ಮಂಗಳೂರು: ತುಳುವನ್ನು ಕಟ್ಟುವ ಮತ್ತು ಮುಟ್ಟಿಸುವ ಕೆಲಸವನ್ನು ಮಕ್ಕಳ ಹಂತದಿಂದಲೇ ಮಾಡುತ್ತಾ ಬಂದರೆ ಅದೇ ತುಳುವಿಗೆ ನಾವು ಕೊಡುವ ಮಾನ್ಯತೆ ಎಂದು ತುಲುವೆರೆ ಕಲ ಅಧ್ಯಕ್ಷೆ, ತುಳು ಲಿಪಿ ಶಿಕ್ಷಕಿ ಗೀತಾ ಲಕ್ಷ್ಮೀಶ್ ಹೇಳಿದರು.

ಮಲ್ಲಿಕಟ್ಟೆ ಶ್ರೀಕೃಷ್ಣ ಸಭಾಭವನದಲ್ಲಿ ‘ಗುಬ್ಬಿದ ಗೂಡು’ ಮಕ್ಕಳ ವಾದ್ಯಗೋಷ್ಠಿ ಗಾಯನ ತಂಡ ಆಯೋಜಿಸಿದ ಮಕ್ಕಳ ತುಳು ಪದ ಪ್ರಾಸ ಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದರು.
ತುಳುವನ್ನು ಉಳಿಸುವಲ್ಲಿ ಅಮ್ಮಂದಿರ ಪಾತ್ರ ಬಹಳ ಮುಖ್ಯವಾದದ್ದು. ತುಳುವನ್ನು ಮಕ್ಕಳ ಪದ ಪ್ರಾಸಗಳ ಮೂಲಕ ಹೇಳಿಕೊಟ್ಟರೆ ಮಕ್ಕಳಿಗೆ ಭಾಷೆ ಇಷ್ಟವಾಗುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ನಮ್ಮ ತುಳುನಾಡು ಟ್ರಸ್ಟ್ ಮಂಗಳೂರು ಅಧ್ಯಕ್ಷ ರೋಹಿತಾಶ್ವ ಮಾತನಾಡಿ, ತುಳುತನವನ್ನು ಮತ್ತು ತುಳು ಸಂಸ್ಕೃತಿಯನ್ನು ನಾವು ಬಹಳ ಹೆಮ್ಮೆಯಿಂದ ನಮ್ಮೊಳಗೆ ತುಂಬಿಕೊಂಡಾಗಲೇ ಇತರರೂ ನಮ್ಮ ಸಂಸ್ಕೃತಿಯ ಬಗ್ಗೆ ಗೌರವ ತಾಳುತ್ತಾರೆ ಎಂದರು.
ಸುರತ್ಕಲ್ ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ.ಪಿ.ಕೃಷ್ಣಮೂರ್ತಿ ಮತ್ತು ನಿವೃತ್ತ ಶಿಕ್ಷಕ, ಸಾಂಸ್ಕೃತಿಕ ಕಾರ್ಯಕ್ರಮ ಸಂಘಟಕ ಪೇಜಾವರ ಸುಧಾಕರ ರಾವ್ ಉಪಸ್ಥಿತರಿದ್ದರು. ‘ಗುಬ್ಬಿದ ಗೂಡು’ ತಂಡದ ನಿರ್ದೇಶಕ ಎಲ್ಲೂರು ಶ್ರೀನಿವಾಸ ರಾವ್, ಕಾರ್ಯಕಾರಿ ಸಮಿತಿಯ ಕವಿತಾ ಮತ್ತು ಶ್ರೇಯಶ್ರೀ ಭಟ್, ತಂಡದ ಕಾರ್ಯದರ್ಶಿ ರಘು ಇಡ್ಕಿದು, ವಿದ್ಯಾ ಯು. ಉಪಸ್ಥಿತರಿದ್ದರು.
ವಿನಮ್ರ ಇಡ್ಕಿದು ಹಾಡಿದ ತುಳು ಮತ್ತು ಮಲಯಾಳಂ ಹಾಡುಗಳ ದೃಶ್ಯ ಗೀತೆಗಳನ್ನು ರೋಹಿತಾಶ್ವ ಮತ್ತು ಗೀತಾ ಲಕ್ಷ್ಮೀಶ್ ಬಿಡುಗಡೆಗೊಳಿಸಿದರು. ತುಳು ಪದ ಪ್ರಾಸ ಗಾಯನದಲ್ಲಿ ಪಾಲ್ಗೊಂಡ ಎಲ್ಲ ಮಕ್ಕಳನ್ನು ಪಾಲಕರು ಮತ್ತು ಅತಿಥಿಗಳ ಸಮ್ಮುಖ ಅಭಿನಂದಿಸಲಾಯಿತು. ಎಲ್ಲೂರು ಶ್ರೀನಿವಾಸ ರಾವ್ ಸ್ವಾಗತಿಸಿ, ಪ್ರಸ್ತಾವಿಸಿದರು. ರಘು ಇಡ್ಕಿದು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.