ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಯೋಜನೆಗಳು ಹಾಗೂ ಸುಭದ್ರ ಅಡಳಿತ ಪ್ರತಿಪಕ್ಷ ಬಿಜೆಪಿಯಲ್ಲಿ ಅಸೂಯೆ ಹುಟ್ಟುಹಾಕಿದೆ. ಕೇಂದ್ರದ ಕೆಲವು ಮಂತ್ರಿಗಳ ಜತೆ ಸೇರಿ ರಾಜ್ಯ ಬಿಜೆಪಿಯವರು ಸರ್ಕಾರವನ್ನು ಉರುಳಿಸುವ ಹಗಲು ಕನಸು ಕಾಣುತ್ತಿದ್ದಾರೆ(Toppling the government is the daydream of central ministers)ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು.

ದೇವನಹಳ್ಳಿಯಲ್ಲಿ ಸರ್ಕಾರದ ಸಾಧನೆ ಸಮಾವೇಶದಲ್ಲಿ ಮಾತನಾಡಿ, ರಾಜ್ಯ ಕಾಂಗ್ರೆಸ್ನಲ್ಲಿ 140 ಶಾಸಕರಿದ್ದು ಸುಭದ್ರ ಸರ್ಕಾರವಿದೆ. ಸರ್ಕಾರ ಕೆಡವುವ ಕನಸು ಕಾಣುವುದನ್ನು ಬಿಟ್ಟು ಅಭಿವೃದ್ಧಿಗೆ ಕೈಜೋಡಿಸಿ ಎಂದು ಕರೆ ನೀಡಿದರು.
ಕೇಂದ್ರ ಸರ್ಕಾರ ಇಂಧನ ದರಗಳನ್ನು ಏರಿಕೆ ಮಾಡಿ ಜನರ ಮೇರೆ ದೊಡ್ಡ ಹೊರೆ ಹೊರಿಸಿದೆ. ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯ ಸರ್ಕಾರದ ಈ ಭಾರದ ಹೊರೆ ತಗ್ಗಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಪ್ರತಿಪಕ್ಷಗಳು ಜನಾಕ್ರೋಶ ಯಾತ್ರೆ ಶುರುಮಾಡಿದ ಹೊತ್ತಿನಲ್ಲೇ ಕೇಂದ್ರ ಸರ್ಕಾರ ಮತ್ತೆ ಇಂಧನ ದರ ಏರಿಕೆ ಮಾಡಿದೆ. ರೈತರಿಗೆ ಒಳಿತು ಮಾಡಲು 4 ರೂ.ಹಾಲಿನ ದರ ಹೆಚ್ಚಿಸಿದರೆ ಅದಕ್ಕೂ ಬಿಜೆಪಿ ವಿರೋಧ ಮಾಡುವ ಮೂಲಕ ರೈತರ ವಿರುದ್ಧವೇ ಹೋರಾಟ ಮಾಡುತ್ತಿದ್ದಾರೆ ಎಂದು ದೂರಿದರು.
ಸುಮ್ಮನೆ ವಿರೋಧ
ಗ್ಯಾರಂಟಿ ಯೋಜನೆಗಳಿಂದ ಬಡವರು, ಹಿಂದುಳಿದವರು ಸೇರಿ ಎಲ್ಲ ವರ್ಗದವರಿಗೂ ಅನುಕೂಲವಾಗಿದೆ. ಆದರೆ ಪ್ರತಿಪಕ್ಷದವರು ಸುಖಾಸುಮ್ಮನೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಪ್ರಾಮಾಣಿಕ ಸೇವೆ ನಮ್ಮ ಕೆಲಸ
ನೀವುಗಳು ಬಹುಮತದೊಂದಿಗೆ ನಮಗೆ ಅಧಿಕಾರ ಕೊಟ್ಟಿದ್ದೀರಿ ಆದ್ದರಿಂದ ನಿಮ್ಮಗಳ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುವುದಷ್ಟೇ ನಮ್ಮ ಕೆಲಸ. ಹಸಿದವರಿಗೆ ಅನ್ನದ ಬೆಲೆ ಗೊತ್ತು. ಆದ್ದರಿಂದ ಅಧಿಕಾರಕ್ಕೆ ಬಂದ ತಕ್ಷಣವೇ ಅನ್ನಭಾಗ್ಯ ಯೋಜನೆಯನ್ನು ನಾವು ಜಾರಿಮಾಡಿದೆವು. ಸುಮ್ಮನೆ ಟೀಕೆ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಡಿ.ಕೆ.ಶಿವಕುಮಾರ್ ಬಿಜೆಪಿ ವಿರುದ್ಧ ಗುಡುಗಿದರು.