ನರಗುಂದ: ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಭಾನುವಾರ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು.
ರಾಜಯೋಗಿನಿ ಬ್ರಹ್ಮಕುಮಾರಿ ಕಮಲಕ್ಕ ಮಾತನಾಡಿ, ‘ಮಕ್ಕಳಿಗೆ ಚಿಕ್ಕವರಿದ್ದಾಗಲೇ ಒಳ್ಳೆಯ ಸಂಸ್ಕಾರ, ನಡೆ-ನುಡಿ ಸಂಪ್ರದಾಯಗಳನ್ನು ಹೇಳಿಕೊಡುವ ಮೂಲಕ ಅವರ ಭವಿಷ್ಯ ಚೆನ್ನಾಗಿ ರೂಪಿಸಲು ಪಾಲಕರು ಶ್ರಮಿಸಬೇಕು. ಕೃಷ್ಣ ಎಲ್ಲರಿಗೂ ಆದರ್ಶನಾಗಿದ್ದಾನೆ. ಅವನು ಮರ್ಯಾದಾ ಪುರುಷೋತ್ತಮ. ದೈವಿ ಗುಣಗಳನ್ನು ತುಂಬಿಕೊಂಡವನಾಗಿದ್ದಾನೆ. ಮಕ್ಕಳು ಶ್ರೀಕೃಷ್ಣನಂತಾಗುವ ಶಿಕ್ಷಣ ನೀಡಬೇಕಿದೆ’ ಎಂದರು.
ನರಗುಂದ ಈಶ್ವರೀಯ ವಿದ್ಯಾಲಯದ ಸಂಚಾಲಕಿ ಪ್ರಭಕ್ಕ ಮಾತನಾಡಿ, ಕೃಷ್ಣ ಎಂದರೆ ತನ್ನ ನಡೆ ನುಡಿಯಿಂದ ಎಲ್ಲರನ್ನೂ ಆಕರ್ಷಿಸುವವನು. ದೈವಿ ಗುಣಗಳಿಂದ ಎಲ್ಲರಿಗೂ ಬೇಕಾದವನು. ಶ್ರೀಕೃಷ್ಣ ಸರ್ವಗುಣ ಸಂಪನ್ನನಾಗಿದ್ದಾನೆ. ನಾವೆಲ್ಲರೂ ಮಾಧವರಾಗುವ ಶಿಕ್ಷಣವನ್ನು ಈಶ್ವರೀಯ ವಿದ್ಯಾಲಯದಲ್ಲಿ ಪಡೆಯುತ್ತಿದ್ದೇವೆ. ನಿತ್ಯ ಪರಮಾತ್ಮನನ್ನು ಸ್ಮರಿಸಿ ನೆಮ್ಮದಿಯ ಬದುಕು ಸಾಗಿಸುವುದನ್ನು ರೂಢಿಸಿಕೊಳ್ಳಬೇಕು ಎಂದರು.
30ಕ್ಕೂ ಅಧಿಕ ಮಕ್ಕಳು ಕೃಷ್ಣ, ರಾಧೆಯರ ವಿವಿಧ ವೇಷಭೂಷಣದಲ್ಲಿ ಕಂಗೊಳಿಸಿದರು. ಹನುಮಂತಪ್ಪ ತಳವಾರ, ಎಸ್.ಟಿ.ಪಾಟೀಲ, ಕಾಳಪ್ಪ ಬಡಿಗೇರ, ಸಿ.ಸಿ. ಮೂಲಿಮನಿ ಪಾಲ್ಗೊಂಡಿದ್ದರು. ಹನುಮಂತಪ್ಪ ಮಾದರ ಕಾರ್ಯಕ್ರಮ ನಿರ್ವಹಿಸಿದರು.