ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆಯಾಗಿ ಜಾರಿಗೆ ಬಂದಿದೆ. ಆದರೆ ಇಂತಹ ಕಾಯ್ದೆಯನ್ನು ವಿರೋಧಿಸುತ್ತಿರುವುದು ದೊಡ್ಡ ದುರಂತ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
ಇಂದು ಮಂಗಳೂರಿನಲ್ಲಿ ನಡೆದ ಸಿಎಎ ಪರ ಸಮಾವೇಶದಲ್ಲಿ ಮಾತನಾಡಿದ ಅವರು, ಪಾಕಿಸ್ತಾನದಲ್ಲಿರುವ ಹಿಂದು, ಸಿಖ್, ಪಾರ್ಸಿಗಳಿಗೆ ಪೌರತ್ವ ನೀಡಲು ಗಾಂಧೀಜಿ, ನೆಹರೂ ಕೂಡ ಹೇಳಿದ್ದರು. ಕಾಂಗ್ರೆಸ್ ನಾಯಕ ಮನಮೋಹನ್ ಸಿಂಗ್ ಕೂಡ ಇದೇ ಮಾತನ್ನು ಉಲ್ಲೇಖಿಸಿದ್ದರು. ಆದರೆ ಈಗ ವೃಥಾ ವಿರೋಧ ಏಕೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ನವರಿಗೆ ರಾಷ್ಟ್ರಧರ್ಮ ಪಾಲನೆ ಮಾಡಲು ಸಾಧ್ಯವಾಗದೆ ಇದ್ದರೆ ವಿಪಕ್ಷ ಧರ್ಮವನ್ನಾದರೂ ಅವರು ಪಾಲನೆ ಮಾಡಲಿ. ಈ ಬಗ್ಗೆ ನಾನು ಸೋನಿಯಾ ಗಾಂಧಿಯವರಿಗೆ ಮನವಿ ಮಾಡಿಕೊಳ್ಳುತ್ತೇನೆ. ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನಗಳು ಮುಸ್ಲಿಂ ರಾಷ್ಟ್ರಗಳು. ಅವು ಸೆಕ್ಯುಲರ್ ಅಲ್ಲ. ಅವರಿಗೆ ಧರ್ಮವೇ ಸಂವಿಧಾನ. ಆದರೆ ಜಾತ್ಯತೀತ ರಾಷ್ಟ್ರದಲ್ಲಿ ಯಾವುದೇ ಅಲ್ಪಸಂಖ್ಯಾತನಿಗೂ ಕಿರುಕುಳ ನೀಡಲು ಸಾಧ್ಯವೇ ಇಲ್ಲ ಎಂದು ಹೇಳಿದರು.
ಜನಗಣತಿಗಾಗಿ ಎನ್ಪಿಆರ್ ಮಾಡುವುದು ಹೇಗೆ ತಪ್ಪಾಗುತ್ತದೆ? ಇದರಿಂದ ಭಾರತೀಯ ಒಬ್ಬೇಒಬ್ಬ ಮುಸ್ಲಿಮನಿಗೆ ತೊಂದರೆಯಾದರೆ ನಮ್ಮ ಸರ್ಕಾರ ಹೊಣೆ. ಈ ಬಗ್ಗೆ ಬಿಜೆಪಿ ಮುಸ್ಲಿಮರಿಗೆ ಆಶ್ವಾಸನೆ ಕೊಡುತ್ತದೆ ಎಂದು ರಾಜನಾಥ್ ಸಿಂಗ್ ತಿಳಿಸಿದರು.
ನಮ್ಮ ಪ್ರಧಾನಮಂತ್ರಿಯವರು ಇಷ್ಟೊಂದು ಯೋಜನೆ ಜಾರಿ ಮಾಡಿದ್ದಾರೆ. ಒಂದು ಯೋಜನೆಯಲ್ಲಿಯಾದರೂ ಹಿಂದು, ಮುಸ್ಲಿಂ ಭೇದ ಮಾಡಿದ್ದಾರೆಯೇ? ಆಯುಷ್ಮಾನ್ ಭಾರತ್ ಯೋಜನೆಯಲ್ಲಿ 50 ಲಕ್ಷ ಮಂದಿ ಲಾಭ ಪಡೆದಿದ್ದಾರೆ. ಅದರಲ್ಲಿ ಹಿಂದು-ಮುಸ್ಲಿಂ ಭೇದ ಮಾಡಿದ್ದಾರಾ ಎಂದು ಪ್ರಶ್ನಿಸಿದರು.
ಪಾಕಿಸ್ತಾನದಿಂದ ಬರುವ ಅಲ್ಪಸಂಖ್ಯಾತರಿಗೆ ಪೌರತ್ವ ನೀಡಲು 1949ರಲ್ಲಿ ಕಾಂಗ್ರೆಸ್ ವರ್ಕಿಂಗ್ ಕಮಿಟಿ ನಿರ್ಣಯ ಮಾಡಿತ್ತು. ತಮ್ಮದೇ ಪಕ್ಷದ ಹಿರಿಯರು ನೀಡಿದ್ದ ಸೂಚನೆಗೆ ಕಾಂಗ್ರೆಸ್ ನಾಯಕರು ಈಗೇನು ಹೇಳುತ್ತಾರೆ ಎಂದು ಹೇಳಿದ ರಕ್ಷಣಾ ಸಚಿವರು, ಭಾರತದಲ್ಲಿ ಹಿಂದು-ಮುಸ್ಲಿಂ ಭೇದ ಇರಬಾರದು. ಮುಸ್ಲಿಂ ಸಮಾಜದಲ್ಲಿನ ಭಯವನ್ನು ನಿವಾರಿಸಬೇಕು. ಬಿಜೆಪಿ ಕಾರ್ಯಕರ್ತರು ಮನೆಮನೆಗೆ ತೆರಳಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.