ವಿಜಯವಾಣಿ ಸುದ್ದಿಜಾಲ ಮಂಗಳೂರು
ತುಳುನಾಡಿನ ಜನತೆ ತುಳು ಭಾಷೆಯ ಜತೆ ಇತರ ಭಾಷೆಗಳನ್ನು ಗೌರವಿಸುತ್ತಾರೆ. ಎಲ್ಲ ಜನರನ್ನು ತಮ್ಮವರಂತೆ ನೋಡಿಕೊಳ್ಳುವ ತುಳುವರ ಹೃದಯ ವೈಶಾಲ್ಯತೆ ದೇಶಕ್ಕೆ ಮಾದರಿ ಎಂದು ರೋಟರಿ ಜಿಲ್ಲೆ 3181 ಇದರ ಅಸಿಸ್ಟೆಂಟ್ ಗವರ್ನರ್ ಕೆ.ಎಂ.ಹೆಗ್ಡೆ ಹೇಳಿದರು.

ತುಳುವೆರೆ ಕಲ ವತಿಯಿಂದ ಪರಿಸರ ಅಧ್ಯಯನ ಕೇಂದ್ರ ನೆಲ್ಲಿಗುಡ್ಡೆ ಮತ್ತು ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಸಹಯೋಗದಲ್ಲಿ ಭಾನುವಾರ ನಗರದ ಲಾಲ್ಬಾಗ್ನ ಇಂದಿರಾ ಪ್ರಿಯದರ್ಶಿನಿ ವನಿತಾಪಾರ್ಕ್ನಲ್ಲಿ ನಡೆದ ‘ಪಚ್ಚೆ ಸಿರಿ’ ತುಳು ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.
ರೆಡ್ಕ್ರಾಸ್ ಸೊಸೈಟಿ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಮಾತನಾಡಿ, ತುಳು ಭಾಷೆಗೆ ಸಂಬಂಧಿಸಿದ ಸಾಹಿತ್ಯ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದು ನಮ್ಮ ಕರ್ತವ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ತುಳುವೆರೆ ಕಲದ ಅಧ್ಯಕ್ಷೆ ಗೀತಾ ಲಕ್ಷ್ಮೀಶ್ ಮಾತನಾಡಿ, ತುಳು ಲಿಪಿಯೇ ಭಾಷೆಯ ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ ಸಾಕ್ಷಿ. ತುಳು ಲಿಪಿ ಕಲಿಕೆ ಜತೆಗೆ ತುಳುವಿನ ಮೂಲ ಶಬ್ದಗಳನ್ನೇ ಬಳಸುವ ಮೂಲಕ ಭಾಷೆಯ ಸೊಗಡು ಉಳಿಸಲು ಪ್ರಯತ್ನಿಸಬೇಕು ಎಂದರು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ದ.ಕ. ಜಿಲ್ಲಾಧ್ಯಕ್ಷ ಪಿ.ಬಿ.ಹರೀಶ್ ರೈ ಭಾಗವಹಿಸಿದ್ದರು. ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ನ ಅಧ್ಯಕ್ಷ ಬ್ರಾಯನ್ ಪಿಂಟೊ, ಪ್ರಧಾನ ಕಾರ್ಯದರ್ಶಿ ರಾಜೇಶ್ ಸೀತಾರಾಮ್, ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಪತ್ರಕರ್ತರ ಸಂಘದ ಕೋಶಾಧಿಕಾರಿ ಪುಷ್ಪರಾಜ್.ಬಿ.ಎನ್. ಉಪಸ್ಥಿತರಿದ್ದರು.
ತುಳು ವಿದ್ವಾಂಸ ಚಂದ್ರಹಾಸ ಕಣಂತೂರು ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಶ್ರೀಶಾ ವಾಸವಿ ತುಳುನಾಡ್ ಸ್ವಾಗತಿಸಿ, ಸುಮಂಗಲಾ ದಿನೇಶ್ ಶೆಟ್ಟಿ ವಂದಿಸಿದರು. ಸೌಮ್ಯ.ಆರ್.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.