ಹೊನ್ನಾಳಿ: ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದರಿಂದ ತುಂಗಭದ್ರಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಹೀಗಾಗಿ ಪಟ್ಟಣದ 20 ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಪಟ್ಟಣದ ಬಾಲ್ರಜ್ಘಾಟ್ ಪಕ್ಕದಲ್ಲೇ ಇರುವ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಕಾಳಜಿ ಕೇಂದ್ರ ಸ್ಥಾಪಿಸಿದ್ದು, ಇಲ್ಲಿಗೆ 20 ಕುಟುಂಬಗಳ ಸುಮಾರು 110 ಜನರಿಗೆ ಆಶ್ರಯ ನೀಡಲಾಗಿದೆ ಎಂದು ತಹಸೀಲ್ದಾರ್ ರಶ್ಮಿ ವಿಜಯವಾಣಿಗೆ ತಿಳಿಸಿದ್ದಾರೆ.
ಬಾಲ್ರಾಜ್ ಘಾಟ್ನ ಸುಮಾರು 20 ಮನೆಗಳಿಗೆ ನೀರು ನುಗ್ಗಿದೆ. ಎಡಬಿಡದೆ ಮಳೆ ಸುರಿಯುತ್ತಿದ್ದರಿಂದ ನದಿ ನೀರಿನ ಮಟ್ಟ ಮೂರನೇ ಬಾರಿ ಅಪಾಯದಮಟ್ಟ ತಲುಪುತ್ತಿದೆ. ಹೊನ್ನಾಳಿ, ನ್ಯಾಮತಿ ಮತ್ತು ಸಾಸ್ವೆಹಳ್ಳಿ ಭಾಗದಲ್ಲಿ ಎಲ್ಲಿ ನೋಡಿದರೂ ನೀರೇ ನೀರು ಸದೃಶ್ಯವಾಗುತ್ತಿದೆ.
ತುಂಬಿದ ತುಂಗಭದ್ರೆ: ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಹಾಗೂ ದಾವಣಗೆರೆ ಜಿಲ್ಲೆಯ ಹೊನ್ನಾಳಿ, ನ್ಯಾಮತಿ ತಾಲೂಕಿನಾದ್ಯಂತ ಕಳೆದ ಹತ್ತು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಪರಣಾಮ ನದಿ ನೀರಿನ ಮಟ್ಟ ಹೆಚ್ಚುತ್ತಲೇ ಇದೆ.
ತುಂಗಾದಿಂದ 45 ಸಾವಿರ ಕ್ಯೂಸೆಕ್ ಹಾಗೂ ಭದ್ರಾದಿಂದ 55 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಹೀಗಾಗಿ ತುಂಗಭದ್ರಾದಿಂದ ಹೊರ ಹರಿವು ಹೆಚ್ಚಾಗಿದೆ. ಹೊನ್ನಾಳಿ, ನ್ಯಾಮತಿ ತಾಲೂಕುಗಳ ನದಿಪಾತ್ರದ ಗ್ರಾಮಸ್ಥರಿಗೆ ಟಾಂ ಟಾಂ ಹೊಡೆಸಿ ಯಾರೂ ನದಿಯಲ್ಲಿ ಇಳಿಯದಂತೆ ಎಚ್ಚರಿಕೆ ನೀಡಿದ್ದೇವೆ ಎಂದು ತಾಪಂ ಇಒ ರಾಮಬೋವಿ ತಿಳಿಸಿದರು.