More

    ಚಾರಣಿಗರ ಫೇವರಿಟ್ ಚಿತ್ತಾಕರ್ಷಕ ಚಾರ್ಮಾಡಿ

    ಎರಡು ಪ್ರಾಣಿಗಳು ಪರಸ್ಪರ ಮಾತಾಡುತ್ತಿವೆಯೋ ಎಂಬಂತೆ ಕಾಣುವ ಏರಿಕಲ್ಲು ಬೆಟ್ಟ ಚಿತ್ತಾಕರ್ಷಕ ಚಾರ್ವಡಿಗೆ ಬಂದೊಡನೆ ನಿಮ್ಮನ್ನು ಸ್ವಾಗುತಿಸುತ್ತದೆ. ಬೆಟ್ಟದ ತಪ್ಪಲಿನ ತಣ್ಣಗಿನ ಊರು ಚಾರ್ವಡಿ. ಫಾಟಿಯ ಹೆಸರೂ ಊರಿಗೂ ನಂಟಿದೆ. ಇಲ್ಲಿಂದ ಬಾಳೆಕಲ್ಲು ಗುಡ್ಡ ಚಾರಣದ ಹಾದಿ ಪ್ರಾರಂಭವಾಗುವುದು 12 ಕಿ.ಮೀ. ಬಳಿಕ ಒಂಟಿ ಮರದ ತಿರುವಿನಲ್ಲಿ.

    ಬಾಳೆಕಲ್ಲು ಚಾರಣದ ಹಾದಿಗಾಗಿ ಅನೇಕರಿಗೆ ಫೋನ್ ಮಾಡಿ ಒಬ್ಬನನ್ನು ಮಾರ್ಗದರ್ಶಕನನ್ನಾಗಿಸಿ ಆರಿಸಿಕೊಂಡೆವು. ಮಾರ್ಗದರ್ಶಕನಿಲ್ಲದೆ ಇಲ್ಲಿ ಪ್ರಯಾಣ ತೀರಾ ಅಪಾಯಕರ ಮತ್ತು ಅಸಾಧ್ಯ. ಊರ ಪಕ್ಕದ ಹೋಟೆಲ್​ಗೆ ಹೋಗಿ ಇಡ್ಲಿ, ಅವಲಕ್ಕಿ, ಬನ್ಸ್ ಸೇವಿಸಿ ಹೊರಟಿದ್ದು ಬಾಳೆಕಲ್ಲು, ಕೊಡೆಕಲ್ಲು ಏರಲು. ಹೊಂಡಮಯ ದಾರಿಯಲ್ಲಿ ಸ್ವಲ್ಪ ಹೊತ್ತು ಪ್ರಯಾಣ.

    ಏರು ದಾರಿಯ ಚಾರ್ವಡಿ ಗಿರಿಗಳನ್ನು ಸುತ್ತಿ, ಹೊಂಡ ಹಾರಿ ನಿಂತಿದ್ದು ಒಂಟಿ ಮರವೆಂಬಲ್ಲಿ. ಎಡಗಡೆಯೆಲ್ಲಾ ಮರಗಳ ಗಸ್ತು ಬಲಗಡೆ ಬಾಯಿಬಿಟ್ಟ ಪ್ರಪಾತ! ಚಾರ್ವಡಿಯ ಜಲಕನ್ನಿಕೆಯೊಬ್ಬಳು ಅಲ್ಲೇ ನಿಶ್ಶಬ್ದವಾಗಿ ಹರಿಯುತ್ತಾಳೆ. ಅವಳ ಜಡೆ ಹಿಡಿದು, ಬೇರ ಮುಟ್ಟಿ, ಉಸಿರು ಬಿಟ್ಟು ಸಣ್ಣ ಗುಡ್ಡ ಹತ್ತಿದೊಡೆ ನಿಚ್ಚಳ ಹಾದಿಯ ಸಣ್ಣ ಗೆರೆ ನಮ್ಮ ಮುಂದೆ ತೆರೆದುಕೊಂಡಿತು. ಅಲ್ಲಲ್ಲಿ ಆನೆಗಳ ಲದ್ದಿ. ಚಾರ್ವಡಿ ಸನಿಹದ ಏರಿಕಲ್ಲು ಗುಡ್ಡ ಅಷ್ಟೊತ್ತಿಗಾಗಲೇ ಸೆಲ್ಪಿಗೆ ಪೋಸ್ ಕೊಟ್ಟು ಸ್ಮೈಲ್ ಮಾಡುತ್ತಿತ್ತು.

    ಮೂವತ್ತು ನಿಮಿಷಗಳ ಏರು ದಾರಿಯನ್ನೇರಿ, ಕೊಡೆಕಲ್ಲಿನ ಮೇಲಿದ್ದೆವು. ದೊಡ್ಡ ಬೆಟ್ಟವೇರುವ ಮೊದಲಿನ ಪುಟಾಣಿ ನಿಲ್ದಾಣವಿದ್ದಂತೆ ಈ ಕೊಡೆಕಲ್ಲು ಬೆಟ್ಟ. ಕೊಡೆಯೊಂದು ಬೆಟ್ಟದ ತುದಿಯಲ್ಲಿ ಕೂತು ವಿಶ್ರಾಂತಿ ಪಡೆಯುತ್ತಿದೆಯೋ ಎಂಬಂತಿದೆ. ಏರದೆ ಬಿಡಲು ಸಾಧ್ಯವಿಲ್ಲದಂತಹ ಅಪರಿಮಿತ ಸೌಂದರ್ಯದ ಬೆಟ್ಟ ಎದುರಿಗೆ, ಅದುವೇ ಬಾಳೆ ಕಲ್ಲು. ಆರೇಳು ಜನ ಇಲ್ಲಿ ಕುಳಿತು ಬಾಳೆಕಲ್ಲು ಬೆಟ್ಟವನ್ನು ನೋಡುತ್ತಾ ದಿನ ಕಳೆಯಲು ಅಡ್ಡಿಯಿಲ್ಲ. ಕೊಡೆ ಕಲ್ಲು ಕರಡಿಗಳ ಅಡಗುತಾಣ. ನಾವು ಬರುವ ನಾಲ್ಕು ದಿನಗಳ ಹಿಂದೆ ಚಾರಣಿಗರ ದೊಡ್ಡ ತಂಡವನ್ನು ಕರಡಿಯೊಂದು ಅಟ್ಟಿಸಿಕೊಂಡು ಬಂದಿತ್ತು.

    ಬಲು ಎಚ್ಚರಿಕೆಯಿಂದ ಸುತ್ತ ದಿಟ್ಟಿಸಿ ನೋಡಿ ಕರಡಿ ಇಲ್ಲದ್ದು ಖಾತ್ರಿಯಾದ ಮೇಲೆ ಮುಂದಡಿ ಇಟ್ಟೆವು. ಆಹಾ ಇದರ ಸೌಂದರ್ಯವೇ… ಹಿಂದಕ್ಕೆ ಏರಿಕಲ್ಲು, ಎದುರಿಗೆ ಬಾಳೆಕಲ್ಲು. ವಿಶ್ರಮಿಸಿ ಮುಂದುವರಿದೆವು. ಅಲ್ಲಲ್ಲಿ ಜರಿದ ಗುಡ್ಡವ ಹಾದು, ಆನೆ ಲದ್ದಿಯ ನೋಡಿ, ಇಲ್ಲಿ ಆನೆಗಳ ಹಾವಳಿಯಿದೆ ಎಂದರಿತು ಒಂದರೆಗಳಿಗೆ ಬೆದರಿ ಬೆವರಿ ಮುಂದಡಿ ಇಟ್ಟೆೆವು. ತಿಂಗಳ ಹಿಂದೆ ನಮ್ಮ ಮಾರ್ಗದರ್ಶಕನಿಗೆ ಆನೆ ಅಟ್ಟಿಸಿಕೊಂಡು ಬಂದಿತ್ತಂತೆ. ಆತ ನಮಗೆ ಆ ವಿಷಯ ಹೇಳಿ ಇನ್ನಷ್ಟು ಹೆದರಿಸಿದ. ಬಂಜಾರು ಮಲೆಯಲ್ಲಿದ್ದಷ್ಟು ಆನೆ ಇಲ್ಲಿಲ್ಲವೆಂದಾಗ ಸ್ವಲ್ಪ ಸಮಾಧಾನ.

    ಬಾಳೆ ಕಲ್ಲಿನ ಕೊನೆಯ ಏರು ದಾರಿ ನಮಗೆ ಕುದುರೆ ಮುಖದ ನೆನಪು ತಂದಿತು. ನಡುವೆ ಸಿಗುವ ಅತ್ತಿ ಮರ, ಕಣಿವೆ ದಾಟಿ ಬಾಳೆ ಗುಡ್ಡದ ನೆತ್ತಿಯ ಕಡೆ ಹೊರಟೆವು. ಕಡಿದಾದ ಎರಡು ಗುಡ್ಡವೇರಿದರೆ ಬಾಳೆ ಕಲ್ಲು ನಿಮ್ಮ ಕೈವಶ. ನೆತ್ತಿಯ ನೋಟ ಚಿತ್ತ ಭಿತ್ತಿಯಲ್ಲಿನ್ನೂ ಹಸಿರುಹಸಿರಾಗಿದೆ. ಇಲ್ಲಿನ ಸೌಂದರ್ಯವನ್ನು ಪದಗಳಲ್ಲಿ ಹಿಡಿದಿಡುವುದು ಕಷ್ಟ.

    ಒಣಗಲು ಹಾಕಿದ ಅಮ್ಮನ ಸೀರೆಯಂತೆ ಹಸಿರು ಹುಲ್ಲು ಗಾಳಿಗೆ ವೈಯಾರ ಮಾಡುತ್ತಿತ್ತು. ಯುದ್ಧ್ದ್ಕೆ ನಿಂತ ಸೈನಿಕರಂತೆ ಸುತ್ತುವರಿದ ಮಲೆಗಳ ಸಾಲು. ದೂರದಲ್ಲೆರಡು ಜಲಧಾರೆ. ಬಂಡಾಜೆ ಗುಡ್ಡ, ಸುಂಕ ಸಾಲೆ ನದಿಯ ಸೌಂದರ್ಯ. ಬಲ್ಲಾಳರಾಯನ ಕೋಟೆ ಇರುವ ಬೆಟ್ಟ, ನೋಡಲು ಒಂದೇ ಎರಡೇ! ವಾವ್ ಎಂದಿತು ಮನಸ್ಸು. ಗಾಳಿಗೆ ಜೀಕುವ ಹುಲ್ಲು ನೋಡುವುದೇ ಖುಷಿ. ನೆತ್ತಿಯ ಮೇಲೆ ಕೀಟಗಳ ರಾಶಿ. ಪಶ್ಚಿಮ ಘಟ್ಟಕ್ಕೇ ಸೀಮಿತವಾದ ಅಗಣಿತ ಚಿಟ್ಟೆ ಸಮೂಹ. ಅಡಿಗಡಿಗೆ ಕ್ಯಾಮರಾದ ಮುಡಿಗೇರಿದ ಚಿತ್ರಗಳು ಬಹುಕಾಲ ಬಿಡದೇ ಕಾಡುವಂತಹವು. ಇಂತಹ ಚಿತ್ರಗಳಿಗಾಗಿಯಾದರೂ ಒಮ್ಮೆ ಇವನ್ನೇರಲು ಹೊರಡಬೇಕು. ಅಪರಿಮಿತ ಸೌಂದರ್ಯ ರಾಶಿ ನೋಡಿ ಪುಳಕದಿಂದ ಹಿಂದಿರುಗಿದೆವು.

    ಪಶ್ಚಿಮ ಘಟ್ಟದ ಅನನ್ಯ ಪರ್ವತ ಶ್ರೇಣಿಗಳಲ್ಲಿ ಚಾರ್ವಡಿ ತೀರಾ ಭಿನ್ನ. ಇಲ್ಲಿನ ಜೀವ ಪರಿಸರವೂ ವಿಭಿನ್ನ. ಕಾಟಿ, ಕರಡಿ, ಆನೆಗಳ ಆಶ್ರಯ ತಾಣ. ಇವುಗಳಿಗೆ ತೊಂದರೆ ಆಗದಂತೆ ಎಚ್ಚರ ವಹಿಸುವುದು ಪ್ರತಿ ನಾಗರಿಕರ ಕರ್ತವ್ಯ. ನೇತ್ರಾವತಿಗೆ ನೀರುಣಿಸುವ ಇಲ್ಲಿನ ಜಲಧಾರೆಗಳನ್ನು ಮತ್ತು ಪರಿಸರವನ್ನು ಪ್ಲಾಸ್ಟಿಕ್ ರಕ್ಕಸನಿಂದ ಕಾಪಾಡಬೇಕಾದುದು ನಮ್ಮ ಜವಾಬ್ದಾರಿ.

    | ಶ್ರೀಧರ್ ಎಸ್. ಸಿದ್ದಾಪುರ 

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts