ಬೆಂಗಳೂರು: ಎರಡು ಪ್ರತ್ಯೇಕ ಮನೆಗಳವು ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಕೆ.ಆರ್.ಪುರ ಠಾಣೆ ಪೊಲೀಸರು, ಆರೋಪಿಗಳಿಂದ ಸುಮಾರು ೪೦ ಲಕ್ಷ ರೂ. ಮೌಲ್ಯದ ೪೦೬ ಗ್ರಾಂ ಚಿನ್ನಾಭರಣ ಹಾಗೂ ೧ ಕೆ.ಜಿ.ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಕಳವು ಮಾಡುತ್ತಿದ್ದ ಆಂಧ್ರಪ್ರದೇಶದ ಚಿತ್ತೂರು ಮೂಲದ ಚೆಲ್ಲ ನರಸಿಂಹಲು(೩೨) ಎಂಬಾತನನ್ನು ಬಂಧಿಸಿದ್ದಾರೆ. ಈತನಿಂದ ೩೦ ಲಕ್ಷ ರೂ. ಮೌಲ್ಯದ ೩೦೬ ಗ್ರಾಂ ಚಿನ್ನಾಭರಣ, ೧ ಕೆ.ಜಿ.ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ೨೦೨೪ ರ ಅಕ್ಟೋಬರ್ನಲ್ಲಿ ರಾಮಮೂರ್ತಿನಗರದ ಅಕ್ಷನಗರದ ಮನೆಯೊಂದರ ಸದಸ್ಯರು ಮನೆಗೆ ಬೀಗ ಹಾಕಿಕೊಂಡು ಮೈಸೂರಿಗೆ ಹೋಗಿದ್ದರು. ಈ ವೇಳೆ ದುಷ್ಕರ್ಮಿಗಳು ಮನೆಯ ಬೀಗ ಮುರಿದು ಚಿನ್ನಾಭರಣ ಹಾಗೂ ಬೆಳ್ಳಿವಸ್ತುಗಳನ್ನು ಕಳವು ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು ಬಾತ್ಮೀದಾರರು ನೀಡಿದ ಮಾಹಿತಿ ಮೇರೆಗೆ ಎಲೆಕ್ಟ್ರಾನಿಕ್ ಸಿಟಿಯ ಹುಸ್ಕೂರು ಕೆರೆ ಬಳಿ ಚೆಲ್ಲ ನರಸಿಂಹಲುನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ತಾನು ಹಾಗೂ ತನ್ನ ಸಹಚರ ಸೇರಿಕೊಂಡು ಮನೆಗಳವು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಅಲ್ಲದೇ ಈ ಹಿಂದೆ ನಗರದ ವಿವಿಧೆಡೆ ಮನೆಗಳವು ಮಾಡಿರುವ ಬಗ್ಗೆಯೂ ಹೇಳಿದ್ದಾನೆ.
೧೩ ಮನೆಗಳವು ಪ್ರಕರಣ ಬೆಳಕಿಗೆ:
ಆರೋಪಿ ಹೆಚ್ಚಿನ ವಿಚಾರಣೆ ನಡೆಸಿದ ವೇಳೆ ನೀಡಿದ ಮಾಹಿತಿ ಮೇರೆಗೆ ಟಿ.ಸಿ.ಪಾಳ್ಯ, ದೇವಸಂದ್ರ, ಮೇಡಹಳ್ಳಿ ಹಾಗೂ ಸೀಗೆಹಳ್ಳಿಯ ವಿವಿಧ ಜ್ಯುವೆಲ್ಲರಿ ಅಂಗಡಿಗಳಲ್ಲಿ ಅಡಮಾನವಿರಿಸಿದ್ದ ಹಾಗೂ ಮನೆಯಲ್ಲಿ ಬಚ್ಚಿಟ್ಟಿದ್ದ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಯ ಬಂಧನದಿಂದ ಕೆ.ಆರ್.ಪುರದ ೧೨ ಮನೆಗಳವು ಹಾಗೂ ಕಾಡುಗೋಡಿಯ ೧ ಸೇರಿ ಒಟ್ಟು ೧೩ ಮನೆಗಳವು ಪ್ರಕರಣಗಳು ಪತ್ತೆಯಾಗಿವೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮನೆಗಳ್ಳನ ಬಂಧನ:
ಮತ್ತೊಂದು ಪ್ರಕರಣದಲ್ಲಿ ಮನೆಯೊಂದರ ಬೀಗ ಮುರಿದು ಕಳವು ಮಾಡಿದ್ದ ಕೋಲಾರದ ಆ್ಯಂಡ್ರಸನ್ಪೇಟೆಯ ಜ್ಞಾನಪ್ರಕಾಶ್ (೪೬) ಎಂಬಾತನನ್ನು ಬಂಧಿಸಿರುವ ಪೊಲೀಸರು ೧೦ ಲಕ್ಷ ರೂ. ಮೌಲ್ಯದ ೧೦೦ ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.
ಇತ್ತೀಚೆಗೆ ಭಟ್ಟರಹಳ್ಳಿಯ ಮನೆಯೊಂದರ ಬೀಗ ಮುರಿದು ದುಷ್ಕರ್ಮಿಗಳು ಕಳವು ಮಾಡಿದ್ದರು. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಮಾಡುವಾಗ, ಪ್ರಕರಣವೊಂದರಲ್ಲಿ ಕೆಜಿಎಫ್ನ ಕಾರಾಗೃಹದಲ್ಲಿದ್ದ ಆರೋಪಿ ಜ್ಞಾನಪ್ರಕಾಶ್ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ಬಳಿಕ ಆತನನ್ನು ಬಾಡಿವಾರೆಂಟ್ ಮೇಲೆ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಸಹಚರನ ಜತೆ ಸೇರಿ ತಾನೇ ಮನೆಗಳವು ಮಾಡಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಹೆಚ್ಚಿನ ವಿಚಾರಣೆ ವೇಳೆ ಆರೋಪಿ ನೀಡಿದ ಮಾಹಿತಿ ಮೇರೆಗೆ ಚಿಂತಾಮಣಿಯ ಜ್ಯುವೆಲ್ಲರಿ ಅಂಗಡಿಯಲ್ಲಿ ಅಡಮಾನವಿರಿಸಿದ್ದ ಚಿನ್ನಾಭರಣಗಳನ್ನು ಜಪ್ತಿ ಮಾಡಲಾಗಿದೆ. ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಯು ಬಂಧನಕ್ಕೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
