ಗುಳೇದಗುಡ್ಡ: ನೂರಾರು ವರುಷಗಳ ಭವ್ಯ ಇತಿಹಾಸ ಇರುವ ಗುಳೇದಗುಡ್ಡದ ಮರಡಿಮಠದ ಶ್ರೀ ಕಾಡಸಿದ್ಧೇಶ್ವರ ಪರಂಪರೆಯಲ್ಲಿ ಸಾಗಿ ಬಂದ ಎಲ್ಲ ಶ್ರೀಗಳು ತಮ್ಮ ಆಧ್ಯಾತ್ಮಿಕ ಶಕ್ತಿಯಿಂದ ಭಕ್ತರಲ್ಲಿ ಶಿವಧ್ಯಾನದ ಅನುಭೂತಿಯನ್ನು ಮಾಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
ಈ ಪರಂಪರೆಯಲ್ಲಿ ಬರುವ 9ನೇ ಹಾಗೂ 10ನೇ ಕಾಡಸಿದ್ಧೇಶ್ವರ ಶ್ರೀಗಳ ಸೇವಾ ಕಾರ್ಯ ಅಮೋಘವಾಗಿದೆ. ಅವರ ಪ್ರಭಾವಕ್ಕೆ ಒಳಗಾದ ಭಕ್ತ ಸಮೂಹ ಈ ಎಲ್ಲ ಶ್ರೀಗಳನ್ನು ತಮ್ಮ ಮನದಲ್ಲಿ ನೆನೆಯುತ್ತಿರುತ್ತಾರೆ. ಲಿಂ. 10ನೇ ಶ್ರೀ ಕಾಡಸಿದ್ಧೇಶ್ವರರು ಮೌನಯೋಗಿಗಳೆಂದೇ ಪ್ರಸಿದ್ಧರಾದವರು.
ತಮ್ಮ ಪೂಜಾ ಬಲ, ಶಿವಯೋಗ ಶಕ್ತಿಯಿಂದ ನೊಂದ ಮನಗಳಿಗೆ ನವಚೈತನ್ಯ ನೀಡಿ ಸನ್ಮಾಗದಲ್ಲಿ ನಡೆಯಲು ಸ್ಫೂರ್ತಿಯ ಶಕ್ತಿಯಾದರು. ಗುಳೇದಗುಡ್ಡ ಅಷ್ಟೇ ಅಲ್ಲದೆ, ಸುತ್ತಲಿನ ಗ್ರಾಮ ಮತ್ತು ಪಟ್ಟಣಗಳ ಭಕ್ತಗಣ ತಮ್ಮ ಕ್ಲೇಶಗಳನ್ನು ಕಳೆದುಕೊಳ್ಳಲು ಆಶಾ ಪೂರ್ಣವಾದ ಜ್ಯೋತಿಯಾದರು.
ನಾಡಿನಾದ್ಯಂತ 25 ಶಾಖಾ ಮಠಗಳನ್ನು ಸ್ಥಾಪಿಸಿದರು. ಮಣ್ಣಿಂದ ಬಂದ ಕಾಯ ಮಣ್ಣಾಗಿ ಹೋಗಿತ್ತು. ಆದರೆ, ಅವರ ಪೂಜಾ ಅನುಷ್ಠಾನ ಶಕ್ತಿ, ತಪಸ್ಸಿನ ಲ ಇನ್ನೂ ಜಾಗೃತವಾಗಿದೆ. ಅವರ ಸರಳ ನಡೆ-ನುಡಿ ಜನಮಾನಸದಲ್ಲಿ ಹಚ್ಚ ಹಸಿರಾಗಿದೆ. ಶ್ರೀ ಗುರುಗಳು ಕಣ್ಮರೆಯಾದಂತೆ ಭಕ್ತ ಕೋಟಿಯ ಗುರುಭಕ್ತಿ ಮರೆಯಾಗಲಿಲ್ಲ. ಅವರ ನಂತರ ಈಗ ದ್ವಾದಶ ಪಟ್ಟಾಧಿಕಾರ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವ 11ನೇ ಅಭಿನವ ಕಾಡಸಿದ್ಧೇಶ್ವರ ಶ್ರೀಗಳು ಇದೇ ಗುರು ಪರಂಪರೆಯಲ್ಲಿ ಮುಂದುವರಿಸಿದ್ದಾರೆ.
ಪೂಜ್ಯರು ಪೂರ್ವಾಶ್ರಮದಲ್ಲಿ ಹುನಗುಂದ ತಾಲೂಕಿನ ಹಡಗಲಿಯ ಹಿರೇಮಠದ ಲಿಂ. ಮುತ್ತಯ್ಯ ಸ್ವಾಮಿಗಳು ಹಾಗೂ ಲಿಂ. ಮಂಗಲಮ್ಮನವರ ಉದರದಲ್ಲಿ ಜನಿಸಿ, ಮರುಳಸಿದ್ಧಯ್ಯ ದೇವರುಗಳಾಗಿ ಪಟ್ಟಾಧಿಕಾರ ಹೊಂದಿ ಅಭಿನವ ಶ್ರೀ ಕಾಡಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳಾಗಿ ಪ್ರಖ್ಯಾತರಾಗಿದ್ದಾರೆ.
ಶ್ರೀಗಳು ತಮ್ಮ ಪಟ್ಟಾಧಿಕಾರದ 12 ವರ್ಷಗಳನ್ನು ಪೂರೈಸಿ ಎಲ್ಲ ಸದ್ಭಕ್ತರ ಹೃನ್ಮನಗಳಲ್ಲಿ ಆರಾಧ್ಯ ದೈವರಾಗಿ ನೆಲೆಗೊಂಡಿದ್ದಾರೆ. ಏ.26ರಂದು ಸಂಜೆ 5.30ಕ್ಕೆ ಪ್ರಥಮ ಬಾರಿಗೆ ಶ್ರೀ ಮರಡಿಮಠದ ರಥೋತ್ಸವ ವೈಭವದಿಂದ ನೆರವೇರಲಿದೆ.