ನವದೆಹಲಿ: ಕೇಂದ್ರ ಸರ್ಕಾರದ್ದು ಕಾರ್ಮಿಕ ವಿರೋಧಿ ನೀತಿ ಎಂದು ಆರೋಪಿಸಿ ದೇಶಾದ್ಯಂತ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಬಂದ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ನರೇಂದ್ರ ಮೋದಿ- ಅಮಿತ್ ಷಾ ಸರ್ಕಾರರ ಜನ ವಿರೋಧಿ, ಕಾರ್ಮಿಕ ವಿರೋಧಿ ನೀತಿಗಳಿಂದಾಗಿ ನಿರುದ್ಯೋಗವೆಂಬ ದುರಂತ ಸಂಭವಿಸಿದೆ. ನರೇಂದ್ರ ಮೋದಿಯವರ ಕ್ರೋನಿ ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ದೇಶದ ಸಾರ್ವಜನಿಕ ವಲಯದ ಸಂಸ್ಥೆಗಳನ್ನೇ ದುರ್ಬಲಗೊಳಿಸಲಾಗಿದೆ.
ಇವತ್ತು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಾ ದ್ಯೋತಕವಾಗಿ ಭಾರತ್ ಬಂದ್ ನಡೆಸುತ್ತಿರುವ 25 ಕೋಟಿ ಕಾರ್ಮಿಕರಿಗೆ ಒಂದು ಸೆಲ್ಯೂಟ್ ಎಂದು ರಾಹುಲ್ ಗಾಂಧಿ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕೇಂದ್ರ ಸರ್ಕಾರ ಕಾರ್ಮಿಕ ನೀತಿಗೆ ವಿರೋಧ ವ್ಯಕ್ತಪಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೇಶಾದ್ಯಂತ ಸುಮಾರು 10 ಕಾರ್ಮಿಕ ಸಂಘಟನೆಗಳು ವಿವಿಧ ರಾಜ್ಯ ಕಾರ್ಮಿಕ ಒಕ್ಕೂಟಗಳೊಂದಿಗೆ ಸೇರಿ ಇಂದು ಭಾರತ್ ಬಂದ್ ನಡೆಸುತ್ತಿವೆ. (ಏಜೆನ್ಸೀಸ್)