ಸಂಕೇಶ್ವರ: ನಿಡಸೋಸಿ ಮಠದ ತ್ರಿವಿಧ ದಾಸೋಹ ಕಾರ್ಯ ಎಲ್ಲರಿಗೂ ಸೂರ್ತಿಯಾಗಿದೆ ಎಂದು ಚನ್ನಪಟ್ಟಣ ವಿರಕ್ತಮಠದ ಶಿವರುದ್ರ ಸ್ವಾಮೀಜಿ ಹೇಳಿದರು.

ಸಮೀಪದ ನಿಡಸೋಸಿ ಗ್ರಾಮದ ಜಗದ್ಗುರು ದುರದುಂಡೀಶ್ವರ ಸಿದ್ಧ ಸಂಸ್ಥಾನ ಮಠದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರವಚನ ಮಹಾಮಂಗಲ ಕಾರ್ಯಕ್ರಮದದಲ್ಲಿ ಮಾತನಾಡಿದರು. ದಾನ-ಧರ್ಮ, ಒಳಿತು-ಕೆಡುಕುಗಳ ಬಗೆಗೆ ಅರಿವು ಮೂಡಿಸುವುದೇ ದಾಸೋಹದ ಮೂಲ ಉದ್ದೇಶ ಎಂದರು. ಸಾಹಿತಿ ಶಿರೀಷ ಜೋಶಿ ಮಾತನಾಡಿ, ಸಂಸ್ಕೃತಿಯ ಉಳಿವು-ಬೆಳವಣಿಗೆಗೆ ಮಠಮಾನ್ಯಗಳ ಕೊಡುಗೆ ಅಪಾರ ಎಂದರು.
ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಶ್ರೀಮಠಕ್ಕೆ ಸಹಸ್ರಾರು ಭಕ್ತರ ಆಗಮನವು ದಾಸೋಹವಾಗಿ ರೂಪುಗೊಳ್ಳುತ್ತಿದೆ ಎಂದರು. ಕನಕಪುರದ ಜಗದೀಶ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಬಾಗಲಕೋಟೆ ತೆಂಗಿನಮಠದ ಮಲ್ಲಿಕಾರ್ಜುನ ದೇವರು ನಡೆಸಿಕೊಟ್ಟ ಎಡೆಯೂರು ಸಿದ್ಧಲಿಂಗೇಶ್ವರ ಜೀವನ ಚರಿತ್ರೆ ಪ್ರವಚನ ಮಹಾಮಂಗಲ ನೆರವೇರಿತು.
ಚಾಂದಣಿಗೆ ಶ್ರೀಮಂತ ವಿಜಯಸಿಂಹ ನಾನಾಸಾಹೇಬ ನಿಂಬಾಳಕರ ಸರದೇಸಾಯಿ ಪೂಜೆ ಸಲ್ಲಿಸಿದರು. ನಂತರ ದಾಸೋಹ ಜರುಗಿತು. ಡಾ.ಮಹಾದೇವ ಪಾಟೀಲ, ಶಿರೀಷ ಜೋಶಿ ದಂಪತಿಯನ್ನು ಸತ್ಕರಿಸಲಾಯಿತು. ಮಠದ ಉತ್ತರಾಕಾರಿ ನಿಜಲಿಂಗೇಶ್ವರ ಸ್ವಾಮೀಜಿ, ಬಮ್ಮನಹಳ್ಳಿ ಶಿವಯೋಗಿ ಸ್ವಾಮೀಜಿ, ಪ್ರಕಾಶ ಕಣಗಲಿ, ಡಾ.ಗುರುಪಾದ ಮರಿಗುದ್ದಿ, ಡಾ.ಜಿ.ಕೆ.ಹಿರೇಮಠ, ಸಂಜು ಪಾಟೀಲ, ಶಿವಾನಂದ ಗುಂಡಾಳಿ, ಸಂತೋಷ ಪಾಟೀಲ ಇತರರಿದ್ದರು.
ಇಂದು ಹುಗ್ಗಿ ದಾಸೋಹ: ಶ್ರೀಮಠದ ಭಕ್ತರಿಂದಲೇ ತಯಾರಿಸಲ್ಪಡುವ 35 ಕ್ವಿಂಟಾಲ್ ಗೋ ಹುಗ್ಗಿ ಹಾಗೂ 40 ಕ್ವಿಂಟಾಲ್ ಅನ್ನ ಪ್ರಸಾದ ಬೃಹತ್ಅನ್ನದಾಸೋಹ ಮಹೋತ್ಸವ ಸೆ.21ರಂದು ಜರುಗಲಿದೆ.