ನವದೆಹಲಿ: ಗಗನಕ್ಕೆ ಏರಿದ್ದ ಈರುಳ್ಳಿ ದರ ನಿಯಂತ್ರಿಸಲು ಕೇಂದ್ರ ಸರ್ಕಾರ ಆಮದು ಮಾಡಿಕೊಂಡಿದ್ದ 34 ಸಾವಿರ ಟನ್ ಈರುಳ್ಳಿ ಮಾರಾಟವಾಗದೆ ಉಳಿದಿದೆ.
ರಾಷ್ಟ್ರದಲ್ಲಿ ಈರುಳ್ಳಿ ದರ ಕೆಜಿಗೆ 200 ರೂಪಾಯಿ ತಲುಪಿದ್ದ ವೇಳೆ ಕೇಂದ್ರ ಸರ್ಕಾರ ಟರ್ಕಿ ಹಾಗೂ ಈಜಿಪ್ಟ್ನಿಂದ 34 ಸಾವಿರ ಟನ್ ಈರುಳ್ಳಿ ರಫ್ತು ಮಾಡಿಕೊಂಡಿತ್ತು. ಈ ಈರುಳ್ಳಿ ಗ್ರಾಹಕರಿಗೆ ರುಚಿಸದ ಹಿನ್ನೆಲೆಯಲ್ಲಿ ಮಾರಾಟವಾಗದೆ ಗೋದಾಮಿನಲ್ಲೆ ಕೊಳೆಯುತ್ತಿದೆ.
ವಿದೇಶದಿಂದ ರಫ್ತು ಮಾಡಿಕೊಂಡಿರುವ ಈರುಳ್ಳಿಯನ್ನು ಮಾರಾಟ ಮಾಡಲು ನಿರ್ಧರಿಸಿರುವ ಸರ್ಕಾರ ಕೆಜಿ 25 ರೂಪಾಯಿಗೆ ಮಾರಾಟ ಮಾಡಲು ನಿರ್ಧರಿಸಿದೆ. ಈ ದರಕ್ಕೆ ಈರುಳ್ಳಿ ಮಾರಾಟ ಮಾಡಿದರೆ ಸಾಗಾಣಿಕೆ ವೆಚ್ಚವೂ ಸಿಗುವುದಿಲ್ಲ ಎಂಬುದು ಅಧಿಕಾರಿಗಳ ಹೇಳಿಕೆ.
ಟರ್ಕಿ ಹಾಗೂ ಈಜಿಪ್ಟ್ನಿಂದ ಆಮದು ಮಾಡಿಕೊಂಡಿರುವ ಈರುಳ್ಳಿಯನ್ನು ಹೆಚ್ಚು ದಿನಗಳ ಕಾಲ ಕೊಳೆಯದಂತೆ ಸಂಗ್ರಹಿಸುವುದು ಕಷ್ಟ. ನಿಯಂತ್ರಿತ ಪರಿಸರದಿಂದ ಹೊರಗೆ ಸಂಗ್ರಹಿಸಿದರೆ ತೇವಾಂಶ ಉಂಟಾಗಿ ಕೊಳೆಯುತ್ತದೆ. ಹೀಗಾಗಿ ಈರುಳ್ಳಿಯನ್ನು ನೆರೆ ರಾಷ್ಟ್ರಗಳಾದ ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ ಮತ್ತು ಮಾಲ್ಡೀವ್ಸ್ಗೆ ರಫ್ತು ಮಾಡಲು ಸರ್ಕಾರ ಚಿಂತಿಸುತ್ತಿದೆ.
ರಾಷ್ಟ್ರಕ್ಕೆ ಆಮದು ಮಾಡಿಕೊಂಡಿರುವ ಈರುಳ್ಳಿ ಟರ್ಕಿಯಿಂದ ಅಧಿಕವಾಗಿ ಬಂದಿದೆ. ಇದು ಭಾರತದ ಈರುಳ್ಳಿಗಿಂತ ಗಾತ್ರದಲ್ಲಿ ದೊಡ್ಡದಾಗಿದೆ. ಅಲ್ಲದೆ ಸ್ಥಳೀಯ ಈರುಳ್ಳಿಯಷ್ಟು ರುಚಿ ಇಲ್ಲ. ಹೀಗಾಗಿ ಗ್ರಾಹಕರು ಇದನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಟರ್ಕಿ ಹಾಗೂ ಈಜಿಪ್ಟ್ನಿಂದ ಆಮದು ಆಗಿರುವ ಈರುಳ್ಳಿಯನ್ನು ಖರೀದಿಸಲು ನೆರೆ ರಾಷ್ಟ್ರ ಬಾಂಗ್ಲಾ ಉತ್ಸುಕವಾಗಿದೆ. ಆದರೆ ಆ ರಾಷ್ಟ್ರ ಅಧಿಕ ರಿಯಾಯಿತಿ ಕೇಳುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರದಲ್ಲಿ ಜನವರಿ 16 ರ ಅವಧಿಯಲ್ಲಿ 22 ಸಾವಿರ ಟನ್ ಈರುಳ್ಳಿ ದಾಸ್ತಾನು ಇತ್ತು. ಜನವರಿ 25 ರ ವೇಳೆಗೆ ಈ ದಾಸ್ತಾನಿಗೆ ಹೆಚ್ಚುವರಿಯಗಿ 8 ರಿಂದ 9 ಸಾವಿರ ಟನ್ ಈರುಳ್ಳಿ ಸೇರ್ಪಡೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಂಧ್ರಪ್ರದೇಶ 900 ಟನ್, ಉತ್ತರ ಪ್ರದೇಶ 220 ಟನ್, ತೆಲಂಗಾಣ 120 ಟನ್, ಪಶ್ಚಿಮ ಬಂಗಾಳ 125 ಟನ್, ಉತ್ತರಾಖಂಡ 265 ಟನ್ ಆಮದು ಈರಳ್ಳಿಯನ್ನು ಮಾತ್ರ ಪಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)