More

    ಒನ್​ವೇನಲ್ಲಿ ಬಂದ ಆಂಬುಲೆನ್ಸ್​ಗೆ ಇಬ್ಬರು ಬಲಿ

    ಬೆಂಗಳೂರು: ಆಸ್ಪತ್ರೆಗೆ ರೋಗಿಯನ್ನು ಕರೆದೊಯ್ಯುವ ಅವಸರದಲ್ಲಿ ಖಾಸಗಿ ಆಸ್ಪತ್ರೆ ಆಂಬುಲೆನ್ಸ್ ವಿವೇಕನಗರ ಸಮೀಪದ ಶ್ರೀನಿವಾಗಿಲು ಜಂಕ್ಷನ್​ನಲ್ಲಿ ಒನ್​ವೇನಲ್ಲಿ ಸಾಗಿ ಎದುರಿಗೆ ಬಂದ ಬೈಕ್​ಗೆ ಗುದ್ದಿದ ಪರಿಣಾಮ ಇಬ್ಬರು ಸವಾರರು ಮೃತಪಟ್ಟಿದ್ದಾರೆ.

    ಮುರುಗೇಶಪಾಳ್ಯ ನಿವಾಸಿಗಳಾದ ಮೊಹಮ್ಮದ್ ಮನ್ಸೂರ್ (28) ಹಾಗೂ ಮೈಸೂರಿನ ಇಬ್ರಾಹಿಂ ಖಲೀಲ್ (29) ಮೃತ ಸವಾರರು. ಆಂಬುಲೆನ್ಸ್ ಚಾಲಕ ಅಭಿಷೇಕ್​ನನ್ನು ಬಂಧಿಸಿರುವುದಾಗಿ ಅಶೋಕನಗರ ಪೊಲೀಸರು ತಿಳಿಸಿದ್ದಾರೆ.

    ಮಣಿಪಾಲ್ ಆಸ್ಪತ್ರೆಯಲ್ಲಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ರೋಗಿಯನ್ನು ಜ.7ರ ಸಂಜೆ ಅಭಿಷೇಕ್, ವೈದ್ಯರ ಸಲಹೆ ಮೇರೆಗೆ ಸೇಂಟ್ ಜಾನ್ಸ್ ಆಸ್ಪತ್ರೆಗೆ ಆಂಬುಲೆನ್ಸ್​ನಲ್ಲಿ ಕರೆದೊಯ್ಯುತ್ತಿದ್ದ.

    ಬೈಕ್​ನಲ್ಲಿ ಕೆಲಸ ಮುಗಿಸಿಕೊಂಡು ಮನ್ಸೂರ್ ಮತ್ತು ಖಲೀಲ್ ಶ್ರೀನಿವಾಗಿಲು ಜಂಕ್ಷನ್​ನಿಂದ ದೊಮ್ಮಲೂರು ಕಡೆಗೆ ಸಾಗುತ್ತಿದ್ದರು. ಏರ್​ವ್ಯೂ ಜಂಕ್ಷನ್​ನಿಂದ ಅತಿವೇಗವಾಗಿ ಒನ್​ವೇನಲ್ಲಿ ಬಂದ ಆಂಬುಲೆನ್ಸ್, ಬೈಕ್​ಗೆ ಗುದ್ದಿದೆ. ಗಂಭೀರವಾಗಿ ಗಾಯಗೊಂಡ ಬೈಕ್ ಸವಾರರನ್ನು ಸ್ಥಳೀಯರು ಆಸ್ಪತ್ರೆ ಸೇರಿಸಿದ್ದರು. ಆಂಬುಲೆನ್ಸ್​ನಲ್ಲಿದ್ದ ರೋಗಿಯನ್ನು ಸಹ ಆಸ್ಪತ್ರೆಗೆ ತಲುಪಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಚಿಕಿತ್ಸೆ ಫಲಿಸದೆ ಗಾಯಾಳುಗಳು ಬುಧವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ. ಮೃತರು ಸುಲ್ತಾನ್ ಜ್ಯುವೆಲ್ಸ್​ನಲ್ಲಿ ಕೆಲಸ ಮಾಡುತ್ತಿದ್ದರು. ಏಕಮುಖ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಅತಿವೇಗವಾಗಿ ಅಂಬುಲೆನ್ಸ್ ಸಾಗಿರುವುದು ಘಟನೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಶೋಕನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಆಂಬುಲೆನ್ಸ್ ಚಾಲಕರಿಗೂ ಶಿಕ್ಷೆ ನೀಡಲು ಅವಕಾಶವಿದೆ

    ರೋಗಿಗಳ ಪ್ರಾಣ ಉಳಿಸುವ ಸಲುವಾಗಿ ಆಂಬುಲೆನ್ಸ್​ಗೆ ಸಂಚಾರ ನಿಯಮ ಉಲ್ಲಂಘಿಸಿ ಸಾಗಲು ಅನುವು ಮಾಡಲಾಗುತ್ತದೆ. ಹಾಗಂತ ಕಾನೂನಿನಲ್ಲಿ ವಿಶೇಷ ಅವಕಾಶ ಇಲ್ಲ. ಆಂಬುಲೆನ್ಸ್ ಚಾಲಕರು ಸಹ ಎಚ್ಚರಿಕೆಯಿಂದ ಸಾಗಬೇಕು. ಬೇರೆಯವರ ಜೀವ ತೆಗೆದರೆ ಅವರಿಗೂ ಕಾನೂನಿನಲ್ಲಿ ಶಿಕ್ಷೆ ನೀಡಲು ಅವಕಾಶವಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಡಾ. ಬಿ.ಆರ್. ರವೀಕಾಂತೇಗೌಡ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts