ಮಹಾಕುಂಭನಗರ (ಪ್ರಯಾಗ್ರಾಜ್): ಉತ್ತರ ಪ್ರದೇಶದ ಪ್ರಯಾಗ್ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿ ನೀಡಿ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದರು.
ಬುಧವಾರ ಬೆಳಗ್ಗೆ 11 ಗಂಟೆಗೆ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮದಲ್ಲಿ ಗಂಗೆಗೆ ಪೂಜೆ ಸಲ್ಲಿಸಿದ ಮೋದಿ ಸಂಗಮ ಪ್ರದೇಶದಲ್ಲಿ ಮುಳುಗು ಹಾಕಿದರು. ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಮೋದಿ ‘ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭದಲ್ಲಿ ಭಾಗವಹಿಸಿ ಧನ್ಯನಾದೆ. ಸಂಗಮದಲ್ಲಿ ಸ್ನಾನ ಮಾಡಿದ ಕ್ಷಣ ದೈವಿಕವಾಗಿತ್ತು. ಆಧ್ಯಾತ್ಮಿಕ ಶಕ್ತಿ ಪಡೆದ ಅನುಭೂತಿ ನನ್ನದಾಗಿತ್ತು ಎಂದು ಹೇಳಿರುವ ಅವರು, ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ ಕೋಟ್ಯಂತರ ಜನರಂತೆ ನಾನೂ ಕೂಡ ಭಕ್ತಿಭಾವದಿಂದ ಆನಂದಿತನಾಗಿದ್ದೇನೆ. ಗಂಗಾ ಮಾತೆಯ ಆಶೀರ್ವಾದದಿಂದ ನನಗೆ ಅಪಾರ ಶಾಂತಿ ಮತ್ತು ತೃಪ್ತಿ ಸಿಕ್ಕಿತು. ದೇಶವಾಸಿಗಳಿಗೆ ಸಂತೋಷ, ಸಮೃದ್ಧಿ, ಆರೋಗ್ಯವನ್ನು ಗಂಗಾಮಾತೆ ಕರುಣಿಸಲಿ ಎಂದು ಪ್ರಾರ್ಥಿಸಿದ್ದಾಗಿ ತಿಳಿಸಿದ್ದಾರೆ.
2019 ರಲ್ಲಿ ನಡೆದಿದ್ದ ಅರ್ಧಕುಂಭದ ಸಂದರ್ಭದಲ್ಲೂ ಮೋದಿ ಪ್ರಯಾಗ್ರಾಜ್ಗೆ ಭೇಟಿ ನೀಡಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದರು. ಆ ಸಂದರ್ಭದಲ್ಲಿ ಅವರು ಕುಂಭ ಮೇಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಲವು ಪೌರ ಕಾರ್ವಿುಕರ ಪಾದಪೂಜೆ ನೆರವೇರಿಸಿದ್ದರು.
ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಲ್ತುಳಿತ: ಮೌನಿ ಅಮಾವಾಸ್ಯೆಯ ದಿನ ಮಹಾಕುಂಭ ಮೇಳದಲ್ಲಿ ನಡೆದಿದ್ದ ಕಾಲ್ತುಳಿತಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಶಿವಶಕ್ತಿ ಧಾಮದ ಪೀಠಾಧೀಶ್ವರ ಮತ್ತು ಪಂಚದಶ್ನಂ ಜುನಾ ಅಖಾಡದ ಮಹಾಮಂಡಲೇಶ್ವರ ಯತಿ ನರಸಿಂಹಾನಂದ ಗಿರಿ ಆರೋಪಿಸಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ರಕ್ತದಲ್ಲಿ ಪತ್ರ ಬರೆದಿರುವ ಇವರು ‘ಮೌನಿ ಅಮಾವಾಸ್ಯೆಯಂದು ನಿಮ್ಮ ಭ್ರಷ್ಟ ಮತ್ತು ಸಂವೇದನಾರಹಿತ ಅಧಿಕಾರಿಗಳು ತೋರಿದ ಅಮಾನವೀಯ ವರ್ತನೆ ಈ ಪತ್ರವನ್ನು ಬರೆಯುವಂತೆ ನನಗೆ ಪ್ರೇರೇಪಿಸಿದೆ’ ಎಂದು ಬರೆದಿದ್ದಾರೆ.
25 ಸಾವಿರ ಬುಡಕಟ್ಟು ಜನರಿಂದ ಪುಣ್ಯಸ್ನಾನ: ಮಹಾಕುಂಭ ಮೇಳದಲ್ಲಿ ಬುಡಕಟ್ಟು ಸಮುದಾಯಗಳ 25 ಸಾವಿರ ಜನರು ಪುಣ್ಯಸ್ನಾನ ಮಾಡಲಿದ್ದು, ಭಾರತೀಯ ಸಂಸ್ಕೃತಿ, ಧರ್ಮ ಮತ್ತು ಸಂಪ್ರದಾಯಗಳ ರಕ್ಷಣೆಗಾಗಿ ಪ್ರತಿಜ್ಞೆ ಮಾಡಲಿದ್ದಾರೆ. ಅಖಿಲ ಭಾರತೀಯ ವನವಾಸಿ ಕಲ್ಯಾಣ ಆಶ್ರಮ ಫೆಬ್ರವರಿ 6ರಿಂದ 10ರವರೆಗೆ ಬುಡಕಟ್ಟು ಸಮುದಾಯದವರ ಪುಣ್ಯಸ್ನಾನಕ್ಕೆ ವ್ಯವಸ್ಥೆ ಮಾಡಿದೆ. ಇದೇ ವೇಳೆ ಫೆಬ್ರವರಿ 7ರಂದು ಬುಡಕಟ್ಟು ಸಮುದಾಯದವರ ಸ್ವಾಮೀಜಿಗಳು ಮತ್ತು ಭಕ್ತರ ಬೃಹತ್ ಶೋಭಾಯಾತ್ರೆಯನ್ನೂ ಆಯೋಜಿಸಲಾಗಿದೆ.
ಕುಂಭಮೇಳದಲ್ಲಿ ಗುರುದೇವ್: ತ್ರಿವೇಣಿ ಸಂಗಮದಲ್ಲಿ ಮಂಗಳವಾರ ಶ್ರೀ ಶ್ರೀ ರವಿಶಂಕರ ಗುರೂಜಿ (ಗುರುದೇವ್) ಪುಣ್ಯಸ್ನಾನ ಮಾಡಿದರು. ಬಳಿಕ ಪ್ರಯಾಗರಾಜ್ನ ಐತಿಹಾಸಿಕ ಬಡೇ ಹನುಮಾನ್ ಮಂದಿರಕ್ಕೆ ಭೇಟಿ ನೀಡಿದರು. ಇದೇ ವೇಳೆ ಆರ್ಟ್ ಆಫ್ ಲಿವಿಂಗ್ನ ಶಿಬಿರದಲ್ಲಿ ಗುರುದೇವರ ಸಾನ್ನಿಧ್ಯದಲ್ಲಿ ರುದ್ರ ಪೂಜೆ, ಅರುಣಪ್ರಶ್ನ ಹೋಮ, ಸೂರ್ಯಸೂಕ್ತ ಹೋಮಗಳು ನಡೆದವು. ಇದಲ್ಲದೆ, ಸೋಮವಾರ ಆಯೋಜಿಸಲಾಗಿದ್ದ ಸತ್ಸಂಗದಲ್ಲಿ ಜುನಾ ಅಖಾಡದ ನಾಗಾ ಸಾಧುಗಳು ಮತ್ತಿತರ ಗಣ್ಯರು ಗುರುದೇವರನ್ನು ಭೇಟಿ ಮಾಡಿದರು. ಮಹಾಕುಂಭದಲ್ಲಿ ಆರ್ಟ್ ಆಫ್ ಲಿವಿಂಗ್ ಅನೇಕ ಸೇವಾ ಕಾರ್ಯ ನಡೆಸುತ್ತಿದೆ. ಶಿಬಿರದಲ್ಲಿ ನಿತ್ಯ ಒಂದು ಟನ್ ಖಿಚಡಿಯನ್ನು ಎರಡು ಸಲ ಸಿದ್ಧಪಡಿಸಿ, 25-30 ಸಾವಿರ ಭಕ್ತರಿಗೆ ವಿತರಿಸಲಾಗುತ್ತಿದೆ.
Champions Trophy ಬಳಿಕ ಏಕದಿನ ಮಾದರಿಗೆ ನಿವೃತ್ತಿ? Rohit Sharma ಹೇಳಿದ್ದಿಷ್ಟು
ಚುಮು ಚುಮು ಚಳಿಗೆ ಮನೆಯಲ್ಲೇ ಮಾಡಿ Ragi ಪಕೋಡ; ನಾಲಿಗೆಗೂ ರುಚಿಕರ ಆರೋಗ್ಯಕ್ಕೂ ಒಳ್ಳೆಯದು