಿಡುಗಡೆಯ ಅಮೃತ ಘಳಿಗೆಗೆ ಸಾಕ್ಷಿಯಾಯಿತು .
“ಹಿರಿಯ ಪತ್ರಕರ್ತ ಮಂಜುನಾಥ್ ಚವಾಣ್ ಅವರು ರಾಜ್ ಕುಟುಂಬದ ಆಪ್ತ ವಲಯದವರಾಗಿದ್ದು, ತಮ್ಮ ಅನುಭವಗಳನ್ನು ಈ ಪುಸ್ತಕದ ಮೂಲಕ ಅನಾವರಣಗೊಳಿಸಿದ್ದಾರೆ. ರಾಜ್ ಅವರು ಅಪ್ರತಿಮ ನಟ, ಹಾಗೇ ಅದ್ಭುತ ಗಾಯಕ, ಹಾಗೇ ಅಪ್ರತಿಮ ಸಂಗೀತಜ್ಞ. ರಂಗ ಭೂಮಿಯಲ್ಲಿ ತಾವು ಕಲಿತ Carnatic ಸಂಗೀತದ ಜೊತೆಗೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪ್ರಕಾರಗಳನ್ನು ಕಲಿತು ಕಲಾ ಪ್ರೇಮಿಗಳ ಮನ ಮಂದಿರದಲ್ಲಿ ನೆಲೆ ಮಾಡಿದ “ನಾದಯೋಗಿ”. ಕುಂಡಲಿನಿ ಯೋಗದ ಅತೀ ಉತ್ತಮ ಸಾಧಕರಾದ ರಾಜ್ ಅವರ ವ್ಯಕ್ತಿತ್ವ ವರ್ಣನೆಗೆ ನಿಲುಕದ್ದು.
ಮಂಜುನಾಥ್ ಚವಾಣ್ ಅವರು ರಾಜ್ ಅವರ ಸಂಗೀತ ಯಾನದ ಕುರಿತಾದ ಸಂದರ್ಶನ, ಒಡನಾಟಗಳನ್ನು ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ. ರಾಜ್ ಅವರ ಸಂಗೀತ ಯಾನದ ಬಗ್ಗೆ ಇದೊಂದು ವಿಭಿನ್ನ ಪ್ರಯೋಗ ಹಾಗೇ ಸಂಗ್ರಹ ಯೋಗ್ಯ. ನಮ್ಮ ಸಂಘದ ಪರವಾಗಿ ಶುಭ ಹಾರೈಕೆಗಳು ಎಂದು ಕಾವೇರಿ ಕನ್ನಡ ಸಂಘದ ಅಧ್ಯಕ್ಷರಾದ ಶ್ರೀ ವಿಠ್ಠಲ ಮಲಗೊಂಡ ಅವರು ಮುಖ ಪುಟದ ಅನಾವರಣಗೊಳಿಸಿದರು .
ಸ್ವಾಮಿ ವಿವೇಕಾನಂದ ಸಂಸ್ಕೃತಿ ಕೇಂದ್ರ , ದರ್ ಎಸ್ ಸಲಾಂ ನಿರ್ದೇಶಕಿ, ಭಾರತೀಯ ಹೈ ಕಮಿಷನ್, ದ್ವಿತೀಯ ಕಾರ್ಯದರ್ಶಿ ಡಾ ಸೌಮ್ಯ ಮಂಜುನಾಥ್ ಚವಾಣ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.