ಹಾಸನ: ಸಕಲೇಶಪುರ ಹೇಮಾವತಿ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲಾಗಿದ್ದಾರೆ.
ಪ್ರೇಮನಗರ ಬಡಾವಣೆಯಲ್ಲಿರುವ ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿಗಳಾದ ದಯಾನಂದ (17) ಮತ್ತು ಪ್ರಸಾದ್ (18) ಮೃತರು. ದಯಾನಂದ್ ಅವರು ಹೆನ್ನಾಲಿ ಗ್ರಾಮದವರಾಗಿದ್ದು ಪ್ರಥಮ ಪಿಯುಸಿ ಓದುತ್ತಿದ್ದರು. ಹಾಗೇ ಪ್ರಸಾದ್ ಚಿಕ್ಕಸತ್ತಿಗಾಲ್ ಗ್ರಾಮದವರಾಗಿದ್ದು ದ್ವಿತೀಯ ಪಿಯುಸಿ ಓದುತ್ತಿದ್ದರು.
ಹಾಸ್ಟೆಲ್ ಸಮೀಪವೇ ಇರುವ ಕಪ್ಪಿನಕೋಡಿ ಸಮೀಪದ ಹೇಮಾವತಿ ನದಿಗೆ ಮಧ್ಯಾಹ್ನ ಈಜಲು ತೆರಳಿದ್ದರು. ಈ ವೇಳೆ ದಯಾನಂದ್ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದುದನ್ನು ನೋಡಿ ಪ್ರಸಾದ್ ನೀರಿಗೆ ಧುಮುಕಿದ್ದಾರೆ. ಆದರೆ ಪ್ರಸಾದ್ಗೂ ಈಜು ಬರುತ್ತಿರಲಿಲ್ಲ. ಇಬ್ಬರೂ ನೀರುಪಾಲಾಗಿದ್ದಾರೆ.
ಮೃತದೇಹ ಇನ್ನೂ ಪತ್ತೆಯಾಗಿಲ್ಲ. ಅಗ್ನಿಶಾಮಕದ ದಳದ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ.