ಕಲಬುರಗಿ: ತೊಗರಿಯ ಕಣಜ ಕಲಬುರಗಿ ಬರಿದಾಗಿದ್ದು, ತೊಗರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಆಗ್ರಹಸಿ ರೈತ ಸಂಘಟನೆಗಳು ಕರೆ ನೀಡಿದ ಕಲಬುರಗಿ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಬುಧವಾರ ನಸುಕಿನ ಜಾವದಿಂದಲೇ ರಸ್ತೆಗಿಳಿದ ರೈತರು ನಗರದ ಕೇಂದ್ರ ಬಸ್ ನಿಲ್ದಾಣದ ಎದುರಿಗೆ ಪ್ರತಿಭಟನೆ ನಡೆಸಿ, ಬಸ್ ಗಳನ್ನು ಬಿಡದೆ, ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು.
ಕಳೆದ ಎರ್ಡ್ಮೂರು ವರ್ಷದಿಂದ ಜಿಲ್ಲೆಯಲ್ಲಿ ತೊಗರಿ ಬೆಳೆ ನೇಟೆರೋಗ, ಅತಿವೃಷ್ಟಿ ಹಾಗೂ ಅನಾವೃಷ್ಟಿಗೆ ಹಾಳಾಗುತ್ತಿದೆ. ಇಷ್ಟಾದರೂ ಸರಕಾರಗಳು ಸೂಕ್ತ ಪರಿಹಾರ ನೀಡದೆ ರೈತರನ್ನು ಬೀದಿಗೆ ಬರುವಂತೆ ಮಾಡಿವೆ. ಹೀಗಾಗಿ, ಕೂಡಲೇ, ಕಲಬುರಗಿ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಪ್ರತಿ ಕ್ವಿಂಟಲ್ ತೊಗರಿಗೆ 12500 ರು. ಎಂ.ಎಸ್.ಪಿ ಬೆಲೆ ನೀಡಬೇಕು. ಒಣಗಿ ಹೊದ ತೊಗರಿಗೆ ಪ್ರತಿ ಎಕರೆಗೆ 25000 ರು. ಪರಿಹಾರ ನೀಡಬೇಕು. ಕೆಎಂಎಫ್ ಮಾದರಿಯಲ್ಲಿ ತೊಗರಿ ಬೆಳೆಗಾರರ ರಕ್ಷಣೆ ಮಾಡಬೇಕು. ಕೇಂದ್ರ ಸರಕಾರ ಕ್ವಿಂಟಲ್ ತೊಗರಿಗೆ 1000 ರು. ಪರಿಹಾರ ಕೊಡಬೇಕು. ರಾಜ್ಯ ಸರಕಾರ ಕ್ವಿಂಟಲ್ ತೊಗರಿಗೆ 500 ರು. ಕೊಡಬೇಕು ಎಂದು ಆಗ್ರಹಿಸಿ ಕಲಬುರಗಿ ಬಂದ್ ಮಾಡಲಾಗಿದೆ.
ಸಾರ್ವಜನಿಕರ ಪರದಾಟ:
ತೊಗರಿಗೆ ವಿಶೇಷ ಪ್ಯಾಕೇಜ್ ಘೋಷಣೆಗೆ ಆಗ್ರಹಿಸಿ ರೈತ ಸಂಘಟನೆಗಳು ಕರೆ ನೀಡಿದ ಕಲಬುರಗಿ ಬಂದ್ ಹಿನ್ನಲೆ, ಬೆಳ್ಳಂಬೆಳಗ್ಗೆ ದೂರದ ಊರುಗಳಿಗೆ ಹೋಗುವ ಹಾಗೂ ನೌಕರಿಗೆ ತೆರಳುವವರು ಬಸ್ ನಿಲ್ದಾಣಕ್ಕೆ ಆಗಮಿಸಿ ಬಸ್ ಇಲ್ಲದೆ, ಇರುವುದರಿಂದ ಪರದಾಟ ನಡೆಸುವ ಪರಿಸ್ಥಿತಿ ಉಂಟಾಯಿತು. ಬಂದ್ ಇರುವುದರಿಂದ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್ ಗಳ ಸಂಚಾರ ಸ್ಥಗಿತಗೊಂಡಿದ್ದು, ಇದರಿಂದಾಗಿ ಜನರು ತಮ್ಮ ಕೆಲಸಕ್ಕೆ, ಊರುಗಳಿಗೆ ಹೋಗಲು ಪರದಾಟ ನಡೆಸುತ್ತಿದ್ದರು. ದೊಡ್ಡ ಬ್ಯಾಗ್ ಗಳನ್ನು ಕೈಯಲ್ಲಿ ಹಿಡಿದು ನಡೆದುಕೊಂಡು ಮನೆಗಳಿಗೆ ಮರಳಿ ಹೋದ ಪ್ರಸಂಗ ಸಹ ನಡೆದವು.
ಹೋಟೆಲ್ ಮುಚ್ಚಲು ಮನವಿ:
ಕಲಬುರಗಿ ಬಂದ್ ಅಂಗವಾಗಿ ನಗದರಲ್ಲಿ ಬೆಳಗ್ಗೆ ಪ್ರಾರಂಭವಾದ ಹೋಟೆಲ್ ವಹಿವಾಟುಗಳನ್ನು ನಿಲ್ಲಿಸಿ, ರೈತರಿಗೆ ಬೆಂಬಲ ನೀಡಬೇಕು. ನೀವು ಹೋಟೆಲ್ ಚಾಲೂ ಇಟ್ಟರೆ, ಹೇಗೆ ನೀವು ರೈತರ ಅನ್ನ ತಿನ್ನುವುದಿಲ್ಲವೇ. ಹೋಟೆಲ್ ಮುಚ್ಚಿ ರೈತರಿಗೆ ಬೆಂಬಲ ನೀಡಬೇಕು ಎಂದು ಕೇಂದ್ರ ಬಸ್ ನಿಲ್ದಾಣದ ಸುತ್ತಮುತ್ತಲಿನ ಹೋಟಲ್ ಮಾಲೀಕರಿಗೆ ಪ್ರತಿಭಟನಾಕಾರರು ಮನವಿ ಮಾಡಿದರು. ಕೆಲವು ಹೋಟೆಲ್ ಗಳು ವ್ಯಾಪಾರ ಮಾಡುತ್ತಿದ್ದನ್ನು ಖಂಡಿಸಿ ಬಲವಂತವಾಗಿ ಮುಚ್ಚಿದ ಘಟನೆ ಸಹ ನಡೆಯಿತು.
ದುಪ್ಪಟ್ಟು ಹಣ ನೀಡಿ, ಆಟೋದಲ್ಲಿ ಸಂಚಾರ:
ಬುಧವಾರ ರೈತರು ಕರೆ ನೀಡಿದ ಬಂದ್ ಪ್ರಯುಕ್ತ ನಗರದಲ್ಲಿ ಯಾವುದೇ ಬಸ್ ಸಂಚಾರ ಇಲ್ಲದೇ, ಇರುವುದರಿಂದ ಕೆಲ ಜನರು ತುರ್ತಾಗಿ ಕೆಲಸಕ್ಕೆ ಹಾಗೂ ಊರುಗಳಿಗೆ ಹೋಗಬೇಕಾದ ಅನಿವಾರ್ಯತೆಯಿಂದ ದುಪ್ಪಟ್ಟು ಹಣ ನೀಡಿ ಆಟೋ ಬಾಡಿಗೆ ಪಡೆದುಕೊಂಡು ತಮ್ಮ ಊರುಗಳಿಗೆ ತೆರಳಿದ ಪ್ರಸಂಗ ಸಹ ಕಂಡುಬಂತು.