ನವದೆಹಲಿ: ಸುಪ್ರೀಂಕೋರ್ಟ್ನಿಂದ ಸಿಹಿ ಸುದ್ದಿ ನಿರೀಕ್ಷಿಸಿದ್ದ ಅನರ್ಹ ಶಾಸಕರಿಗೆ ಮತ್ತೊಮ್ಮೆ ನಿರಾಸೆಯಾಗಿದೆ. ತಮ್ಮನ್ನು ಅನರ್ಹಗೊಳಿಸಿದ ಸ್ಪೀಕರ್ ರಮೇಶ್ ಕುಮಾರ್ ಆದೇಶ ಪ್ರಶ್ನಿಸಿ ಅನರ್ಹರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆಯಲ್ಲಿ ಭಾಗಿಯಾಗುವುದಿಲ್ಲ ಎಂದು ನ್ಯಾ. ಮೋಹನ್ ಶಾಂತನಗೌಡರ್ ಹಿಂದೆ ಸರಿದ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆ ಮತ್ತೆ ಸೋಮವಾರಕ್ಕೆ ಮುಂದಕ್ಕೆ ಹೋಗಿದೆ.
ಶಾಸಕತ್ವದಿಂದ ಅನರ್ಹಗೊಂಡು ಅನಿಶ್ಚಿತ ಭವಿಷ್ಯದ ಬಗ್ಗೆ ಚಿಂತೆಗೀಡಾಗಿದ್ದ ಅನರ್ಹರು ಕೊನೆಗೂ ಮಂಗಳವಾರಕ್ಕೆ ವಿಚಾರಣೆ ನಿಗದಿಯಾಗಿದ್ದರಿಂದ ಸಂತಸಗೊಂಡಿದ್ದರು. ಆದರೆ, ಬೆಳಗ್ಗೆ ವಿಚಾರಣೆ ಆರಂಭಗೊಳ್ಳುತ್ತಿದ್ದಂತೆಯೇ ನ್ಯಾ. ಮೋಹನ್ ಶಾಂತನಗೌಡರ್ ಈ ಪ್ರಕರಣದ ಕಲಾಪದಲ್ಲಿ ಪಾಲ್ಗೊಳ್ಳಲಾರೆ ಎಂದು ಉಳಿದ ಸದಸ್ಯ ನ್ಯಾಯಮೂರ್ತಿಗಳಿಗೆ ಹಾಗೂ ವಕೀಲರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಪ್ರತಿವಾದಿಗಳ ಪರ ವಕೀಲ ಕಪಿಲ್ ಸಿಬಲ್, ನ್ಯಾ. ಶಾಂತನಗೌಡರ್ ಅವರ ಬಗ್ಗೆ ನಮಗೆ ಅಪಾರ ಗೌರವವಿದೆ. ಅವರು ವಿಚಾರಣೆ ನಡೆಸುವುದಕ್ಕೆ ನಮ್ಮದೇನೂ ತಕರಾರಿಲ್ಲ ಎಂದು ಸ್ಪಷ್ಟಪಡಿಸಿದರು. ತ್ರಿಸದಸ್ಯ ನ್ಯಾಯಪೀಠದ ನೇತೃತ್ವ ವಹಿಸಿದ್ದ ನ್ಯಾ. ಎನ್.ವಿ. ರಮಣ ಅವರು ಈ ಬಗ್ಗೆ ನ್ಯಾ. ಗೌಡರ್ ಅವರಲ್ಲಿ ಕೇಳಿದಾಗಲೂ, ಇಲ್ಲ ನಾನು ವಿಚಾರಣೆ ನಡೆಸಲಾರೆ ಎಂದು ತಿಳಿಸಿದರು. ಇದಕ್ಕೊಪ್ಪಿದ ನ್ಯಾ. ಎನ್.ವಿ. ರಮಣ ಅವರು, ನ್ಯಾ.ಗೌಡರ್ ಭಾವನೆಗೆ ನಾವು ಗೌರವ ನೀಡಬೇಕು ಎಂದು ತಿಳಿಸಿದರು.
ಅನರ್ಹ ಶಾಸಕರ ಪರ ವಕೀಲ ಮುಕುಲ್ ರೋಹಟ್ಗಿ ವಾದಿಸಿ, ಕಳೆದ ಒಂದೂವರೆ ತಿಂಗಳಿಂದ ನಾವು ಕಾದಿದ್ದೇವೆ. ಪ್ರಕರಣದ ವಿಚಾರಣೆ ಹೀಗೆ ಮುಂದಕ್ಕೆ ಹೋದಲ್ಲಿ ನಾವೇನು ಮಾಡಬೇಕು. ಶುಕ್ರವಾರಕ್ಕೆ ವಿಚಾರಣೆ ನಿಗದಿಪಡಿಸಬೇಕು ಎಂದು ಕೇಳಿಕೊಂಡರು. ಇದಕ್ಕೆ ವಕೀಲರನ್ನು ಸಮಾಧಾನಪಡಿಸಿದ ನ್ಯಾಯಮೂರ್ತಿಗಳು ಮುಂದಿನ ಸೋಮವಾರಕ್ಕೆ ವಿಚಾರಣೆ ನಿಗದಿಪಡಿಸುತ್ತೇವೆ ಎಂದು ವಿಚಾರಣೆಯನ್ನು ಮುಂದೂಡಿದರು.
ಮುಂದಿನ ವಿಚಾರಣೆಗೆ ಮುನ್ನ ನ್ಯಾ. ಶಾಂತನಗೌಡರ್ ಬದಲಿಗೆ ಬೇರೊಬ್ಬ ನ್ಯಾಯಮೂರ್ತಿ ನೇಮಕ ಮಾಡಿ ಸಿಜೆಐ ಆದೇಶ ಹೊರಡಿಸಬೇಕಿದೆ. ಖಾಲಿ ಇರುವ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಸುವಂತೆ ವಿಧಾನಸಭೆ ಕಾರ್ಯಾಲಯ ರಾಜ್ಯಪಾಲರು ಹಾಗೂ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ ಎಂಬ ಸುದ್ದಿ ಅನರ್ಹ ಶಾಸಕರನ್ನು ಕೆಲ ಕಾಲ ಆತಂಕಕ್ಕೆ ತಳ್ಳಿತ್ತು. ಆದರೆ ವಿಧಾನಸಭೆ ಸಚಿವಾಲಯ ಪ್ರತಿ ತಿಂಗಳೂ ಖಾಲಿ ಸ್ಥಾನ ಹಾಗೂ ಪಕ್ಷವಾರು ಬಲಾಬಲ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಕಳುಹಿಸುವುದು ಕಡ್ಡಾಯ. ಈ ಹಿನ್ನೆಲೆಯಲ್ಲಿ ವಿಧಾನಸಭೆ ಸಚಿವಾಲಯ ಪತ್ರ ಬರೆದಿದೆ ಎಂಬುದನ್ನು ತಿಳಿದ ಬಳಿಕ ಅನರ್ಹರು ನಿಟ್ಟುಸಿರು ಬಿಟ್ಟಿದ್ದಾರೆ.
ವಿಚಾರಣೆ ಮುಂದೂಡಿಕೆ ಸುಪ್ರೀಂಗೆ ಸಂಬಂಧಪಟ್ಟ ವಿಚಾರ. ಆದರೂ ನಾವು ಅನರ್ಹರ ಜತೆಗಿದ್ದೇವೆ ಎಂದು ಸಚಿವ ಆರ್.ಅಶೋಕ್ ಬೆಂಗಳೂರಿನಲ್ಲಿ ಹೇಳಿದ್ದಾರೆ.