ವಿಜಯವಾಣಿ ಸುದ್ದಿಜಾಲ ಸಿಂಧನೂರು
ನಾಡಿನ ಸಂಪ್ರದಾಯ- ಸಂಸ್ಕೃತಿ ಉಳಿಸುವತ್ತ ನಮ್ಮ ಚಿತ್ತವಿರಬೇಕು ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ನಗರದ ಸತ್ಯಗಾರ್ಡನ್ನಲ್ಲಿ ಭಾನುವಾರ ಯುಗಾದಿ ಉತ್ಸವ ಸಮಿತಿಯಿಂದ ಆಯೋಜಿಸಿದ್ದ ಯುಗಾದಿ ಉತ್ಸವ ಉದ್ಘಾಟಿಸಿ ಮಾತನಾಡಿದರು.

ಸಂಪ್ರದಾಯಬದ್ಧ ಕಾರ್ಯಕ್ರಮಗಳು ಪ್ರಸ್ತುತ ಕಾಲಮಾನದಲ್ಲಿ ಅವಶ್ಯವಾಗಿವೆ. ಕುಟುಂಬಗಳು ಸಣ್ಣದಾಗಿ, ಮನುಷ್ಯರು ತಮ್ಮನ್ನು ತಾವು ಒಬ್ಬಂಟಿಗಳನ್ನಾಗಿ ಮಾಡಿಕೊಳ್ಳುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಯುಗಾದಿ ಉತ್ಸವ ಸಮಿತಿ ಪದಾಧಿಕಾರಿಗಳು ಅತ್ಯುತ್ತಮ ಕಾರ್ಯಕ್ರಮ ಮಾಡಿದ್ದಾರೆ.
ಕಳೆದ ಹದಿನೈದು ವರ್ಷಗಳಿಂದ ಯುಗಾದಿ ಉತ್ಸವ ಆಚರಣೆ ಮುಂದಾಗಿರುವುದು ಸ್ವಾಗತಾರ್ಹ ಎಂದರು. ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ, ಮನುಷ್ಯ ಸಮಾಜ ಜೀವಿಯಾಗಿದ್ದು ಆದರೆ, ಈಗ ಒಬ್ಬಂಟಿಗರಾಗಿ ನಾನಾ ರೋಗಗಳಿಗೆ ಒಳಗಾಗುತ್ತಿದ್ದಾರೆ. ಯುಗಾದಿಯೇ ನಿಜವಾದ ವರ್ಷಾರಂಭವಾಗಿದೆ. ಇಲ್ಲಿಂದಲೇ ನಮ್ಮ ಬದುಕು ಆರಂಭವಾಗುತ್ತದೆ. ಆದರೆ, ಜನವರಿ 1 ರಂದು ಹೊಸ ವರ್ಷಾಚರಣೆ ಮಾಡುತ್ತೇವೆ. ನಮ್ಮ ಸಂಪ್ರದಾಯಗಳನ್ನು ನಾವು ಜೀವಂತವಾಗಿಡುವ ಕೆಲಸ ಮಾಡಬೇಕು ಎಂದರು.
ಮಾಜಿ ಸಚಿವ ವೆಂಕಟರಾವ ನಾಡಗೌಡ ಮಾತನಾಡಿ, ಬಿರು ಬೇಸಿಗೆಯಲ್ಲಿ ಗಿಡ-ಮರಗಳು ಚಿಗುರುವ ವಸಂತ ಕಾಲದ ಆಗಮನ ಒಂದು ವಿಸ್ಮಯಕಾರಿ ಸನ್ನಿವೇಶ. ಇದುವೇ ನಿಜವಾದ ಹೊಸ ವರ್ಷ ಯುಗಾದಿಯಾಗಿದೆ ಎಂದರು.
ಸ್ಥಳೀಯ ಕಾರುಣ್ಯ ಆಶ್ರಮದ ಚನ್ನಬಸಯ್ಯಸ್ವಾಮಿ ಹಿರೇಮಠ ಹಾಗೂ ಪ್ರಗತಿಪರ ರೈತ ನೆಕ್ಕಂಟಿ ರಮಣಮೂರ್ತಿ ಅವರಿಗೆ ಕಲ್ಯಾಣ ಕರ್ನಾಟಕ ಕಣ್ಮಣಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಉತ್ಸವ ಸಮಿತಿಯ ಸಂಚಾಲಕ ವೈ. ನರೇಂದ್ರನಾಥ, ಬಿಜೆಪಿ ಮುಖಂಡ ಕೆ.ಕರಿಯಪ್ಪ, ಉದ್ಯಮಿ ರಾಜೇಶ ಹಿರೇಮಠ, ನಗರಸಭೆ ಉಪಾಧ್ಯಕ್ಷೆ ಮಂಜುಳಾ ಪ್ರಭುರಾಜ, ಡಿವೈಎಸ್ಪಿ ಬಿ.ಎಸ್.ತಳವಾರ, ಕಸಾಪ ಮಾಜಿ ಅಧ್ಯಕ್ಷೆ ಸರಸ್ವತಿ ಪಾಟೀಲ್, ಅಮರೇಶಪ್ಪ ನಾಗಲೀಕರ, ಡಾ.ಆರ್.ಚನ್ನನಗೌಡ ಪಾಟೀಲ್, ಕೆ.ರಾಮಕೃಷ್ಣ, ಎಂ.ಭಾಸ್ಕರ್, ಮುರುಳಿಕೃಷ್ಣ, ಬೀರಪ್ಪ ಶಂಭೋಜಿ, ಎನ್.ಶಿವಾ, ಚಂದ್ರಶೇಖರ ಯರದಿಹಾಳ, ಸುಮಿತ್ ತಡಕಲ್, ಆರ್.ಸಿ.ಪಾಟೀಲ್ ಇದ್ದರು.